ಕುದುರೆ ಏರಿದ ಉಳ್ಳಾಯ ದೈವ

ಕರಾವಳಿಯ ಸಾವಿರದೊಂದು ದೈವಗಳು

ProfileImg
06 Sep '24
3 ನಿಮಿಷದ ಓದು


image

 ಉಳ್ಳಾಯ -ಡಾ.ಲಕ್ಷ್ಮೀ ಜಿ ಪ್ರಸಾದ

 

ಉಳ್ಳಾಯ ಎಂದರೆ ಒಡೆಯ ಎಂದರ್ಥ ,ಸಾಮಾನ್ಯವಾಗಿ ಅರಸು ಬಲ್ಲಾಳರನ್ನು ಯಜಮಾನನನ್ನು ಉಳ್ಳಾಯ ಎಂದೇ ಕರೆಯುತ್ತಿದ್ದರು .
ಉಳ್ಳಾಯ /ಉಲ್ಲಾಕುಳು ತುಳುನಾಡಿನ ಪ್ರಸಿದ್ಧ ದೈವತ .ಉಳ್ಳಾಲ್ತಿ ಎಂಬ ಒಂದು ಹೆಸರಿನಲ್ಲಿ ಅನೇಕ ದೈವತಗಳಿಗೆ ಆರಾಧನೆ ಇರುವಂತೆ ಉಳ್ಳಾಯ /ಉಲ್ಲಾಕುಳು ಎಂಬ ಒಂದೇ ಹೆಸರಿನಲ್ಲಿ ಅನೇಕ ಶಕ್ತಿಗಳ ಆರಾಧನೆ ಇರುವ ಸಾಧ್ಯತೆ ಇದೆ .ಉಳ್ಳಾಲ್ತಿ ಬಗ್ಗೆ ಡಾ.ಕಿಶೋರ್ ರೈ ಶೇಣಿಯವರು ಸಂಶೋಧನಾ ಅಧ್ಯಯನ ಮಾಡಿರುವುದರಿಂದ ಉಳ್ಳಾಲ್ತಿ ಕುರಿತಾದ ಅಂಕ ವಿಚಾರಗಳು ತಿಳಿದು ಬಂದಿವೆ
ಉಲ್ಲಾಕುಳು ಬಗ್ಗೆ ಡಾ.ಪೂವಪ್ಪ ಕಣಿಯೂರು ಅಧ್ಯಯನ ಮಾಡಿದ್ದಾರಾದರೂ ಆ ಕೃತಿ ಇನ್ನು ಪ್ರಕಟವಾಗಿಲ್ಲ .ಹಾಗಾಗಿ ಉಲ್ಲಕುಳು ಸಂಬಂಧಿ ಭಿನ್ನ ಭಿನ್ನ ಐತಿಹ್ಯ ಪಾದ್ದನಗಳ ಕಥೆಗಳು ಇನ್ನೂ ಲಭ್ಯವಾಗಿಲ್ಲ
ಸಾಮಾನ್ಯವಾಗಿ ಕಿನ್ನಿ ಮಾಣಿ ಪೂಮಾಣಿಯರನ್ನೇ ಉಲ್ಲಾಕುಳು ಎಂದು ಕರೆಯುತ್ತಾರೆ .

ಇವರು ಅವಳಿದೈವಗಳೆಂದು ಭಾವಿಸಲಾಗಿದೆ. ಪೂಮಾಣಿ ಎಂದರೆ ರಾಮನ ಅಂಶವೆಂದೂ ಕಿನ್ನಿಮಾಣಿ ಲಕ್ಷ್ಮಣನ ಅಂಶವೆಂದೂ ಪರಿಭಾವಿಸುತ್ತಾರೆ. ಈ ಎರಡು ದೈವಗಳನ್ನು ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರೆಂಬ ನಾಗರಾಜರುಗಳೆಂದೂ ಹೇಳುತ್ತಾರೆ. ಇನ್ನು ಕೆಲವರು ಧೂಮಾವತಿ ಮತ್ತು ದುರ್ಗೆಯರೆಂದೂ ಭಾವಿಸುತ್ತಾರೆ. ಈ ಅರಸು ದೈವಗಳ ವಾಹನ ಕುದುರೆ ಮತ್ತು ಕಾಡುಹಂದಿ. ಇವರ ಆಯುಧ ಬಿಲ್ಲುಬಾಣಗಳು.

 

ಕಿನ್ನಿಮಾಣಿ ಪೂಮಾಣಿಯರನ್ನು ಉಲ್ಲಾಕುಳು ಎಂದೂ, ಉಲ್ಲಾಯ ಎಂದು ಕರೆಯುತ್ತಾರೆ.  ಸಾಮಾನ್ಯವಾಗಿ ಬ್ರಹ್ಮಗುಡಿಯ ಬಲಭಾಗದಲ್ಲಿ ಉಲ್ಲಾಯನ ಮಾಡ ಇರುತ್ತದೆ. ಕಂಡೇವು ಬೀಡಿನ ಉಲ್ಲಾಯ ಬಿಲ್ಲು ಬಾಣವನ್ನು ಹಿಡಿದ ದೈವ. ಇಲ್ಲಿ ಈತನ ಲಿಂಗರೂಪವು ಸಮುದ್ರದಲ್ಲಿ ಬಿಲ್ಲು ಬಾಣಗಳೊಂದಿಗೆ ತೇಲಿಬಂದು ಉದ್ಭವವಾಯಿತು ಎಂಬ ಐತಿಹ್ಯವಿದೆ. ಕವತ್ತಾರು ಆಲಡೆಯಲ್ಲಿ ಬ್ರಹ್ಮಲಿಂಗೇಶ್ವರನ ಬಲಬದಿಯಲ್ಲಿ ಉಲ್ಲಾಯನ ಉದ್ಭವ ಕಂಬವಿದೆ. ಪುರಾತನ ಬ್ರಹ್ಮಸ್ಥಾನಗಳೊಂದಿಗೆ ಉಲ್ಲಾಕುಳುಗಳಿಗೆ ಮಾಡ ಇದ್ದುದು ತಿಳಿದುಬರುತ್ತದೆ. ಕೆಮ್ಮಲೆಯ ಆದಿಬ್ರಹ್ಮರ ಮಾಡದ ಸಮೀಪದಲ್ಲಿಯೇ ಉಲ್ಲಾಕುಳು ಮಾಡ ಇದೆ

 

ಉಲ್ಲಾಕುಳು ದೈವಗಳ ಬಗ್ಗೆ ಅಲೌಕಿಕ ಕಥೆಯೊಂದು ಹೀಗಿದೆ: ವಿಷ್ಣು ಸಂಕಲ್ಪದಂತೆ ಕಮಲದ ಹೂವಿನ ಎಸಳಿನಲ್ಲಿ ಸೃಷ್ಟಿಯಾಗಿ ತಲಕಾವೇರಿ ಅರ್ಚಕರಿಗೆ ಸಿಗುತ್ತಾರೆ ಎರಡು ಗಂಡು, ಒಂದು ಹೆಣ್ಣು ಮಗು, ಪೂಮಾಣಿ, ಕಿನ್ನಿಮಾಣಿ, ದೈಯಾರು. ಈ ಮೂವರು ಘಟ್ಟದಿಂದ ಇಳಿದುತುಳುನಾಡಿಗೆ ಬರುತ್ತಾರೆ.

 ಕುಮಾರ ಪರ್ವತದ ಪಶ್ಚಿಮ ದಿಕ್ಕಿನಲ್ಲಿ ಸುಬ್ರಹ್ಮಣ್ಯಕ್ಷೇತ್ರದ ಧ್ವಜ ಅವರಿಗೆ ಕಾಣಿಸುತ್ತದೆ. ಬಿಲ್ಲು ಬಾಣಧಾರಿಗಳೆನಿಸಿದ ಉಲ್ಲಾಕುಳು ಬಾಣ ಬಿಟ್ಟು ಸುಬ್ರಹ್ಮಣ್ಯ ಧ್ವಜವನ್ನು ತುಂಡರಿಸುತ್ತಾರೆ. ಆಗ ಸುಬ್ರಹ್ಮಣ್ಯ ಕೋಪಗೊಂಡು ಯುದ್ಧಕ್ಕೆ ಬರುತ್ತಾನೆ. ಘೋರಯುದ್ಧದಲ್ಲಿ ಸುಬ್ರಹ್ಮಣ್ಯ ಸೋಲುತ್ತಾನೆ. ಸುಬ್ರಹ್ಮಣ್ಯನ ಮೇಲೆ ಪ್ರಯೋಗಿಸಲೆಂದು ಒಂದು ಕಲ್ಲನ್ನು ಉಲ್ಲಾಕುಳು ಎತ್ತಿ ಹಿಡಿಯುತ್ತಾರೆ. ಆಗ ಶಿವಪಾರ್ವತಿಯರು ಬಂದು ಅವರನ್ನು ಸಮಾಧಾನಪಡಿಸುತ್ತಾರೆ. ಧ್ವಜವನ್ನು ತುಂಡರಿಸಿರುವುದು ಉಲ್ಲಾಕುಳುಗಳ ತಪ್ಪು. ಆದ್ದರಿಂದ ಅವರು ಮಾಡಿದ ತಪ್ಪಿಗೆ ಹದಿನಾರು ಕೈಯ ಕೊಪ್ಪರಿಗೆಯನ್ನು ಅನ್ನದಾನಕ್ಕೋಸ್ಕರ ಒಪ್ಪಿಸುತ್ತಾರೆ. ಅವರ ತಂಗಿ ದೈಯಾರು (ಹೊಸಳಿಗಮ್ಮನಾಗಿ) ಸುಬ್ರಹ್ಮಣ್ಯದಲ್ಲಿ ನೆಲೆ ನಿಲ್ಲುತ್ತಾಳೆ. ಕತ್ತರಿಸಲ್ಪಟ್ಟ ಧ್ವಜ ಕುಕ್ಕಂದೂರು ಎಂಬಲ್ಲಿ ಬೀಳುತ್ತದೆ. ಮುಂದೆ ಯಬರಡದಲ್ಲಿ ಮೆಟ್ಟುಗಲ್ಲು ಏರಿದ ವೀರರು ದೀವಟಿಗೆ ಎಂಬಲ್ಲಿ ನೆಲೆಯಾಗುತ್ತಾರೆ.
ಕುಮಾರ ಪರ್ವತದಲ್ಲಿ ಸುಬ್ರಹ್ಮಣ್ಯನಿಗೆ ಹೊಡೆಯಲು ಎತ್ತಿದ ಕಲ್ಲು ಕಿನ್ನಿಮಾಣಿಯ ಕಂಕುಳದಲ್ಲಿ ಉಳಿದಿತ್ತು. ಉಲ್ಲಾಕುಳುಗಳು ಸುಬ್ರಹ್ಮಣ್ಯದಿಂದ ಎಣ್ಮೂರಿಗೆ ಬಂದಾಗ ಈಗಿನ ‘ನಿಂತಿಗಲ್ಲು’ ಪ್ರದೇಶ ಪ್ರಶಾಂತವಾಗಿ ಕಂಡು ಆ ಕಲ್ಲನ್ನು ಗೋಳಿಮರದ ಬುಡದಲ್ಲಿ ಇಟ್ಟು ಸುತ್ತ ಕಣ್ಣು ಹಾಯಿಸಿದರು. ಇಲ್ಲಿ ಉಲ್ಲಾಕುಳು ನಿಂತು ಕಲ್ಲನ್ನು ಇಟ್ಟ ಕಾರಣದಿಂದ ಈ ಪ್ರದೇಶಕ್ಕೆ ನಿಂತಿಕಲ್ಲು ಎಂಬ ಹೆಸರು ಬಂತು. ಈ ಪ್ರದೇಶದ ಸಮೀಪದಲ್ಲಿ ಬಸಲೆತಡ್ಕದಲ್ಲಿ ಸತ್ಯಧರ್ಮದಲ್ಲಿ ಬಾಳುತ್ತಿದ್ದ ಒಂದು ಗೌಡರ ಮನೆ ಇತ್ತು. ಉಲ್ಲಾಕುಳು ಇಲ್ಲಿಗೆ ಬ್ರಾಹ್ಮಣ ಕುಮಾರರಂತೆ ಬರುತ್ತಾರೆ. ಗೌಡರು ಬ್ರಾಹ್ಮಣ ಕುಮಾರರನ್ನು ಆದರದಿಂದ ಬರಮಾಡಿಕೊಂಡು, ಅವರ ಕೇಳಿಕೆಯಂತೆ ಒಂದು ದಿನದ ಮಟ್ಟಿಗೆ ಉಳಿದುಕೊಳ್ಳಲು ಆಸರೆ ನೀಡಿದರು. ಗೌಡರು ತನ್ನ ಮನೆಯ ಮಾಳಿಗೆಯನ್ನು ನೀಡಿ, ಎಳನೀರು, ಬಾಳೆಹಣ್ಣು, ಹಾಲು ಕೊಟ್ಟು ಸತ್ಕರಿಸಿದರು. ಹಾಲು ಹಣ್ಣು ಸೇವಿಸಿ, ವಿಶ್ರಮಿಸಿದ ಬ್ರಾಹ್ಮಣಕುಮಾರರು ಮರುದಿನ ನೋಡುವಾಗ ಕಾಣುವುದಿಲ್ಲ. ಅವರು ವಿಶ್ರಮಿಸಿದಲ್ಲಿ ಮೂರ್ಲೆಗಳು (ಮಣ್ಣಿನ ಮಡಿಕೆಗಳು) ಕಂಡುಬಂದವು. ಗೌಡರು ಆಶ್ಚರ್ಯಗೊಂಡು ಎಣ್ಮೂರು ಬಲ್ಲಾಳರ ಬೀಡಿನ ಅರಸರಿಗೆ ಈ ವಿಷಯ ತಿಳಿಸುತ್ತಾರೆ. ಕೊನೆಗೆ ಪ್ರಶ್ನೆಯಲ್ಲಿ ಅಲ್ಲಿ ಉಲ್ಲಾಕುಲು ನೆಲೆಯಾದುದು ತಿಳಿದುಬರುತ್ತದೆ. ಬಸಲೆತಡ್ಕದ ಗೌಡರ ಮನೆಯಲ್ಲಿ ಮೊದಲಿಗೆ ಉಲ್ಲಾಕುಳು ನೆಲೆಯಾದ ಕಾರಣ ಆ ಮನೆಯನ್ನು ಆರಂಭದ ಮನೆ ಎಂದೂ, ಆರೆಂಬಿ ಎಂದೂ ಕರೆಯುತ್ತಾರೆ.
ಡಿ.ಜಿ. ನಡ್ಯ ಅವರು ಉಲ್ಲಾಕುಳು ದೈವಗಳ ಮೂಲವನ್ನು ಗಂಗರ ವಂಶಕ್ಕೆ ಅನ್ವಯಿಸಿ ಹೇಳುತ್ತಾರೆ. ಗಂಗವಂಶದಲ್ಲಿ ಕಂಪ ಮಹೀಪತಿ ಎಂಬುವನ ಮಗ ಪದ್ಮನಾಭ. ಅವನಿಗೆ ದೀರ್ಘಕಾಲ ಮಕ್ಕಳಲಿಲ್ಲದಿರಲು, ಪದ್ಮಪ್ರಭಾ ಎಂಬ ಶಾಸನ ದೇವತೆಯನ್ನು ಪೂಜಿಸಲು, ಅವಳ ಕೃಪೆಯಿಂದ ರಾಮ-ಲಕ್ಷ್ಮಣರೆಂಬ ಇಬ್ಬರು ಅವಳಿಮಕ್ಕಳು ಹುಟ್ಟುತ್ತಾರೆ. ಪದ್ಮನಾಭನ ರಾಜ್ಯದ ಮೇಲೆ ಉಜ್ಜಯನಿಯ ಅರಸ ಮಹೀಪಾಲ ದಂಡೆತ್ತಿ ಬಂದಾಗ, ಪದ್ಮನಾಭನು ತನ್ನ ಆಪ್ತರಲ್ಲಿ ಸಮಾಲೋಚನೆ ನಡೆಸಿ, ತನ್ನ ಮಕ್ಕಳ ಹೆಸರನ್ನು ದಡಿಗ, ಮಾಧವರೆಂದು ಬದಲಾಯಿಸಿ ದಕ್ಷಿಣಕ್ಕೆ ಕಳುಹಿಸಿಕೊಡುತ್ತಾನೆ. ಸೋದರಿ ಆಲಬ್ಬೆ ಹಾಗೂ 48 ಮಂದಿ ಬ್ರಾಹ್ಮಣರೊಂದಿಗೆ ರಾಜಕುಮಾರರುಪ್ರಯಾಣ ಮಾಡುತ್ತಾರೆ. ಈ ದಡಿಗ, ಮಾಧವರೇ ತಲಕಾಡಿನ ಪಶ್ಚಿಮ ಗಂಗ ರಾಜ್ಯ ಸ್ಥಾಪಕರು. ಜೈನ ಆಚಾರ್ಯ ಗುಣನಂದಿ ಹಾಗೂ ಪದ್ಮಾವತೀ ದೇವಿಯ ದಯೆಯಿಂದ ದಡಿಗ ಮಾಧವರು ಗಂಗವಾಡಿ ತೊಂಬತ್ತು ಸಾಸಿರಂ ಎಂಬ ರಾಜ್ಯವನ್ನು ಕಟ್ಟುತ್ತಾರೆ. ದಡಿಗ ಮಾಧವರನ್ನು ಇಕ್ಷ್ವಾಕು ವಂಶದ ರಾಜಕುಮಾರರೆಂದೂ, ಕ್ರಿ.ಶ.ನಾಲ್ಕನೆಯ ಶತಮಾನಕ್ಕೆ ಸೇರಿದವರೆಂದೂ ಮುಂದೆ ಇವರೇ ಉಲ್ಲಾಕುಳು ದೈವಗಳಾಗಿ ನೆಲೆಗೊಂಡಿದ್ದಾರೆ ಎಂದು ಡಿ.ಜಿ. ನಡ್ಕ ಹೇಳಿದ್ದಾರೆ.
ಕಿನ್ನಿಮಾಣಿ ಪೂಮಾಣಿಯರನ್ನು ಆದಿಶೇಷ, ವಿಷ್ಣುವೆಂದು ನಾಗ-ಬೆರ್ಮೆರ್ ಎಂದೂ ಪರಿಗಣಿಸುತ್ತಾರೆ. ಬೆರ್ಮೆರ್ ಹಾಗೂ ಉಳ್ಳಾಯ-ಉಲ್ಲಾಕುಳುಗಳಿಗೆ ಅನೇಕ ವಿಷಯಗಳಲ್ಲಿ ತಾದಾತ್ಮ್ಯವಿದೆ. ಬೆರ್ಮೆರಂತೆ ಉಳ್ಳಾಯ ಕೂಡ ಕುದುರೆಯ ಮೇಲೆ ಕುಳಿತ ದೈವ ಬೆರ್ಮೆರಂತೆ ಉಲ್ಲಾಕುಳುಗಳ ಆಯುಧ ಕೂಡ ಬಿಲ್ಲುಬಾಣಗಳೇ ಆಗಿವೆ. ಪೂಕರೆಯ ಸಂದರ್ಭದಲ್ಲಿ ಕಟ್ಟುವ ನಾಗಮುಡಿಗಳು ಉಲ್ಲಾಕುಳುಗಳಿಗೆ ಸಂದಾಯವಾಗುತ್ತವೆ ಎಂದು ನಲಿಕೆಯವರು ಹೇಳುತ್ತಾರೆ.
ಪೂಮಾಣಿ-ಕಿನ್ನಿಮಾಣಿಗಳನ್ನು ಉಳ್ಳಾಕುಲು ಎಂದೂ ಅರಸು ದೈವಗಳೆಂದೂ ಹೇಳುತ್ತಾರೆ. ಈ ಅವಳಿದೈವಗಳನ್ನು ‘ಉಳ್ಳಾಯ’ ಎಂದೂ ಕರೆಯುತ್ತಾರೆ. ಬ್ರಹ್ಮ ಬಲವಂಡಿ ದೈವಸ್ಥಾನ, ಕವತ್ತಾರು ಆಲಡೆ, ಕಂಡೇವು ಬೀಡು ಮೊದಲಾದೆಡೆಗಳಲ್ಲಿ ಉಲ್ಲಾಕುಲುಗಳಿಗೆ ಆರಾಧನೆ ಇದೆ.

ಆದ್ರೆ ಇವರ ಆರಾಧನೆ ಇರುವಲ್ಲಿಯೇ ಉಳ್ಳಾಯ ನಿಗೆ ಬೇರೆಯೇ ನೇಮ ಇರುವುದುಂಟು .ಗುತ್ತಿಗಾರಿನಲ್ಲಿ ಉಲ್ಲಾಕುಳು ಅಲ್ಲದೆ ಕೋಡಂಚದ ಉಲ್ಲಾಕುಳು ಎಂಬ ಭೂತಕ್ಕೆ ಆರಾಧನೆ ಇದೆ .

ಬೆರ್ಮೆರ್ ಅನ್ನೂ ಉಲ್ಲಾಕುಳು ಎಂದು ಕರೆಯುತ್ತಾರೆ .(ಈ ಬಗ್ಗೆ ಮುಂದೆ ಬೆರ್ಮೆರ್ ಬಗ್ಗೆ ಬರೆಯುವಾಗ ಮಾಹಿತಿ ನೀಡಲಾಗುವುದು )
 

ಆಧಾರ: ಕರಾವಳಿಯ ಸಾವಿರದೊಂದು ದೈವಗಳು - ಲೇ : ಡಾ.ಲಕ್ಷ್ಮೀ ಜಿ ಪ್ರಸಾದ 


 

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Dr Lakshmi G Prasad

Verified