ಆರೋಗ್ಯವೇ ಸಂಪತ್ತು ಎಂಬುದು ಪ್ರತಿಯೊಬ್ಬರು ಅರಿತಿರುವ ಸತ್ಯವೇ ಆದರೂ ಕೆಲವೊಂದಿಷ್ಟು ಮಂದಿ ಅನಾರೋಗ್ಯಕ್ಕೆ ಕಾರಣವಾದ ದುಷ್ಟಟಗಳಿಗೆ ದಾಸರಾಗಿ
ತಮ್ಮ ಆರೋಗ್ಯ ಮತ್ತು ಜೀವಕ್ಕೇ ಆಪತ್ತು ತಂದು ಕೊಳ್ಳುತ್ತಿರುವುದನ್ನು ನಾವು ನಿತ್ಯವೂ ನೋಡುತ್ತಿದ್ದೇವೆ ಅದರಲ್ಲಿ ಪ್ರಮುಖವಾದದ್ದು ತಂಬಾಕು ಸೇವನೆ. ಈ ತಂಬಾಕೆಂಬ ವಿಷವನ್ನು ಜನರು ವಿವಿಧ ರೂಪದಲ್ಲಿ ಸೇವಿಸುತ್ತಾ ತಮ್ಮ ದೇಹವನ್ನು ರೋಗಗಳ ಗೂಡಾಗಿ ಮಾಡಿಕೊಂಡು ಜೀವ ಕಳೆದುಕೊಳ್ಳುತ್ತಿ ರುವುದು ನಿಜಕ್ಕೂ ಮೂರ್ಖತನದ ಪರಮಾವಧಿ ಎನ್ನಬಹುದು! ಇಂದು ಮೇ 31 ಈ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಇದರ ಮೂಲ ಉದ್ದೇಶ ತಂಬಾಕು ಸೇವನೆಯ ವಿರುದ್ಧ ಜನಗಳಲ್ಲಿ ಜಾಗೃತಿ ಮೂಡಿಸಿ ತಂಬಾಕು ಸೇವೆನೆಗಳಿಂದ ಆಗುವ ಅಪಾಯಗಳು ಹಾಗೂ ಆರೋಗ್ಯದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ತಂಬಾಕು ಸೇವನೆಯನ್ನು ತಡೆಗಟ್ಟುವ ಕ್ರಮದ ಬಗ್ಗೆ ಜಾಗತಿಕ ಅರಿವು ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ. ಈ ನಿಟ್ಟಿನಲ್ಲಿ 1987 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು WHA 40.38 ರೆಸಲ್ಯೂಶನ್ ಅನ್ನು ಅಂಗೀಕರಿಸಿ 1988 ಏಪ್ರಿಲ್ 7 ಅನ್ನು 'ವಿಶ್ವ ಧೂಮಪಾನ ನಿಷೇಧ ದಿನ' ಎಂದು ಕರೆ ನೀಡಿತು. ಈ ಧೂಮಪಾನ ರಹಿತ ದಿನವು ಯಶಸ್ವಿಯಾದ ನಂತರ WHO ಅದೇ 1988 ರಲ್ಲಿ WHA42. 19 ರೆಸಲ್ಯೂಶನ್ ಅನ್ನು ಸ್ಥಾಪಿಸಿ ಪ್ರತಿ ವರ್ಷ ಮೇ 31ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ರಚಿಸಿತು. ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂಬ ಕಳಕಳಿಯನ್ನು ಈ ಆಚರಣೆ ಹೊಂದಿದೆ.! ಇಂದು ಬಹುತೇಕ ಕ್ಯಾನ್ಸರ ಹಾಗು ಹೃದಯ ಸಂಬಂಧಿ ಕಾಯಿಲೆಗಳಿಗೆ ಮೂಲಕಾರಣ ಈ ತಂಬಾಕಿನ ವಿಷಯುಕ್ತ ಹೊಗೆ, ಈ ತಂಬಾಕಿನ ಹೊಗೆಯಲ್ಲಿ ಇರುವ ರಾಸಾಯನಿಕಗಳು ರಕ್ತನಾಳಗಳನ್ನು ಹಾನಿಗೊಳಿಸುವುದ ಲ್ಲದೆ ಹೃದಯಕ್ಕೆ ರಕ್ತದ ಹರಿವು ಮತ್ತು ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಇದು ಹೃದಯಾಘಾತ ಹೃದಯ ವೈಫಲ್ಯ ಮತ್ತು ಎದೆ ನೋವು ಅಪಾಯಗಳನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಮರಣ ಮತ್ತು ಅನಾರೋಗ್ಯದ ಪ್ರಮಾಣಕ್ಕೆ ಕಾರಣವಾಗುತ್ತದೆ ಎಂಬ ವ್ಯೆದ್ಯರ ಹೇಳಿಕೆಯನ್ನು ನಿರ್ಲಕ್ಷಿಸಿ ತಂಬಾಕು ಸೇವನೆಗೆ ಜನ ದಾಸರಾಗಿ ಪ್ರಾಣ ಕಳೆದುಕೊಳ್ಳುತ್ತಿರು ವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.
ತಂಬಾಕು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಸ್ಟ್ರೋಕ್,ಉಸಿರಾಟದ ಸೋಂಕುಗಳು
ಕಟ್ಟಿಟ್ಟ ಬುತ್ತಿಯೆಂದು ಗೊತ್ತಿದ್ದರೂ ಜನಗಳು ಇದಕ್ಕೆ ದಾಸರಾಗಿ ಹೊರಬರಲಾಗದೆ ತಮ್ಮ ಅಮೂಲ್ಯ ಜೀವ ಹಾಗೂ ಆರೋಗ್ಯ ಕಳೆದುಕೊಳ್ಳುತ್ತಿರುವುದು ದುರ್ದೈವ. ಧೂಮಪಾನವು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುವುದರಿಂದ ದೇಹವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ, ನರರೋಗ, ಮೂತ್ರಪಿಂಡದ ಕಾಯಿಲೆ ಮತ್ತು ದೃಷ್ಟಿ ಸಮಸ್ಯೆಗಳಂತಹ ತೊಡಕುಗಳಿಗೆ ಸಹ ಕಾರಣವಾಗುತ್ತದೆ ಎಂದು ವ್ಯೆದ್ಯರು ಹೇಳುತ್ತಾರೆ, ಇಂದು ಪ್ರಸ್ತುತ ವಿಶ್ವಾದ್ಯಂತ ಪ್ರತಿ ವರ್ಷ 8 ಮಿಲಿಯನ್ಗಿಂತಲೂ ಹೆಚ್ಚು ಸಾವುಗಳಿಗೆ ಈ ತಂಬಾಕು ಸೇವನೆ ಕಾರಣವಾಗುತ್ತಿದೆ ಎಂದು ಅಂಕಿ ಅಂಶಗಳು ಉಲ್ಲೇಖಿಸುತ್ತಿವೆ, ಇದರಲ್ಲಿ ನೇರವಾಗಿ ಧೂಮಪಾನ ಮಾಡದವರೂ ಸಹ ಪರೋಕ್ಷವಾಗಿ ಇದರ ಹೊಗೆಯನ್ನು ಸೇವಿಸುವುದರಿಂದ ಕೂಡ 1.2 ಮಿಲಿಯನ್ ಸಾವುಗಳು ಸಂಭವಿಸುತ್ತಿವೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ, ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಿಗರೇಟ್, ಬೀಡಿ ಮತ್ತು ಹುಕ್ಕಾದಂತಹ ತಂಬಾಕು ಉತ್ಪನ್ನಗಳನ್ನು ಬಳಸಿದಾಗ, ಹಾಗೂ ಮನೆಯಲ್ಲಿ ಯಾರೋ ಒಬ್ಬರು ಸೇವಿಸುವ ದೂಮಪಾನದ ಹೊಗೆಯು ಆ ಸ್ಥಳವನ್ನು ಆವರಿಸಿ ಅಲ್ಲಿರುವ ಜನರು ಅದನ್ನು ಉಸಿರಾಟದ ಮೂಲಕ ಸೇವಿಸುವಂತಾದರೆ ಅದನ್ನು ಪರೋಕ್ಷ ಧೂಮಪಾನ ಎನ್ನಲಾಗುತ್ತದೆ, ತಂಬಾಕು ಹೊಗೆಯಲ್ಲಿ 7000 ಕ್ಕೂ ಹೆಚ್ಚು ರಾಸಾಯನಿಕಗಳಿವೆ, ಇವು ತುಂಬಾ ಹಾನಿಕಾರಕವೆಂದು ತಿಳಿದುಬಂದಿದೆ ಮತ್ತು ಕನಿಷ್ಠ 69 %ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು WHO ವರದಿ ಮಾಡಿದೆ.ಇನ್ನು ಭಾರತದಲ್ಲಿ ಪ್ರತೀ ವರ್ಷ 8ರಿಂದ 9 ಲಕ್ಷ ಜನ ತಂಬಾಕು ಸೇವನೆಗೆ ಸಂಬಂಧಪಟ್ಟ ಕಾಯಿಲೆಗಳಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2010ರ ಭಾರತದ ಯುವಕ,ಯುವತಿಯರ ಜಾಗತಿಕ ತಂಬಾಕು ಸೇವನೆ ಸರ್ವೇ ವೀಕ್ಷಣೆಯಲ್ಲಿ ಕಂಡುಬಂದ ಅಂಶವೆಂದರೆ ಪ್ರತೀ ಮೂವರಲ್ಲಿ ಒಬ್ಬರು ಅಂದರೆ ನೂರರಲ್ಲಿ ಶೇಕಡಾ ಮೂವತ್ತು ಭಾಗ ಜನ, ಯಾವುದೋ ಒಂದು ವಿಧದ ತಂಬಾಕು ಬಳಸುತ್ತಿದ್ದಾರೆ. ಅವರಲ್ಲಿ ಶೇಕಡಾ 21ರಷ್ಟು ಜನ ಹೊಗೆರಹಿತ ತಂಬಾಕು ಬಳಸಿದರೆ ಶೇಕಡಾ 9ರಷ್ಟು ಜನ ಹೊಗೆಸಹಿತ ತಂಬಾಕು ಬಳಸುತ್ತಿದ್ದಾರೆ ಮತ್ತು% 5ರಷ್ಟು ಜನ ಎರಡು ರೀತಿಯ ತಂಬಾಕನ್ನು ಬಳಸುತ್ತಿದ್ದಾರೆ ಎಂದು ವರದಿಗಳು ತಿಳಿಸುತ್ತಿವೆ.
"ಯುವಪೀಳಿಗೆ ಮತ್ತು ತಂಬಾಕು"
ಹಿಂದೆ ಅವಿದ್ಯಾವಂತರು ಹೆಚ್ಚಿದ್ದ ಕಾರಣ ಜ್ಞಾನದ ಕೊರತೆಯಿಂದ ತಂಬಾಕಿನ ದುಷ್ಪರಿಣಾಮಗಳ ತಿಳುವಳಿಕೆಯ ಕೊರತೆಯಿಂದ ಜನ ತಂಬಾಕು ಸೇವನೆಗೆ ದಾಸರಗುತ್ತಿದ್ದರು ಎನ್ನಬಹುದಾದರೆ ಇಂದಿನ ವಿದ್ಯಾವಂತ ಯುವ ಪೀಳಿಗೆ ತಂಬಾಕಿನ ಸೇವನೆಯಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆ ತಿಳಿದೂ ತಿಳಿದು ದೂಮಪಾನ ಸೇರಿ ಹಲವು ವಿಷಯುಕ್ತ ತಂಬಾಕು ಸೇವನೆಗೆ ದಾಸರಗುತ್ತಿರುದಲ್ಲದೆ ಶುದ್ಧ ಆಹಾರ ಸೇವಿಸುವ ಬದಲು ತಂಬಾಕನ್ನು ಸೇವಿಸುತ್ತಿರುವುದು ನಿಜಕ್ಕೂ ಮೂರ್ಖತನದ ವಿಷಯ, ತಂಬಾಕು ಅಥವಾ ಸಿಗರೇಟ್ ಪ್ಯಾಕೇಟ್ ಮೇಲೆ ಇದರ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿದ್ದರೂ ಕೂಡ ಇಂದಿನ ಯುವ ಪೀಳಿಗೆಯ ಯುವಕ ಯುವತಿಯರು ತಂಬಾಕು ಹಾಗೂ ಸಿಗರೇಟ್ಗಳಿಗೆ ಮಾರು ಹೋಗಿ ಇದರಿಂದ ಹೊರ ಬರಲು ಸಾಧ್ಯವಾಗದೆ ಬಳಲುತ್ತಿದ್ದಾರೆ, ತಂಬಾಕಿನಲ್ಲಿ ನಿಕೋಟಿನ್ ಎಂಬ ಅಂಶ ಹೇರಳವಾಗಿದ್ದು ಈ ಅಂಶ ಇರುವುದ ರಿಂದ ಮತ್ತೆ ಮತ್ತೆ ಸಿಗರೇಟ್ ತಂಬಾಕು ಸೇವನೆ ಮಾಡಬೇಕು ಅನ್ನಿಸುತ್ತದೆ. ಇದರಿಂದ ದೇಹಕ್ಕೆ ಅನೇಕ ಗಂಭೀರ ಕಾಯಿಲೆಗಳು ಬಾಧಿಸಲಿವೆ.ನಿಕೋಟಿನ್ ಮೆದುಳಿನಲ್ಲಿ ಡೋಪಮೈನ್ (Dopamine) ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ ಇದರಿಂದ ಜನರಿಗೆ ಸಂತೋಷ, ಸಮಾಧಾನ ಭ್ರಮಾದೀನತೆಗಳಂತಹ ಬಾವನೆಗಳು ಉಂಟಾಗುತ್ತದೆ.ಎಂದು ಅಧ್ಯಯನಗಳು ಹೇಳಿವೆ.ಈ ನಿಕೊಟಿನ್ ಅಂಶ ಮೆದುಳಿಗೆ ಸೇರಲು ಕೇವಲ 10 ಸೆಕೆಂಡ್ ಸಾಕು. ಮಾನಸಿಕ ಖಿನ್ನತೆಗೆ (Mental depression) ಒಳಗಾಗಿರುವವರು ನೋವು ಮರೆಯಲು ಸಿಗರೇಟ್ ಮೊರೆ ಹೋಗುತ್ತಿದ್ದಾರೆ. ಇದರಿಂದ ಅವರಿಗೆ ಬೇಗನೆ ಸಂತೋಷದ ಅನುಭವ ದೊರೆಯುತ್ತವೆ ಮನಸ್ಸಿಗೆ ಉತ್ಸಾಹ ಸಿಕ್ಕಿದಂತಾಗುತ್ತದೆ. ಹಾಗಾಗಿ ಇಂದಿನ ಯುವ ಪೀಳಿಗೆ ಇದರ ದುಷ್ಪರಿಣಾಮಗಳ ನಡುವೆಯೂ ಆ ಕ್ಷಣದ ತಾತ್ಜಲಿಕ ಸುಖ ಸಂತೋಷಕ್ಕಾಗಿ ಇಡೀ ಜೀವನವನ್ನೇ ಹಾಳುಮಾಡಿ ಕೊಂಡು ಸಿಗರೇಟಿಗೆ ದಾಸರಾಗುತ್ತಿದ್ದಾರೆ ಒತ್ತಡ ಕಡಿಮೆ ಮಾಡಲು ಧೂಮಪಾನ ಸಹಕಾರಿ, ಧೂಮಪಾನವು ಸಂತೋಷ ಹೆಚ್ಚಿಸುತ್ತದೆ, ಧೈರ್ಯ ತುಂಬುತ್ತದೆ’ ಎಂಬೆಲ್ಲ ಸುಳ್ಳು ಕಲ್ಪನೆಗಳು ಜನರಲ್ಲಿ ಮೂಡಿರುವುದು ದುರದೃಷ್ಟಕರ ಮತ್ತು ಜನರು ಈ ಭ್ರಮೆಯಲ್ಲಿಯೇ ಬೀಡಿ,ಸಿಗರೇಟು, ಗುಟ್ಕಾ, ಜರ್ದಾ ನಶ್ಯಾ,ಹುಕ್ಕಾ ಹೀಗೆ ಹಲವು ರೀತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ತಂಬಾಕಿನಲ್ಲಿರುವ 100 ವಿಷಕಾರಕ ಹಾಗೂ 70 ಕ್ಯಾನ್ಸರ್ ಕಾರಕ ರಾಸಾಯನಿಕಗಳು ಶ್ವಾಸಕೋಷದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ನಾಲಗೆ, ಗಂಟಲಿನ ಕ್ಯಾನ್ಸರ್, ದೀರ್ಘಕಾಲದ ಕೆಮ್ಮು, ಶ್ವಾಸಕೋಶದ ಸೋಂಕು, ಹೀಗೆ ಹಲವಾರು ಗುಣಪಡಿಸಲಾಗದ ಭಯಂಕರ ರೋಗಗಳಿಗೆ ಕಾರಣವಾಗುತ್ತದೆ ಎಂಬ ಕಟು ಸತ್ಯವನ್ನು ಯುವಪೀಳಿಗೆ ಅವಶ್ಯವಾಗಿ ತಿಳಿದುಕೊಳ್ಳಬೇಕಿದೆ, ತಂಬಾಕನ್ನು ತಡೆಗಟ್ಟುವ ಈ ನಿಟ್ಟಿನಲ್ಲಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಯುವಜನರನ್ನು ಈ ಚಟದಿಂದ ದೂರವಿಡುವುದೇ ದೊಡ್ಡ ಸವಾಲಾಗಿದೆ. ಸಾರ್ವಜನಿಕ ಸ್ಥಳ ಕೆಲಸ ಮಾಡುವ ಸ್ಥಳ ಕಾರ್ಖಾನೆ ಶಾಲಾ, ಕಾಲೇಜು, ರೈಲು, ಬಸ್ಸು, ವಿಮಾನ ಹೇಗೆ ಹಲವೆಡೆ ಕಟ್ಟುನಿಟ್ಟಾಗಿ ಧೂಮಪಾನ ನಿಯಂತ್ರಣ ಮಾಡಿರುವುದರಿಂದ ಪರೋಕ್ಷವಾಗಿ ಇದರ ಸೇವನೆ ಮಾಡುವ ಸಾವಿರಾರು ಮಂದಿಯನ್ನು ರಕ್ಷಿಸಿದಂತಾಗುತ್ತಿದೆ ಎಂಬುದು ಸ್ವಲ್ಪ ಸಮಾಧಾನ ಕೊಡುವ ವಿಚಾರದ ನಡುವೆಯೂ ಸರ್ಕಾರಗಳು ತಂಬಾಕು ನಿಷೇದಕ್ಕೆ ಪ್ರಾಮಾಣಿಕವಾಗಿ
ಪ್ರಯತ್ನಿಸುತ್ತಿದೆಯೇ ಎಂಬ ಪ್ರಶ್ನೆ ಕಾಡದೆ ಇರಲಾರದು, ತಂಬಾಕನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರ್ಕಾರಗಳು ಪ್ರಾಮಾಣಿಕವಾಗಿ ಯೋಜನೆಗಳನ್ನು ರೂಪಿಸಬೇಕಿದೆ, ಈ ನಿಟ್ಟಿನಲ್ಲಿ ಸರ್ಕಾರಗಳು ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಅನುವು ಮಾಡಿಕೊಟ್ಟು ಈ ತಂಬಾಕು ಬೆಳೆಯನ್ನು ಹಂತ ಹಂತವಾಗಿ ನಿಲ್ಲಿಸಬೇಕು ಹಾಗೂ ಬೀಡಿ, ಸಿಗರೇಟ್, ಗುಟ್ಕಾ ಮತ್ತು ಇನ್ನಿತರೆ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇದಿಸಬೇಕು ಸರ್ಕಾರ ತನ್ನ ಆದಾಯದ ಮೂಲಕ್ಕಿಂತ ಜನರ ಆರೋಗ್ಯವೇ ಮುಖ್ಯ ಎಂಬ ವಾಸ್ತವ ಸತ್ಯವನ್ನು ಅರಿತು ಇಂತಹ ಉತ್ಪಾದನಾ ಕಂಪೆನಿಗಳಿಗೆ ಪರವಾನಿಗೆ ಕೊಡುವುದನ್ನು ನಿಲ್ಲಿಸಬೇಕು, ಅದು ಬಿಟ್ಟು ಇಂತಹ ವಿಷಕಾರಿ ಉತ್ಪನ್ನಗಳಿಗೆ ಅವಕಾಶ ಮಾಡಿಕೊಟ್ಟು ಅದರಿಂದಾಗುವ ದುಷ್ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ರೀತಿ ನಿಯಂತ್ರಣ ಆಚರಣಾ ದಿನಗಳನ್ನು ಆಚರಿಸುವುದು ಪರೋಕ್ಷವಾಗಿ ಇದನ್ನು ಬೆಂಬಲಿಸಿದಂತೆ ಆಗುವುದಲ್ಲದೆ ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗಿದಂತಾಗುತ್ತದೆ,
ಗೀತಾಂಜಲಿ ಎನ್,ಎಮ್
Author ✍️
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ