'ಕಾಲ ಬದಲಾಗಿದೆ. ಪತ್ತೆನಾಜೆಗಿಂತ ಮೊದಲೇ ಮಳೆ ಬಂದಿದೆ, ನಾವು ಬದಲಾಗಬೇಕು’ ಎಂಬುದನ್ನು ದೋಗಣ್ಣ ಬಿಲ್ ಕುಲ್ ಒಪ್ಪುತ್ತಿರಲಿಲ್ಲ.
‘ಪಗ್ಗು ತಿಂಗಳಲ್ಲೇ ಮಳೆ ಬಿದ್ದು ಪತ್ತನಾಜೆಯ ಮರು ದಿನ ಕಂಡಕೋರಿ ನಾಟಿಯಾದದ್ದು ನನಗೆ ನೆನಪಿದೆ’ ಎನ್ನುತ್ತಿದ್ದ.
‘ನಾವು ಬದಲಾಗುವುದು ಅಷ್ಟೆ. ಕಾಲ ಬದಲಾಗುವುದಿಲ್ಲ’ ಎಂಬುದು ಅವನ ವಾದ.
ಹಠಕಟ್ಟಿ ಒಂದೇ ಸಮನೆ ನಾಯಿ ಬೊಗಳುವ ಸದ್ದು.
ಅವಧಿಗೆ ಮೊದಲೇ ಅಬ್ಬರಿಸಿದ ಮುಂಗಾರಿನ ಭೀಕರ ಅಬತಾರ.
ನಡುರಾತ್ರಿ ದೋಗಣ್ಣ ಮುಸುಕು ಹಾಕಿ ಮಲಗಿದ್ದ.
ಮಳೆಯ ಸಂಗೀತದ ಜತೆ ಗತಕಾಲದ ನೆನಪುಗಳು. ನಿದ್ದೆ ಹತ್ತಿರ ಸುಳಿದಿರಲಿಲ್ಲ.
ಬೇಸಗೆಯಲ್ಲಿ ಮುಂಜಾನೆಯ ಪನೆಯ ಅಡ್ಡಮರದ ಕೀಲಿ ಸದ್ದು ಊರು ತುಂಬ ಕೇಳಿಸಿಕೊಳ್ಳುತ್ತಾ ಬೆಳಗಾಗುತ್ತಿದ್ದದ್ದು ಚಿಮಿಣಿ ಎಣ್ಣೆ ಪಂಪ್ನ ಭುರ್ರನೆ ಸದ್ದಿಗೆ ಬದಲಾಯಿತು. ಆನಂತರ ಸದ್ದೇ ಇಲ್ಲದ ಇಲೆಕ್ಟ್ರಿಕ್ ಪಂಪ್ ನೀರನ್ನು ಎತ್ತಿ ಎಸೆಯಿತು.
ಆದರೆ ಅದೇ ಮಳೆಯ ಮಣ್ಣಮೂರಿ, ಬರಿಮೈಯಲ್ಲಿ ನಿಲ್ಲಲು ಪ್ರೇರೇಪಿಸುವ ರಣ ಬಿಸಿಲಿನ ಸೆಖೆ, ಅದೇ ನಡುಗುವ ಚಳಿ, ಅದೇ ಕೆಡ್ಡಸದ ಗಾಳಿ. ಸ್ವಲ್ಪ ಹಿಂದೆ ಸ್ವಲ್ಪ ಮುಂದೆ ಅಷ್ಟೆ.
ಮುಳಿ ಹುಲ್ಲ ಮನೆಯೊಳಗೆ ಚಳಿಯಲ್ಲಿ ಬೆಪ್ಪು, ಶೆಖೆಯಲ್ಲಿ ತಂಪಾಗಿ ನಿದ್ದೆ ಮಾಡುತ್ತಿದ್ದವರು ಟೆರೇಸ್ ಗೂಡಿನೊಳಗೆ ಚಳಿ, ಮಳೆ, ಬಿಸಿಲ ಸಮಯಕ್ಕೆ ಗಿರಗಿರ ತಿರುಗು ಫ್ಯಾನ್ ಇಲ್ಲದಿದ್ದರೆ ಚಡಪಡಿಸುವ ಕಾಲಕ್ಕೆ ಬದಲಾದರು...
ಬೊಳ್ಳಿ ಮೂಡುವಾಗ ಎದ್ದು ಸಂಜೆಯವರೆಗೆ ಕೃಷಿ ಕೆಲಸ ಮಾಡುತ್ತಿದ್ದ ಜನ ಬದಲಾದರು. ಹೊತ್ತು ಮೂಡಿದ ನಂತರ ಎದ್ದು ಮುಲಾಮು ಹಾಕಿ ಹಲ್ಲುಜ್ಜತೊಡಗಿದರು. ಮೈಕೈಗೆ ಯಾವುದೇ ರೋಗ ಇಲ್ಲದೆ, ಆಧುನಿಕ ರೋಗದ ಹೆಸರೇ ಗೊತ್ತಿಲ್ಲದೆ ‘ಕಣ್ಣು-ಕಾರ್ಗೆ ಸುಖ ಕೊಡಿ, ಉಳಿದೆಲ್ಲವನ್ನೂ ಸಾಧಿಸುತ್ತೇವೆ’ ಎಂದು ಮಾತ್ರ ದೈವದ ಮುಂದೆ ಸೆರಗೊಡ್ಡಿ ಬೇಡುತ್ತಿದ್ದ ದೇಹದ ಯಾವ ಭಾಗದಲ್ಲೂ ಬೊಜ್ಜು ಇರದ ನೂರು ವರ್ಷದ ತುಂಬು ಜೀವನ ನಡೆಸುತ್ತಿದ್ದ ನರಪೇತಲ ಮಂದಿ ಮೈಕೈತುಂಬಿಸಿಕೊಳ್ಳುವುದರ ಜತೆಗೆ ಒಂದಷ್ಟು ಸೀಕ್, ಸಂಕಟಗಳನ್ನು ಒಗ್ಗಿಸಿಕೊಂಡರು.
ಬೆಳಗಿನ ಕನೆರ್ ಕಷಾಯ, ಬೆಂಜನ ಚಹಾಕ್ಕೆ ಬದಲಾದರೆ ಸಂಜೆಯ 'ಫಾರಿನ್' ಅಮಲಿಗೆ ಗೋಕು ಮಾಲು 'ಕಂಟ್ರಿ' ಆಗಿಬಿಟ್ಟು ನಿಷೇಧಿಸಲ್ಪಟ್ಟಿತು.
ಊರಿನಲ್ಲಿ ಇದ್ದರೆ ರೋಂಟ್ ಕಟ್ಟಿದ ಜೀವ ಹೀಗೇ ಇರುತ್ತದೆ ಮುಂಬೈಗೆ ಹೋಗಿ ‘ಸಜ್ಜಾಗಿ’ ಬರುತ್ತೇನೆ ಎಂದವರಿಗೆ ಊರಿನ ದಾರಿ ಮರೆತೇ ಹೋಯಿತು...
ಇಲ್ಲದೇ ಇದ್ದರೆ... ಅವಳು, ಪದ್ದುವಿನ ಮದುವೆಯ ನಂತರ ಮಕ್ಕಳ ಜತೆ ಇದ್ದು ಬರುತ್ತೇನೆ ಎಂದು ಹೋದವಳು ಬಂದದ್ದು ಪದ್ದುವಿನ ಹೆಂಡತಿಯ ಬಾಣಂತನಕ್ಕೆ. ಆನಂತರ ಹೋದವಳು ಊರಿನ ಮುಖ ನೋಡಲಿಲ್ಲ.
ಊರಲ್ಲಿ ಚೆನ್ನಾಗಿ ದುಡಿಯುತ್ತಿದ್ದ ಆಕೆಗೆ ಮುಂಬೈಯ ಕೋಣೆಯೊಳಗೆ ಮೂರೇ ವರ್ಷಕ್ಕೆ ಬಿ.ಪಿ. ಶುಗರ್. ಊರಲ್ಲಿ ಇದ್ದರೆ ಆಸ್ಪತ್ರೆ ದೂರ ಅಂತ ಶ್ರೀಧರ ಅವಳನ್ನು ಮುಂಬೈಯಲ್ಲೇ ಉಳಿಸಿಕೊಂಡ.
ಒಂದು ಮುಂಜಾನೆ ಶ್ರೀಧರ ‘ಪೊಪ್ಪಾ, ಅಮ್ಮ ಹಾರ್ಟ್ ಅಟಾಕ್ ಆಗಿ ತೀರಿಕೊಂಡಳು ಮಧ್ಯಾಹ್ನದ ಫ್ಲೈಟ್ಗೆ ಬನ್ನಿ’ ಎಂದು ಅಳುತ್ತಾ ಫೋನ್ ಮಾಡಿದ್ದ.
ಪದ್ದುವಿನ ಜತೆ ಮುಂಬೈಗೆ ಹೋದ ದೋಗಣ್ಣ ಹದಿನೈದು ದಿವಸಗಳ ಬಳಿಕ ಹೆಂಡತಿಯ ನೆನಪುಗಳನ್ನು ಕಟ್ಟಿಕೊಂಡು ಮಂಜೊಟ್ಟಿ ಗುತ್ತಿಗೆ ಮರಳಿದ್ದ.
ನಾನು ಹೇಳಿದ್ದು ಕೇಳಿ ಊರಲ್ಲೇ ಇದ್ದರೆ ಇನ್ನು ಒಂದಷ್ಟು ವರ್ಷ ಬದುಕುತ್ತಿದ್ದಳೋ ಏನೋ ಎಂದು ಕಣ್ಣು ತುಂಬಿಕೊಂಡಿದ್ದ.
ಮನೆಯ ಚಾವಡಿಯ ಪಡ್ಡಾಯಿ ಮೂಲೆಯಲ್ಲಿ ಮುಡಾಯಿ ಮುಖ ಮಾಡಿ ತೊಲೆಗೆ ತೂಗು ಹಾಕಿದ ದೈವದ ಪಲಾಯಿಗೆ ‘ನೀನೇ ಅಪ್ಪೆ-ಅಮ್ಮೆರ್’ ಎಂದು ಕೈಮುಗಿಯುವಾಗ ಮನಸ್ಸಿಗೆ ಅದೆಷ್ಟೋ ನೆಮ್ಮದಿ ಇತ್ತು.
ಮುಂಬಾಯಿಯಿಂದ ಬಂದ ಅಗರಬತ್ತಿ, ಪಾನ್ ಮಸಾಲಾ ಕ್ಯಾಲೆಂಡರಿನ ಹನುಮಂತ, ರಾಮ, ಲಕ್ಷ್ಮಿ ಇತ್ಯಾದಿ ಇತ್ಯಾದಿ ದೇವರುಗಳು ಚಾವಡಿಯ ಗೋಡೆಯಲ್ಲಿ ನೇತಾಡಿದಾಗ ಯಾವುದಕ್ಕೆ ಕೈ ಮುಗಿಯುವುದು ಎಂದು ಗೊತ್ತಾಗುತ್ತಿರಲಿಲ್ಲ. ಫ್ರೇಮ್ ಹಾಕಿದ ಫೋಟೋಗಳು ಸ್ಟಾಂಡ್ನ್ನು ಒಂದಿಂಚೂ ಬಿಡದೆ ಆಕ್ರಮಿಸಿಕೊಂಡಾಗ, ಎಲ್ಲದಕ್ಕೂ ದಿನಾ ಊದಿನ ಕಡ್ಡಿ ತಿರುಗಿಸಿದಾಗ ದೈವಗಳ ಮನೆ ಮಂಚಾವು ತುಸು ಮರೆತು ಹೋದದ್ದು ನಿಜ.
ಹೌದು. ಕಾಲ ಬದಲಾಗಿದೆ ಎಲ್ಲಾ ಬದಲಾಗಬೇಕು ಎಂದು ವರ್ಷ ವರ್ಷವೂ ಬದಲಾಗುತ್ತಲೇ ಹೋದ ಜನರನ್ನು ವಿಸ್ಮಯದಿಂದ ದೋಗಣ್ಣ ನೋಡುತ್ತಿದ್ದ.
ಗೇಣಿ ಕೊಡುವುದಕ್ಕೆ ನೇಗಿಲು ಸಾಗದ ಓರೆ ಕೋರೆಯನ್ನು ಬಿಡದ ಕೊಚ್ಚಿ ನೇಜಿ ನೆಟ್ಟು ಅಂಗಳದಲ್ಲಿ ಎರಡೆರಡು ಬತ್ತದ ತುಪ್ಪೆಯನ್ನು ಹಾಕಿದ ನೆನಪು.
ಶ್ರೀಧರ ಹೇಳುವ ಮಲ್ಲಪ್ಪೆಯ ದೆಸೆಯಿಂದ ಗೇಣಿ ಕೊಡುವುದಕ್ಕಿಲ್ಲ. ಜಾಗ ಸ್ವಂತ. ಓರೆ, ಕೋರೆ ಬಿಡಿ. ಗದ್ದೆಯ ಪುಣಿಯ ಬರಿ ಕೆತ್ತುವುದಕ್ಕೂ ಉದಾಸೀನ. ಅವನಂತೂ ಭೂಮಿಗೆ ಸೆಂಟ್ಸ್ ಲೆಕ್ಕದಲ್ಲಿ ಇಂಚು ಇಂಚಿಗೆ ರೇಟ್ ಹಿಡಿದಾಗಿದೆ!
ಕಾಡುವ ಯೋಚನೆಗಳ ನಡುವೆ ದೋಗುವಿಗೆ ನಿದ್ದೆ ಅದು ಯಾವಾಗ ಬಂದಿತ್ತೋ ಗೊತ್ತಿರಲಿಲ್ಲ.
ಹಿಂದೆಲ್ಲಾ ಮುಂಜಾನೆ ಬೇಗ ಏಳುತ್ತಿದ್ದ ದೋಗಣ್ಣನಿಗೆ ಈಗೀಗ ಬೆಳಗ್ಗೆ ಎಚ್ಚರವಾಗುವಾಗ ತಡವಾಗುತ್ತಿತ್ತು. ಮಳೆಯ ತಂಗಾಳಿಯ ಚಳಿಯಲ್ಲಿ ದೋಗು ಇನ್ನೂ ಬೆಚ್ಚಗೆ ಮಲಗೇ ಇದ್ದ.
ಅದೇನೋ ಹೆಣ್ಣು ಸ್ವರದ ಕೂಗು, ಬೊಬ್ಬೆ.... ಕನಸೋ... ನನಸೋ.... ದೋಗಣ್ಣ ಧಿಡಿಕ್ಕನೆ ಎದ್ದು ಕೂತ.
ಅಂಗಳದಲ್ಲಿ ಹಾಲು ಕರೆಯುವ ಬಿಂದಿಗೆ ಹಿಡಿದುಕೊಂಡ ಸುಜ್ಜಾ ಒಂದೇ ಸಮನೆ ಬೊಬ್ಬೆ ಹಾಕುತ್ತಿದ್ದಳು. ದೇವಕಿ, ಪದ್ದು ಸಮಾಧಾನಿಸುತ್ತಿದ್ದರು.
‘ಏನಾಯಿತು...?’ ಎನ್ನುತ್ತಾ ದೋಗು ಅಂಗಳ ಇಳಿದ.
‘ಮೂರು ದನಗಳನ್ನೂ ಬಾಗಿಲು ಮುರಿದು, ಹಗ್ಗ ಕಡಿದು ಯಾರೋ ಕದ್ದುಕೊಂಡು ಹೋಗಿದ್ದಾರೆ ದೊಡ್ಡಪ್ಪಾ...’ ಸುಜ್ಜಾ ಕುಸಿದು ಕುಳಿತು ಅಳತೊಡಗಿದಳು.
ಗುಳಿಗಜೋರದ ನಡುವೆ ಸಮತಟ್ಟು ಜಾಗದಲ್ಲಿ ಪಿಕಪ್ ತಿರುಗಿಸಿದ ಚಕ್ರದ ಗುರುತು. ಒಡೆದು ಹೋದ ಹಟ್ಟಿಯ ಬಾಗಿಲು. ಕೆಸರಿನಲ್ಲಿ ದನಗಳನ್ನು ನಡೆಸಿಕೊಂಡು ಹೋದ ಗುರುತು. ಹಟ್ಟಿಯ ಒಂದಷ್ಟು ದೂರದಲ್ಲಿ ಸತ್ತು ಬಿದ್ದ ನಾಯಿ.
‘ಈಗ ಎಲ್ಲಾ ಕಡೆ ಆಗುತ್ತಾ ಉಂಟು. ಸ್ಟೇಶನ್ಗೆ ಬಂದು ಕಂಪ್ಲೇಂಟ್ ಕೊಡು’ ಪದ್ದು ಪೊಲೀಸ್ ಠಾಣೆಗೆ ಕರೆ ಮಾಡಿದಾಗ ಉತ್ತರ ಬಂತು.
ಪಂಚಾಯತ್ ಅಧ್ಯಕ್ಷ, ಸ್ಥಳೀಯ ಪುಡಾರಿಗಳಿಗೆ ಕರೆ ಮಾಡಿದ ಪದ್ದು ‘ಕಂಪ್ಲೇಂಟ್ ಕೊಡುವುದಕ್ಕೆ ಇದೆ ಬನ್ನಿ’ ಅಂದ.
‘ನೀನು ಹೋಗಿ ದೂರು ಕೊಡು. ನಾವು ಫೋನ್ ಮಾಡುತ್ತೇವೆ’ ಎಂಬ ಉತ್ತರ ಬಂತು.
ಪದ್ದು ಬೈಕ್ ಏರಿ ಪೊಲೀಸ್ ಠಾಣೆಗೆ ಸಾಗಿದ.
‘ಹಟ್ಟಿಯಲ್ಲಿ ನಿನ್ನ ಗಿಡ್ದೆರು ಇರಲಿಲ್ಲವಾ ಮಾರಾಯಾ? ಅದು ಪೊಲೀಸರನ್ನು ಓಡಿಸುತ್ತದೆ ಕಳ್ಳರನ್ನು ಓಡಿಸುವುದಿಲ್ಲವಾ?’ ಪೊಲೀಸರು ಗೇಲಿ ಮಾಡಿದರು.
‘ಹಟ್ಟಿಯ ಬಾಗಿಲಿಗೆ ಗಟ್ಟಿಯಾಗಿ ಬೀಗ ಹಾಕಬೇಕು, ನಿನ್ನ ದನ ಎಲ್ಲಿ ಬಿರಿಯಾನಿಗೆ ಪೀಸ್ ಪೀಸ್ ಆಗಿದೆಯೋ ಏನೋ?’ ಪೊಲೀಸರ ಮಾತುಗಳು ಪದ್ದುವನ್ನು ಶೂಲದಂತೆ ಇರಿಯಿತು.
‘ದಯವಿಟ್ಟು ದನಗಳನ್ನು ಹುಡುಕಿ ಕೊಡಿ’ ಪದ್ದು ಕೈ ಮುಗಿದ.
‘ದೂರು ಕೊಟ್ಟು ಹೋಗು. ಮತ್ತೆ ನೋಡುವ...’ ಪೊಲೀಸರು ನುಡಿದರು.
ದೂರಿಗೆ ಸಹಿ ಹಾಕಿದ ಪದ್ದು ಸೋತ ಹೆಜ್ಜೆಗಳೊಂದಿಗೆ ಹಿಂತಿರುಗಿದ.
‘ಏನಾಯ್ತು?’ ಎಂದು ದೋಗಣ್ಣ ಪ್ರಶ್ನಿಸಿದ.
‘ಅವರು ದನ ಕಾಯುವುದಕ್ಕೆ ಇರುವುದು ಅಲ್ಲವಂತೆ’ ಪದ್ದು ಸಿಡುಕಿದ.
ಮಂಜೊಟ್ಟಿ ಗುತ್ತಿನ ದನ ಕಳ್ಳತನವಾದ ಸುದ್ದಿ ಊರಿಡೀ ಹರಡಿತು.
‘ಮನೆಯಲ್ಲಿ ಗನ್ ಇಟ್ಟುಕೊಳ್ಳಿ. ಬಂದರೆ ಶೂಟ್ ಮಾಡಿ’ ಮಿಲಿಟ್ರಿ ಅಬುಟ ಗುಡುಗಿದ.
ಎಲ್ಲರೂ ಸೇರಿ. ಎಂ.ಪಿ. ಎಮ್ಮೆಲ್ಲೆಗಳ ಬಳಿ ನಡೆದರು.
‘ಎಲ್ಲಾ ಸರಿ ಮಾಡುವ ಇನ್ನು ಮುಂದೆ ದನ ಕಳ್ಳತನ ಆಗದ ಹಾಗೆ ನೋಡುವ...’ ಅವರೆಲ್ಲಾ ನಗುನಗುತ್ತಲೇ ನುಡಿದರು.
ದಿನ ಕಳೆದಂತೆ ಮಂಜೊಟ್ಟಿ ಗುತ್ತಿನ ಆಸುಪಾಸಿನ ಮನೆಗಳ ದನಗಳು ರಾತ್ರಿ ಹಗಲೆನ್ನದೆ ಕಳ್ಳರ ಪಾಲಾದವು.
'ಗುಡ್ಡೆಗೆ ಮೇಯಲು ಬಿಡಬೇಡಿ' ಅಂದರು.
'ದೂರದಲ್ಲಿ ಒಳಮೆ ಹಾಕಬೇಡಿ' ಎಂದರು.
'ಹಟ್ಟಿ ಗಟ್ಟಿ ಮಾಡಿ' ಎಂದು ಸಲಹೆ ಕೊಟ್ಟರು.
ಅಲ್ಲೆಲ್ಲಾ ಕದ್ದದ್ದು ಯಾರು? ಪತ್ತೆ ಮಾಡಲಿಲ್ಲ.
'ಇನ್ನು ಹೊಟ್ಟೆಯೊಳಗಿಟ್ಟು ಸಾಕುತ್ತೇವೆ' ಜನ ಅಸಮಾಧಾನದಿಂದ ಗೊಣಗಿದರು.
ಪೊಲೀಸರು, ಜನಪ್ರತಿನಿಧಿಗಳು. ಸ್ಥಳೀಯ ಪುಡಾರಿಗಳು ಎಲ್ಲರೂ ಕೈ ಚೆಲ್ಲಿದರು. ಊರಿನವರೆಲ್ಲರೂ ಹತಾಶರಾದರು.
ಈ ನಡುವೆ ಸ್ಥಳೀಯ ಪುಡಾರಿಗಳ ಚಟುವಟಿಕೆ ಆರಂಭವಾಯಿತು. ಎಮ್ಮೆಲ್ಲೆ ಊರೆಲ್ಲಾ ಭೇಟಿ ನೀಡತೊಡಗಿದರು. 'ರಸ್ತೆ, ಲೈಟು, ಮೋರಿ, ಚರಂಡಿ, ಸಂಕ ಮಾಡುತ್ತೇವೆ ಪಂಚಾಯತ್ ಚುನಾವಣೆಗೆ ಮಲ್ಲಪ್ಪೆಯ ಪಕ್ಷವೇ ಜಯಗಳಿಸಬೇಕು. ಯಾಕೆಂದರೆ ಊರಿನಲ್ಲಿ ಇರುವುದು ಎಲ್ಲಾ ಡಿಕ್ಲರೇಶನ್ ಭೂಮಿ. ಅಪ್ಪೆಯನ್ನು ಮರೆಯಬೇಡಿ, ನಿಮಗೆಲ್ಲ ಜಮೀನು ಸಿಕ್ಕಿದ್ದು ಅವರಿಂದ ಅಲ್ವಾ? ಪೂಜಾರಿ, ಮೊಯ್ಲಿ, ರೈ, ಫೆರ್ನಾಂಡಿಸ್ ಎಲ್ಲ ಹೇಳಿದ್ದಾರೆ’
‘ನಮ್ಮ ದನ ತಂದು ಕೊಡಿ..’ ದೋಗುವಿನ ಬೇಡಿಕೆ ಬಾಲಿಶ ಎನಿಸಿದ ಅವರು ನಿರುತ್ತರರಾದರು.
'ಇವತ್ತು ದನ.. ನಾಳೆ... ? ' ಎನ್ನುತ್ತಾ ದನ ಹಿಡಿಯುವ ಪಕ್ಷದ ಗುಂಪು ಮಂಜೊಟ್ಟಿ ಗುತ್ತಿಗೆ ಬಂತು. ಪದ್ದು ಚುನಾವಣೆಗೆ ಸ್ಪರ್ಧಿಸುವ ತಯಾರಿ ಮಾಡತೊಡಗಿದ.
ಸುದ್ದಿ ಮುಂಬೈಯ ಶ್ರೀಧರನನ್ನು ತಲುಪಿತು.
‘ಅವ ಪೆದಂಬು ಜನ, ಈಗ ರಾತ್ರಿ ಅಲೆದಾಡುವ ಪೋಲಿಗಳ ಜತೆ ಸೇರಿಕೊಂಡಿದ್ದಾನೆ. ನಮ್ಮ ಗುತ್ತಿಗೆ ಧರ್ಮಾರ್ಥ ಭೂಮಿ ಕೊಟ್ಟವರನ್ನು ಮರೆಯುವುದಕ್ಕೆ ಉಂಟೇ? ಅವನ ಹೆಸರಿಗೆ ಮಾಡಿಸಿಕೊಂಡದ್ದೂ ಅದೇ ಭೂಮಿ. ಅವನನ್ನು ವೋಟಿಗೆ ನಿಲ್ಲಬೇಡ ಎಂದು ಹೇಳಿ’ ಶ್ರೀಧರ ದೋಗುವಿಗೆ ಕರೆ ಮಾಡಿದ.
‘ನಮ್ಮ ದನವನ್ನು ಅವರು ಯಾರೂ ತಂದು ಕೊಟ್ಟಿಲ್ಲ ಮಗಾ’ ಎಂದ ದೋಗಣ್ಣ.
‘ದನದ ರೇಟ್ ಎಷ್ಟು? ಅದು ಹೋದರೆ ಮತ್ತೆ ತರಬಹುದು. ಭೂಮಿ ಕೊಟ್ಟವರನ್ನು ಮರೆಯಬಾರದು ಅಂತ ಅವನಿಗೆ ಹೇಳಿ. ಅವ ವೋಟಿಗೆ ನಿಂತರೆ ಅವನ ಎದುರು ನಿಲ್ಲುವವನ ಎಲ್ಲಾ ಖರ್ಚು ನಾನು ನೋಡಿಕೊಳ್ಳುತ್ತೇನೆ’ ಎಂದ ಶ್ರೀಧರ.
‘ಅವನಿಗೆ ಈ ಊರಿನಲ್ಲಿ ಜನ ಯಾರು ಸಿಗುತ್ತಾರೋ ನೋಡುವ’ ಎಂದ ಪದ್ದು.
‘ಅವ ಹೇಗೆ ವೋಟಿಗೆ ನಿಲ್ಲುತ್ತಾನೋ ನಾನೂ ನೋಡುತ್ತೇನೆ’ ಎಂದು ಶ್ರೀಧರ ಶಪಥ ಹಾಕಿದ.
ಪದ್ದುವಿನ ನಾಮಪತ್ರ ತಿರಸ್ಕೃತವಾಗಿತ್ತು. ಮೇಜು ಗುದ್ದಿ ಪ್ರಶ್ನಿಸಿದ ಪದ್ದು ಮತ್ತು ಸಂಗಡಿಗರಿಗೆ ಉತ್ತರವೇ ಸಿಗಲಿಲ್ಲ. ಡಮ್ಮಿ ನಾಮಪತ್ರ ಹಾಕಿದವ ಅಭ್ಯರ್ಥಿಯಾದ.
ತಂತ್ರ ಫಲಿಸಿದ ಸುದ್ದಿ ಕೇಳಿ ಶ್ರೀಧರ ಮೀಸೆ ತಿರುವಿದ.
‘ಅನ್ಯಾಯ.. ವೇರ್ ಈಸ್ ಡೆಮಾಕ್ರಸಿ, ಇಟ್ ಈಸ್ ಅಂಡರ್ ಡೇಂಜರ್’ ಎಂದು ಮಿಲಿಟ್ರಿ ಅಬುಟ ಅಬ್ಬರಿಸಿದ. ಯಾವುದೋ ಕಾರಣಕ್ಕಾಗಿ ಅವನ ಮುತ್ತಾತನಿಗೆ ಬ್ರಿಟಿಷ್ ಕಾಲದ ಕಲೆಕ್ಟರ್ ಸರ್. ಮುನ್ರೋ ಕೊಟ್ಟಿದ್ದ ಹತ್ತಾರು ಎಕರೆ ಜಮೀನು ಒಕ್ಕಲು ಪಾಲಾಗಿತ್ತು. ಆತ ಅಪ್ಪೆ ಯ ವಿರುದ್ಧ ಹಲ್ಲು ಕಡಿಯುತ್ತಿದ್ದ. 'ಅವರ ಪಕ್ಷ ಈ ಊರಲ್ಲಿ ಗೆಲ್ಲಲೇ ಬಾರದು' ಎಂದು ಪಣತೊಟ್ಟ.
ಪದ್ದು ಆತನ ಸಂಗಡಿಗರು ಪಕ್ಕದ ಪಂಚಾಯತ್ ಹಳ್ಳಿಗಳಿಗೆ ಇಳಿದರು. ಅಲ್ಲೂ ದನಕಳ್ಳತನದ ಗೋಳು.
ದನ ಕಳೆದುಕೊಂಡವರ ಮನೆ ಮನೆ ಪ್ರಚಾರ ಹೇಗಿತ್ತು ಎಂದರೆ ಮಲ್ಲಪ್ಪೆಯ ಪಕ್ಷದ ಅಭ್ಯರ್ಥಿಗಳ ಠೇವಣಿಯೇ ಕಳೆದು ಹೋಗಿತ್ತು. ಪಕ್ಕದ ಹಳ್ಳಿಗಳಲ್ಲೂ ನೆಲಕಚ್ಚಿತ್ತು.
‘ಕಾಲ ಬದಲಾಯಿತು ಮಾರಾಯ್ರೆ. ಭೂಮಿ ಸಿಕ್ಕ ಜನರಿಗೆ ಜರ ಜಾಕಿನ ಇಲ್ಲ.’ ಎಂದು ಅಪ್ಪೆಯ ಪಕ್ಷದವರು ಹೇಳಿಕೊಂಡರು.
‘ಇಷ್ಟೆಲ್ಲಾ ಉಪಕಾರ ಮಾಡಿದ ಮಲ್ಲಪ್ಪೆಯನ್ನು ಜನ ಯಾಕೆ ಮರೆತರು...?’ ಶ್ರೀಧರನಿಗೆ ಅರ್ಥವೇ ಆಗಲಿಲ್ಲ. ಆತ ಗೊಣಗಿದ 'ಹೌದು ಕಾಲ ಬದಲಾಗಿದೆ.'
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ