ಭಕ್ತಿ ಎಂದರೇನು? ಅದರ ಅರ್ಥವೇನು? ಅದರ ಮಹತ್ವವೇನು ಎನ್ನುವುದು ಇಂದಿಗೂ ಬಹಳಷ್ಟು ಜನರಿಗೆ ಸರಿಯಾಗಿ ತಿಳಿದಿಲ್ಲ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಎಲ್ಲ ಕಡೆ ಹೆಚ್ಚಾಗಿ ತೋರಿಕೆಯ ಭಕ್ತಿಯೇ ಕಾಣಿಸುತ್ತಿದೆ. ಇದರಗಿಂತ ದುರಾದೃಷ್ಟ ನಮಗೆ ಬೇಕಾ? ನೀವೇ ಹೇಳಿ. ಈ ತರಹದ ಭಕ್ತಿಗೆ ಎಷ್ಟು ಕೋಟಿ ರೂಪಾಯಿ ಖರ್ಚು ಮಾಡಿದರೂ ಯಾವುದೇ ರೀತಿಯ ಪ್ರಯೋಜನವಿಲ್ಲ.ಇಂತಹ ಭಕ್ತಿಯನ್ನು ದೇವರು ಎಂದಿಗೂ ಸ್ವೀಕಾರ ಮಾಡಿಲ್ಲ, ಮಾಡುವುದು ಇಲ್ಲ. ಯಾಕೆಂದರೆ ತೋರಿಕೆಯ ಭಕ್ತಿಗೆ ಯಾವುದೇ ಅರ್ಥವಿಲ್ಲ. ಪ್ರಸ್ತುತ ಕಲಿಯುಗದಲ್ಲಿ ನಿಜವಾದ ಭಕ್ತಿ ಇರುವುದು ಅಪರೂಪ ಕೂಡ. ಭಕ್ತಿಯ ಮಹತ್ವವನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ಭಕ್ತನ ಆದ್ಯ ಕರ್ತವ್ಯವಾಗಿದೆ. ಹಾಗಾದರೆ ಭಕ್ತಿ ಎಂದರೇನು? ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಇದಕ್ಕೆ ಉತ್ತರವೂ ನನ್ನ ಬಳಿಯಿದೆ. ಅಂತರಂಗದ ವಿಕಾಸದ ಮೂಲಕ ವ್ಯಕ್ತಿಯಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದೇ ಭಕ್ತಿ. ಹಾಗಾದರೆ ಇದರ ಅರ್ಥ ಸ್ನೇಹಿ, ಅದೃಷ್ಟ,ಗಮನ,ಉದಾರ, ಆಧುನಿಕ. ಒಂದು ಆಶ್ಚರ್ಯಕರ ವಿಷಯವೇನೆಂದರೆ ಎಲ್ಲರಲ್ಲೂ ಭಕ್ತಿ ಇರಬೇಕು ಎಂದು ಹೇಳುವವರಿಗೆ ಭಕ್ತಿಯಲ್ಲಿಯು ಹಲವು ವಿಧಗಳಿವೆ ಎನ್ನುವ ವಿಷಯವೇ ಗೊತ್ತಿಲ್ಲ. ಇದನ್ನು ಭಗವದ್ಗೀತೆಯಲ್ಲಿ ಚತುರ್ವಿಧಾ ಭಜಂತೆ, ಮಾಂ ಜನಾ, ಸುಕೃತಿನೋರ್ಜುನ,ಆರ್ತೊ, ಜಿಜ್ಞಾಸು,ಆರ್ಥಾರ್ಥಿ, ಜ್ಞಾನಿಚ,ಭರತವರ್ಷಭ ಎಂದು ಅದ್ಭುತವಾಗಿ ಹೇಳಿದ್ದಾರೆ. ಭಕ್ತರಲ್ಲಿ ನಾಲ್ಕು ವಿಧದ ಭಕ್ತರು ನಮ್ಮ ಸಮಾಜದಲ್ಲಿ ಬದುಕುತ್ತಿದ್ದಾರೆ. ೧) ಆರ್ತಿ ಭಕ್ತ ೨) ಜಿಜ್ಞಾಸು ಭಕ್ತ ೩) ಅರ್ಥಾರ್ಥಿ ಭಕ್ತ ೪) ಜ್ಞಾನಿ ಭಕ್ತ. ಈ ನಾಲ್ಕು ಭಕ್ತರು ಉತ್ತಮರು ಎನ್ನುವುದರಲ್ಲಿ ಯಾವ ಸಂದೇಹವಿಲ್ಲ. ಈ ನಾಲ್ಕು ಭಕ್ತರಲ್ಲಿ ಶ್ರೇಷ್ಠ ಭಕ್ತನೆಂದರೆ ಅದು ಜ್ಞಾನಿ ಭಕ್ತ. ಕಾರಣವೇನೆಂದರೆ ಭಗವಂತನ ನಾಮಸ್ಮರಣೆಯೇ ಜೀವನ, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಿಷ್ಕಾಮ. ಇನ್ನುಳಿದವರು ಸಕಾಮರು ಅಂದರೆ ಇಚ್ಚೆವುಳ್ಳವರು ಎಂದು ಹೇಳಲು ಅಡ್ಡಿಯಿಲ್ಲ. ಈ ನಾಲ್ಕು ಭಕ್ತರು ಪದ್ಧತಿಯನ್ನು ನಾನು ಮುಂದಿನ ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದೇನೆ.
೧) ಆರ್ತಿ ಭಕ್ತ: ಆರ್ತಿ ಎಂದರೆ ಸಂಕಟ, ಸಂಕಟದ ವ್ಯಾಕುಲ ಭಕ್ತಿಯೇ ಆರ್ತಿ ಭಕ್ತಿ.ಈ ಭಕ್ತಿಯ ಹಿನ್ನೆಲೆ ತಾನು ಕಷ್ಟದಿಂದ ಬಿಡುಗಡೆಯಾಗಬೇಕೆಂಬ ಇಚ್ಛೆ ಇರುತ್ತದೆ. ಆದ್ದರಿಂದ ಇದನ್ನು ಸಕಾಮ ಭಕ್ತಿಯೆಂದು ಕೂಡ ಕರೆಯುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಗಜೇಂದ್ರ ಮೋಕ್ಷ. ಶ್ರೀ ಮದ್ಭಾಗವತದಲ್ಲಿ ಅಖಾಯಿಕೆ ಎನ್ನುವುದು ಇದೆ.
ತ್ರಿಕೋಟ ಎಂಬ ಪರ್ವತದಲ್ಲಿರುವ ಸರೋವರದಲ್ಲಿ ಗಜಸಮೂಹದಲ್ಲಿ ಗಂಡಾನೆಯು ಹೆಣ್ಣಾನೆಗಳೊಂದಿಗೆ ಜಲಕ್ರೀಡೆಯಾಡುತ್ತಿದ್ದಾಗ ಒಂದು ಮೊಸಳೆ ಆನೆಯ ಕಾಲನ್ನು ಹಿಡಿಯಿತು. ಅಲ್ಲದೆ ಮಾಂಸದ ಮೇಲಿನ ಆಸೆಯಿಂದ ಆನೆಯನ್ನು ಸರೋವರದ ಆಳಕ್ಕೆ ಸೆಳೆಯಿತು.ಆನೆಯ ಪ್ರತಿರೋಧದ ಹೋರಾಟ, ಈ ಸೆಳೆತದ ಯುದ್ಧ ಸಾವಿರಾರು ವರ್ಷಗಳವರೆಗೆ ನಡೆದಿತ್ತು. ಧೀರ್ಘ ಕಾಲದ ಯುದ್ಧದಿಂದ ಬಳಲಿದ ಆನೆ ತಾನು ಇನ್ನು ಉಳಿಯುದಿಲ್ಲವೆಂಬ ಸಂಕಟದಿಂದ ದೇವರನ್ನು ಧ್ಯಾನಿಸುತ್ತ ಪ್ರಭು ನಾನಿನ್ನು ಉಳಿಯುವುದಿಲ್ಲ, ಶಿಥಿಲಗೊಂಡಿರುವ ಈ ಹಸ್ತಿ ಶರೀರದಿಂದ ಆಗುವ ಪ್ರಯೋಜನವಾದರು ಏನು? ನಿನ್ನ ಸಾನ್ನಿಧ್ಯಕ್ಕೆ ನನ್ನನ್ನು ಅರ್ಪಿಸಿಕೋ ಎಂದು ಹೇಳಿತು.
ಗಜೇಂದ್ರನ ಸ್ತುತಿಯಿಂದ ಪ್ರಸನ್ನನಾದ ಸಕಲ ದೇವತಾಮಯ ಶ್ರೀಮನ್ ನಾರಾಯಣನು ಗರುಡ ವಾಹನದ ಮೂಲಕ ವೇಗವಾಗಿ ಬಂದು ತನ್ನ ಚಕ್ರದಿಂದ ಮೊಸಳೆಯನ್ನು ತುಂಡರಿಸಿ
ಗಜೇಂದ್ರನನ್ನು ರಕ್ಷಿಸಿದನು. ಅಲ್ಲದೆ ಶಾಪದಿಂದ ಮೊಸಳೆ ಜನ್ಮವನ್ನು ಪಡೆದಿದ್ದ ಗಂಧರ್ವನು ಮತ್ತು ಶಾಪದಿಂದ ಆನೆಯ ಜನ್ಮವನ್ನು ಪಡೆದಿದ್ದ ಇಂದ್ರದ್ಯುಮ್ಮನು ತನ್ನ ನಿಜ ರೂಪವನ್ನು ಪಡೆದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಲ್ಲಿ ಗಜೇಂದ್ರನ ಭಕ್ತಿ ಭಾವದ ವ್ಯಾಕುಲತೆ ಆಳ ಹೆಚ್ಚಿದ್ದರಿಂದ ದೇವರು ಬೇಗನೇ ಬರಲು ಸಾಧ್ಯವಾಯಿತು. ಏಕೆಂದರೆ ಭಕ್ತಿ ಭಾವದ ವ್ಯಾಕುಲತೆಯ ಆಳ ಹೆಚ್ಚಿದಷ್ಟು ದೇವರು ಬೇಗನೆ ಬರುತ್ತಾನೆ. ಪ್ರಸ್ತುತ ಕಲಿಯುಗದಲ್ಲಿ ದೇವರನ್ನು ನೆನಪಿಸಿಕೊಳ್ಳದ ಕೆಲವು ಜನ ( ಇದರಲ್ಲಿ ಎಲ್ಲ ರೀತಿಯ ಜನರು ಸೇರಿ) ಕಷ್ಟ ಬಂದಾಗ ಮರೆತುಹೋಗಿದ್ದ ದೇವರು, ದೇವಸ್ಥಾನಗಳನ್ನು ನೆನಪಿಸಿಕೊಳ್ಳುವುದುಲ್ಲದೆ ಹುಡುಕಿಕೊಂಡು ಹೋಗಿ ದರ್ಶನ ಪಡೆಯುತ್ತಿದ್ದಾರೆ. ಇದು ಯಾವ ರೀತಿಯ ಭಕ್ತಿ? ಈ ಪ್ರಶ್ನೆಗೆ ಉತ್ತರಿಸಲು ನಿಮಗೆ ಸಾಧ್ಯವಿದೆಯೇ?
೨) ಜಿಜ್ಞಾಸು ಭಕ್ತ: ಜಿಜ್ಞಾಸು ಎಂದರೆ ಭಗವಂತನ ಸ್ವರೂಪವನ್ನು ತಿಳಿಯುವುದು, ಪಡೆಯುವುದು ಎಂದರ್ಥ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಉದ್ಧವ. ಹಿಂದೂ ಧರ್ಮದ ಪುರಾಣ ಪಠ್ಯಗಳಲ್ಲಿ ಒಂದು ಪಾತ್ರ. ಇವನು ಕೃಷ್ಣನ ಮಿತ್ರ ಮತ್ತು ಸಲಹೆಗಾರ. ಭಾಗವತ ಪುರಾಣದಲ್ಲಿ ಇವನ ಪಾತ್ರ ತುಂಬ ಮಹತ್ವಪೂರ್ಣವಾಗಿದೆ. ಶ್ರೀ ಕೃಷ್ಣ ಪರಮಾತ್ಮನೇ ಉದ್ಧವನಿಗೆ ನೇರವಾಗಿ ಯೋಗ ಮತ್ತು ಭಕ್ತಿಯ ಪ್ರಕ್ರಿಯೆಗಳನ್ನು ಕಲಿಸಿಕೊಟ್ಟಿದ್ಧನು. ಈ ಚರ್ಚೆಗಳ ತತ್ವವನ್ನು ಹಲವು ಸಮಯ ಉದ್ಧವ ಗೀತೆ ಎಂದು ಹೇಳಲಾಗುತ್ತದೆ. ಕುರುಕ್ಷೇತ್ರದ ಸಮಯದಲ್ಲಿ ಇದು ಕೃಷ್ಣನು ಅರ್ಜುನನಿಗೆ ಬೋಧಿಸಿರುವ ಭಗವದ್ಗೀತೆಯನ್ನು ಹೋಲುತ್ತದೆ. ಉದ್ಧವನ ದೈಹಿಕ ನೋಟ ನೋಡಲು ಶ್ರೀ ಕೃಷ್ಣ ಪರಮಾತ್ಮನನ್ನು ಎಷ್ಟು ಹೋಲುತ್ತಿದ್ದೆಂದರೆ ಕೆಲವು ಸಂದರ್ಭಗಳಲ್ಲಿ ಉದ್ಧವನನ್ನೇ ತಾತ್ಕಾಲಿಕವಾಗಿ ಕೃಷ್ಣನೆಂದು ತಪ್ಪು ತಿಳಿಯಲಾಗುತ್ತಿತ್ತೆಂದರೆ ಅವನು ಎಂತಹ ಪರಮ ಭಕ್ತ ಎನ್ನುವುದು ತಿಳಿಯುತ್ತದೆ. ಶ್ರೀ ಕೃಷ್ಣ ಪರಮಾತ್ಮನು ತನ್ನ ಅವತಾರವನ್ನು ಮುಗಿಸಿ ಪರಂಧಾಮಕ್ಕೆ ಹಿಂದುರುಗುವರೆಗೂ ಭಗವಂತನನ್ನು ಅನುಸರಿಸಿ ಮಹಾತ್ಮನಾದನು. ಯಾದವರೆಲ್ಲರು ಯಾದವಿ ಕಲಹದಿಂದ ನಾಶವಾದರೆ ಕೃಷ್ಣ ಪರಮಾತ್ಮನು ವಿಪ್ರನ ಶಾಪದ ಫಲ ವ್ಯಾಧನೊಬ್ಬನ ಬಾಣದಿಂದ ಗಾಯಗೊಂಡು ಶರೀರವನ್ನು ತ್ಯಾಗ ಮಾಡುವ ಸ್ಥಿತಿಯಲ್ಲಿದ್ದನು. ತನ್ನವರೆಲ್ಲರನ್ನು ಕಳೆದುಕೊಂಡು ಪ್ರಭಾಸ ಕ್ಷೇತ್ರದಲ್ಲಿ ಏಕಾಂಗಿಯಾಗಿ ಮಲಗಿಕೊಂಡಿದ್ದ ಶ್ರೀ ಕೃಷ್ಣನಿಗೆ ಉದ್ಧವನು ಜಿಜ್ಞಾಸುವಾಗಿ ಶರಣಾಗತನಾದನು.
೩) ಅರ್ಥಾಥಿ ಭಕ್ತ: ಅರ್ಥಾಥಿ ಎಂದರೆ ಬೇಡುವವನು, ಐಹಿಕ ಪ್ರಯೋಜನಕ್ಕೋಸ್ಕರ ಅಥವಾ ಲೌಕಿಕ ಸುಖಗೋಸ್ಕರ ಭಗವಂತನನ್ನು ಭಜಿಸುವವನೇ ಅರ್ಥಾಥ ಭಕ್ತ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಧ್ರುವ. ಉತ್ತಾನಪಾದ ಮಹಾರಾಜನಿಗೆ ಸುನೀತಿ ಮತ್ತು ಸುರುಚಿ ಇಬ್ಬರು ಪತ್ನಿಯರು. ಸುನೀತಿಯ ಮಗ ಧ್ರುವ, ಆದರೆ ಸುರುಚಿಯ ಮಗ ಉತ್ತಮ. ಧ್ರುವ ಕುಮಾರನು ಕುಳಿತುಕೊಳ್ಳಲು ಪ್ರಯತ್ನಿಸಿದಾಗ ಉತ್ತಮನ ತಾಯಿ ಸುರುಚಿಯು ಅವನನ್ನು ಗದರಿಸುತ್ತ ತಪಸ್ಸು ಮಾಡಿ ಮುಂದಿನ ಜನ್ಮದಲ್ಲಿ ನನ್ನ ಹೊಟ್ಟೆ ಯಲ್ಲಿ ಹುಟ್ಟಿದರೆ ಮಾತ್ರ ಸಿಂಹಾಸನವನ್ನೇರಲು ಸಾಧ್ಯವೆಂದಳು. ಮಲತಾಯಿಯ ಈ ಮಾತು ೫ ವರ್ಷದ ಬಾಲಕ ಧ್ರುವನಿಗೆ ಪ್ರೇರಣೆಯಾಗಿ ತಪಸ್ಸು ಮಾಡಲು ಕಾಡಿಗೆ ಪ್ರಯಾಣ ಬೆಳೆಸಿದನು. ಮಾರ್ಗದಲ್ಲಿ ನಾರದ ಮಹರ್ಷಿಗಳ ಮಾರ್ಗದರ್ಶನದಂತೆ ತಪಸ್ಸು ಮಾಡಿ ದೇವರ ದರ್ಶನ ಪಡೆದನಲ್ಲದೆ ಶಾಶ್ವತ ಲೋಕದಲ್ಲಿ ಸಿಂಹಾಸನವನ್ನು ಏರಿದನು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಧ್ರುವ ಮುಂದಿನ ಜನ್ಮದಲ್ಲಿ ಸಿಂಹಾಸನವನ್ನು ಏರಬೇಕೆಂಬ ಉದ್ದೇಶದಿಂದ ತಪಸ್ಸು ಮಾಡಿದ್ದನು. ಇದನ್ನು ಅರ್ಥಾಥಿ ಭಕ್ತಿ ಎನ್ನುವರು.
೪) ಜ್ಞಾನಿ ಭಕ್ತ: ಇದು ಭಕ್ತಿಯಲ್ಲಿ ಶ್ರೇಷ್ಠವಾದ ಭಕ್ತಿ. ಇದಕ್ಕೆ ಉತ್ತಮ ಉದಾಹರಣೆಯೆಂದರೆ
ಭಕ್ತ ಪ್ರಹ್ಲಾದ. ಆತ ಜ್ಞಾನಿ ಅನ್ನುವುದರಲ್ಲಿ ಅನುಮಾನವಿಲ್ಲ. ಜ್ಞಾನಿ ಎಂಬುದಕ್ಕೆ ಆತನ ಸಮದೃಷ್ಟಿಯೇ ಸಾಕ್ಷಿ. ಬ್ರಹ್ಮಣ್ಯ ಶೀಲಸಂಪನ್ನ ಸತ್ಯ ಸಂಧೋ ಜಿತೇಂದ್ರಿಯ ಆತ್ಮಾಮ್ ಸರ್ವಭೂತಾನಮೇಕ ಪ್ರಿಯ ಸುಹೃತಮ್ ಆತ್ಮಾಮ್ ಸರ್ವಭೂತಾನಾಂ ಇದು ಜ್ಞಾನಿಯ ಲಕ್ಷಣವಾಗಿದೆ. ಪ್ರಹ್ಲಾದ ಆಟ ಆಡುವ ವಯಸ್ಸಿನ ಬಾಲಕನಾದರೂ ಪ್ರತಿ ಕ್ಷಣವೂ ದೇವರನ್ನೇ ಆರಾಧಿಸುತ್ತಿದ್ದನು. ಪ್ರತಿ ಸ್ಥಳದಲ್ಲಿಯು ದೇವರು ಇರುವುದನ್ನು ಹೇಳುತ್ತಿದ್ದನು.ತೆಲುಗಿನ ಹಿರಿಯ ನಟ ಎಸ್.ವಿ.ರಂಗರಾವ್ ಹಿರಣ್ಯ ಕಶಿಪು ಪಾತ್ರದಲ್ಲಿ ಮತ್ತು ಅಂದಿನ ಬಾಲನಟಿ ರೋಜಾಮಣಿ ಪ್ರಹ್ಲಾದನ ಪಾತ್ರದಲ್ಲಿ ನಟಿಸಿದ ಹಳೆಯ ತೆಲುಗು ಚಿತ್ರ ಭಕ್ತ ಪ್ರಹಲ್ದಾದುಡು. ಇದರಲ್ಲಿ ಹಿರಣ್ಯ ಕಶಿಪು ಮತ್ತು ಪ್ರಹ್ಲಾದನ ನಡುವೆ ದೇವರ ಕುರಿತು ನಡೆಯುವ ಸಂಭಾಷಣೆಯ ನಯನ ಮನೋಹರ ದೃಶ್ಯವನ್ನು ವರ್ಣಿಸಲು ಸಾಧ್ಯವಿಲ್ಲ.ಆಗಿನ ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಭರ್ಜರಿ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಅನಂತರ ಪ್ರತಿಯೊಬ್ಬ ಕನ್ನಡಿಗನಿಗೆ ತಿಳಿದಿರುವ ವಿಚಾರ ನಮ್ಮ ಕನ್ನಡ ಚಿತ್ರರಂಗದ ಕನ್ನಡಿಗರ ಕಣ್ಮಣಿ,ಕಲಾರಸಿಕ,ಕಲಾ ಆರಾಧ್ಯ ದೈವ,ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ ಡಾ.ರಾಜಕುಮಾರ ಹಿರಣ್ಯ ಕಶಿಪು ಪಾತ್ರದಲ್ಲಿ ಮತ್ತು ಅಂದಿನ ಬಾಲನಟ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರಹ್ಲಾದನ ಪಾತ್ರದಲ್ಲಿ ನಟಿಸಿದ ಕನ್ನಡ ಚಿತ್ರರಂಗದಲ್ಲಿ ಎಂದಿಗೂ ಮರೆಯಲಾಗದ, ಮತ್ತು ಹೊಸ ಅಲೆಯನ್ನು ಸೃಷ್ಟಿಸಿದ ಚಿತ್ರ ಭಕ್ತ ಪ್ರಹ್ಲಾದ ಎಷ್ಟು ಅದ್ಭುತವಾಗಿ ಮೂಡಿಬಂದಿದೆಯೆಂದರೆ ದೇವರ ಮಹತ್ವದ ಕುರಿತು ನಡೆಯುವ ಸಂಭಾಷಣೆಯ ಅದ್ಭುತ ದೃಶ್ಯವನ್ನಾಗಲಿ, ಪೂರ್ತಿ ಚಿತ್ರವನ್ನಾಗಲಿ ವರ್ಣಿಸಲು ಪದಗಳೇ ಸಾಲುವುದಿಲ್ಲ. ಈ ಎರಡು ಚಲನಚಿತ್ರಗಳನ್ನು ವೀಕ್ಷಿಸಿದರೆ ನಿಮಗೆ ಜ್ಞಾನ ಭಕ್ತಿಯ ಮಹತ್ವ ತಿಳಿಯುತ್ತದೆ. ಪ್ರಹ್ಲಾದನ ನಂಬಿಕೆಯನ್ನು ಸತ್ಯವಾಗಿಸುವ ಸಲುವಾಗಿ ಪರಮಾತ್ಮನು ಕಂಬದಲ್ಲಿ ಉಗ್ರ ನರಸಿಂಹನ ಅವತಾರದಲ್ಲಿ ಕಾಣಿಸಿಕೊಂಡು ಹಿರಣ್ಯ ಕಶಿಪುವನ್ನು ಸಂಹರಿಸಿದ್ದರಿಂದಲೆ ಜ್ಞಾನಿ ಭಕ್ತಿಯ ಮಹತ್ವ ಲೋಕಕ್ಕೆ ತಿಳಿಯಿತು. ಏಕೆಂದರೆ
ಜ್ಞಾನಿ ಭಕ್ತನಿಗೂ, ಭಗವಂತನಿಗೂ ಉತ್ತಮ ಸಂಬಂಧವಿದೆ. ಜ್ಞಾನಿ ತ್ವಾತ್ವೈವ ಮೇ ಮತಂ ಎಂಬುದು ಗೀತಾ ವಾಚನ. ತನ್ನ ಭಕ್ತನ ಅವಮಾನವನ್ನು ಭಗವಂತ ಎಂದಿಗೂ ಸಹಿಸುವುದಿಲ್ಲ. ಯಾಕೆಂದರೆ ಅದು ಪರಮಾತ್ಮನಿಗೆ ಆಗುವ ದೊಡ್ಡ ಅವಮಾನ. ದೇವರನ್ನು ಸ್ಮರಿಸುವವನು ಉತ್ತಮ, ದೇವರನ್ನು ತಿಳಿಯಲು ಸ್ಮರಿಸುವವನು ಇನ್ನೂ ಉತ್ತಮ. ಯಾವಾಗಲೂ ಅವನನ್ನು ಧ್ಯಾನಿಸಲು ಆಗದಿದ್ದರೂ ಕಷ್ಟದ ಸಮಯದಲ್ಲಿಯಾದರೂ ಅವನನ್ನು ಸ್ಮರಿಸದಿದ್ದರೆ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ. ನೀವೇ ಆಲೋಚಿಸಿ. ಈ ಲೇಖನವನ್ನು ಓದಿ
ತಿಳಿದುಕೊಂಡ ನಂತರ ನೀವು ಯಾವ ರೀತಿಯ ಭಕ್ತರಾಗಿರಬೇಕೆಂದು ಇಚ್ಚಿಸುತ್ತೀರೋ ನೀವೇ ನಿರ್ಧರಿಸಿ.
ಸರ್ವೇ ಜನಾ ಸುಖೀನೋ ಭವಂತು.
ಧನ್ಯವಾದಗಳು
I am always king in my World.Writer, short movie producer and director.