ನೋ ಕಾಂಪ್ರಮೈಸ್ ಎನಿಮೋರ್

ನಮ್ಮ ಬದುಕು ನಮ್ಮದು

ProfileImg
07 Jun '24
10 min read


image

"ನೋ ಕಾಂಪ್ರಮೈಸ್ ಎನಿಮೋರ್"

"ನಾಳೆ ಸಂಜೆ ಏಳ್ ಗಂಟೆಗಾ? ಸರಿ ಸರಿ. ಒಂದ್ ಕೆಲ್ಸ ಮಾಡ್ತೀವಿ ನಾವೇ ನಿಂ ಆಪೀಸತ್ರ ಬಂದ್ಬಿಡ್ತೀವಿ. ಆಗ್ಬೋದಾ?"

"........."

“ಹೂ, ಹೌದು ಹೌದೌದು ಎರಡ್ ಸೀಟು. ನಾನು ನನ್ ವೈಫ಼ು ಅಷ್ಟೆ. ಓಕೆ ಓಕೆ. ಥ್ಯಾಂಕ್ಸ್.” ಎನ್ನುತ್ತಾ ಸತ್ಯಮಿತ್ರ ಅವರ ಹೆಂಡತಿಯಿದ್ದ ಕೋಣೆಗೇ ಬಂದರು. ಕಲ್ಪನಾ, ಐದು ದಿನದ ಕೊಡೈಕೆನಾಲ್ ಪ್ರವಾಸಕ್ಕಾಗಿ ಬಟ್ಟೆ ಜೋಡಿಸುತ್ತಿದ್ದವರು, ಗಂಡನ ಕಡೆ ಪ್ರಸನ್ನ ಮುಖಭಾವದಲ್ಲಿ ಕೇಳಿದಳು.

"ಏನಂತೆ ರೀ? ಎಷ್ಟೊತ್ತಿಗೆ ಹೊರ್ಡೋದು"?

ಪೋನನ್ನು ಚಾರ್ಜರ್ಗೆ ಕನೆಕ್ಟ್ ಮಾಡುತ್ತಾ ಸತ್ಯಮಿತ್ರ   " ನಾಳೆ ರಾತ್ರಿ ಎಂಟ್ ಗಂಟೆ ಅಂತೆ ಕಲ್ಪಾ... ಏಳಕ್ಕೆಲ್ಲಾ ಟ್ರಾವಲ್ ಆಪೀಸ್ ಹತ್ರಾನೇ ಬನ್ನಿ ಅಂದ್ರು ಗೋವಿಂದಯ್ಯ" ಅಂದವರೇ, ಹೆಂಡತಿ ಪ್ಯಾಕ್ ಮಾಡಲು ಜೋಡಿಸಿಟ್ಟುಕೊಂಡಿದ್ದ ಸೀರೆಗಳನ್ನು ನೋಡಿ,

"ಏ...ಇದೇನ್ ಕಲ್ಪಾ? ಸೀರೆ ತರ್ತಿದೀಯಾ? ನಾವ್ ಹೋಗ್ತಿರೋದು ಕೊಡೈಕೆನಾಲ್ ಗೆ‌. ಟ್ರೆಕ್ಕಿಂಗ್ ಎಲ್ಲಾ ಇರತ್ತೆ. ದೇವ್ರಿಲ್ಲ ದಿಂಡ್ರಿಲ್ಲ ಅಲ್ಲಿ. ಚೂಡಿದಾರನೇ ಸರಿಯಾಗ್ತಿತ್ತು." ಅಂದರು ಆಕ್ಷೇಪಿಸುತ್ತಾ.

"ನೀವೇನಾ ಹೀಗ್ ಹೇಳ್ತಿರೋದು? ನಿಜ್ವಾಗ್ಲೂನಾ...? ಅಂದಳು ಕಲ್ಪನಾ ಆಶ್ಚರ್ಯದಿಂದ. 

"ಅರೆ ಅದ್ಯಾಕ್ ಹಾಗ್ ಕೇಳ್ತೀಯ ಕಲ್ಪಾ? ಇಷ್ಟ್ ದಿನ ಯಾರ್ಯಾಗೋಸ್ಕರಾನೋ ಹೇಗೋ ದಿನ ದೂಡಿದ್ದಾಯ್ತು. ಈವಾಗೇನ್ ಮುಲಾಜು? ನಿಂಗೇನ್ ಇಷ್ಟನೋ ಹಾಗೇ ಮಾಡು" ಅಂದರು.

ಈ ಮಾತು ಕೇಳುತ್ತಲೇ, ಹಲವು ವರ್ಷಗಳಿಂದ ಅದುಮಿಟ್ಟಿದ್ದ ಮನದಾಳದ ಆಸೆಯೊಂದು ಕಲ್ಪನಾಳನ್ನು ಕಾಡಲು ಶುರುವಿಟ್ಟಿತು.

"ರೀ.. ಎರಡ್ಮೂರ್ ವರ್ಷದ್ ಹಿಂದೆ ಒಂದ್ ಜೀನ್ಸ್ ಪ್ಯಾಂಟ್ ತಂಗೊಂಡಿದ್ದೆ. ಅದ್ನ ಈ ಸಲ ಟ್ರಿಪ್ನಲ್ಲಿ ಹಾಕ್ಕೊಳ್ಳಾ?" ಅಂದಳು‌ ಹಿಂಜರಿಕೆಯಿಂದಲೇ. 

"ಓ ಅದ್ಕೇನಂತೆ ಹಾಕ್ಕೋ... ಎಲ್ಲಿ ಒಂದ್ಸಲ ಹಾಕೊಂಡ್ ತೋರ್ಸು. ಹೇಗ್ ಕಾಣ್ತೀಯೋ ನೋಡಣ" ಅಂದರು ಸತ್ಯಮಿತ್ರ. 

ನಾಚುತ್ತಲೇ " ಬಂದೆ ಇರೀ" ಅನ್ನುತ್ತಾ ಅಟ್ಟದ ಮೇಲಿಟ್ಟಿದ್ದ,ತಾನು ತುಂಬಾ ಇಷ್ಟಪಟ್ಟು ಫ಼ಾರಿನ್ ಟೂರಿಗೆ ಹೋದಾಗ ಹಾಕ್ಕೋಳ್ಳೊಕೆ ಅಂತ ತಂದಿಟ್ಟುಕೊಂಡಿದ್ದ ಪ್ಯಾಂಟ್ ತೆಗೆದು‌, ಅದಕ್ಕೊಪ್ಪುವ ಪರ್ಪಲ್ ಟಾಪ್ ಧರಿಸಿ ಗಂಡನೆದುರಿಗೆ ಬಂದಳು ಕಲ್ಪನಾ.

ಸತ್ಯಮಿತ್ರರಿಗೆ ತಾವು ಮೊದಲ ಬಾರಿಗೆ ಕಾಲೇಜಿನಲ್ಲಿ ಕಲಿಯುತ್ತಿದ್ದ ಕಲ್ಪನಾಳನ್ನು ನೋಡಿದ್ದು ನೆನಪಾಯ್ತು.  "ಫ಼ಸ್ಟ್ ಟೈಂ ನಿನ್ ನೋಡ್ದಾಗ ಹೇಗ್ ಕಾಣ್ತಿದ್ಯೋ ಈಗ್ಲೂ ಹಾಗೇ ಇದೀಯ" ಅಂದರು ಅಭಿಮಾನದಿಂದ.

***

 ನಿಜವೇ! ಕಲ್ಪನಾ‌ ಹಾಸ್ಟೆಲ್ನಲ್ಲಿ ಓದುತ್ತಿದ್ದ ಹುಡುಗಿ. ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡಿದ್ದ ಕಲ್ಪನಾಳನ್ನು ಅವಳ ಸೋದರಮಾವ ಹಾಸ್ಟೆಲ್ ಸೇರಿಸಿ ಕಲಿಸುತ್ತಿದ್ದರು. ಅಜ್ಜಿಯ ಮುದ್ದಿನ ಮೊಮ್ಮಗಳಾಗಿದ್ದ ಕಲ್ಪನಾ ತೆಳ್ಳಗೆ ಬೆಳ್ಳಗೆ ಮುದ್ದಾಗಿದ್ದಳು. ಬ್ಯಾಸ್ಕೆಟ್ ಬಾಲ್ ಟೀಂ ನಲ್ಲಿ ಹೆಸರು ಗಳಿಸಿದ್ದ ಕಲ್ಪನಾ ಕಾಲೇಜು ಓದುವ ಕಾಲದಲ್ಲೆಲ್ಲಾ ಪ್ಯಾಂಟ್ ಟೀ-ಶರ್ಟ್ ಧರಿಸುತ್ತಿದ್ದಳು‌. ಸೋದರಮಾವನ ಸ್ನೇಹಿತರಾಗಿದ್ದ ಸತ್ಯಮಿತ್ರರ ತಂದೆ ಒಮ್ಮೆ ಕಲ್ಪನಾಳನ್ನು ನೋಡಿದ್ದೇ ತಮ್ಮ ಮಗನಿಗೆ ಇವಳೇ ತಕ್ಕವಳು ಎಂದು ನಿರ್ಧರಿಸಿಬಿಟ್ಟಿದ್ದರು. ಬುದ್ದಿ ಬಂದಾಗಿನಿಂದಲೂ ಒಬ್ಬಂಟಿಯಾಗಿಯೇ ಬದುಕು ಕಳೆದಿದ್ದ ಕಲ್ಪನಾ 9 ಜನ ಇದ್ದ ತುಂಬು ಕುಟುಂಬಕ್ಕೆ 10ನೆಯವಳಾಗಿ ದೊಡ್ಡಮನೆಯ ಹಿರಿಸೊಸೆಯಾಗಿ ಬಂದಿದ್ದಳು‌‌‌. ಅಜ್ಜ-ಅಜ್ಜಿಯ ಜೊತೆಗೆ ಮಾವ, ಅತ್ತೆ,  ಚಿಕ್ಮಾವ ಚಿಕ್ಕತ್ತೆ ಅವರ ಇಬ್ಬರು ಮಕ್ಕಳು, ಸತ್ಯಮಿತ್ರ ಮತ್ತೀಗ ಕಲ್ಪನಾ. ಅದು‌ ತುಂಬು ಕುಟುಂಬ. ಸತ್ಯಮಿತ್ರ ಅವರ ಅಪ್ಪ ಅಮ್ಮನಿಗೆ ಒಬ್ಬನೇ ಮಗನಾದರೂ ಚಿಕ್ಕಪ್ಪನ ಮಗ ಮತ್ತು ಮಗಳಿಗೆ ಹಿರಿಯಣ್ಣನಾಗಿ ಎಲ್ಲಾ ಜವಾಬ್ದಾರಿ ಹೊತ್ತುಕೊಂಡಿದ್ದರು‌. ಇವರಿಗೆ ಮದುವೆಯಾದಾಗ ಇನ್ನೂ ಸ್ಕೂಲು ಕಲಿಯುತ್ತಿದ್ದ ಅಜಯ್ ಮತ್ತು ಅರ್ಚನಾಗೆ ಹೊಸ ಅತ್ತಿಗೆ ತುಂಬಾ ಇಷ್ಟವಾಗಿಬಿಟ್ಟಿದ್ದರು. ಮದುವೆಯಾದ ಹೊಸತರಲ್ಲಿ ಒಮ್ಮೆ ಜೀನ್ಸ್ ಪ್ಯಾಂಟ್ ತೊಟ್ಟಾಗ ಸತ್ಯಮಿತ್ರರೇ, "ಕಲ್ಪಾ ಇನ್ಮೇಲೆ ಈ ಡ್ರೆಸ್ ಎಲ್ಲಾ ಬೇಡ ಅನ್ಸತ್ತೆ. ಮನೇಲಿ ಒಬ್ರಲ್ಲ ಅಂತ ಆರ್ ಜನ ಹಿರಿಯರಿದ್ದಾರೆ. ಅಜಯ್ ಅರ್ಚನಾ ಇಬ್ರೂ ಇನ್ನೂ ಚಿಕ್ಕೋರು. ನಮ್ಮನ್ನ ನೋಡಿ ಅವ್ರು ಬೆಳೀಬೇಕು. ಏನಾದ್ರೂ ಅಡ್ಡ ಮಾತು ಬಂದ್ರೆ ಸುಮ್ನೆ ಎಲ್ಲರ್ ಮನಸ್ಸೂ ಕಹಿಯಾಗುತ್ತೆ." ಅಂತೆಲ್ಲಾ ಹೇಳಿದ್ದರಿಂದ ತುಂಬಾ ಸೂಕ್ಷ್ಮ ಮನಸ್ಸಿನ ಕಲ್ಪನಾ ಅಂದಿನಿಂದ ಸೀರೆ ಮಾತ್ರ ಉಡಲು ಅಭ್ಯಾಸ ಮಾಡಿಕೊಂಡಿದ್ದಳು.

ಬಿಎಸ್ಸಿ ಮುಗಿಸಿದ್ದ ಕಲ್ಪನಾ ಎಂಎಸ್ಸಿ ಓದುತ್ತೇನೆ ಅಂದಾಗ "ಈಗೇನಮ್ಮಾ ಅಂಚೇನಲ್ಲೇ ಓದ್ಬೋದಂತಲ್ಲ. ಹಾಗೇ ಮಾಡು"  ಅಂದಿದ್ದರು ಮಾವ. ಮನೆಯ ಎಲ್ಲರ ಅವಶ್ಯಕತೆಗಳನ್ನೂ ನೋಡಿಕೊಳ್ಳುತ್ತಾ ಹೇಗೋ ಸಮಯ ಹೊಂದಿಸಿ ಓದಿ ಎಂಎಸ್ಸಿ ಪ್ರಥಮ‌ ದರ್ಜೆಯಲ್ಲಿ ಪಾಸು ಮಾಡಿದ್ದಳು. ಲೆಕ್ಚರರ್ ಆಗಿ ಎಲ್ಲಾದರೂ ಕೆಲಸಕ್ಕೆ ಸೇರುವ ಆಸೆಯಿದ್ದರೂ ಯಾರು ಏನಂತಾರೋ ಎಂಬ ಅಳುಕಿನಿಂದಲೇ ಅತ್ತೆಯ ಬಳಿ ಒಮ್ಮೆ ಹೇಳಿದ್ದಳು. "ಕಲ್ಪನಾ ಮದ್ವೆಯಾಗಿ ಮೂರ್ ವರ್ಷ ಕಳೀತು. ನಾವು ಮೊಮ್ಮಗುನ ನೋಡ್ಬೇಕು ಅಂತ ಕಾಯ್ತಾ ಇದೀವಿ. ಅದೊಂದಾಗ್ಲಿ, ಆಮೇಲೆ ಇದಕ್ಕೆಲ್ಲಾ ಸಮಯ ಹೊಂದಿದ್ರೆ ಮಾಡುವಂತೆ" ಅಂದಿದ್ದರು.

ಅತ್ತೆಯ ಆಸೆಯಂತೆ ಮರುವರ್ಷವೇ ವಿಶ್ವಾಸ್ ಹುಟ್ಟಿದ್ದ. ಅವನ ಲಾಲನೆ ಪಾಲನೆ ಅಂತ ಎರಡು ವರ್ಷ ಕಳೆಯುವಷ್ಟರಲ್ಲಿ ಅಜಯ್-ಅರ್ಚನಾ ತಾಯಿಯನ್ನು ಕಳೆದುಕೊಳ್ಳುವಂತಾಯ್ತು. ಈಗ ಮಗು ವಿಶು ಜೊತೆಗೆ ಅಜಯ್ ಮತ್ತು ಅರ್ಚನಾ ಕೂಡ ಪ್ರತಿಯೊಂದಕ್ಕೂ ಕಲ್ಪನಾಳನ್ನೇ ಅವಲಂಬಿಸುವಂತಾಯ್ತು. ಅದೇ ವರ್ಷ ಅಜ್ಜನೂ ತೀರಿಕೊಂಡರು. ಅವರ ನಂತರ ಅಜ್ಜಿಯೂ... ಹೀಗೆ ಸಾಲಾಗಿ ಮನೆಯ ಹಿರಿಯರ ನಿರ್ಗಮನದಿಂದಾಗಿ ಸತ್ಯು ಮತ್ತು ಕಲ್ಪನಾ ಮನೆಗೇ ಅಂಟಿಕೊಂಡು ಇರಬೇಕಾಯ್ತು. ಒಮ್ಮೆ ತಿರುಪತಿ, ಮತ್ತೊಮ್ಮೆ ವಿಶೂನ ಅಕ್ಷರಾಭ್ಯಾಸಕ್ಕಾಗಿ ಶೃಂಗೇರಿ, ಎರಡು ಬಾರಿ ಅರ್ಚನಾಳ ಡ್ಯಾನ್ಸ್ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಹೋಗಿದ್ದು ಬಿಟ್ಟರೆ ಇನ್ನೆಲ್ಲೂ ಹೋಗಲಾಗಿರಲಿಲ್ಲ. 

ಮದುವೆಯಾಗಿ 29 ವರ್ಷಕ್ಕೆ ಈಗ ಸತ್ಯಮಿತ್ರ ಮತ್ತು ಕಲ್ಪನಾ ಇಬ್ಬರೂ ಸ್ವತಂತ್ರರಾಗಿದ್ದಾರೆ. ಅರ್ಚನಾ ಮದುವೆಯಾಗಿ ಗಂಡನ ಮನೆ ಸೇರಿದ್ದರೆ, ಅಜಯ್ ಮಸ್ಕತ್ ನಲ್ಲಿ ಕೆಲಸದಲ್ಲಿದ್ದಾನೆ. ಮೂರು ತಿಂಗಳ ಹಿಂದೆಯಷ್ಟೆ ಸತ್ಯಮಿತ್ರರ ಚಿಕ್ಕಪ್ಪನೂ ತೀರಿಕೊಂಡಿದ್ದಾರೆ. ವಿಶ್ವಾಸ್ ಹೈದ್ರಾಬಾದು ಮೂಲದ ಅನನ್ಯಳನ್ನು ಪ್ರೀತಿಸಿ ಕಳೆದ ತಿಂಗಳಷ್ಟೆ ಹಠಮಾಡಿ ಮದುವೆಯಾಗಿದ್ದಾನೆ. ಮಧುಚಂದ್ರದ ಗುಂಗಲ್ಲಿ ಅಂಡಮಾನಿಗೆ ತೆರಳಿರುವ ನವದಂಪತಿಗಳು ಇನ್ನೇನು ಕೆಲವೇ ದಿನಗಳಲ್ಲಿ ವಾಪಸ್ಸಾಗಲಿದ್ದಾರೆ. ಚಿಕ್ಕಪ್ಪನ ಮರಣಾ ನಂತರ ಮೂರು ತಿಂಗಳು ಎಲ್ಲೂ ಹೋಗಬಾರದೆನ್ನುವ ಶಾಸ್ತ್ರವಿದ್ದಿದ್ದರಿಂದ ಆ ಮೂರು ತಿಂಗಳ ಗಡುವು ಮುಗಿದ ಮರುದಿನವೇ ಹೆಂಡತಿಯನ್ನು ಕರೆದುಕೊಂಡು ಕೊಡೈ ಟ್ರಿಪ್ ಹೊರಟಿದ್ದಾರೆ ಸತ್ಯಮಿತ್ರ. 

ಸತ್ಯಮಿತ್ರ ತುಂಬಾ ಮೆದು ಸ್ವಭಾವದವರು. ಕೂಗಿ ಕಿರುಚಿ ಹೇಳುವ ಗುಣ ಅವರದ್ದಲ್ಲ‌‌. ಎಲ್ಲವನ್ನೂ ವಿವರಿಸಿ ಸಂತೈಸುವ ಮಾತೃಹೃದಯಿ. ಕಲ್ಪನಾಳಿಗೆ ಎಲ್ಲವೂ ಇದ್ದಾಗ್ಯೂ ಏನೂ ಇಲ್ಲದ ಹಾಗೆ ಆಯಿತು ಎಂಬ ಅಳುಕು ಅವರನ್ನು ಆಗೀಗ ಕಾಡುತ್ತಲೇ ಇದೆ.  ಇಷ್ಟು ದಿನ ಇದ್ದ ಬಂಧಗಳೊಂದೂ ಈಗಿಲ್ಲ. ಇನ್ನು ಹಾಯಾಗಿ ಹೆಂಡತಿಯ ಎಲ್ಲಾ ಇಷ್ಟಗಳನ್ನೂ ಕೈಗೂಡಿಸಬೇಕು ಎಂದು ನಿರ್ಧರಿಸಿಕೊಂಡಿದ್ದಾರೆ. ಅದರ ಮೊದಲ ಹೆಜ್ಜೆಯೇ ಈ ಐದು ದಿನದ ಟ್ರಿಪ್ಪು. ಒಮ್ಮೆ ಸತ್ಯ ಅವರ ಸ್ನೇಹಿತರೆಲ್ಲಾ ಸೇರಿ ಮಲೇಷ್ಯಾ ಟೂರಿಗೆ ಹೊರಟಿದ್ದಾಗ ಕಲ್ಪನಾಳ‌ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅದೇ ಸಮಯದಲ್ಲಿ ಅರ್ಚನಾಳ ಮದುವೆ ಮಾತುಕತೆಯಾಗಿ ಒಂದೇ ತಿಂಗಲ್ಲಿ ಮದುವೆ ದಿನಾಂಕವೂ ನಿಶ್ಚಯವಾದಾಗ ಟ್ರಿಪ್ ಕ್ಯಾನ್ಸಲ್ ಮಾಡಲೇಬೇಕಾಯ್ತು. 

ಆ ಟ್ರಿಪ್‌ ಗಾಗಿ ಕೊಂಡಿದ್ದ ಜೀನ್ಸ್ ಮತ್ತು ಟಾಪ್ ಧರಿಸಲು ಸೂಕ್ತ ಸಮಯ ಈಗ ಬಂತು ಎಂದು ಕಲ್ಪನಾ ಸಂಭ್ರಮಿಸುತ್ತಿದ್ದರೆ, ಛೆ ಇಂತಾ ಈ ಹುಡುಗಿ ಎಷ್ಟೆಲ್ಲಾ ಆಸೆಗಳನ್ನ ಇಷ್ಟೂ ವರ್ಷ ಮೂಟೆ ಕಟ್ಟಿಟ್ಟು ಜೀವ್ನ ಮಾಡ್ಬೇಕಾಯ್ತಲ್ಲ ಅನ್ನಿಸಿತು ಸತ್ಯಮಿತ್ರರಿಗೆ.

"ಕಲ್ಪಾ...ಈ ಬಟ್ಟೆ ಚೆನ್ನಾಗಿದೆ. ಹೇಗೂ ನಾವ್ ನಾಳೆ ರಾತ್ರಿ ಹೊರ್ಡೋದು ತಾನೇ, ನಾಳೆ ಬೆಳಗ್ಗೆ ಒಂದಿಷ್ಟು ಶಾಪಿಂಗ್ ಹೋಗಣ? ಇನ್ನೆರಡು ಪ್ಯಾಂಟು ಮೂರ್ನಾಕ್ ಹೊಸ ಟಾಪ್ ಎಲ್ಲಾ ತಗೋಳಣ. ಅದಕ್ ಹೊಂದೋ‌ ತರದ್ದೊಂದ್ ಶೂ ಕೂಡ ತಗೋ... ಇದುವರ್ಗೂ ನಿನ್ ಜೊತೆ ಬಂದು ಏನಾದ್ರೂ ಕೊಡ್ಸಿ ಮಾಡೋಕೆ ಆಗೇ ಇರ್ಲಿಲ್ಲ. ನೋಡ್ತಾಯಿರು... ನಾಳೆಯಿಂದ ಹೊಸ ಪರ್ವ" ಅಂತ ನಕ್ಕರು. ಕಲ್ಪನಾಳಿಗೆ ಏನು ಹೇಳಬೇಕೋ ತೋಚಲಿಲ್ಲ. ಖುಷಿಯಿಂದ ಹೃದಯ ತುಂಬಿ ಬಂತು. ಅನ್ಯರ ಹಂಗಿನಲ್ಲೇ ಇದುವರೆಗಿನ ಬದುಕು ಸವೆಸಿದ ಕಲ್ಪನಾಳಿಗೆ ತನ್ನದೆಂಬ ದುಡಿಮೆಯೂ ಇಲ್ಲದ್ದರಿಂದ ಏನು ಕೇಳಲೂ ಸಂಕೋಚ ಕಾಡಿ ಅವಳ ಮೈ ಮನಸ್ಸು ಹಿಡಿಯಷ್ಟಾಗುತ್ತಿತ್ತು. ಇತ್ತೀಚೆಗೊಂದಿಷ್ಟು ಸ್ವಾತಂತ್ರ್ಯ ಸಿಕ್ಕಿತ್ತಾದರೂ ವಯಸ್ಸಾಗಿದ್ದ ಚಿಕ್ಕಮಾವ ಮತ್ತು ಅರ್ಚನಾಳ ಪುಟಾಣಿ ಕಂದನ ಜವಾಬ್ದಾರಿಯೂ ಇದ್ದಿದ್ದರಿಂದ ಆ ಸ್ವಾತಂತ್ರ್ಯದ ಅಳತೆ ಪುಟ್ಟದೇ ಆಗಿತ್ತು.ಈಗ ಇಷ್ಟು ವರ್ಷದ ತರುವಾಯ ದೊರೆತ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಅನುಭವಿಸಲು ಕಾತರಿಸುತ್ತಿದ್ದಾಳೆ ಕಲ್ಪನಾ. ಏನೆಲ್ಲಾ‌ ಮಾಡಬೇಕು, ಎಲ್ಲೆಲ್ಲಾ ಹೋಗಬೇಕು, ಯಾರನ್ನೆಲ್ಲಾ ಭೇಟಿಯಾಗಬೇಕು ಹೀಗೆ ಸಹಸ್ರ ಯೋಜನೆಗಳ‌ ಸರಮಾಲೆಯೇ ಮನಸ್ಸನ್ನು ತುಂಬಿಬಿಟ್ಟಿದೆ. ನಿದ್ರೆಯಲ್ಲೂ ನಗುವ ಹೆಂಡತಿಯ ಮುಖವನ್ನು ನೋಡಿದಾಗಲೆಲ್ಲಾ ಸತ್ಯಮಿತ್ರ ಇನ್ನಷ್ಟು ಚುರುಕಾಗುತ್ತಿದ್ದರು. ತಾವು ಮನಸ್ಸಲ್ಲೇ ಅವಳಿಗಾಗಿ ಮಾಡಬೇಕಾದ ಎಲ್ಲ‌ ವಿಷಯಗಳ ಪಟ್ಟಿ ಮಾಡುತ್ತಿದ್ದರು.

ಇತ್ತೀಚೆಗೆ ಪ್ರತಿನಿತ್ಯ 6:30 ರವೇಳೆಗೆ ಮನೆಯಲ್ಲಿನ ಚಿಕ್ಕಪುಟ್ಟ ಕೆಲಸ ಮುಗಿಸಿ, ಸತ್ಯಮಿತ್ರರನ್ನು ಎಬ್ಬಿಸಿ ಒಂದು ಗಂಟೆ ವಾಕಿಂಗ್ ಹೋಗುವ ಅಭ್ಯಾಸ ಮಾಡಿಕೊಂಡಿದ್ದರು ಕಲ್ಪನಾ. ಇದ್ದಕ್ಕಿದ್ದಂತೆ ದೊರಕುತ್ತಿರುವ ಖುಷಿ ತಾಳಲಾರದೆ ಅದೇ ಯೋಚನೆಗಳಲ್ಲಿ ಸರಿಯಾಗಿ ನಿದ್ರೆ ಬಾರದೆ ಇಂದು ತಡವಾಗಿ ಎದ್ದ ಕಲ್ಪನಾಳಿಗೆ ಸತ್ಯಮಿತ್ರರೇ ಪ್ರೀತಿಯಿಂದ ಬಿಸಿಬಿಸಿ ಕಾಫ಼ಿ ಮಾಡಿಕೊಟ್ಟರು. "ಅಯ್ಯೋ..ನಂಗೇನಾಗಿದೇರಿ! ಎಚ್ರಾನೇ ಆಗ್ಲಿಲ್ಲ.‌ ನೀವ್ ಕಾಫ಼ಿ ಮಾಡ್ಬಿಟ್ರಾ" ಎನ್ನುತ್ತಾ ಕಾಫ಼ಿ ಕಪ್ ತೆಗೆದುಕೊಂಡಳು ಕಲ್ಪನಾ ಅಪರಾಧಿ ಭಾವದಲ್ಲಿ. 

"ಇಷ್ಟ್ ವರ್ಷ ನೀನೇ ಮಾಡಿದ್ದಲ್ವಾ... ಬಿಡು ಕಲ್ಪಾ. 

ನಾನು ಎದ್ದು ನೋಡ್ದೆ.ನೀನು ಪ್ರಶಾಂತ್ವಾಗಿ ನಿದ್ದೆ ಮಾಡ್ತಿದ್ದೆ. ಅದಿಕ್ಕೆ ನಾನೇ ಹಾಲ್ ತಂದು ಡಿಕಾಕ್ಷನ್ ಹಾಕಿ ಕಾಫ಼ಿ ಮಾಡ್ದೆ. ಹೆಚ್ಗೆ ಪಾತ್ರೆಗಳೂ ಇರ್ಲಿಲ್ಲ. ಅದನ್ನೂ ತೊಳ್ದಿಟ್ಟಿದೀನಿ. ನೀನು ಬೇಗ್ನೆ ಸ್ನಾನ ಮುಗ್ಸಿ ದೇವ್ರ್ ದೀಪ ಹಚ್ಚು. ಹೊರಗೇ ತಿಂಡಿ ತಿಂದ್ಕೊಂಡು ಶಾಪಿಂಗ್ ಮುಗ್ಸ್ಕೊಂಡ್, ಮಧ್ಯಾನ ಊಟನೂ ಮಾಡ್ಕೊಂಡ್ ಬರಣ.. ಸಂಜೆ‌ ಕಾಪಿ ಬಟ್ಲೊಂದ್ ಬಿಟ್ರೆ ಇನ್ನೇನೂ ಕೆಲ್ಸ ಇಟ್ಕೋಬೇಡ. ರಾತ್ರಿ ಊಟ ಗೋವಿಂದಯ್ಯ ಆನ್ ದಿ ವೇನಲ್ಲೇ ಅರೇಂಜ್ ಮಾಡಿದಾರಂತೆ." ಎಂದರು. ಕಲ್ಪನಾಳಿಗೆ ಮಾತೇ ಹೊರಡಲಿಲ್ಲ. ಇದ್ದಕ್ಕಿದ್ದಹಾಗೇ 20ವರ್ಷ ಚಿಕ್ಕವರಾದಂತೆ ಸಂಭ್ರಮಿಸಿದರು. ಎದ್ದು ದಡಬಡಿಸಿ ಸ್ನಾನಕ್ಕೆ ಹೋದರು. ಸತ್ಯಮಿತ್ರರೇ ಗೀಸರ್ ಸ್ವಿಚ್ ಹಾಕಿರೋದನ್ನೂ ಗಮನಿಸಿ, ತನ್ನ ಆಸೆ ಕನಸು ಕೈಗೂಡುತ್ತಿರುವುದು ನಿಜವೇನಾ!? ಅನ್ನಿಸಿ ಒಮ್ಮೆ ಕೈ ಚಿವಿಟಿಕೊಂಡರು.

ಸ್ನಾನ ಮುಗಿಸಿ, ದೇವರ ದೀಪ ಬೆಳಗಿಸಿ, ಇನ್ನೊಂದು ರೌಂಡ್ ಕಾಪಿ ಮಾಡೋಣ ಎಂದುಕೊಂಡು ಅಡುಗೆಮನೆ ಹೊಕ್ಕಾಗಲೇ ಮನೆಯ ಕಾಲಿಂಗ್ ಬೆಲ್ ಸದ್ದಾಯಿತು. "ಯಾರಿರ್ಬಹುದು ಬೆಳ್ಬೆಳಗ್ಗೆ" ಅಂದುಕೊಳ್ಳುತ್ತಾ ಸತ್ಯಮಿತ್ರ ಬಾಗಿಲು ತೆಗೆದರು. 

***

ಹಂಡತಿಯ ಜೊತೆಗೆ ದೊಡ್ಡ ಎರಡ್ಮೂರು ಸೂಟ್ಕೇಸ್ ಹಿಡಿದು ಬ್ಯಾಕ್ ಪ್ಯಾಕ್ ಏರಿಸಿ, ಕೂಲಿಂಗ್ ಗ್ಲಾಸ್ ತೊಟ್ಟಿದ್ದ ಸುಪುತ್ರ ಎದುರಿಗೆ ನಿಂತಿದ್ದ. "ಸರ್ಪ್ರೈಸ್" ಎನ್ನುತ್ತಾ ನಗುತ್ತಾ, "ಏನಪ್ಪಾ. ಹೇಗಿದೀರ?" ಅಂದವನು ಅಪ್ಪನ ಉತ್ತರಕ್ಕೆ ಕಾಯದೆ "ಅನು, ಕೀಪ್ ಆಲ್ ಬ್ಯಾಗ್ಸ್ ಹಿಯರ್ ಓನ್ಲಿ, ಟೇಕ್ ಓನ್ಲಿ ಇಂಪಾರ್ಟೆಂಟ್ ತಿಂಗ್ಸ್" ಎಂದು ಮಹಡಿಯ ಮೆಟ್ಟಿಲೇರತೊಡಗಿದ. ಹಿಂದೇಯೇ ಅನನ್ಯ ಒಂದೇ ಒಂದು ಬ್ಯಾಗ್ ಹೊತ್ತು ನಡೆದಳು.

ಸತ್ಯಮಿತ್ರರ ಹತ್ತಿರ ಬಂದ ಕಲ್ಪನಾ ಆಶ್ಚರ್ಯಸೂಚಿಸುವಂತೆ ಮಗ ಸೊಸೆಯನ್ನು ನೋಡಿದಾಗ ಸತ್ಯಮಿತ್ರರಿಗೆ ಕಹಿ ಮೆದ್ದ ಅನುಭವವಾಯ್ತು. "ವಿಶು ವಾಪಸ್ ಬರ್ಬೇಕಿದ್ದಿದ್ದು 23ಕ್ಕೆ ಇವತ್ತಿನ್ನೂ 13‌. ಇದೇನ್ ಹೀಗಾಯ್ತಲ್ಲಾ" ಅಂದುಕೊಂಡರು. ಬೆರೆಸಿದ್ದ ಕಾಫ಼ಿ ಪಾತ್ರೆಯಲ್ಲೇ ಉಳಿಯಿತು. ಅಷ್ಟರಲ್ಲೇ ಕೆಳಗಿಳಿದು ಬಂದ ವಿಶು "ಅಮ್ಮಾ... ಹ್ಯಾಗಿದೀಯಮ್ಮಾ... ತುಂಬಾ ಸ್ಲಿಮ್ ಆಗ್ಬಿಟ್ಟಿದೀಯ. ಒಂದ್ ಕಪ್ ಬಿಸ್ಬಿಸಿ ಕಾಫ಼ಿ ಕೊಡಮ್ಮಾ" ಅನ್ನುತ್ತಾ ರಿಮೋಟ್ ಎತ್ತಿಕೊಂಡು ಟಿವಿ ಮುಂದೆ ಕೂತ ಮಗನನ್ನು ಉದ್ದೇಶಿಸಿ ಕಲ್ಪನಾನೇ ಕಳಿದರು. "ಅಲ್ವೋ ವಿಶು 23ಕ್ಕ್ ಬರ್ತೀನಿ ಅಂದಿದ್ದೆ, ಇದೇನ್ ಇವತ್ತೇ ಬಂದ್ಯಲ್ಲಾ.." ಅಂದರು. "ಅನು ಮನೆಗ್ ಹೋಗಿ ಒಂದ್ ಹತ್ ದಿನ ಇದ್ದು ಬರೋಣ ಅಂತ ಪ್ಲಾನ್ ಆಗಿತ್ತಮ್ಮ. ಅದಿಕ್ಕೆ 23ನೇ ತಾರೀಕ್ ವಾಪಸ್ ಬರ್ತೀನಿ ಅಂತ ಹೇಳಿದ್ದೆ. ಈಗ ನೋಡಿದ್ರೆ ಇವ್ರಪ್ಪ ಅಮ್ಮ ಇಬ್ರೂ ಶಿರಡಿಗ್ ಹೋಗಿದಾರೆ. ಅಜಂತಾ ಎಲ್ಲೋರ ನಾಸಿಕ್ ಎಲ್ಲಾ ನೋಡ್ಕೊಂಡ್ ಬರ್ತಾರಂತೆ. ಅದಿಕ್ಕೆ ಇಲ್ಲಿಗ್ ಬಂದ್ವಿ" ಅಂದ ಕೂಲಾಗಿ.

ಸತ್ಯಮಿತ್ರರಿಗೆ ಇನ್ನೂ ಕಸಿವಿಸಿಯಾಯ್ತು. "ಅಲ್ವೋ ವಿಶು. ಪ್ಲಾನ್ ಚೇಂಜಾಗಿದೆ ಅಂದ್ರೆ ಒಂದ್ ಪೋನ್ ಮಾಡಿ ಹೇಳೋದಲ್ವೇನೋ" ಅಂದರು. ಅಷ್ಟರಲ್ಲಿ ಅನನ್ಯಳೂ ಬಂದು ವಿಶು ಪಕ್ಕದಲ್ಲೇ ಕೂತಳು. ಇಬ್ಬರಿಗೂ ಕಾಫ಼ಿ ಸರಬರಾಜಾಯಿತು. ಅನನ್ಯ ಇಷ್ಟು ಸಮಯವಾದ ಮೇಲೆ "ಬಾಗುನ್ನಾರಾ ಅಂಕಲ್, ಆಂಟಿ ಮೀರು?" ಅಂದು ನಸುನಕ್ಕಳು. ಇದನ್ನು ಕೇಳುತ್ತಲೇ ಕಲ್ಪನಾಳಿಗೆ ವಿಚಿತ್ರ ವೇದನೆಯಾಯಿತು. ಕನ್ನಡ ಇಂಗ್ಲೀಷ್ ಬಿಟ್ಟರೆ ಅವಳಿಗೆ ಬೇರೆ ಭಾಷೆಯ ಗಂಧಗಾಳಿ ಗೊತ್ತಿಲ್ಲ. ಇದೇ ಕಾರಣಕ್ಕೆ ಅವಳು ಹೈದ್ರಾಬಾದ್ ಹುಡುಗಿ ಬೇಡ ಎಂದು ಹೇಳಿದ್ದಿದ್ದು. 

ಕಲ್ಪನಾಳ‌ ಕಣ್ಣಲ್ಲಿ ಕಂಡೂಕಾಣದ ನೀರಿನ ಪೊರೆಯೊಂದು ಮೂಡಿತು. ಕಲ್ಪನಾ-ಸತ್ಯಮಿತ್ರ ಇಬ್ಬರೂ ಸುಮ್ಮನೇ‌ ತಲೆ ಆಡಿಸಿದರು. 

ವಿಶು ಅಂಡಮಾನಿನ ಹವೆ, ಜನ, ಪ್ರಕೃತಿಯ ಬಗ್ಗೆ ಹೊಗಳಿ ಹೊಗಳಿ ಮಾತಾಡುತ್ತಿದ್ದ. ಅಲ್ಲಿನ ಊಟ ತಿಂಡಿಯ ಬಗ್ಗೆ ಹೇಳುವಾಗ ಮಾತ್ರ "ಅಮ್ಮಾ ಏನೇ ತಿಂದ್ರೂ ನಿನ್ ಕೈಯಡಿಗೆ ಇದ್ದ್ ಹಾಗ್ ಇರ್ಲಿಲ್ಲ ಬಿಡು. ಯಾವತ್ ಮನೆಗ್ ಬರ್ತೀನೋ, ನಿನ್ ಕೈಯಾರೆ ಊಟ ಯಾವಾಗ್ ಮಾಡ್ತೀನೋ‌ ಅನ್ಸ್ ಬಿಟ್ಟಿತ್ತು. ಇವ್ಳೇನೋ ಸೀಫ಼ುಡ್ ಎಂಜಾಯ್ ಮಾಡಿದ್ಲು. ಆದ್ರೆ ನಂಗಂತೂ ಏನೂ ಇಷ್ಟ ಆಗ್ಲಿಲ್ಲ. ವೆಜಿಟೇರಿಯನ್ಸ್ ಗೆ ಸ್ವಲ್ಪ ಕಷ್ಟಾನೇ" ಅಂದ. "ಅಮ್ಮಾ ಏನ್ ತಿಂಡಿ ಮಾಡ್ತಿದ್ಯಾ? ಅಕ್ಕಿ ರೊಟ್ಟಿ ಕಾಯ್ಚಟ್ನಿ ಮಾಡಮ್ಮ. ತುಂಬಾ ದಿನ ಆಯ್ತು‌ ತಿಂದು" ಅಂದ. ಇದೇ ಮಾತನ್ನು ಮೊದಲು ಯಾವಾಗಲಾದರೂ ಕೇಳಿದ್ದಿದ್ದರೆ ಕಲ್ಪನಾ-ಸತ್ಯ ಇಬ್ಬರೂ ಹಿಗ್ಗಿ ಹೀರೇಕಾಯಿಯಾಗುತ್ತಿದ್ದರೇನೋ. ಆದರೆ ಈಗ ಅವರ ಮನಸ್ಥಿತಿ ಬೇರೆಯೇ ಆಗಿದೆ. ಮುದ್ದಿನ ಮಗನ ಆಸೆಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೆ ಕಲ್ಪನಾ ಮೌನವಾಗಿ ಅಡುಗೆಮನೆ ಹೊಕ್ಕರೆ, ಸತ್ಯಮಿತ್ರರು ಇದ್ದ ವಿಷಯ ತಿಳಿಸಲು ಮುಂದಾದರು.

 "ಅದು ಇವತ್ತು ತಿಂಡೀನ ಹೋಟೆಲ್ಲಿಂದ ತರೋಣ ಅಂತ ಕಣೋ...ನಿಮ್ಮಿಬ್ರಿಗೂ ಏನ್ ಬೇಕು ಅಂತ ಹೇಳು ತಂದ್ಬಿಡ್ತೀನಿ. ಆಮೇಲೆ ನೀವೂ ಸ್ವಲ್ಪ ರೆಸ್ಟ್ ಮಾಡಿ ಮಧ್ಯಾನಕ್ಕೆ ನಿಮ್ಮಿಬ್ರಿಗೆ ಆಗೋ ತರ ಏನಾದ್ರೂ ಅನನ್ಯನೇ ಮಾಡ್ಲಿ. ನಾವು ಸ್ವಲ್ಪ ಹೊರಗ್ ಹೋಗೋದಿದೆ. ಮದ್ಯಾನ ಮೂರ್ ಗಂಟೇಗ್ ಬರ್ತೀವಿ. ಅಂದ್ ಹಾಗೇ ನಾವಿವತ್ ರಾತ್ರಿ ಕೊಡೈಕೆನಾಲ್ ಗೆ ಟ್ರಿಪ್ ಹೊರ್ಟಿದೀವಿ. ಅದೇ ನಂ ಗೋವಿಂದಯ್ಯ ಇಲ್ವಾ... ಅವ್ರ ಬೀಗಿತ್ತಿ ತಮ್ಮನ್ ಮಗಂದೇ ಟ್ರಾವಲ್ಸು. ಅವ್ರೂ ಅವ್ರ ವೈಫ಼ೂ ಬರ್ತಿದಾರೆ ನಂ ಜೊತೇಗೆ" ಅಂತೆಲ್ಲಾ ಸವಿವರವಾಗಿ ಹೇಳಿದರು. ವಿಶು ಇದನ್ನೆಲ್ಲಾ ಕೇಳಿ ದಂಗಾಗಿಬಿಟ್ಟ. "ಅಲ್ಲಪ್ಪಾ ನೀವ್ ನೀವೇ ಹೀಗೆಲ್ಲಾ ಡಿಸೈಡ್ ಮಾಡ್ಬಿಟ್ರೆ ಹೇಗೆ? ನನ್ನ ಒಂದ್ ಮಾತ್ ಕೋಳೋದ್ಬೇಡ್ವಾ? ಇದು ರೈನಿ ಸೀಸನ್ನು. ಅಲ್ಲಿ ಮಳೆ ಚಳಿ ಎಲ್ಲಾ ಜಾಸ್ತಿ. ಅದೂ ಅಲ್ದೇ ವಯಸ್ಸಾದೋರ್ಗೆ ಆ ಜಾಗ ಎಲ್ಲಾ ಇಷ್ಟ ಆಗಲ್ಲ. ಅಮ್ಮನ್ ನೋಡಿದೀಯಾ? ಅಷ್ಟೊಂದ್ ಚಿನ್ನ ಹಾಕೊಂಡ್ ಟ್ರಿಪ್ ಹೋಗ್ತಾರಾ ಯಾರಾದ್ರೂ? ನಾವ್ ಬರ್ದೇ ಇದ್ದಿದ್ರೆ ಎಲ್ಲಾ ಒಡ್ವೆ ಹಾಕೊಂಡ್ ಹೋಗಿ ಎಂತಾ ರಿಸ್ಕ್ ಆಗ್ತಿತ್ತಪ್ಪಾ. ಸದ್ಯಕ್ಕೆ ಬೇಡ. ಕ್ಯಾನ್ಸಲ್ ಮಾಡಿ. ನಾನೇ ಸರಿಯಾದ ಟೈಂ ನೋಡಿ ಬುಕ್ ಮಾಡಿ ಕಳ್ಸಿಕೊಡ್ತೀನಿ" ಅಂತೆಲ್ಲಾ ಇಷ್ಟುದ್ದ ಭಾಷಣ ಮಾಡಿದ. 

ತಕ್ಷಣ ಮಗನಿಗೆ ಏನೂ ಹೇಳಲೂ ತೋಚದೆ , ಒಂದೆರಡು ನಿಮಿಷ ಸುಮ್ಮನಿದ್ದ ಸತ್ಯಮಿತ್ರ "ನಮ್ಗೇನ್ ಅಷ್ಟೂ‌‌ ಗೊತ್ತಾಗಲ್ವೇನೋ ವಿಶು. ಚಿನ್ನ ಎಲ್ಲಾ ಮನೇಲಿಟ್ಟೆ ಹೋಗ್ತಿದ್ವಿ" ಅಂದರು. "ಏನಪ್ಪಾ ನೀವೂ...ಅದೂ ಸೇಫ಼್ ಅಲ್ಲ ಅಲ್ವೇನಪ್ಪಾ... ಅಷ್ಟ್ ದಿನ ಮನೆ ಬೀಗ ಹಾಕಿದ್ರೆ ಯಾರಾದ್ರೂ ಕಳ್ರು ಬಂದ್ರೆ ಏನ್ಮಾಡ್ಬೇಕಿತ್ತು? ಇದನ್ನೆಲ್ಲ ಸರೆಯಾಗಿ ಪ್ಲಾನ್ ಮಾಡ್ಬೇಕು. ಯಾರ್ಗಾದ್ರೂ ರಾತ್ರಿ ಮಲ್ಗೋಕೆ ವ್ಯವಸ್ಥೆ ಮಾಡ್ಬೇಕು. ಚಿನ್ನ ವಡ್ವೆ ಇಂಪಾರ್ಟೆಂಟ್ ಪೇಪರ್ಸ್ ಬೆಳ್ಳಿ ಸಮಾನು ಎಲ್ಲಾ ಲಾಕರ್ನಲ್ಲಿಡ್ಬೇಕು, ಒಂದ್ ಸಿಸಿ ಟಿವಿ ಹಾಕಿಸ್ಬೇಕು. ಇದೆಲ್ಲಾ ಮಾಡಿದ್ರೆ ಎಷ್ಟ್ ದಿನ ಎಲ್ಲಿಗೋದ್ರೂ ನೆಮ್ಮದಿಯಾಗಿರ್ಬೋದು. ನಿಮಗಿವೆಲ್ಲಾ ಅರ್ಥ ಆಗಲ್ಲ. ಸದ್ಯಕ್ಕೆ ಟ್ರಿಪ್ ಕ್ಯಾನ್ಸಲ್ ಮಾಡಿ. ಮುಂದೆ ನೋಡಣ" ಅಂದ. 

ಸತ್ಯಮಿತ್ರರಿಗೆ ಮನಸ್ಸು ಕಲಸುಮೇಲೋಗರವಾಯ್ತು. ಕ್ಯಾನ್ಸಲ್ ಮಾಡುವ ಮನಸ್ಸು ಅವರಿಗಿರಲಿಲ್ಲ. ಕಲ್ಪನಾ ಮಾತೇ ಆಡದೆ ಮೌನವಾಗಿ ರೊಟ್ಟಿತಟ್ಟುತ್ತಿದ್ದಾಳೆನ್ನುವುದು ಇನ್ನೂ ಹಿಂಸೆಗಿಟ್ಟುಕೊಂಡಿತು. ಅನನ್ಯ ಒಂದೂ ಮಾತಾಡದೆ ತನ್ನಷ್ಟಕ್ಕೆ ತಾನು ಪೋನೆತ್ತಿಕೊಂಡು ಮಹಡಿ ಏರಿದಳು. ವಿಶು ಯಾವುದೋ ಚಾನೆಲ್ ನೋಡುತ್ತಾ ಸೋಫ಼ಾದ ಮೇಲೆ ಕಾಲು ಚಾಚಿದ. "ವಿಶೂ... ಹೇಗೂ ನೀನು ಈಗ ಬಂದ್ಯಲ್ಲಾ. ಒಂದೈದ್ ದಿನ ಮನೆ ಕಡೆ ನೀನು ಅನನ್ಯ ನೋಡ್ಕೋಳಿ. ನಾವ್ ದುಡ್ ಕಟ್ಟಿದ್ದಾಗಿದೆ‌. ಇವತ್ ರಾತ್ರಿ ಹೊರಡ್ಬೇಕು. ಈವಾಗ್ ಕ್ಯಾನ್ಸಲ್ ಮಾಡಿದ್ರೆ ಅವ್ರೇನ್ ದುಡ್ ವಾಪಸ್ ಕೊಡ್ತಾರಾ? ಸುಮ್ನೆ ಯಾಕ್ ಹಣ ದಂಡ ಮಾಡೋದೇಳು?" ಅಂದರು ದೈನ್ಯತೆಯಿಂದ. "ಅಪ್ಪಾ ಅನನ್ಯಗೆ ಅಡ್ಗೆ ಪಡ್ಗೆ ಏನೂ ಬರಲ್ಲ‌ ಅಪ್ಪಾ... ನೀವಿಬ್ರೂ ನಾವ್ ಬರ್ತಿದ್ದಂಗೇ ಹೀಗ್ ಹೊರಟ್ರೆ ಅವ್ಳು ನೂರ್ ತರ ಅಂದ್ಕೊಂಡು ನೊಂದ್ಕೋತಾಳೆ. ಪ್ಲೀಸ್‌ ಅಪ್ಪಾ...ನಾನೇ ಗ್ಯಾರೆಂಟಿ ಕಳ್ಸ್ ಕೊಡ್ತೀನಿ. ಈವಾಗ್ ಬೇಡ ಅಪ್ಪಾ. ಸ್ವಲ್ಪ ಸೂಕ್ಷ್ಮ ಅರ್ಥ ಮಾಡ್ಕೋಳಿ" ಅವನೂ ಪಟ್ಟು ಸಡಿಲಿಸದೆ ನುಡಿದ. ಸತ್ಯಮಿತ್ರರಿಗೆ ಮಗನ ಅಂತರಂಗ ಅರ್ಥಮಾಡಿಕೊಳ್ಳಲು ಕಷ್ಟವೇ ಆಯ್ತು. ಹೆಂಡತಿಯನ್ನು ಎದುರಿಸಲು ಧೈರ್ಯ ಸಾಲಲಿಲ್ಲ. ತಿಂಡಿಯನ್ನೂ ತಿನ್ನದೇ, "ಕಲ್ಪಾ... ಇಲ್ಲೇ ಹೋಗ್ಬರ್ತೀನಿ, ಊಟಕ್ಕೆ ನನ್ ಕಾಯ್ಬೇಡ".  ಅನ್ನುತ್ತಾ ಹೆಂಡತಿಯ ಮುಖ ನೋಡಲೂ ತ್ರಾಣವಿಲ್ಲದೆ ಹೊರನಡೆದರು. 

ಮನೆಯಿಂದ ಮಾತಿಲ್ಲದೆ ಹೊರಟ ಗಂಡ ಸೆಂಟ್ರಲ್ ಲೈಬ್ರರಿಯಲ್ಲಿ ಯಾವುದೋ ದಪ್ಪ ಪುಸ್ತಕ ಹಿಡಿದು ಕೂತುಬಿಡುತ್ತಾರೆ ಎನ್ನುವುದು ಕಲ್ಪನಾಗೆ ತಿಳಿದಿತ್ತು. ಅಲ್ಲಿರೋ ಲೈಬ್ರರಿಯನ್ ಸಂಜೀವಯ್ಯ ಅವರಿಗೇನಾದ್ರೂ ಕಾಫ಼ಿ ತಿಂಡಿ ತರಿಸಿ ಕೊಡ್ತಾರೆ ಅಂತಲೂ ಗೊತ್ತಿತ್ತು. ಮಗನ ಆಣತಿಯಂತೆ ಅನ್ನ, ಪಪ್ಪು, ತಿಳಿಸಾರು, ದೊಡ್ಪತ್ರೆ ತಂಬುಳಿ, ಹುರಳಿಕಾಯಿ ಪಲ್ಯ, ಅರಳು ಸಂಡಿಗೆ, ಬಾಳಕ ಎಲ್ಲವನ್ನೂ ಸಿದ್ದಪಡಿಸಿ ಮಗ-ಸೊಸೆಗೆ ಕೈಯಾರೆ ಬಡಿಸಿದರು. ಸೊಸೆಯಂತೂ " ಆಂಟಿ ನಾಕು ಪಪ್ಪನಮು, ಕರ್ಡ್ ರೈಸೂ ಚಾಲು. ನೇನು ರಸಂನಿ ತಾಗ್ತಾನು" ಎಂದಳು. ಕಲ್ಪನಾ ಅರ್ಧಂಬರ್ದ ಅರ್ಥವಾಗಿದ್ದರಿಂದ ವಿಶು ಕಡೆ ನೋಡಿದಳು‌. "ಅವ್ಳು ಪಪ್ಪು ಅನ್ನ ಮೊಸರನ್ನ ತಿಂತಾಳಂತೆ. ತಿಳಿಸಾರ್ನ ಲೋಟಕ್ ಹಾಕ್ಕೊಂಡು ಕುಡೀತಾಳಂತೆ" ಎಂದು ವಿವರಿಸಿದ. ಸರಿ ಎಂಬಂತೆ ತಲೆಯಾಡಿಸಿದ ಕಲ್ಪನಾ ಗಂಡನ ದಾರಿ ಕಾಯುತ್ತಾ ಊಟವೇ ಮಾಡದೆ ಬಾಗಿಲ ಬಳಿಯೇ ಕೂತುಬಿಟ್ಟರು. ಸಂಜೆಯೆಲ್ಲಾ ಬಾರದೆ ರಾತ್ರಿ 7:30ಕ್ಕೆ ಬಂದಾಗ ಸತ್ಯ ಬೇರೆಯೇ ಆಗಿ ಕಂಡರು ಕಲ್ಪನಾಗೆ.  

***

ಟ್ರಿಪ್ ಕ್ಯಾನ್ಸಲ್‌ ಆದ ಬಗ್ಗೆ ಕಲ್ಪನಾ ಕೇಳಲೂ ಇಲ್ಲ. ಸತ್ಯಮಿತ್ರ ಹೇಳಲೂ ಇಲ್ಲ. ಮಗ ಸೊಸೆ ಮನೆಯಲ್ಲಿರಲಿಲ್ಲ.‌ ಬೇಗನೆ ಊಟ ಮುಗಿಸಿ ಹೆಚ್ಚು ಮಾತಾಡದೇ ಮಲಗಿಬಿಟ್ಟರು ಸತ್ಯಮಿತ್ರ.‌ ರಾತ್ರಿಯಿಡೀ ಏನೋ‌ ಗಹನವಾಗಿ ಯೋಚಿಸುತ್ತಿದ್ದರು. ನಿದ್ರೆ ಮಾಡುತ್ತಿದ್ದ ಮುದ್ದಿನ ಮಡದಿಯ ಕಡೆಗೊಮ್ಮೆ ನೋಡಿದರು. ನಿನ್ನೆಯವರೆಗೂ ಅವಳ ಮುಖದಲ್ಲಿದ್ದ ಮಂದಹಾಸ ಇಂದು ಮಾಯವಾಗಿದೆ ಅನ್ನಿಸಿತು. ಅವರ ಮನಸ್ಸು ಮಂಕಾಯಿತು.

ಬೆಳಗಾಯಿತು. ಬೇಗನೆ ಎದ್ದವರೇ ಎಲ್ಲಿಗೋ ಹೊರಟರು. ಸುಮಾರು 10 ಗಂಟೆಗೆ ವಾಪಸ್ಸಾದವರು ಏನೋ ನಿರ್ಧರಿಸಿಕೊಂಡವರಂತೆ ಮಗನನ್ನು ಕೂಗಿ ಕರೆದರು. ಅಮ್ಮ ಮಾಡಿದ ಗೊಜ್ಜವಲಕ್ಕಿ ಮೆಲ್ಲುತ್ತಿದ್ದ ವಿಶೂ ಅಪ್ಪನ ಹತ್ತಿರ ಬಂದ. 

"ವಿಶೂ ಇವ್ಳು ತುಂಗಾ ಅಂತ. ತುಂಬಾ ಚೆನ್ನಾಗ್ ಅಡ್ಗೆ ಮಾಡ್ತಾಳೆ. ನನ್ ಫ಼್ರೆಂಡ್ ಶ್ರೀಧರನ್ ಮನೇಲಿ ಮೂರು ವರ್ಷದಿಂದ ಅಡಿಗೆ ಮಾಡ್ತಿದಾಳೆ. ಆಂದ್ರ ಫ಼ುಡ್ ಕೂಡ ಮಾಡ್ತಾಳೆ" ಅಂದರು.

"ಯಾಕಪ್ಪಾ ಇದೆಲ್ಲಾ" ಎಂದ ಮಗನ ಮಾತನ್ನು ಅಲ್ಲಿಗೇ ತುಂಡರಿಸಿ “ಶ್ರೀಧರ್ ಗೊತ್ತಲ್ಲ ನಿಂಗೆ ಬ್ಯಾಂಕ್ ಮ್ಯಾನೇಜರ್... ಅವ್ರತ್ರ ಮಾತಾಡಿದೀನಿ. ಲಾಕರ್ ಅರೇಂಜ್ ಆಯ್ತು. ಎಲ್ಲಾ ಬೆಲೆಬಾಳೋ ಸಾಮಾನೂ ಜೋಪಾನ್ವಾಗ್ ಅಲ್ಲಿಟ್ಬಿಡ್ತೀನಿ”

ಮನೆಕೆಲ್ಸಕ್ಕೆ ಪಕ್ಕದ್ಮನೆಗ್ ಬರೋ ವನಜಂಗೆ ಹೇಳಿದೀನಿ. ಎಷ್ಟೊತ್ತಿಗೆ ಬೇಕಿದ್ರೂ ಬಂದು ಕೆಲ್ಸ ಮಾಡ್ಕೊಡ್ತಾಳೆ. ಸಿಸಿಟಿವಿ ನಾಲಕ್ ದಿನದಲ್ಲಿ ಇನ್ಸ್ಟಾಲ್ ಆಗುತ್ತೆ. ಏನೂ ಚಿಂತೆ ಮಾಡ್ಬೇಡ" ಅಂದವರು ತುಂಗಾ ಇಲ್ ಬಾಮ್ಮ. ಇವ್ಳು ನನ್ ಹೆಂಡ್ತಿ ಕಲ್ಪಾ ಅಂತ. ಅಡಿಗೆ ಮನೆ ತೋರಿಸ್ತಾರೆ. ಒಂದ್ಸಲ ನೋಡ್ಕೋಳಮ್ಮಾ" ಅಂದರು. 

ವಿಶು ಬಿಟ್ಟ ಕಣ್ಣು‌ ಬಿಟ್ಟ ಹಾಗೇ ನೋಡ್ತಾನೇ ಇದ್ದ. 

ಅನನ್ಯ ಏನೂ ಅರ್ಥವಾಗದೆ ವಿಶುನನ್ನು ತಿವಿದು "ವಾಟ್ಸ್ ಗೋಯಿಂಗ್ ಆನ್"? ವೈ ಆರ್ ಯು ಸೈಲೆಂಟ್?" ಅಂದಳು. "ವೈಟ್ ಈವನ್ ಐಯಾಮ್ ಕನ್ಪ್ಯೂಸ್ಡ್" ಅಂದ ಸಣ್ಣ ಧ್ವನಿಯಲ್ಲಿ.  ತುಂಗಾ ರಾತ್ರಿ 7ಗಂಟೆಗೆ ಬರುವುದಾಗಿ ತಿಳಿಸಿ ಹೋದಳು. 

"ಏನಪ್ಪಾ‌ ಇದೆಲ್ಲಾ? ಯಾಕ್ ಹೀಗಾಡ್ತಾ ಇದೀರ?" ಏನಾಗಿದೆ ನಿಮ್ಗೆ?" ಅಂದ ವ್ಯಸನದಿಂದ.

"ವಿಶೂ... ನಿಮ್ಮಮ್ಮ ಇಷ್ಟ್ ವರ್ಷ ಇದ್ದಿದ್ರಲ್ಲೇ ತೃಪ್ತಿ ಪಟ್ಕೊಂಡು ಮುಕ್ಕಾಲ್ವಾಸಿ ಜೀವ್ನ ಕಳ್ದೇ ಬಿಟ್ಟಿದಾಳೆ. ನಂಗೂ ರಿಟೈರಾಯ್ತು‌. ಎಲ್ಲಾ ಜವಾಬ್ದಾರಿನೂ ಒಂದಿಷ್ಟೂ ಕುಂದು ಕೊರತೆ ಇಲ್ಲದ ಹಾಗೆ ನಿಭಾಯಿಸಿದ್ದೀವಿ. ಇನ್ನಾದ್ರೂ ನಮ್ಮಷ್ಟಕ್ಕೆ ನಾವಿರೋಕೆ ಬಿಟ್ಬಿಡೋ. ಮದ್ವೆ ಆದ ದಿನದಿಂದ ನಮ್ಮಜ್ಜ ಅಜ್ಜಿ ಅಪ್ಪ-ಅಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅಜಯ್-ಅರ್ಚನಾ, ಈಗ ನೀನು ನಿನ್ ಹೆಂಡ್ತಿ ಹೀಗೇ ನಿಮ್ಮ ಇಷ್ಟ ಕಷ್ಟದಲ್ಲೇ ತನ್ ಖುಷಿ ಕಂಡ್ಕೊಂಡಿದಾಳೆ. ಅವಳಿಗೆ ನನ್ ಜೊತೆ ಮದ್ವೆಆದಾಗ ಬರೀ 21 ವರ್ಷ. 

ಅವತ್ತಿಂದ ಅಡಿಗೆ ಮನೇಲೇ ಇದ್ದಿದ್ದಾಯ್ತು. ತಾನು ತನ್ನ ಗಂಡ ತನ್ನ ಸಂಸಾರ ಅಂತ ಪುಟಾಣಿ ಕುಟುಂಬ ಅಂತ ಎಷ್ಟೋ‌ ಕನಸು ಕಟ್ಟಿದ್ಲು. ಪ್ರತೀ ಸಲ ಆ ಕನಸು ನುಚ್ಚುನೂರಾಗಿದೆ. ಈ ಸಲ ಖಂಡಿತ ನೋ ಕಾಂಪ್ರಮೈಸ್.‌ ಅವ್ಳಾಸೆ ಪಟ್ಟಹಾಗೇ ನಾವು ಟ್ರಿಪ್ ಹೋಗೇ ಹೋಗ್ತೀವಿ.

“ಆದ್ರೆ ಅಪ್ಪಾ.. ಆ ಬಸ್ ನಿನ್ನೇನೇ ಹೊರ್ಟೋಯ್ತಲ್ಲ”

"ನಿಜ. ನಿನ್ನೇನೇ ಕೊಡೈ ಬಸ್ ಹೊರ್ಟೋಯ್ತು.‌ ನಾನೀಗ ಕ್ಯಾಬ್ ಬುಕ್ ಮಾಡಿದೀನಿ. ಅದ್ರಲ್ಲಿ ಕೊಡೈಗೆ ಹೋಗಿ ಅಲ್ಲಿ ಗ್ರೂಪ್ ಜಾಯಿನ್ ಆಗ್ತೀವಿ. ಪ್ಲೀಸ್... ನಿನ್ ಆತಂಕಕ್ಕೆಲ್ಲಾ ನಾನ್ ಉತ್ರ ಹುಡ್ಕಿದೀನಿ. ನಮ್ ಬದುಕು ಸ್ವಲ್ಪ ನಮ್ಮಿಷ್ಟದ ಹಾಗೇ ಬದುಕೋಕೆ ಬಿಟ್ಬಿಡೋ. ನಮಗೂ ಸ್ವತಂತ್ರವಾಗಿರ್ಬೇಕು ಅನ್ಸಿದೆ. ಮತ್ತಷ್ಟು ದಿನ ಉಸಿರುಗಟ್ಕೊಂಡು ಇರೋದು ಖಂಡಿತ ಸಾದ್ಯ ಇಲ್ಲ.‌ಪ್ಲೀಸ್ ನಮ್ ಲೈಫ಼್ ನಮ್ ಖುಷಿ. ಹೀಗೇ ಇರ್ಬೇಕು ಅಂತ ನಾವ್ ಅಂದ್ಕೊಂಡಿದ್ದಾಗಿದೆ. ನಮ್ ಪಾಡಿಗ್ ನಮ್ಮನ್ ಬಿಟ್ಬಿಡೋ ವಿಶು ಪ್ಲೀಸ್..." ಅಂದು ಅಂಗಲಾಚಿದರು ಸತ್ಯಮಿತ್ರ. ವಿಶು ಏನೂ ಮಾತಾಡಲಿಲ್ಲ. 

ಕ್ಯಾಬ್ ಮನೆಯ ಮುಂದೆಯೇ ಬಂದು ನಿಂತಿತು. 15ನಿಮಿಷದಲ್ಲಿ ಕಲ್ಪನಾ ತಯಾರಾಗಿ ಲಗೇಜ್ ಹೊತ್ತು ಹೊರಬಂದಳು. ವಿಶು-ಅನನ್ಯ ಹ್ಯಾಪಿ ಜರ್ನಿ ಎಂದು ವಿಶ್ ಮಾಡಿದರು. ಧೂಳೆಬ್ಬಿಸುತ್ತ ಹೊರಟ ಕಾರಿನಲ್ಲಿ ಕೂತಿದ್ದ ಕಲ್ಪನಾ ಗಂಡನ ಕೈಹಿಡಿದು ತನ್ನ ಸ್ವಾತಂತ್ರ್ಯ ಹೋರಾಟದಲ್ಲಿ ಗಂಡ ತನ್ನನ್ನು ಗೆಲ್ಲಿಸಿಬಿಟ್ಟರೆಂಬ ಭಾವದಲ್ಲಿ ಕಣ್ಣು ಮುಚ್ಚಿಕೊಂಡರು. ಗಕ್ಕನೆ ಬ್ರೇಕ್ ಹಾಕಿದ್ದು ನೋಡಿ ದಿಗ್ಗನೆ ಕಣ್ಣು ಬಿಟ್ಟರೆ "ಬಾ ಕಲ್ಪಾ" ಎನ್ನುತ್ತಾ ಸತ್ಯ ಹೊರಗಡಿಯಿಟ್ಟರು. 'ಗ್ರೀನ್ ಆಪಲ್' ಎಂಬ ಮಾಲ್ನ ಎದುರು ನಿಂತಿತ್ತು ಕಾರು. ತನ್ನ ಕನಸಿಗೆ ಬಣ್ಣ ಹಚ್ಚುವ ಆಸೆಯೊಂದಿಗೆ ಕಲ್ಪನಾ ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ಹೆಜ್ಜೆಹಾಕಿದರು.

***

Category:Stories



ProfileImg

Written by Jyothi Prashanth