ಭರತ ವರ್ಷ, ಭರತಖಂಡ,ಜಂಬೂ ದ್ವೀಪ ಎಂದು ಕರೆಸಿಕೊಳ್ಳುವ ಭಾರತ ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ಅಷ್ಟೇ ಅಲ್ಲದೆ ಜ್ಞಾನದ ಕ್ಷೇತ್ರದಲ್ಲಿಯೂ ಸಹ ಮಹತ್ವದ ಸಾಧನೆ ಮಾಡಿದೆ. ಈ ಭೂಮಿಯಲ್ಲಿ ತಮ್ಮ ಉದಾತ್ತ ಚಿಂತನೆಯ ಮೂಲಕ ಭವಿಷ್ಯದ ಜನತೆಗೆ ದಾರಿ ತೋರಿದವರು ಹಲವಾರು, ಅಂತಹ ಉದಾತ್ತ ಚಿಂತನೆಗಳ ಸಾಕಾರ ಮೂರ್ತಿಗಳಲ್ಲಿ ಶಾಂತಿ ನಿಕೇತನ ಎಂಬ ವಿಶೇಷ ಜ್ಞಾನ ಸೌಧದ ನಿರ್ಮಾತೃ ರವೀಂದ್ರನಾಥ್ ಟ್ಯಾಗೂರರು ಪ್ರಮುಖರು.
ಕಲ್ಕತ್ತಾ ನಗರದ ನಿವಾಸಿಗಳು,ಸುಸಂಸ್ಕೃತರು ಹಾಗೂ ಸರಳ ಜೀವಿಗಳಾದ ದೇವೇಂದ್ರನಾಥ ಹಾಗೂ ತಾರಾದೇವಿಯರ 14ನೇ ಮಗನಾಗಿ 1861 ಮೇ 7ರಂದು ರವೀಂದ್ರನಾಥ ಟ್ಯಾಗೋರರು ಜನಿಸಿದರು. ಬಾಲ್ಯದಲ್ಲಿ ಉತ್ತಮ ಶಿಕ್ಷಣ ಪಡೆದು ಹಲವು ವಿಷಯಗಳಲ್ಲಿ ಪಾಂಡಿತ್ಯ ಪಡೆದರು. ತಮ್ಮ 4ನೇ ವಯಸ್ಸಿನಲ್ಲಿಯೇ ಬಂಗಾಳಿ ಭಾಷೆಯಲ್ಲಿ ಕವಿತೆಯನ್ನು ರಚಿಸಿದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಾಲಿ ಅಕಾಡೆಮಿಗೆ ಸೇರಿದರು. ಇವರು ಪಡೆದ ಶಿಕ್ಷಣದ ಅನುಭವವನ್ನು ಆಧಾರವಾಗಿಟ್ಟುಕೊಂಡು ಶಾಲೆ ಎಂಬುದು ನಾಲ್ಕು ಗೋಡೆಗಳ ಮಧ್ಯೆ ಇರದೇ, ಮುಕ್ತ ವಾತಾವರಣದಲ್ಲಿ ಇರಬೇಕು ಎಂದು ಅಭಿಪ್ರಾಯಪಟ್ಟರು.
ರವೀಂದ್ರರು ಮಕ್ಕಳ ಶಿಕ್ಷಣವೂ ಶಿಕ್ಷಕರ ಬಿಗಿ ಮುಷ್ಟಿಯಲ್ಲಿ ಇರುವುದಕ್ಕಿಂತ ಪ್ರಕೃತಿಯ ಮಡಿಲಿನಲ್ಲಿ ಯಾವುದೇ ಒತ್ತಡ, ಬಂಧನವಿಲ್ಲದೆ ಸ್ವತಂತ್ರವಾಗಿ ಕಲಿಯುವ ಅವಕಾಶ ಇರಬೇಕು ಎಂದರು. 1877 ರಲ್ಲಿ ಇಂಗ್ಲೆಂಡಿಗೆ ಕಾನೂನು ಶಾಸ್ತ್ರ ಅಧ್ಯಯನಕ್ಕೆ ಹೊರಟರು, ಅಲ್ಲಿಯೇ ಇಂಗ್ಲಿಷ್ ಸಾಹಿತ್ಯದ ಅಧ್ಯಯನವನ್ನು ಆಳವಾಗಿ ನಡೆಸಿ ಭಾರತಕ್ಕೆ ವಾಪಸಾದರು. ತಮ್ಮ 20ನೇ ವಯಸ್ಸಿನಲ್ಲಿ Songs of morning ಎಂಬ ಮೊದಲ ಕವನ ಸಂಕಲನವನ್ನು ರಚಿಸಿ ಪ್ರಕಟಿಸಿದರು.
ಟ್ಯಾಗೂರರಿಗೆ ವೈದಿಕ ಕಾಲದಲ್ಲಿ ನೀಡಲಾಗುತ್ತಿದ್ದ ಗುರುಕುಲ ಶಿಕ್ಷಣ ಪದ್ಧತಿ ಇಷ್ಟವಾಯಿತು ಈ ಕುರಿತು ಚಿಂತಿಸಿ ವೈದಿಕ ಕಾಲದ ಶಿಕ್ಷಣವನ್ನು ತಮ್ಮ ಕಾಲದ ಶಿಕ್ಷಣ ಪದ್ಧತಿಯ ಜೊತೆಗೆ ಪುನರ್ ರಚಿಸಿ ಹೊಸ ಬಗೆಯ ಶಾಲೆಯನ್ನ 1910ರಲ್ಲಿ ತೆರೆದರು, ಅದುವೇ ಕಲ್ಕತ್ತಾ ಸಮೀಪದ ಬೋಲಾಪುರ ಗ್ರಾಮದಲ್ಲಿ ಸ್ಥಾಪಿಸಲಾದ ಶಾಂತಿನಿಕೇತನ. ಈ ಶಾಂತಿನಿಕೇತನದ ಮೂಲಕ ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ವಿಕಾಸವಾಗುವಂತೆ ಮುಕ್ತ ವಾತಾವರಣ ನೀಡಿ ಆ ಮಗುವಿನ ಸಮಗ್ರ ಬೆಳವಣಿಗೆಯಾಗುವಂತೆ ನೋಡಿಕೊಂಡರು.
ಶಾಂತಿನಿಕೇತನ ಒಂದು ಕುಟುಂಬದಂತೆ ಇತ್ತು ಇಲ್ಲಿನ ಮಕ್ಕಳು ಸ್ನೇಹ,ಮಮತೆ, ಸಹಕಾರ ಮತ್ತು ಸಹಬಾಳ್ವೆ ಜೀವನ ಸಾಗಿಸುತ್ತಿದ್ದರು. ಮಕ್ಕಳು ನಿಸರ್ಗದ ಮಡಿಲಿನಲ್ಲಿ ಕೂತು ಕಲಿಯುತ್ತಿದ್ದರು ಇಲ್ಲಿ ಕುಲಕಸುಬುಗಳು , ಸಾಹಿತ್ಯ, ನೃತ್ಯ, ಸಂಗೀತ ,ಚಿತ್ರಕಲೆ ,ಅಭಿನಯ ಮೊದಲಾದವುಗಳನ್ನು ಹೇಳಿಕೊಡುತ್ತಿದ್ದರು. ಮಕ್ಕಳಿಗೆ ಆಸಕ್ತಿ ಇರುವ ವಿಷಯಗಳನ್ನು ಮುಕ್ತವಾಗಿ ಕಲಿಯಬಹುದುದಿತ್ತು. ಹೀಗೆ ನಿಸರ್ಗದಲ್ಲಿ ಪ್ರಾಣಿ ಪಕ್ಷಿಗಳು ಹೀಗೆ ಸ್ವಚ್ಛಂದವಾಗಿ ಇರುವವೋ ಹಾಗೆ ಮಗು ಯಾವುದೇ ಒತ್ತಡ ಬಂಧನವಿಲ್ಲದೆ ಸ್ವತಂತ್ರವಾಗಿ ಕಲಿಯಲು ಅವಕಾಶ ನೀಡಲಾಗಿತ್ತು ಹೀಗೆ ಈ ಶಾಂತಿನಿಕೇತನ ಕಾಲಕ್ರಮೇಣ ವಿಶ್ವ ಭಾರತಿ ಎಂಬ ಹೆಸರಿನ ಮೂಲಕ ಉತ್ತಮವಾಗಿ ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತ ವಿಶ್ವವಿದ್ಯಾಲಯವಾಯಿತು .
ಟ್ಯಾಗೂರರು ಸಾಹಿತಿಗಳಾಗಿ ಹಲವಾರು ಕೃತಿಗಳನ್ನು ರಚಿಸಿದ್ದು, 1910ಲ್ಲಿ ಪ್ರಕಟವಾದ ಗೀತಾಂಜಲಿ ಎಂಬ ಕೃತಿಗೆ 1913ರಲ್ಲಿ ನೋಬೆಲ್ ಪಾರಿತೋಷಕ ಲಭಿಸಿತು. 1915 ರಲ್ಲಿ ಬ್ರಿಟಿಷ್ ಸರ್ಕಾರ ನೈಟ್ ಹುಡ್ ಪ್ರಶಸ್ತಿ ನೀಡಿ ಗೌರವಿಸಿತು, ಆದರೆ 1919ರಲ್ಲಿ ನಡೆದ ಜಲಿಯಾನ್ ವಾಲಾಬಾಗ್ ಹತ್ಯಾಕಾಂಡ ದುರಂತದಿಂದ ಮನನೊಂದು ಬ್ರಿಟಿಷ್ ಸರ್ಕಾರ ನೀಡಿದ್ದ ಪ್ರಶಸ್ತಿ ಹಿಂದಿರುಗಿಸಿದರು. ಹೀಗೆ ಶಿಕ್ಷಣ,ಸಾಹಿತ್ಯ ,ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದ ರವೀಂದ್ರರು ವಿಶ್ವಶಾಂತಿ , ಸೌಹಾರ್ದತೆಗೆ ಹಗಲಿರುಳು ಶ್ರಮಿಸುವ ಮೂಲಕ ರಾಷ್ಟ್ರದ ಘನತೆಯನ್ನು ಹೆಚ್ಚಿಸಿದರು ಇಂತಹ ಧೀಮಂತ ವ್ಯಕ್ತಿ 1941 ಆಗಸ್ಟ್ 07 ರಂದು ನಿಧನರಾದರು .
ರವೀಂದ್ರರು ತಮ್ಮ ಜೀವಿತಾವಧಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಗೆ ನೀಡಿದ ಕೊಡುಗೆ ಅಪಾರ, ಪ್ರಕೃತಿ ಮಡಿಲಲ್ಲಿ ಕಲಿಯುವ ಆಹ್ಲಾದಕರ ಅನುಭವವನ್ನು ತಮ್ಮ ಶಾಂತಿನಿಕೇತನದ ಮೂಲಕ ನೀಡಿ ಭಾರತದ ಜ್ಞಾನ ಧೂತರಾಗಿ ಹೆಸರಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ . ಭಾರತದ ತತ್ವಜ್ಞಾನಿಯಾಗಿ, ಶಿಕ್ಷಣ ತಜ್ಞರಾಗಿ , ಸಾಹಿತಿಯಾಗಿ ಇವರು ನೀಡಿದ ಮಾರ್ಗದರ್ಶನ ಇಂದಿನ ದಿನಮಾನದಲ್ಲಿ ಎಲ್ಲರೂ ಅಳವಡಿಸಿಕೊಂಡು ಸಾಗಿದರೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ವರವಾಗಬಹುದು.
ಜ್ಯೋತಿಕುಮಾರ್ ನಾಯ್ಕ್ ಎಂ
ಇತಿಹಾಸ ಉಪನ್ಯಾಸಕರು,
ಶ್ರೀಮತಿ ಮಾಲತಿ ಪದವಿ ಪೂರ್ವ ಕಾಲೇಜು ಜಗಳೂರು, ದಾವಣಗೆರೆ ಜಿಲ್ಲೆ
E-mail:- [email protected]
ಇತಿಹಾಸ ಉಪನ್ಯಾಸಕರು ಜಗಳೂರು ಟೌನ್. ದಾವಣಗೆರೆ ಜಿಲ್ಲೆ.
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ