ತುಳುನಾಡಿನವರು ಹಲವು ಪದ್ದತಿಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ.ಇದರಲ್ಲಿ ಮದುವೆಯಾಗದೇ ಮೃತರಾದವರ ಪ್ರೇತಾತ್ಮಕ್ಕೆ ಮದುವೆ ಮಾಡಿಸುವುದೂ ಒಂದು.
ಹೀಗೆ ಮದುವೆಗೂ ಮುನ್ನ ಮೃತಪಟ್ಟ ಪುತ್ತೂರಿನ ಯುವತಿಯೊಬ್ಬಳ ಪ್ರೇತಕ್ಕೆ ಮದುವೆ ಮಾಡಿಸಲು ಪ್ರೇತ ವರನನ್ನು ಹುಡುಕಿ ಹುಡುಕಿ ಸುಸ್ತಾದ ಮನೆಯವರು ಪತ್ರಿಕಾ ಜಾಹಿರಾತಿನ ಮೂಲಕ ಪ್ರಕಟಣೆ ನೀಡಿದ್ದರು. ಈ ಜಾಹಿರಾತು ಎಲ್ಲೆಡೆ ಸಂಚಲನ ಮೂಡಿಸಿತು.
ಬಹು ಚರ್ಚಿತ ಜಾಹೀರಾತು- ಸುದ್ದಿ ಈಗ ತಾರ್ಕಿಕ ಅಂತ್ಯ ಕಂಡಿದೆ. "ವಧು"ವಿಗೆ “ವರ’ ಈಗ ನಿಗದಿಯಾಗಿದ್ದು, ಮುಂದಿನ ಆಷಾಢ (ಆಟಿ) ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ.
30 ವರ್ಷಗಳ ಹಿಂದೆ 1 ವಾರದ ಮಗು ತೀರಿ ಹೋಗಿತ್ತು. ನಾಮಕರಣವೂ ಆಗಿರಲಿಲ್ಲ. ಆ ವ್ಯಕ್ತಿಗೆ ಈಗ “ಪ್ರೇತ ಮದುವೆ’ ಮಾಡಲು ನಿರ್ಧರಿಸಲಾಗಿದೆ.
“ಸುಮಾರು 30 ವರ್ಷದ ಹಿಂದೆ ತೀರಿ ಹೋದಾಕೆಗೆ ಪ್ರೇತ ವರ ಸದ್ಯ ಬೇಕಾಗಿದೆ’ ಎಂದು ಪುತ್ತೂರಿನ ಸುದ್ದಿಬಿಡುಗಡೆ ದಿನಪತ್ರಿಕೆಯಲ್ಲಿ ಜಾಹೀರಾತು ಹಾಕಿದ್ದನ್ನು ಗಮನಿಸಿದ ಹಾಗೂ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದನ್ನು ಗಮನಿಸಿದ ಕಾಸರಗೋಡಿನ ಬಾಯಾರು ಸಮೀಪದ ನಿವಾಸಿ ಸಂಬಂಧಪಟ್ಟವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಮೊದಲ ಕರೆ ಅದಾಗಿತ್ತು.
ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಬಾಯಾರುವಿನ ವರ ಅಂತಿಮಗೊಳಿಸುವ ಬಗ್ಗೆ ಸಲಹೆ ಬಂದಿತ್ತು.
ಜೀವಂತ ಇರುವಾಗ ಆಗದೇ ಇರುವ ಮದುವೆ ಕ್ರಮವನ್ನು ಜೀವಂತ ಇರುವ ಕುಟುಂಬ ವರ್ಗ ಸೇರಿ ಸಾಂಕೇತಿಕವಾಗಿ ನಡೆಸುತ್ತದೆ.
ಮುಂದಿನ ರವಿವಾರ ಮೇ.26 ರಂದು “ಪ್ರೇತ ವರ’ನ ಕಡೆಯವರು “ಪ್ರೇತ ವಧು’ವಿನ ಮನೆಗೆ ಬರಲಿದ್ದಾರೆ. ಬಳಿಕ ನಾವು ಅವರ ಮನೆಗೆ ಹೋಗುತ್ತೇವೆ. ಬಳಿಕ ನಿಶ್ಚಿತಾರ್ಥ. ಆಷಾಡದಲ್ಲಿ ಮದುವೆ ಮಾಡುವ ಬಗ್ಗೆ ನಿಗದಿಮಾಡಿದ್ದೇವೆ ಎಂದು ಪ್ರೇತವಧುವಿನ ಮನೆಯವರು ತಿಳಿಸಿದ್ದಾರೆ.