ಖ್ಯಾತ ಖಭೌತ ವಿಜ್ಞಾನಿ ಜಯಂತ್ ನಾರ್ಲಿಕರ್
ಜಯಂತ್ ನಾರ್ಲಿಕರ್ ಅವರು 1938ರ ಜುಲೈ 19ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದರು. ಅವರು ಪ್ರಸಿದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದು, ವಿಶ್ವ ವಿಖ್ಯಾತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ(ಬ್ರಿಟನ್)ದಲ್ಲಿ ಉನ್ನತ ಶಿಕ್ಷಣವನ್ನು ಪಡೆದುಕೊಂಡರು. ಬ್ರಿಟನ್ನಲ್ಲಿ ಡಾಕ್ಟರೇಟ್ ಮಾಡುವಾಗ ಅವರ ಮಾರ್ಗದರ್ಶಕರಾದ ಜಗತ್ಪ್ರಸಿದ್ಧ ವಿಜ್ಞಾನಿ ಫ್ರೆಡ್ ಹೋಯ್ಲ್ ಅವರೊಂದಿಗೆ ಗುರುತ್ವಾಕರ್ಷಣೆ ಕುರಿತು ತಮ್ಮದೇ ಆದ ಸಿದ್ಧಾಂತವನ್ನು ಸಿದ್ಧಪಡಿಸಿದ್ದರು. ಈ ಸಿದ್ಧಾಂತವು 'ಹೋಯ್ಲ್ - ನಾರ್ಲಿಕರ್ ಸಿದ್ಧಾಂತ'ವೆಂದೇ ಖ್ಯಾತಿ ಪಡೆದಿದೆ.
'ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್' (1972-1989) ಸೇರುವ ಉದ್ದೇಶದಿಂದ ಭಾರತಕ್ಕೆ ಮರಳಿದರು. 1988ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವು ಇವರನ್ನು ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್ (ಐಯುಸಿಎಎ)ನ ಸಂಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿತ್ತು. 2003ರಲ್ಲಿ ಇದರಿಂದ ನಿವೃತ್ತಿಯಾದರು.
ನಾರ್ಲಿಕರ್ ಅವರು ಖಭೌತ (Astrophysics) ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಳಿಂದಾಗಿ, ವಿಜ್ಞಾನವನ್ನು ಜನಪ್ರಿಯಗೊಳಿಸಲು ಮತ್ತು ದೇಶದಲ್ಲಿ ಮೊದಲ ಹಂತದ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಲು ಶ್ರಮಿಸುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದರು.
ನಾರ್ಲಿಕರ್ ಅವರಿಗೆ ಭಾರತ ಸರ್ಕಾರ 1965ರಲ್ಲಿ 'ಪದ್ಮಭೂಷಣ', 2004ರಲ್ಲಿ 'ಪದ್ಮವಿಭೂಷಣ' ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅಲ್ಲದೆ 2011ರಲ್ಲಿ ಮಹಾರಾಷ್ಟ್ರ ಸರ್ಕಾರ 'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ನೀಡಿ ಗೌರವಿಸಿದೆ.
ಅವರ ಆತ್ಮಚರಿತ್ರೆಯ ಪುಸ್ತಕಕ್ಕೆ (ಮರಾಠಿ) 2014ರಲ್ಲಿ ಪ್ರಾದೇಶಿಕ ಭಾಷೆಯ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಒಲಿದಿದೆ.
2021ರಲ್ಲಿ ನಡೆದ 94ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕೂಡ ವಹಿಸಿದ್ದರು.
ನಮ್ಮ ದೇಶ ಕಂಡ ಇಂತಹ ಖ್ಯಾತ ಖಭೌತ ವಿಜ್ಞಾನಿ ಮತ್ತು ಲೇಖಕರೂ ಆಗಿದ್ದ ಜಯಂತ್ ನಾರ್ಲಿಕರ್ ಅವರು ಕಳೆದ ಮಂಗಳವಾರ ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
Amrut C Rao, Barige, B Dodderi Post, Sorab Tq, Shimoga District 577434, ಫೋನ್ ನಂಬರ್ - 9481985721
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ