ಡಾ. ಎಂ. ಆರ್. ಶ್ರೀನಿವಾಸನ್ : ಭಾರತದ ಪರಮಾಣು ವಿಜ್ಞಾನಿ
ದೇಶದ ಅಣುಶಕ್ತಿ ಯೋಜನೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ ಪರಮಾಣು ವಿಜ್ಞಾನಿ ಬೆಂಗಳೂರಿನ ಡಾ. ಎಂ. ಆರ್. ಶ್ರೀನಿವಾಸನ್. ಅವರು ಕಳೆದ ಮಂಗಳವಾರ ತಮ್ಮ 95ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಡಾ. ಎಂ. ಆರ್. ಶ್ರೀನಿವಾಸನ್ ಅವರು ಮೈಸೂರಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದರು. ಅವರ ನೆಚ್ಚಿನ ವಿಷಯ ಭೌತಶಾಸ್ತ್ರವಾದರೂ ಸರ್ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕೋರ್ಸ್ ಮುಗಿಸಿ, 1950ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದುಕೊಂಡರು. 1952ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. 1954ರಲ್ಲಿ ಕೆನಡಾದ ಜಗತ್ಪ್ರಸಿದ್ಧ 'ಮೆಕ್ಗಿಲ್ ವಿಶ್ವವಿದ್ಯಾನಿಲಯ'ದಿಂದ 'ಟರ್ಬೈನ್ ತಂತ್ರಜ್ಞಾನ' ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದುಕೊಂಡರು.
ವಿದ್ಯಾಭ್ಯಾಸದ ನಂತರ 1955ರಲ್ಲಿ ಮುಂಬೈನಲ್ಲಿರುವ 'ಡಿಪಾರ್ಟ್ಮೆಂಟ್ ಆಫ್ ಅಟಾಮಿಕ್ ಎನರ್ಜಿ'ಯನ್ನು ಸೇರಿಕೊಂಡರು. ಆಗ ಅವರಿಗೆ ಕೇವಲ 25 ವರ್ಷ ವಯಸ್ಸು! ಇಲ್ಲಿರುವಾಗಲೇ ಅವರಿಗೆ 'ಭಾರತದ ಅಣುಶಕ್ತಿಯ ಪಿತಾಮಹ' ಹೋಮಿ ಜಹಾಂಗೀರ್ ಭಾಭಾ ಮತ್ತು ವಿಕ್ರಂ ಸಾರಾಭಾಯ್ ಅವರಂತಹ ಮಹಾನ್ ವಿಜ್ಞಾನಿಗಳ ಪರಿಚಯ ಮತ್ತು ಒಡನಾಟ ಆರಂಭವಾದದ್ದು.
ಭಾರತದ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿ, ಅಣುಶಕ್ತಿ ವಿಭಾಗದ ಕಾರ್ಯದರ್ಶಿಯಾಗಿ ಅನನ್ಯ ಸೇವೆ ಸಲ್ಲಿಸಿದರು. ಭಾರತೀಯ ಅಣುಶಕ್ತಿ ನಿಗಮವನ್ನು (ಎನ್.ಪಿ.ಸಿ.ಐ.ಎಲ್) ಸ್ಥಾಪಿಸಿದ ಶ್ರೇಯ ಕೂಡ ಇವರಿಗೇ ಸಲ್ಲುತ್ತದೆ.
ಭಾರತದ ಮೊದಲ ಪರಮಾಣು ಸಂಶೋಧನಾ ರಿಯಾಕ್ಟರ್ 'ಅಪ್ಸರಾ'ವನ್ನು ಸ್ಥಾಪಿಸುವಲ್ಲಿಯೂ ಶ್ರೀನಿವಾಸನ್ ಅವರ ಪಾತ್ರ ಮಹತ್ವದ್ದು. ಇವರ ನೇತೃತ್ವದಲ್ಲಿ ಭಾರತದಲ್ಲಿ 18 ಅಣುಸ್ಥಾವರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ 7 ಸ್ಥಾವರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. 7 ಸ್ಥಾವರಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಮತ್ತು 4 ಸ್ಥಾವರಗಳ ನಿರ್ಮಾಣವು ಯೋಜನೆಯ ಹಂತದಲ್ಲಿದೆ. ಹೋಮಿ ಭಾಭಾ ಮತ್ತು ವಿಕ್ರಂ ಸಾರಾಭಾಯ್ ಅವರ ನಾಯಕತ್ವದ ಬಳಿಕ ಅಣು ಶಕ್ತಿ ಯೋಜನೆಯಲ್ಲಿ ಶ್ರೀನಿವಾಸನ್ ಅವರ ನಾಯಕತ್ವ ಎದ್ದು ಕಾಣುತ್ತದೆ.
ಡಾ. ಎಂ. ಆರ್. ಶ್ರೀನಿವಾಸನ್ ಅವರ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಭಾರತ ಸರ್ಕಾರ 1984ರಲ್ಲಿ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿತು. ಬಳಿಕ 1990ರಲ್ಲಿ 'ಪದ್ಮಭೂಷಣ' ಹಾಗೂ 2015ರಲ್ಲಿ 'ಪದ್ಮವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಿದೆ.
ದೇಶ ಕಂಡ ಮಹಾನ್ ವಿಜ್ಞಾನಿ ಡಾ. ಎಂ. ಆರ್. ಶ್ರೀನಿವಾಸನ್ ಅವರ ಸಾಧನೆಗಳು ನಮಗೆಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಆಶಿಸುತ್ತಾ, ಅವರಿಗೆ ಅನಂತ ನಮನಗಳು.
Amrut C Rao, Barige, B Dodderi Post, Sorab Tq, Shimoga District 577434, ಫೋನ್ ನಂಬರ್ - 9481985721
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ