ಪೊಲೀಸರನ್ನು ಓಡಿಸಿದ ಗೋಣ

ಪೆದಂಬುನರಮಾನಿ ಕಾದಂಬರಿ (ತುಳುನಾಡ ಮಣ್ಣಿನ ಪರಿಮಳದ ಕತೆಗಳು - ಭಾಗ - 26)

ProfileImg
25 May '25
4 ನಿಮಿಷದ ಓದು


image

‘ಒಳ್ಳೆ ಒಯ್ಪು, ಲಕ್ಷಣದ ಸುಳಿ ಇದೆ ದೋಗಣ್ಣ ಬೇಕಿದ್ದರೆ ಕೊಂಡು ಹೋಗಿ ಸಾಕಿ’ ಎಂದು ಸಿಮಂತೂರ ಮಿತ್ತಲ್ಲದ ಚೆಂದಣ್ಣ ಹೇಳಿದ್ದರು.

ಮನೆಯ ಕೋಣವೂ ಹಳತ್ತಾಗಿ ಬಲ್ಚಟ್ ಕಟ್ಟಿ ಹೋಗಿದೆ. ಹೇಗೋ ಒಂದು ಜತೆ ಕೋಣ ಬೇಕು ಎಂದು ಯೋಚಿಸಿದ ದೋಗಣ್ಣ ಚಂದಣ್ಣನ ಎಳೆ ಕೋಣವನ್ನು ಹೊಡೆದುಕೊಂಡು ಮಂಜೊಟ್ಟಿಗುತ್ತಿಗೆ ತಂದಿದ್ದರು.

ಅದರ ಲಕ್ಷಣ ನೋಡಿದ ಪದ್ದು ಅದಕ್ಕೆ ‘ಮಂಜ’ ಎಂದು ಹೆಸರಿಟ್ಟಿದ್ದ. ಕುಲ್ಕುಂದ ಜಾನುವಾರು ಜಾತ್ರೆಯಿಂದ ಇನ್ನೊಂದು ಎಳೆ ಗೋಣನನ್ನು ತಂದು ಜತೆಗೆ ಕಟ್ಟಿದ್ದರು. ಪೊಡಿ, ಕೆಸರು ಗದ್ದೆಯಲ್ಲಿ ಹೊಸ ಜೋಡಿ ಹೆಜ್ಜೆ ಇಕ್ಕಿದ ವೇಗಕ್ಕೆ ಒಂದು ವಾರದಲ್ಲೇ ಹಳೆಯ ಕೋಣಗಳು ಕಸಾಯಿಯವನ ಪಾಲಾಗಿತ್ತು.

ದಿನ ಕಳೆದಂತೆ ಮಂಜ ಮನೆಯ ಮಗುವಿನಂತೆ ಬೆಳೆದ. ಮನೆಯವರ ಆಜ್ಞೆಯನ್ನು ತಪ್ಪದೆ ಪಾಲಿಸುತ್ತಿದ್ದ. ಯಾವ ಕಾರಣಕ್ಕೂ ಯಾರಿಗೂ, ಯಾವುದಕ್ಕೂ ಹಾಯದೇ ಇರುವ ಸಾಧು ಕೋಣವಾದ.

ಕಂಡ ಕೋರಿ ಆದ ನಂತರ ಪದ್ದು ಮಂಜನ ಬಾಲ ಹಿಡಿದಾಗ ಅದು ಮಿಂಚಿನಂತೆ ಕ್ಷಣಮಾತ್ರದಲ್ಲಿ ಗದ್ದೆಯ ಇನ್ನೊಂದು ತುದಿಯಲ್ಲಿರುತ್ತಿತ್ತು. ಪದ್ದು ಅದರ ವೇಗಕ್ಕೆ ಹೊಂದಿಕೊಳ್ಳಲಾಗದೆ ಅರ್ಧದಲ್ಲೇ ಕೈ ಬಿಡುತ್ತಿದ್ದ.

‘ಇದನ್ನು ಕಂಬಳಕ್ಕೆ ಕಟ್ಟಿದರೆ ಮೆಡಲ್ ಖಂಡಿತಾ’ ಎಂದು ಪದ್ದು ಹೇಳಿದಾಗ ದೋಗಣ್ಣ ತಲೆ ಆಡಿಸಿದ್ದರು.

ಒಂದು ತೊಡಮನೆಯಲ್ಲಿ ಕಾಡೊಟ್ಟು ನಾರಾಯಣಣ್ಣ ಸಿಕ್ಕಿದಾಗ ‘ಒಂದು ಗೋಣ ಇದೆ. ಚೆನ್ನಾಗಿ ಓಡುತ್ತದೆ. ಒಮ್ಮೆ ಟ್ರಯಲ್ ನೋಡಿ’ ಎಂದು ದೋಗಣ್ಣ ಹೇಳಿದ್ದರು. ಮಂಜೊಟ್ಟಿ ಗುತ್ತಿಗೆ ಬಂದ ನಾರಾಯಣಣ್ಣ ಮಂಜನನ್ನು ನೋಡಿದ ತಕ್ಷಣ ಗಾಡಿ ಮಾಡಿಸಿ ಕಾಡೊಟ್ಟಿಗೆ ಕೊಂಡೊಯ್ದು ಬದಲಿಗೆ ಒಂದು ಕೋಣವನ್ನು ಕಳಿಸಿಕೊಟ್ಟರು.

ಕಾಡೊಟ್ಟಿನ ಆರೈಕೆ ಮಂಜನನ್ನು ಗಿಡ್ದೆರುವನ್ನಾಗಿ ಮಾಡಿತ್ತು. ವರ್ಷ ಕಳೆದಂತೆ ಕಂಬಳದ ಎಲ್ಲಾ ಮೆಡಲ್ ಕಾಡೊಟ್ಟುವಿಗೆ. ಮಂಜ ತನ್ನ ಸಹವರ್ತಿ ಕೋಣವನ್ನು ಮಿಂಚಿನಂತೆ ಎಳೆದೊಯ್ದು ಮಂಜೊಟ್ಟಿಯಲ್ಲಿ ನಿಂತಿದ್ದ ಪದ್ದುವಿನ ಬಳಿ ಬಂದು ಮುಂಡು ಊರುತ್ತಿದ್ದ.

ಮಂಜನ ಪ್ರತಿ ಮೆಡಲಿನ ಸಂದರ್ಭದಲ್ಲೂ ಪದ್ದು ಅದರ ಮುಖವನ್ನು ಅಪ್ಪಿ ಹಿಡಿದು ಚುಂಬಿಸುತ್ತಿದ್ದ. ಮಂಜ ಪದ್ದುವಿನ ಕೈಗಳನ್ನು ಪ್ರೀತಿಯಿಂದ ನೆಕ್ಕುತ್ತಿದ್ದ.

ಕಂಬಳ ಮುಗಿದ ನಂತರ ಮಂಜ ಮಂಜೊಟ್ಟಿ ಗುತ್ತು ಸೇರಿ ಗುತ್ತಿನವರ ಪ್ರೀತಿಯ ಮಗನಾಗಿಯೇ ಬೆಳೆದ.

ಒಂದು ಆಟಿ ಅಮಾವಾಸ್ಯೆಯ ದಿನ ಸುಜ್ಜಾ ಮತ್ತು ಮಗನನ್ನು ಕರೆದುಕೊಂಡು ಕಾರ್ಲದ ಸಂಪಾಯ್ ಗುತ್ತಿಗೆ ಹೋದ ಪದ್ದು ಆಟಿ ಅಗೆಲ್ ಮುಗಿಸಿ ಹೆಂಡತಿ ಮಗುವನ್ನು ಅಲ್ಲೇ ಬಿಟ್ಟು ರಾತ್ರಿ ಸುರತ್ಕಲ್ ದಾರಿ ಹಿಡಿದ.

ಅಮಾವಾಸ್ಯೆಯ ಕರಿಕತ್ತಲಲ್ಲಿ ರಸ್ತೆಯ ಬದಿಯಲ್ಲಿ ಒಂದು ಟೆಂಪೋ ನಿಂತಿತ್ತು. ಅದರ ಸುತ್ತ ಐದಾರು ಬೈಕ್‌ಗಳು. ಪದ್ದು ಬೈಕ್ ನಿಲ್ಲಿಸಿ ಇಳಿದ.

ಟೆಂಪೋದ ತುಂಬಾ ಹತ್ತಾರು ದನಗಳನ್ನು ಒತ್ತೊತ್ತಾಗಿ ಕಟ್ಟಿ ಹಾಕಲಾಗಿತ್ತು. ಒಂದು ದನ ಕೆಳಗೆ ಬಿದ್ದು ಅಸುನೀಗಿತ್ತು. ದನ ಕಳ್ಳರ ವಾಹನಕ್ಕೆ ಯುವಕರ ತಂಡ ದಾಳಿ ಮಾಡಿತ್ತು. ಕಳ್ಳಸಾಗಣೆ ಮಾಡುವ ಓರ್ವನಿಗೆ ಚೆನ್ನಾಗಿ ಬಡಿದು ಮೂಗು ಮುಸುಡಲ್ಲಿ ನೆತ್ತರು ಬರುವಂತೆ ಮಾಡಿದ್ದರು. ಇನ್ನೋರ್ವ ಕತ್ತಲಲ್ಲಿ ಎಲ್ಲೋ ಓಡಿ ಹೋಗಿದ್ದ. ಇಬ್ಬರು ಯುವಕರು ಟೆಂಪೋದಲ್ಲಿ ಬಿಗಿದು ಕಟ್ಟಿದ್ದ ದನಗಳನ್ನು ಬಿಡಿಸಲು ಹರಸಾಹಸ ಮಾಡುತ್ತಿದ್ದರು.

ಯಾವುದೇ ಪಿಚ್ಚ ಅರ್ಕಲನ್ನು ಕೂಡಾ ಸರಾಗವಾಗಿ ಬಿಡಿಸುತ್ತಿದ್ದ ಪದ್ದು ಟೆಂಪೋ ಏರಿ ಯುವಕರನ್ನು ಬದಿಗೆ ಸರಿಯಲು ಹೇಳಿದ. ಕ್ಷಣ ಮಾತ್ರದಲ್ಲಿ ಒಂದೊಂದೇ ದನಗಳನ್ನು ಬಿಡಿಸಿ ಟಂಪೋದಿಂದ ಇಳಿಸಲು ಸಹಾಯ ಮಾಡಿದ. ಹದಿನೈದು ದನಗಳನ್ನು ಟಂಪೋದಲ್ಲಿ ಮೂಟೆಯಂತೆ ಪೇರಿಸಲಾಗಿತ್ತು.

ಅಪರಿಚಿತನ ಸಹಾಯ ಯುವಕರ ಮನಗೆದ್ದಿತ್ತು. ಅವರು ಪದ್ದುವಿನ ವಿಳಾಸ. ಮನೆಯ ದೂರವಾಣಿ ನಂಬರ್ ಎಲ್ಲಾ ಪಡೆದುಕೊಂಡರು. ಪದ್ದು ಮನೆ ದಾರಿ ಹಿಡಿದ.

ಆನಂತರ ವಾರಕ್ಕೊಂದು ದನ ಹಿಡಿಯುವ ಕಾರ್ಯಾಚರಣೆಗೆ ಪದ್ದುವಿಗೆ ಕರೆ ಬರುತ್ತಿತ್ತು. ರಾತ್ರಿ ಹೊತ್ತು ಬೈಕ್ ಏರಿ ಪದ್ದು ಹೊರಟುಬಿಡುತ್ತಿದ್ದ. ದನಗಳನ್ನು ಇಳಿಸಿ ಮತ್ತೆ ಮನೆ ದಾರಿ ಹಿಡಿಯುತ್ತಿದ್ದ.

ಒಂದು ಬಾರಿ ದನ ಹಿಡಿಯುವ ಕಾರ್ಯಾಚರಣೆಯಲ್ಲಿ ಇಬ್ಬರು ದನಕಳ್ಳರನ್ನು ಯುವಕರು  ಬಡಿದು ಹಾಕಿದ್ದರು. ಅದರಲ್ಲಿ ಓರ್ವ ಇಹಲೋಕ ತ್ಯಜಿಸಿದ್ದ. ದನ ಇಳಿಸಿ ಮನೆಗೆ ಬಂದಿದ್ದ ಪದ್ದುವಿಗೆ ಈ ವಿಚಾರವೇ ಗೊತ್ತಿರಲಿಲ್ಲ. ಮರುದಿನ ದೊಡ್ಡ ರಾದ್ದಾಂತವೇ ನಡೆದಿತ್ತು.

ದನ ಸಾಗಾಟಗಾರರ ಮೇಲೆ ಹಲ್ಲೆ: ಓರ್ವನ ಸಾವು

ದೊಡ್ಡ ಸುದ್ದಿಯಾಗಿತ್ತು. ರಾಜಕೀಯ ಪ್ರವೇಶ ಪಡೆದು ದನ ಹಿಡಿದ ಯುವಕರ ಬಂಧನ ಸತ್ರ ಆರಂಭವಾಯಿತು. ಪೊಲೀಸ್ ಠಾಣೆಯಲ್ಲಿ ಯುವಕರ ಕೈಕಾಲಿನ ಕೀಲಿ ರಿಪೇರಿ ನಡೆದಿತ್ತು.

ಒಂದು ಮಧ್ಯಾಹ್ನದ ನಂತರ ಮೇಯಲು ಕಟ್ಟಿದ ದನವನ್ನು ಮನೆಗೆ ತರಲು ಹೊರಟಿದ್ದ ಪದ್ದುವಿಗೆ ಗುಳಿಗಜೋರದ ತುದಿಯಲ್ಲಿ ಪೊಲೀಸ್ ಜೀಪ್ ಬರುತ್ತಿರುವುದು ಕಾಣಿಸಿತು.

ಸಂಗತಿ ಕೆಟ್ಟಿತು ಎಂದು ಭಾವಿಸಿದ ಪದ್ದು ನೇರವಾಗಿ ಅಂಗಳಕ್ಕೆ ಬಂದು ಹಟ್ಟಿ ಪ್ರವೇಶಿಸಿದ. ಮಂಜನನ್ನು ಕಟ್ಟಿ ಹಾಕಿದ್ದ ಬೈಪನೆಯ ಮೇಲೆ ಅಟ್ಟ ಹತ್ತಲು ಅಳವಡಿಸಿದ್ದ ರೀಪುಗಳನ್ನು ಹತ್ತಿ ಮೇಲೆ ಸೇರಿದ. ಬೈಹುಲ್ಲುಗಳನ್ನು ಸಂಗ್ರಹಿಸಿದ ಮೂಟೆಗಳ ಸಂದಿನಲ್ಲಿ ಉಸಿರು ಬಿಗಿ ಹಿಡಿದು ಮಲಗಿದ.

ಪೊಲೀಸರು ಅಂಗಳ ಪ್ರವೇಶಿಸಿದರು. ಹೊರಗೆ ಓಡಿ ಬಂದ ಸುಜ್ಜಾ, ದೋಗಣ್ಣನ್ನು ಉದ್ದೇಶಿಸಿ ‘ಎಲ್ಲಿ ಅವ?’ ಎಂದು ಗಡಸು ಧ್ವನಿಯಲ್ಲಿ ಪ್ರಶ್ನಿಸಿದರು.

ಬೆದರಿದ ಸುಜ್ಜ ‘ಯಾರು?’ ಎಂದಳು.

‘ಅವ ಪದ್ದು... ಪದ್ಮನಾಭ ಎಲ್ಲಿ ಅಡಗಿದ್ದಾನೆ?’ ಪೊಲೀಸರು ತೀಕ್ಷ್ಣವಾಗಿ ಕೇಳಿದರು.

‘ಈಗ ಇದ್ದರು, ಎಲ್ಲಿ ಹೋದರೋ ಗೊತ್ತಿಲ್ಲ’ ಎಂದಳು ಸುಜ್ಜಾ.

ಪೊಲೀಸರಿಬ್ಬರು ಮನೆ ಪ್ರವೇಶಿಸಿ ಎಲ್ಲಾ ಕಡೆ ಹುಡುಕಾಡಿದರು.

‘ಹಟ್ಟಿಯಲ್ಲಿ ಇರಬಹುದು’ ಎಂದು ಪೊಲೀಸನೊಬ್ಬ ನುಡಿದ.

ಪೊಲೀಸರು ದಡಬಡನೆ ಹಟ್ಟಿ ಪ್ರವೇಶಿಸಿದರು.

ಮಂಜ ಬಿಸಿಯುಸಿರು ಬಿಡುತ್ತಾ, ಹೂಂಕರಿಸುತ್ತಾ, ಕೆಕ್ಕರಿಸಿ ನೋಡುತ್ತಾ ಎದ್ದು ನಿಂತ. ಅವನ ಮೂಗಿನ ಹೊಳ್ಳೆಗಳಿಂದ ಹೊರಡುವ ಕೋಪದ ಉಸಿರು ಹಟ್ಟಿ ತುಂಬಾ ಕೇಳಿಸತೊಡಗಿತು.

ಪೊಲೀಸನೋರ್ವ ಅಟ್ಟ ಹತ್ತಲು ಮಂಜನ ಮೇಲೆ ಅಳವಡಿಸಿದ್ದ ರೀಪುಗಳ ಬಳಿಗೆ ಬಂದ. ‘ಏಯ್  ...ಮಗ ಜಪ್ಪುಂಬೆ...’ ಅಂದ.

‘ಇನ್ನು ಕತೆ ಮುಗಿಯಿತು. ಸುಮ್ಮನೆ ಮರ‍್ಯಾದೆ ಕೆಡುವುದರ ಬದಲು ಇಳಿದು ಹೋಗುವುದು ಒಳ್ಳೆಯದು’ ಎಂದು ಬೈಹುಲ್ಲ ಮೂಟೆಯ ನಡುವೆ ಅಡಗಿದ್ದ ಪದ್ದು ಯೋಚಿಸಿ ಏಳಲು ಮುಂದಾದ.

ಹೂಂಕರಿಸುತ್ತಾ ಮಂಜ ಧಡಕ್ಕನೆ ಎರಡು ಕಾಲುಗಳನ್ನು ಎತ್ತಿ ಬೈಪನೆಗೆ ಇಟ್ಟ. ತಲೆಯಿಂದ ಪೊಲೀಸನನ್ನು ಝಾಡಿಸಿದ.

‘ಒಬ್ಬಾ....’ ಎನ್ನುತ್ತಾ ಪೊಲೀಸ ಪಕ್ಕಕ್ಕೆ ಹಾರಿ. ಹಟ್ಟಿಯಿಂದ ಹೊರಗೆ ಓಡಿದ.

ಮಂಜನ ಅಬತಾರಕ್ಕೆ ಪೊಲೀಸರು ದಿಕ್ಕುಕೆಟ್ಟಿದ್ದರು.

ಎಂದೂ ಕೋಪಿಸದ ಮಂಜನ ಅವತಾರ ಕಂಡು ದೋಗಣ್ಣ, ಸುಜ್ಜಾ ಸ್ತಂಭೀಭೂತರಾದರು.

‘ಬೋ.... ಮಗ... ಎಲ್ಲಿ ಹೋಗುತ್ತಾನೆ ನೋಡುವ. ಅವನನ್ನು ರಿಪೇರಿ ಮಾಡುವುದಕ್ಕೆ ಇದೆ ಪೊಲೀಸ್ ಠಾಣೆಗೆ ಬರುವುದಕ್ಕೆ ಹೇಳಿ’ ಎಂದು ಪೊಲೀಸರು ಬೈದಾಡುತ್ತಾ ಜೀಪು ಹತ್ತಿ ಗುಳಿಗಜೋರ ಏರಿದರು.

ಮಂಜೊಟ್ಟಿ ಗುತ್ತಿಗೆ ಪೊಲೀಸರು ಬಂದ ಸುದ್ದಿ ಊರಿಡಿ ಹರಡಿತು.

‘ಪದ್ದುವನ್ನು ಸಿಗಲು ಹೇಳು’ ಎಂದು ಮಿಲಿಟ್ರಿ ಅಬುಟ ಜನ ಕಳುಹಿಸಿದ.

‘ಇವತ್ತು ಒಂದು ಎಲ್ಲಿಯಾದರೂ ಅಡಗು ಮಾರಾಯ. ನಾಳೆ ಹತ್ತುಗಂಟೆಗೆ ಕೋರ್ಟ್‌ಗೆ ಹೋಗುವ. ನಿನಗೆ ಜಾಮೀನು ನಾನು ಕೊಡಿಸುತ್ತೇನೆ. ಜಾಮೀನಿಗೆ ಆರ್ಟಿಸಿ ಎಲ್ಲ ಬೇಕಲ್ಲವಾ? ನಿಮ್ಮ ಜಾಗ ಎಲ್ಲ ತಕರಾರಿನದ್ದು ಅಲ್ವಾ? ದಾಖಲೆ ಪತ್ರ, ಆರ್ಟಿಸಿ ಎಲ್ಲಾ ಸರಿ ಉಂಟಾ ಇಲ್ವಾ ಗೊತ್ತಿಲ್ಲ’ ಅಬುಟ ನಿರ್ದೇಶನ ನೀಡಿದ.

ಜಾಮೀನು ಪಡೆದು ಮನೆಗೆ ಬಂದ ಪದ್ದು ನೇರವಾಗಿ ಹಟ್ಟಿ ಪ್ರವೇಶಿಸಿ ಮಂಜನ ಮುಖವನ್ನು ಅಪ್ಪಿ ಹಿಡಿದು ಮುದ್ದಿಸಿದ. ಮಂಜ ಪದ್ದುವಿನ ಕೈಗಳನ್ನು ನೆಕ್ಕತೊಡಗಿದ.

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ