ಎಲ್ಲರ ಕಣ್ಣು ಸಕಲೇಶಪುರದ ಮಲ್ಲಪ್ಪೆಯ ಮೇಲೆ.
ಪತ್ತನಾಜೆ. ಮಂಜೊಟ್ಟಿ ಗುತ್ತಿನಲ್ಲಿ ದೈವದ ಅಗೆಲಿನ ಗಡಿಬಿಡಿ.
ದೈವಕ್ಕೆ ಕೋಳಿ, ಹೂ ಇತ್ಯಾದಿ ಪರಿಕರಗಳನ್ನು ತಂದ ಗುತ್ತಿನ ಕುಟುಂಬದವರು ಅದನ್ನೆಲ್ಲಾ ಎಲ್ಲಿ ಇಡಬೇಕೋ ಅಲ್ಲಲ್ಲಿ ಇಟ್ಟು ನೇರವಾಗಿ ಬಂದು ಮಲ್ಲಪ್ಪೆಯ ಕಾಲಿಗೆ ಬೀಳುತ್ತಿದ್ದರು.
‘ನೀನು ಯಾರು?... ಅವಳ ಮಗನಾ.? ಇವಳ ಪುಲ್ಲಿಯಾ? ಅವನ ಅರ್ವತ್ತನಾ?. ಇವನ ಸೊಸೆಯಾ? ನಿನಗೆಷ್ಟು ಮಕ್ಕಳು? ಮಗಳನ್ನು ಎಲ್ಲಿಗೆ ಕೊಟ್ಟದ್ದು. ಸೊಸೆ ಯಾವ ಊರಿನದ್ದು’ ಎಂದೆಲ್ಲಾ ಸ್ಪಷ್ಟ ಮಾತಿನಲ್ಲಿ ಹೇಳುತ್ತಾ ತುಸು ಮಂದವಾದ ಕಣ್ಣನ್ನು ಅಗಲವಾಗಿಸುತ್ತಾ ತಲೆ ಸವರುತ್ತಿದ್ದರು ಶತಾಯುಷಿ ಮಲ್ಲಪ್ಪೆ.
‘ನನಗೆ ನೂರು ಕಳೆಯಿತು. ಪುಚ್ಚೆ ಹಲ್ಲು ಬಂದಿದೆ. ಸಾಯುವ ಮೊದಲು ದೈವಕ್ಕೆ ಕೈ ಮುಗಿದು ಹೋಗುವಾಂತ ಬಂದದ್ದು. ದೋಗು ಎಲ್ಲವನ್ನು ಚೆನ್ನಾಗಿ ಮಾಡ್ತಾನೆ. ಸಂಪ್ರದಾಯ ಉಳಿಸಿಕೊಂಡು ಬಂದಿದ್ದಾನೆ. ಅವನ ಅರ್ವತ್ತ ಜವನ್ಯ ಪದ್ದು ಕಾಲಿಗೆ ಚಕ್ರಕಟ್ಟಿಕೊಂಡು ತಿರುಗುತ್ತಾನೆ. ಅವನಿಗೆ ಒಳ್ಳೆ ಹುಡುಗಿ ಸಿಕ್ಕಿದೆ ಎಲ್ಲಾ ಅರ್ಥ ಮಾಡಿಕೊಳ್ತಾಳೆ...’ ಎಂದೆಲ್ಲಾ ಸಕಲೇಶ ಪುರದ ಮಲ್ಲಪ್ಪೆ ಮಾತಾಡುತ್ತಲೇ ಇದ್ದರೂ ಯಾರಿಗೂ ಬೋರ್ ಪಿರಿ ಪಿರಿ ಅನಿಸುತ್ತಿರಲಿಲ್ಲ. ಎಲ್ಲರೂ ಸಂತೋಷದಿಂದ ಆಲಿಸುತ್ತಾ ಉತ್ತರಿಸುತ್ತಿದ್ದರು.
ದೈವದ ಅಗೆಲಿನ ಕೋಳಿ ಕೊಯ್ಯುವ, ಧೂಪ ತೋರಿಸುವ, ದೈವಕ್ಕೆ ಬಡಿಸುವ ಎಲ್ಲಾ ಕ್ರಮಗಳು ನಡೆದಾಗ ರಾತ್ರಿ ಹತ್ತು ಕಳೆದಿತ್ತು.
ಹಿರಿಯರಿಗೆ ಬಡಿಸುವ ಕ್ರಮ.
‘ಇನ್ನುಂಟಾ ಇಲ್ಲವಾ ಗೊತ್ತಿಲ್ಲ. ಎಲ್ಲವನ್ನೂ ನೋಡಬೇಕು’ ಎಂದ ಸಕಲೇಶಪುರದ ಮಲ್ಲಪ್ಪೆಯನ್ನು ಒಂದು ಕುರ್ಚಿ ಹಾಕಿ ಅಡುಗೆ ಮನೆಯಲ್ಲಿ ಕುಳ್ಳಿರಿಸಿದರು.
ಕುಟುಂಬದವರು ಸೇರಿ ಹದಿನಾರು ಎಲೆ ಹಾಕಿದರು.
ಅದಕ್ಕಿಂತ ದೂರದಲ್ಲಿ ಮಣೆ ಇಟ್ಟು ಇನ್ನೊಂದು ಎಲೆ ಹಾಕಿದರು.
‘ಹದಿನಾರು ಎಲೆ ಬಡಿಸುವುದಲ್ವಾ....? ಅದು ದೂರದಲ್ಲಿ ಇನ್ನೊಂದು ಯಾಕೆ?’ ಮಲ್ಲಪ್ಪೆ ಪ್ರಶ್ನಿಸಿದರು.
‘ದೊಡ್ಡಾ, ಅದು ಇಲ್ಲಿಯ ಕ್ರಮ. ಪ್ರತಿ ದಿನ ಊಟ ಆಗುವ ಮೊದಲು ಒಂದು ಬಟ್ಟಲಲ್ಲಿ ಅನ್ನ, ಪದಾರ್ಥ ಹಾಕಿ ಬಡಿಸಿ ಇಡುವುದು. ಎಲ್ಲರೂ ಊಟ ಮಾಡಿದ ನಂತರ ಅದನ್ನು ಹಂಚಿ ತಿನ್ನುವುದು... ನಿಮಗೆ ಗೊತ್ತಿಲ್ಲವಾ...? ನೀವು ಇರುವಾಗಲೂ ಇತ್ತಲ್ಲ...’ ಎಂದ ಪದ್ದು.
‘ಏಯ್ ದೋಗು... ತೆಗಿ ಅದನ್ನು...’ ಮಲ್ಲಪ್ಪೆ ಕಣ್ಣು ದೊಡ್ಡದು ಮಾಡಿ ಆಜ್ಞಾಪಿಸಿದರು.
‘ಅದು ಹಿಂದಿನಿಂದ ಬಂದ ಕ್ರಮ ಅಲ್ವಾ ದೊಡ್ಡಾ...’ ದೋಗಣ್ಣ ಕೈಮುಗಿದು ಹೇಳಿದ.
‘ನಾನು ಹೇಳುತ್ತಿದ್ದೇನೆ. ಆ ಕ್ರಮ ಇವತ್ತಿಗೆ ಕೊನೆ. ಇನ್ನು ಹಾಗೆ ಮಾಡಬೇಡಿ. ಯಾಕೆ ಅಂತ ನಂತರ ಹೇಳುತ್ತೇನೆ’ ಎನ್ನುತ್ತಾ ಎದ್ದು. ದೋಗಣ್ಣನ ಹೆಗಲು ಆಧರಿಸಿ ಮಣೆ ಇಟ್ಟಲ್ಲಿಗೆ ಬಂದು ಎಲೆ ತೆಗೆದು, ಮಣೆ ಎತ್ತಿ ದೋಗಣ್ಣನ ಕೈಗೆ ಕೊಟ್ಟರು.
ದೋಗಣ್ಣ ಸೇರಿದಂತೆ ಎಲ್ಲರೂ ಮೂಕ ವಿಸ್ಮಿತರಾದರು.
ಊಟ ಮುಗಿದ ನಂತರ ಎಲ್ಲರೂ ಮಲ್ಲಪ್ಪೆಯ ಸುತ್ತ ಕುಳಿತರು.
‘ಒಂದು ವರ್ಷ ಸೀತ ಇಲ್ಲೇ ಇರಲಿ ಭಾವ. ಘಟ್ಟದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಮತ್ತೆ ಮನೆ ಮಾಡಿ ಕರೆದುಕೊಂಡು ಹೋಗುತ್ತೇನೆ. ನಿಮಗೂ ಪನೆ ಹಗ್ಗದಲ್ಲಿ ನೇತಾಡುದಕ್ಕೆ, ಸಾಗೊಳಿ ಕೆಲಸಕ್ಕೆ ಸಕಾಯ ಆಗುತ್ತದೆ.’ ಸಕಲೇಶಪುರದಲ್ಲಿ ಎಸ್ಟೇಟ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೀತಳ ಗಂಡ ದೋಗಣ್ಣನ ಅಪ್ಪ ಕಿಟ್ಟಣ್ಣನಲ್ಲಿ ಹೇಳಿದ್ದ.
ಕಿಟ್ಟಣ್ಣನಿಗೂ ಸಂತಸವಾಯಿತು. ಸಾಗುವಳಿ ಸಮಯದಲ್ಲಿ ಮನೆಯಲ್ಲಿ ಜನ ಎಷ್ಟು ಇದ್ದರೂ ಸಾಲದು. ‘ಇರಲಿ ಬಾವ ನಿಮಗೆ ಅನುಕೂಲ ಆದಾಗ ಕರೆದುಕೊಂಡು ಹೋಗಿ’ ಎಂದ.
ಸೀತ ಮಂಜೊಟ್ಟಿ ಗುತ್ತಿನಲ್ಲೇ ಉಳಿದಳು.
ಮುಂಜಾನೆ ಕೋಳಿ ಕೂಗುವಾಗ ಎದ್ದು ಮಜಲು ಗದ್ದೆಯ ತುದಿಯಲ್ಲಿ ಇದ್ದ ಕಿಟ್ಟಣ್ಣ ಮಗುಚುತ್ತಿದ್ದ ಪನೆಮರದ ಹಗ್ಗ ಹಿಡಿದು ಸೀತ ಮತ್ತು ಕಿಟ್ಟಣ್ಣ ಹೆಂಡತಿಯ ಜತೆ ಪನೆಗುರಿಗೆ ಹಾರುವುದರಿಂದ ಹಿಡಿದು. ಸಂಜೆ ಬತ್ತ ಕುಟ್ಟಿ ಅಕ್ಕಿ ಬೇರ್ಪಡಿಸುವ ತನಕ ಮಂಜೊಟ್ಟಿ ಗುತ್ತಿನಲ್ಲಿ ಕೆಲಸಕ್ಕೆ ಸಹಾಯಕಳಾದಳು.
ಹೆಂಗಸರ ನಡುವೆ ಸಣ್ಣ ಪುಟ್ಟ ಕಿರಿಕಿರಿ, ಜಗಳ. ಮಾತು ಬಿಡುವುದು, ಊಟ ಬಿಡುವುದು ಇವೆಲ್ಲಾ ನಡೆಯುತ್ತಾ ಇದ್ದರೂ ಅದು ತಾರಕ್ಕೇರಿರಲಿಲ್ಲ. ಮನೆಯ ಹೆಂಗಸರು ‘ಗೂಂಜಿ’ಯಿಂದ ಬಿಡದಿದ್ದರೆ ‘ರಚ್ಚೆ’ಯಿಂದ ಬಿಡದೇ ಇರುವ ಬುದ್ದಿ ಸೀತಳಿಗೂ ಇತ್ತು.
ಒಂದು ವರ್ಷ ಕಳೆದಾಗ ಸೀತಳ ಗಂಡ ಘಟ್ಟ ಇಳಿದು ಬಂದ. ದೊಡ್ದದೊಂದು ಬಂಗಾರದ ಮೋನ್ಮಾಲೆ ಮಾಡಿಸಿ ತಂದು ಕೊಟ್ಟಿದ್ದ. ಅದು ಸೀತಳ ಕರಜನದಲ್ಲಿ ಇತರ ಬಂಗಾರದ ಜತೆ ಸೇರಿಕೊಂಡಿತು. ಅದರ ಬೀಗದ ಕೀಲಿ ಸೀತಳ ಒಕ್ಕನೂಲಿನಲ್ಲಿ ಭದ್ರವಾಗಿತ್ತು. ಸೀತಳನ್ನು ಮತ್ತೊಂದು ವರ್ಷ ಮಂಜೊಟ್ಟಿ ಗುತ್ತಿನಲ್ಲೇ ಇರಲು ಗಂಡ ಹೇಳಿದ.
ಒಂದು ಬಾರಿ ಕಿಟ್ಟಣ್ಣನ ಹೆಂಡತಿ ತವರು ಮನೆಯ ಮದುವೆಗೆ ಹೋಗಲು ಸೀತಳ ಬಂಗಾರ ಕೇಳಿದ್ದಳು. ಯಾವುದಕ್ಕೋ ಮುನಿಸಿಕೊಂಡಿದ್ದ ‘ಸೀತ ಅದು ಸವೆದು ಹಾಳಾಗುತ್ತದೆ. ಕೊಡುವುದಿಲ್ಲ’ ಎಂದು ಕೊಸರಿಕೊಂಡು ಹೇಳಿದಳು.
ಅಲ್ಲಿಂದ ಮಂಜೊಟ್ಟಿ ಗುತ್ತಿನಲ್ಲಿ ಹೆಂಗಸರ ವಿರಸ ಆರಂಭವಾಯಿತು. ಇತರ ಹೆಂಗಸರು, ಹೆಣ್ಣುಮಕ್ಕಳು ಪುಟ್ಟ ಮಕ್ಕಳೆಲ್ಲಾ ಸೇರಿ ಕಿವಿಕಚ್ಚಿಕೊಂಡು ಸೀತಳ ಅಹಂಕಾರ ಇಳಿಸುವ ಪಣ ತೊಟ್ಟಿದ್ದರು.
ಸೀತಳಿಗೆ ಊಟಕ್ಕೆ ಕೊರತೆ ಬೀಳತೊಡಗಿತು.
ಗಂಜಿಯ ಕರವನ್ನು ಸೀತ ಬರುವ ಮೊದಲೇ ತೋಡಿ ಎಲ್ಲರೂ ತಮ್ಮ ತಮ್ಮ ಗದ್ದವುಗೆ ಹಾಕಿಕೊಳ್ಳುತ್ತಿದ್ದರು. ಸೀತಳಿಗೆ ತೆಳಿ ಅದರಲ್ಲಿ ತೇಲುವ ಅನ್ನ. ಮೀನು ಪದಾರ್ಥದ ಬಿಸಲೆಯಲ್ಲಿ ತಳಕ್ಕೆ ಅಂಟಿಕೊಂಡ ರೆಸವನ್ನು ಕರಕರನೆ ಕೆರೆದು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂತು. ಆದರೂ ಸೀತ ಕೃಷಳಾಗತೊಡಗಿದಳೇ ಹೊರತು. ಕುಗ್ಗಿ ಹೋಗಲಿಲ್ಲ.
ಇಷ್ಟಾದರೂ ಇವಳ ಅಹಂಕಾರ ಇಳಿಯಲಿಲ್ಲ ಎಂದುಕೊಂಡ ಹೆಂಗಸರು ಅನ್ನ, ಪದಾರ್ಥದ ಪಾತ್ರೆಯನ್ನು ‘ಸೀಂಟಿ’ ಇಡತೊಡಗಿದರು.
ಒಂದು ಕಡೆ ಮೈಮುರಿಯುವ ದುಡಿತ. ಅರೆಬರೆ ಸಿಗುತ್ತಿದ್ದ ಊಟಕ್ಕೂ ತಡೆ. ಸೀತ ಈಗ ಕುಗ್ಗಿ ಹೋಗಿ ಕಣ್ಣೀರು ಹಾಕಿದಳು. ಹೊಟ್ಟೆ ಕೂಗಿದಾಗ ಕುಂಟಾಲ, ಕರಂಡೆ ಇತ್ಯಾದಿ ಇತ್ಯಾದಿ ಸೊಪ್ಪೇ ಅವಳ ಆಹಾರವಾಯಿತು.
ಬೇಸ ಕೊನೆಯಲ್ಲಿ ಜೋರಾದ ಮಳೆ ಬಿದ್ದು ನೀರು ನೆಗೆದು ಹೋಯಿತು.
ಒಂದು ಮೈಲು ದೂರದ ಗದ್ದೆಯಲ್ಲಿ ಹಾಕಿದ ಪೊಡಿ ನೇಜಿ ತೆಗೆಯುವ, ನಾಟಿ ಮಾಡುವ ಕೆಲಸ. ಮನೆಯ ಮುಂಬಾಗಿಲು, ಕುರುಬಾಗಿಲಿಗೆ ತೆಂಗಿನ ಸೋಗೆಯ ಗಿಡ್ಕೆ ಅಡ್ಡ ಇಟ್ಟು ಮನೆಯವರೆಲ್ಲರೂ ನೇಜಿಯ ಗದ್ದೆಯಲ್ಲಿ. ಮನೆಗೆ ಎರಡು ನಾಯಿಗಳೇ ಕಾವಲು. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು ಮನೆಗೆ ಜನ ಬಂತೋ, ದನ ಬಂತೋ, ನೆಂಟರು ಬಂದರೋ, ಗಂಟು ಕಳ್ಳರು ಬಂದರೋ ಎಂದು ನಾಯಿ ಕೂಗುವ ಥರಾವರಿಯ ಸ್ವರದಲ್ಲೇ ಅಂದಾಜು ಮಾಡುತ್ತಿದ್ದರು.
ಬೆಳಿಗ್ಗೆ ಗದ್ದೆಗೆ ಹೊರಡುವಾಗ ಒಲೆಯಲ್ಲಿ ದೊಡ್ಡ ಮಣ್ಣಿನ ಕರದಲ್ಲಿ ನೀರು ಅಕ್ಕಿ ಹಾಕಿ ಒಲೆಯೊಳಗೆ ಸಾಕಷ್ಟು ಕಟ್ಟಿಗೆಗಳನ್ನು ತುಂಬಿಸಿ ಬೆಂಕಿ ಹಿಡಿದದ್ದು ಖಚಿತಪಡಿಸಿಕೊಳ್ಳುತ್ತಿದ್ದರು. ನಡು ಮಧ್ಯಾಹ್ನ ಹಿಂತಿರುಗಿ ಬಂದಾಗ ಅನ್ನ ಬೆಂದು ಗಂಜಿ ತಯಾರಾಗುತ್ತಿತ್ತು. ಆನಂತರ ಚಟ್ನಿ ಅರೆದೋ, ಪದಾರ್ಥ ಮಾಡಿಯೋ ರುಚಿಕಟ್ಟಾದ ಊಟ.
ಚುರುಗುಟ್ಟುವ ಹೊಟ್ಟೆ, ಎದ್ದು ನಿಲ್ಲಲೂ ಸಂಕಟ ಸೀತ ಗದ್ದೆಗೆ ಹೊರಟು ನಿಂತಳು. ಒಲೆಯಲ್ಲಿ ಅನ್ನದ ಕರ, ಕೆಳಗೆ ಆಗತಾನೇ ಹಾಕಿದ ಬೆಂಕಿ ಉರಿಯುತ್ತಿತ್ತು.
ಮನೆಯವರೆಲ್ಲರೂ ಹೊರಗಿರುವುದನ್ನು ಖಚಿತಪಡಿಸಿಕೊಂಡ ಸೀತ ಹುಲ್ಲು ಕೆತ್ತುವ ಕತ್ತಿ ತೆಗೆದು ಒಲೆಯ ಮೇಲಿದ್ದ ಕರದ ಅಡಿಭಾಗಕ್ಕೆ ಸಣ್ಣಗೆ ಕುಕ್ಕಿದಳು. ನೀರು ಬಿಂದು ಬಿಂದಾಗಿ ಸೋರತೊಡಗಿತು.
ಅಡುಗೆ ಮನೆಯ ಬೀಳಲಿನ ಬಲದಲ್ಲಿ ಇರಿಸಿದ ಮತ್ತೆರಡು ಅನ್ನದ ಕರದ ಅಡಿಭಾಗಕ್ಕೂ ಕುಕ್ಕಿ ಹೊರಗೆ ಬಂದು ನೇರವಾಗಿ ಗದ್ದೆಯ ಕಡೆ ನಡೆದಳು.
ಮನೆಯ ಎರಡೂ ಬಾಗಿಲಿಗೂ ಗಿಡ್ಕೆ ಅಡ್ಡ ಇಟ್ಟು ಎಲ್ಲರು ಗದ್ದೆಯ ಕಡೆ ಸಾಗಿದರು.
ಗದ್ದೆಯಲ್ಲಿದ್ದ ತಿಳಿನೀರನ್ನು ಮನಸೋ ಇಚ್ಚೆ ಕುಡಿದ ಸೀತ ಹೊಟ್ಟೆ ಸಂಕಟ, ನಿಶ್ಶಕ್ತಿಯಿಂದಲೇ ನೇಜಿ ಕೀಳ ತೊಡಗಿದಳು.
ಹೊತ್ತು ನೆತ್ತಿಗೇರಿದಾಗ ಚುರುಗುಟ್ಟುವ ಹೊಟ್ಟೆಯೊಂದಿಗೆ ಹೆಂಗಸರು ಮನೆ ದಾರಿ ಹಿಡಿದರು.
ಸೀತ. ನಡೆಯಲೂ ಆಗದೆ ಕಾಲೆದುಕೊಳ್ಳುತ್ತಾ ಮನೆ ಕಡೆ ನಿಧಾನವಾಗಿ ಸಾಗಿದಳು.
ಅರ್ಧ ದಾರಿಯಲ್ಲಿ ಪನೆ ಹಾಕಿದ ಆಳ ಕೆರೆಯ ದಡದಲ್ಲಿ ಸೊಂಪಾಗಿ ಬೆಳೆದ ತುಲುವೆ ಹಲಸಿನ ಮರದ ಬುಡದಲ್ಲಿ ‘ಇನ್ನೇನು ಸತ್ತೇ ಹೋಗುತ್ತೇನೆ, ಈ ಜೀವ ಬೇಕೇ?' ಎಂದು ಕೊಂಡು ಕುಸಿದು ಕುಳಿತಳು.
ಕೆರೆಯ ಸ್ಪಟಿಕದಂತ ನೀರಲ್ಲಿ ಹಲಸಿನ ಮರ, ಅದರ ಮೇಲೆ ಇರುವ ಹಲಸಿನ ಹಣ್ಣುಗಳ ಪ್ರತಿಬಿಂಬ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಮನೆಯ ದೈವವನ್ನು ನೆನೆದು ‘ಇನ್ನೆಷ್ಟು ದಿನ ಈ ಕಾಟ’ ಎಂದು ಕಣ್ಣೀರಾದಳು.
ಏನೋ ಯೋಚಿಸಿ ಸೀತ ಎದ್ದುನಿಂತಳು.
ಧೊಪ್ಪನೆ ತುಳುವೆ ಹಲಸಿನ ಹಣ್ಣೊಂದು ಆಕೆಯ ಪಕ್ಕಕ್ಕೇ ಬಿದ್ದಿತ್ತು. ಬಿದ್ದ ರಭಸಕ್ಕೆ ಒಡೆದು ಅದರ ಸೋಳೆಗಳು ಅಷ್ಟಗಲ ತೆರೆದುಕೊಂಡವು. ಸೀತಳ ಕಣ್ಣು ಅರಳಿತು. ಮನಸೋ ಇಚ್ಚೆ ಹಲಸಿನ ಹಣ್ಣು ಬಾಚಿ ಬಾಚಿ ತಿಂದಳು. ಅಷ್ಟು ದಿನಗಳ ಹಸಿವು ನೀಗಿಸಿಕೊಂಡಳು.
ಚಿಗರೆಯಂತೆ ಕುಣಿಯುತ್ತಾ ಮನೆ ಸೇರಿದಳು.
ಮನೆಯ ಹೆಂಗಸರು, ಗಂಡಸರು, ಮಕ್ಕಳು ಎಲ್ಲಾ ಹೊಟ್ಟೆ ಮೇಲೆ ಕೈಇಟ್ಟುಕೊಂಡು ಗುಂಪು ಗೂಡಿ ಗಂಭೀರವಾಗಿ ಚರ್ಚಿಸುತ್ತಿದ್ದರು.
ಒಲೆಯ ಮೇಲಿದ್ದ ಪಾತ್ರೆಯಿಂದ ನೀರು ಸೋರಿ ಬೆಂಕಿ ನಂದಿತ್ತು. ಅನ್ನ ಬೇಯದೆ ಹಾಗೆಯೇ ಉಳಿದಿತ್ತು.
ಬೇರೆ ಪಾತ್ರೆಯಲ್ಲಿ ಅನ್ನ ಮಾಡುವ ಎಂದರೆ ಅದರ ತಳಭಾಗದಲ್ಲೂ ಒಟ್ಟೆ...
ಇನ್ನು ಮೂಲ್ಯರ ಮನೆಗೆ ಹೋಗಿ ಕರ ತಂದು ಅದರ ಕನಿ ತೆಗೆಯುವಾಗ ಎರಡು ದಿನ ಕಳೆಯುತ್ತದೆ. ಅಲ್ಲಿಯವರೆಗೆ ಅನ್ನ ಬೇಯಿಸಲು ಏನು ಮಾಡುವುದು?
‘ಯಾಕಾಯಿತು? ಹೇಗಾಯಿತು...?’
ಹೆಂಗಸರು ಸೀತಳ ಕಡೆ ಸಂಶಯದ ದೃಷ್ಟಿ ಬೀರಿದರೂ. ಅಕೆ ಮನೆ ಬಾಗಿಲಿಗೆ ಗಿಡ್ಕೆ ಇಡುವ ಮೊದಲೇ ಗದ್ದೆ ಕಡೆ ನಡೆದದ್ದನ್ನು ಎಲ್ಲರೂ ನೋಡಿದ್ದರು.
ಸೀತ ಮನದಲ್ಲೇ ನಗುತ್ತಿದ್ದಳು.
ಸಂಜೆಯ ಹೊತ್ತಿಗೆ ಕಿಟ್ಟಣ್ಣ ಒಂದಷ್ಟು ಕಾಯಿ ಹಲಸು ತಂದು ಕಡಿ ಕಡಿದು ಹಂಚಿದ. ಸೀತ ಅದರ ಕಡೆ ನೋಡಿಯೂ ನೋಡದಂತೆ ಜಂಬ ಪ್ರದರ್ಶಿಸಿದಳು.
ಮುಸ್ಸಂಜೆಯಾಗುತ್ತಿದ್ದಂತೆ ಸೀತ ಮನೆಯ ಮೆಟ್ಟಲಲ್ಲಿ ಕುಳಿತು ನಡುಗುತ್ತಿದ್ದಳು.
ಕಟಕಟನೆ ಹಲ್ಲು ಕಡಿಯುತ್ತಿದ್ದಳು. ಎದೆ ಏರಿಳಿಯುವಂತೆ ಬಿಸಿಯುಸಿರು ತೆಗೆಯುತ್ತಿದ್ದಳು.
ಕಿಟ್ಟಣ್ಣ ಓಡಿ ಬಂದ. ಎಲ್ಲರೂ ಸುತ್ತ ನೆರೆದರು... ಸೀತಳಿಗೆ ದೈವ ಆವಾಹನೆಯಾಗಿತ್ತು.
‘ಯಾರು ನೀನು? ನಿನಗೇನು ಆಗಬೇಕು ಬಾಯಿ ಬಿಟ್ಟು ಹೇಳು....’ ಕಿಟ್ಟಣ್ಣ ಜೋರಾಗಿ ಕೇಳಿದ.
ಕಟ ಕಟನೆ ಹಲ್ಲು ಕಡಿದ ಸೀತ. ‘ನಾನು ಮನೆ ದೈವ. ಈ ಮನೆಯಲ್ಲಿ ಹೊಟ್ಟೆಗಿಲ್ಲದೆ ಸಂಕಟಪಡುವವರಿದ್ದಾರೆ. ಗುತ್ತಿನಲ್ಲಿ ಹಾಗಿದ್ದರೆ ದೈವ ಬಿಟ್ಟೀತೇ?’
ಕಿಟ್ಟಣ್ಣ ಅವಕ್ಕಾದ. ಹೆಂಗಸರ ಕಡೆ ನೋಡಿದ.
‘ಈ ಗುತ್ತಿನಲ್ಲಿ ಅನ್ನಕ್ಕೇನು ಬರ? ಯಾರಿಗೆ ಹೊಟ್ಟೆಗೆ ಅನ್ನ ಹಾಕುತ್ತಿಲ್ಲ?’ ಕಣ್ಣು ಕೆಂಪು ಮಾಡಿ ಪ್ರಶ್ನಿಸಿದ.
ಹೆಂಗಸರು ತಲೆ ತಗ್ಗಿಸಿದರು.
‘ಮುಂದೇನು ಮಾಡಬೇಕು..." ಕಿಟ್ಟಣ್ಣ ಕೈಮುಗಿದ.
‘ಎಲ್ಲರೂ ಊಟ ಮಾಡುವ ಮೊದಲು ಒಂದು ಮಣೆ ಇಟ್ಟು ಅನ್ನ ಪದಾರ್ಥ ಬಡಿಸಬೇಕು.. ಎಲ್ಲರೂ ಊಟ ಮಾಡಿದ ನಂತರ ಅದನ್ನು ಹಂಚಿ ತಿನ್ನಬೇಕು... ಯಾರಿಗೂ ಇಲ್ಲಿ ಹೊಟ್ಟೆಗೆ ಇಲ್ಲ ಅಂತ ಆಗಬಾರದು...’
ಕಿಟ್ಟಣ್ಣ ಹೆಂಗಸರ ಕಡೆ ನೋಡಿದ ‘ಗೊತ್ತಾಯ್ತಲ್ಲಾ. ಅನ್ನದ ಕರ ಹೇಗೆ ಒಟ್ಟೆ ಆಯ್ತು ಅಂತ. ಈಗ ದೈವ ಹೇಳುತ್ತದೆ. ಮುಂದೆ ಹಾಗೆ ನಡೆದುಕೊಳ್ಳಬೇಕು. ಎಲ್ಲರೂ ಅಡ್ಡ ಬೀಳಿ’ ಅಂದ. ಹೆಂಗಸರೆಲ್ಲರೂ ಅಡ್ಡಬಿದ್ದರು.
ಸಕಲೇಶಪುರದ ಮಲ್ಲಪ್ಪೆಯ ಸುತ್ತ ಕುಳಿತ ಎಲ್ಲರೂ ಕಣ್ಣು ಬಾಯಿ ಬಿಟ್ಟು ಕೇಳುತ್ತಿದ್ದರು.
‘ಇನ್ನು ಮುಂದೆ ಈ ಮನೆಯಲ್ಲಿ ಊಟಕ್ಕೆ ಮೊದಲು ಬಡಿಸಿ ಇಡುವುದು ಆನಂತರ ಎಲ್ಲರೂ ಹಂಚಿ ತಿನ್ನುವುದು ಇರಬಾರದು’ ಮಲ್ಲಪ್ಪೆ ಆಜ್ಞಾಪಿಸಿದರು.
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ