ಪ್ರೇಮ ಕಥೆ
ಕಥೆ: ಮನದ ಬೇಗುದಿ
ವಿನುತಾಳಿಗೆ ಈ ದಿನ ಗೆಳತಿ ಹೇಳಿದ ಮಾತು ಯೋಚಿಸುವ ಹಾಗೆ ಮಾಡಿತು. ಎಲ್ಲರೂ ಯಾವುದೋ ಭಾವಗೀತೆ ಕೇಳುತ್ತಿದ್ದರು, ಮುಗಿದ ನಂತರ ಅವರ ಗುಂಪಿನಲ್ಲಿ ಒಬ್ಬಳು ತುಂಬಾ ಚೆನ್ನಾಗಿದೆ, ಇನ್ನೊಮ್ಮೆ ರಿವೈಂಡ್ ಮಾಡಿ ಎಂದಾಗ, ಅಲ್ಲಿ ಇದ್ದ ಸುಚರಿತ ಸಹಜವಾಗಿ ತಮಾಷೆಯಾಗಿ ಹೇಳಿದಳು. ಎಲ್ಲರ ಜೀವನದಲ್ಲೂ ಹೀಗೆ ರಿವೈಂಡ್ ಮಾಡೊ ಹಾಗಿದ್ದರೆ ಎಷ್ಟು ಚಂದ ಅಲ್ಲವಾ?. ನಮಗೆ ಸಂತೋಷ ತರುವ ವಿಷಯ ಮತ್ತೆ ಮತ್ತೆ ಬರುವಂತೆ ಹಾಗೂ ನೋವಿನ ಬೇಡದ ವಿಷಯಗಳನ್ನು ಅಳಿಸಿಹಾಕಬಹುದಿತ್ತು ಅಲ್ಲವಾ ಅಂತ ಹೇಳಿದಾಗ ಎಲ್ಲರಿಗೂ ನಿಜ ಅನಿಸಿತು.
ವಿನುತಾಳಿಗೂ ಸಹ ಹಾಗೆ ಅನಿಸಿ ಹಳೆಯದೆಲ್ಲ ನೆನಪಾಯಿತು.
ವಿನುತಾಳ ಅಪ್ಪ ಅಮ್ಮನದು ಒಂದು ಪುಟ್ಟ ಹಳ್ಳಿ ,ತೋಟ ಮನೆ ಎಲ್ಲಾ ಇತ್ತು. ಅವರಿಗೆ ಐದು ಜನ ಮಕ್ಕಳಿದ್ದರು, ಕೊನೆಯವಳು ವಿನುತಾ. ಮನೆಯವರೆಲ್ಲರ ಮುದ್ದಿನ ಕೂಸಾಗಿದ್ದಳು ಇವಳು, ಇಬ್ಬರೂ ಅಕ್ಕ ಹಾಗೂ ಇಬ್ಬರೂ ಅಣ್ಣ ಅವಳಿಗೆ, ತಂದೆಗಂತೂ ತುಂಬಾ ಚೆಲುವೆಯಾದ ಹಾಗೂ ಬುದ್ದಿವಂತಳಾದ ಅವಳೆಂದರೆ ತುಂಬಾ ಇಷ್ಟ.ಚೆನ್ನಾಗಿ ಓದುತ್ತಿದ್ದ ವಿನುತಾಳಿಗೆ ಪದವಿಯ ನಂತರ ಸರ್ಕಾರಿ ಕೆಲಸ ಸಿಕ್ಕಿತು.
ಕೆಲಸದ ಜಾಗ ಹಳ್ಳಿಯಿಂದ ದೂರ ಇರುವ ಕಾರಣ ಅಲ್ಲಿಯೇ ಹತ್ತಿರದಲ್ಲಿ ಪಿಜಿಯಲ್ಲಿ ಇದ್ದಳು. ಹಾಗೆ ಅವಳ ಆಫೀಸ್ ನಲ್ಲಿ ತನ್ನ ಊರಿನಿಂದ ಮನೆಯವರಿಂದ ದೂರ ಇದ್ದ ಹುಡುಗ ಪರಿಚಯವಾದ, ಅವನ ಹೆಸರು ರಾಜೀವ ಇಬ್ಬರೂ ಹಾಗೆ ಹತ್ತಿರವಾದರು. ಜೊತೆಯಲ್ಲಿ ಆಫೀಸಿಗೆ ಬರುವುದು ಹಾಗೂ ರಜಾ ಇರುವಾಗ ಸಿನಿಮಾ, ಹೋಟೆಲ್ ಎಂದು ಹೋಗುತ್ತಿದ್ದರು.
ಇಬ್ಬರಿಗೂ ಒಂದು ದಿನ ಸಹ ನೋಡದೆ ಇರಲು ಸಾಧ್ಯವಿಲ್ಲ ಅನ್ನುವ ಸ್ಥಿತಿಗೆ ಬಂದರು. ಒಂದು ದಿನ ರಾಜೀವ ಹೇಳಿದ ನೋಡಿ ವಿನುತಾ ನನಗಂತೂ ನೀವಿಲ್ಲದೆ ಬದುಕಲು ಸಾಧ್ಯವಿಲ್ಲ ಎನಿಸಿದೆ,ಎಂದಾಗ, ವಿನುತಾ ನನ್ನ ಸ್ಥಿತಿ ಸಹ ಹಾಗೆ ಇದೆ ನಾನು ಕೂಡಾ ನಿಮ್ಮ ಬಿಟ್ಟು ಬದುಕಲಾರೆ,ಇಬ್ಬರೂ ಮದುವೆಯಾಗೊಣ, ಮನೆಯಲ್ಲಿ ಮಾತನಾಡೋಣವೆಂದಳು.
ವಿನುತಾ ಮೊದಲು ಅಣ್ಣನಿಗೆ ವಿಷಯ ಹೇಳಿದಾಗ, ಅಣ್ಣ ರಾಜೀವ ಅವರು ನಮ್ಮ ಬ್ರಾಹ್ಮಣರಾ ಎಂದು ಕೇಳಿದ, ವಿನುತಾ ಅಲ್ಲ ಅವರು ನಾನ್ ವೆಜ್ ತಿನ್ನುವವರು ಎಂದು ಹೆದರುತ್ತಾ ಹೇಳಿದಳು. ಸಾದ್ಯವಿಲ್ಲ ವಿನುತಾ ಅಪ್ಪ ಖಂಡಿತಾ ಒಪ್ಪುವುದಿಲ್ಲ, ನೀನು ಅವನನ್ನು ಮರೆತು ಬಿಡು ಎಂದನು.
ಅಲ್ಲಿ ರಾಜೀವನ ಮನೆಯಲ್ಲಿ ಬೇರೆ ಜಾತಿಯ ಅದರಲ್ಲೂ ತಮಗಿಂತ ಮೇಲ್ಜಾತಿಯ ಹುಡುಗಿ ಬೇಡವೆಂದು ಹಠ ಹಿಡಿದರು.
ವಿನುತಾಳ ಅಪ್ಪನಿಗೆ ವಿಷಯ ತಿಳಿದು ಅವರು ಮಗಳಿಗೆ ಬಗೆ ಬಗೆಯಾಗಿ ತಿಳಿಸಿ ಹೇಳಿದರು. ಹೊರಗಿನಿಂದ ನೋಡಲು ಚಂದ, ನಿಜವಾಗಿಯೂ ಮದುವೆಯಾದ ಮೇಲೆ ನೀನು ಅವನ ಜೊತೆಗೆ ಇರಬೇಕು.ಅವರಿಗೆ ಹೊಂದಿಕೊಳ್ಳುವುದು ನಿನಗೆ ತುಂಬಾ ಕಷ್ಟ ವಾಗುವುದು ಬೇಡ ಮಗಳೆ ಅಂತ ತಂದೆ ಪರಿ ಪರಿಯಾಗಿ ಹೇಳಿದರು ವಿನುತಾ ಕೇಳಲಿಲ್ಲ. ತುಂಬಾ ಹಠಮಾಡಿ ಅವನನ್ನು ಮದುವೆ ಮಾಡಿಕೊಂಡಳು.
ಮನೆಯಲ್ಲಿ ಒಪ್ಪದ ಕಾರಣ ಇಬ್ಬರೂ ದೇವಸ್ಥಾನದಲ್ಲಿ ಗೆಳಯ-ಗೆಳತಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡರು. ವಿನುತಾಳ ಅಪ್ಪ ಅವಳನ್ನು ಮನೆಗೆ ಸೇರಿಸಲಿಲ್ಲ.ರಾಜೀವನ ಮನೆಯಲ್ಲಿ ಸಹ ಸೇರಿಸಿರಲಿಲ್ಲ.
ರಾಜೀವ ಹಾಗೂ ವಿನುತಾ ಇಬ್ಬರೂ ಒಂದು ಪುಟ್ಟ ಮನೆ ಮಾಡಿಕೊಂಡು ಸಂಸಾರ ಶುರು ಮಾಡಿದರು. ಇಬ್ಬರೂ ಜೊತೆಯಲ್ಲಿ ಮನೆಗೆಲಸ ಮಾಡಿ ಜೊತೆಯಲ್ಲೆ ಆಫೀಸ್ಗೆ ಹೋಗಿ ಬರುತ್ತಿದ್ದರು. ಇಬ್ಬರೂ ತುಂಬಾ ಖುಷಿಯಿಂದ,ಸಂತೋಷದಿಂದ
ಇದ್ದರು. ರಾಜೀವ ತನಗೆ ನಾನ್ ವೆಜ್ ತಿನ್ನುವ ಹಂಬಲವಾದರೆ ಗೆಳೆಯರ ಜೊತೆ ಹೋಟೆಲ್ ನಲ್ಲಿ ತಿನ್ನುತ್ತಿದ್ದ, ಕೆಲದಿನಗಳ ನಂತರ ವಿನುತಾಳಿಗೆ ತಮ್ಮ ಮನೆಗೆ ಮಗು ಬರುವ ಸೂಚನೆ ತಿಳಿದಾಗ ತುಂಬಾ ಸಂತಸವಾಯಿತು. ಈಗಲಾದರೂ ಇಬ್ಬರ ಮನೆಯ ಹಿರಿಯರು ಕೋಪ ಮರೆತು ಬರುತ್ತಾರೆ ಅಂತ.
ಅವಳಿಗೆ ಬಸುರಿ ಬಯಕೆ ಶುರುವಾದಾಗ, ವಿನುತಾಳ ಅಪ್ಪ ಕೋಪ ಬಿಡಲಿಲ್ಲ, ವಿನುತಾಳ ತಾಯಿ ಗಂಡನಿಗೆ ತಿಳಿಯದ ಹಾಗೆ ಮಗಳಿಗೆ ಬಗೆ ಬಗೆಯ ತಿಂಡಿ ಮಾಡಿ, ಜೊತೆಗೆ ಒಂದು ಸೀರೆ ಇಟ್ಟು ಮಗನ ಜೊತೆ ಕಳುಹಿಸಿದರು. ರಾಜೀವನ ಅಪ್ಪ ಅಮ್ಮ ಬಂದು ಹೋದರು ಅಷ್ಟೇ.
ವಿನುತಾಳಿಗೆ ಹೆರಿಗೆ ಸಮಯ ಹತ್ತಿರವಾದಾಗಲೂ, ಊರಿನಿಂದ ಮಗು ಬಾಣಂತಿಯ ಕೆಲಸ ತಿಳಿದಿರುವ ಒಬ್ಬಳನ್ನು ಕರೆಸಿದರು. ದೇವಮ್ಮಾ ಅಂತ ಅವಳು ಮಗು ಬಾಣಂತಿಯನ್ನು ಚೆನ್ನಾಗಿ ನೋಡಿಕೊಂಡಳು. ಅವಳಿಗೂ ಊರಿನಲ್ಲಿ ಯಾರು ಇರದ ಕಾರಣ ಇಲ್ಲಿಯೆ ಇರಿಸಿಕೊಂಡರು. ಮುಂದೆ ವಿನುತಾ ಕೆಲಸಕ್ಕೆ ಹೋದಾಗ ಮಗು ನೋಡಿಕೊಂಡು ಅಡುಗೆ ಮಾಡಲು ಸಹಾಯವಾಗುತ್ತದೆ ಅಂತ.
ವಿನುತಾ ಹಾಗೂ ರಾಜೀವ ತುಂಬಾ ಖುಷಿಯಿಂದ ಇದ್ದರು. ನಿಧಾನಕ್ಕೆ ರಾಜೀವನ ಮನೆಗೆ ಹೋಗುವುದು ಅವರು ಇಲ್ಲಿಗೆ ಬರುವುದು ಎಲ್ಲಾ ಸಹಜವಾಯಿತು. ವಿನುತಾಳ ಮನೆಯಲ್ಲು ಮದುವೆಯಾದ ಅಕ್ಕಂದಿರು ಹಾಗೂ ಅಣ್ಣಂದಿರು ಎಲ್ಲಾ ಬರುತ್ತಿದ್ದರು, ಅಮ್ಮ ಸಹ ಆಗಾಗ ಬಂದು ಮಗುವನ್ನು ಮಾತನಾಡಿಸಿ ಹೋಗುತ್ತಿದ್ದರು.
ರಾಜೀವ ಇರುವ ಕೆಲಸ ಬಿಟ್ಟು ಬಿಜನೆಸ್ ಶುರು ಮಾಡಿದನು. ಬಿಜಿನೆಸ್ ಚೆನ್ನಾಗಿ ನಡೆಯುತ್ತಿದ್ದಂತೆ ಅವನಿಗೆ ಗೆಳೆಯರ ಸಹವಾಸ ಜಾಸ್ತಿಯಾಯಿತು. ನಿಧಾನಕ್ಕೆ ಕ್ಲಬ್ ಪಾರ್ಟಿ ಎಲ್ಲಾ ಜಾಸ್ತಿಯಾಯಿತು. ಹೊಸ ಮನೆ ಕಾರು ಎಲ್ಲಾ ಬಂದವು.
ವಿನುತಾಳಿಗೆ ಇನ್ನೊಂದು ಮಗುವಾಯಿತು. ಮಗ ಹಾಗೂ ಮಗಳು ಇಬ್ಬರನ್ನೂ ನೋಡಿಕೊಳ್ಳುತ್ತ ವಿನುತಾ ಕೆಲಸಕ್ಕೆ ಹೋಗುತ್ತ ಸುಸ್ತಾಗುತ್ತಿದ್ದಳು. ಮಕ್ಕಳು ದೊಡ್ಡವರಾಗುತ್ತಿದ್ದರು ರಾಜೀವ ಮೊದಲಿನ ಹಾಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದ, ಆದರೂ ಅವಳಿಗೆ ಏನೋ ಕೊರತೆಯೆನಿಸುವುದು. ಅಲ್ಲದೇ ಅವನಿಗೆ ತಾನು ಹೇಳಿದ್ದೆ ನಡೆಯಬೇಕು ಎನ್ನುವ ಹಠ ಇತ್ತು.
ರಾಜೀವ ಕರೆದಾಗ ವಾರ ವಾರ ಅವನ ಅಮ್ಮ, ಅಕ್ಕ, ತಂಗಿಯರ ಮನೆಗೆ ಹೋಗುತ್ತಿದ್ದರು. ಆಗೆಲ್ಲಾ ಅವರುಗಳ ನಡೆ ನುಡಿ ಅಷ್ಟು ಇಷ್ಟವಾಗುತ್ತಿರಲಿಲ್ಲ. ಆದರೂ ರಾಜೀವ ಬೇಸರ ಮಾಡಿಕೊಳ್ಳುತ್ತಾನೆ ಎಂದು ಹೋಗುತ್ತಿದ್ದಳು
ವಿನುತಾಳು ತನ್ನ ಅಕ್ಕಂದಿರ ಮನೆಗೆ ಹೋಗುವುದು, ಅವರು ಬರುವುದು ಎಲ್ಲಾ ನಡೆದಿತ್ತು. ತಂದೆ ಮಾತ್ರ ತಮ್ಮ ಹಠ ಬಿಡಲಿಲ್ಲ.
ವಿನುತಾಳ ತಂದೆಗೆ ತುಂಬಾ ಹುಶಾರಿಲ್ಲದೆ ,ಆಸ್ಪತ್ರೆಗೆ ಸೇರಿಸಿದ್ದರು ಅವಳು ನೋಡಲು ಹೋದರೆ ತಂದೆ ಅವಳನ್ನು ನೋಡಲು ಇಷ್ಟಪಡಲಿಲ್ಲ, ಒಂದು ವಾರದಲ್ಲಿ ಅವರು ನಿಧನರಾದರು. ಅಗ ದೂರದಿಂದ ನೋಡಿ ಬಂದಳು, ತಂದೆ ಕಾರ್ಯಕ್ಕೆ ಪುರೋಹಿತರು ಅವಳಿಗೆ ಬರಲು ಬಿಡಲಿಲ್ಲ, ವಿನುತಾಳಿಗೆ ಆಗೆಲ್ಲಾ ಅನಿಸುತ್ತಿತು ನಾನು ತಪ್ಪು ಮಾಡಿದೆನಾ ಎಂದು.
ಮಕ್ಕಳನ್ನು ತನ್ನ ಸಂಪ್ರದಾಯದಂತೆ ಬೆಳಸಬೇಕು ಅಂತ ವಿನುತಾ ತನ್ನ ಬಳಗದವರ ಮನೆಗೆ ಮಕ್ಕಳನ್ನು ಹೆಚ್ಚು ಹೆಚ್ಚು ಕರೆದುಕೊಂಡು ಹೋಗುತ್ತಿದ್ದಳು. ಮಕ್ಕಳು ಮೊದ ಮೊದಲು ಅಮ್ಮನ ಜೊತೆಗೆ ಹೋಗುತ್ತಿದ್ದರು.
ಆದರೆ ಅಪ್ಪನ ಬಳಗವೆಂದರೆ ಅವರಿಗೆ ಇನ್ನೂ ಖುಷಿ, ಅಲ್ಲಿಗೆ ಜಾಸ್ತಿಯಾಗಿ ಹೋಗುತ್ತಿದ್ದರು. ಹಾಗೂ ನಾನ್ ವೆಜ್ ತಿನ್ನುವದು ಕಲಿತರು. ನೀನು ನಮ್ಮ ಮನೆಯಲ್ಲಿ ಯಾಕೆ ಮಾಡುವುದಿಲ್ಲ, ನೀನು ಮಾಡು ಎನ್ನುವರು, ಮನೆಯಲ್ಲಿ ಓಡಾಡಲು ಕಾರು, ಅಡುಗೆಯವರು ಕೆಲಸದವರು ಎಲ್ಲಾ ಇದ್ದರು.
ರಾಜೀವ ನಿನಗೆ ಕೆಲಸ ಬೇಸರವಾದರೆ ಬಿಟ್ಟು ಬಿಡು ಎನ್ನುತ್ತಿದ್ದ, ವಿನುತಾಳೂ ಸಹ ಯೋಚಿಸಿ ಕೆಲಸಕ್ಕೆ ರಾಜೀನಾಮೆ ಕೊಟ್ಟಳು. ಗಂಡ ಮಕ್ಕಳು ಸೇರಿ ಇನ್ನೊಂದು ಅಡುಗೆ ಮನೆಮಾಡಿ ಅಲ್ಲಿ ಅಡುಗೆಯವರ ಹತ್ತಿರ ನಾನ್ ವೆಜ್ ಮಾಡಿಸಿಕೊಂಡು ತಿನ್ನವರು, ವಿನುತಾ ಎಷ್ಟೋ ಹೇಳಿದಳು, ಪ್ರಾಣಿಹಿಂಸೆ ಒಳ್ಳೆಯದಲ್ಲ ಬೇಡ ಎಂದರೂ ಕೇಳುತ್ತಿರಲಿಲ್ಲ. ಆಗೆಲ್ಲಾ ವಿನುತಾಳಿಗೆ ನಾನು ತಪ್ಪು ಮಾಡಿದೆ. ಅಪ್ಪನ ಮಾತು ಕೇಳಬೇಕಿತ್ತು , ಈಗ ಅಣ್ಣ, ಅಕ್ಕಂದಿರೆಲ್ಲ ಎಷ್ಟು ಖುಷಿಯಿಂದ ಇದ್ದಾರೆ. ನನಗೆ ಅಲ್ಲಿಯೂ ಸರಿಯಾಗುವುದಿಲ್ಲ, ಇವರ ಕಡೆಯೂ ಹೊಂದಿಕೊಳ್ಳಲು ಕಷ್ಟ, ಅನಿಸುವುದು.
ಕೊನೆಗೆ ಮದುವೆ ವಯಸ್ಸಿಗೆ ಬಂದ ಮಕ್ಕಳು ರಾಜೀವನ ಬಳಗದಲ್ಲೆ ಇಷ್ಟ ಪಟ್ಟು ಮದುವೆಯಾದರು. ಮೊಮ್ಮಕ್ಕಳು ಬಂದರು, ಆದರೂ ವಿನುತಾಳ ಮನಸ್ಸು ಮಾತ್ರ ಯಾವಾಗಲೂ ಕೊರಗುತ್ತಿತ್ತು. ನಮ್ಮ ನಮ್ಮ ಸಂಪ್ರದಾಯದಲ್ಲಿಯೇ ಮದುವೆ ಆದರೆ ಚೆನ್ನಾಗಿತ್ತು ಅನಿಸುವುದು.
ವಿನುತಾಳಿಗೆ ರಾಜೀವ ಎಲ್ಲಿ ಹೋಗಲಿ, ಬರಲಿ ಸೀರೆ ಒಡವೆ ಯಾವುದಕ್ಕೂ ಕೊರತೆ ಮಾಡಿರಲಿಲ್ಲ. ಆದರೆ ಅವರ ಮನೆ ಪದ್ಧತಿಯಂತೆ ತಿನ್ನುವುದು, ಕುಡಿಯುವುದು ಬಿಡುತ್ತಿರಲಿಲ್ಲ. ಇವಳಿಗೆ ಅಲ್ಲಿ ಅವರ ತರಹ ಹೊಂದಿಕೊಳ್ಳಲು ಆಗಲಿಲ್ಲ.
ಅದರಿಂದ ಅವಳ ಮನಸ್ಸು ಮಾತ್ರ ಹೇಳುತ್ತಿತ್ತು. ತಾನು ಅಲ್ಲಿಯೂ ಸಲ್ಲದವಳು, ಇಲ್ಲಿಯೂ ಸಲ್ಲದವಳು ಅಂತ.
ಏನೇ ಆಗಲಿ ಪ್ರೀತಿಸಿ ಮದುವೆಯಾಗಿದ್ದೀನಿ, ದೇವರು ನನಗಾಗಿ ಸೃಷ್ಟಿಸಿದ ಪಾತ್ರವಿದು, ಆಯಸ್ಸು ಮುಗಿಯುವವರೆಗೆ ಹೀಗೆ ಬದುಕಿ ಬಿಡೋಣ ಅಂತ ಯೋಚಿಸುತ್ತಿದ್ದಳು.
ಮನೆಯಲ್ಲಿ ಮಗ ಸೊಸೆ, ಮಗಳು ಅಳಿಯ ಅವರ ಗೆಳೆಯರು ಹಾಗೂ ರಾಜೀವ ಅವನ ಗೆಳೆಯರು ಎಲ್ಲಾ ಸೇರಿ ಪದೆ ಪದೆ ಟ್ರಿಪ್, ಪಾರ್ಟಿ ಅಂತೆಲ್ಲಾ ಹೋಗುವರು, ಇವಳು ಸಹ ಹೋಗಲೆಬೇಕಿತ್ತು, ಹೆಚ್ಚು ಕಡಿಮೆ ಅವರೆಲ್ಲಾ ಒಂದೇ ರೀತಿಯವರು, ತುಂಬಾ ಸಂಪ್ರದಾಯದಲ್ಲಿ ಬೆಳೆದ ವಿನುತಾಳಿಗೆ ಸರಿ ಬರುವುದಿಲ್ಲ.
ಯಾರಿಗೂ ಮನದ ಬೇಗುದಿಯ ತೋರಗೊಡದೆ ನಗು ಮುಖವಾಡ ಹಾಕಿ ಓಡಾಡುವಳು. ಅದಕ್ಕೆ ಒಮ್ಮೊಮ್ಮೆ ಅನಿಸುವುದು, ಬದುಕಿನಲ್ಲಿ ಹಿಂದೆ ಹೋಗಿ ಸರಿಪಡಿಸುವಂತಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು. ಅಪ್ಪನ ಪ್ರೀತಿಯ ಮಗಳಾಗಿ ಅಮ್ಮನ ಬೆಚ್ಚನೆಯ ಮಡಿಲಲ್ಲಿ ಇರಬಹುದಿತ್ತು ಅಂತ.
ಸವಿತಾ ರಮೇಶ