ಕಡಿಮೆಯಾದರೂ ಕೊನೆಯಾಗದಜೀತ



image

ಕಡಿಮೆಯಾದರೂ ಕೊನೆಯಾಗದಜೀತ

ಜೀತಎಂದರೆ ಕೈ ಮತ್ತು ಕಾಲುಗಳಿಗೆಕಬ್ಬಿಣದ ಸರಪಣಿಯನ್ನು ಹಾಕಿ ಗುಲಾಮರಂತೆ ದುಡಿಸಿಕೊಳ್ಳುವುದು ಎಂಬ ಭಾವನೆಯೇ ಹೆಚ್ಚು ಜನರಲ್ಲಿದೆ. ಆದರೆ ಜೀತ ಪದ್ದತಿಯೆಂದರೆ ಕೈ ಮತ್ತು ಕಾಲುಗಳನ್ನುಕಟ್ಟಿ ಹಾಕಿ ದುಡಿಸಿಕೊಳ್ಳುವುದು ಮಾತ್ರವಲ್ಲ. ಬದಲಾಗಿ ಯಾವುದೇ ವ್ಯಕ್ತಿ ಸಾಲ ಅಥವಾ ಅನಿವಾರ್ಯ ಕಾರಣಗಳಿಂದ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಸಾಲ ಕೊಟ್ಟವನ ಆಜ್ಞೆಯಂತೆ ಅವನು ಹೇಳಿದ ಕೆಲಸ ಮಾಡಿಕೊಂಡು ಜೀವನ ನಡೆಸುವುದೇ ಜೀತ ಪದ್ದತಿ. ಘೋರವಾದ ಮತ್ತು ಕಠಿಣ ಶಿಕ್ಷೆ ವಿಧಿಸುವ ಪದ್ದತಿ ಅಲ್ಲದಿದ್ದರೂ ಜೀತ ಪದ್ದತಿಯ ಲಕ್ಷಣ ಮತ್ತು ಸ್ವರೂಪಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರುತ್ತಿವೆ. ಬಡತನದಿಂದಾಗಿ ಒಂದೊತ್ತಿನ ಊಟಕ್ಕೂ ಪರಿತಪಿಸುವ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ದೈಹಿಕವಾಗಿ ಶೋಷಣೆ ಮಾಡುವ ಮೂಲಕ ಅವರಿಂದ ಕೆಲಸ ಮಾಡಿಸಿಕೊಳ್ಳುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ಮನುಷ್ಯ ಮನುಷ್ಯನ ಮೇಲೆಯೇ ದೌರ್ಜನ್ಯವೆಸಗುವ ಜೀತ ಪದ್ದತಿ ಅಮಾನವೀಯವಾದ ಮಾನವ ಹಕ್ಕು ಉಲ್ಲಂಘನೆಯಾಗಿದೆ. 

ಜೀತಪದ್ದತಿ ಬಲವಂತದ ದುಡಿಮೆಯಾಗಿದೆ. ಜೀತಗಾರರಿಗೆ ನಿರ್ದಿಷ್ಟ ಸಂಬಳ ಅಥವಾ ಭತ್ಯೆಗಳೇನೂ ಇರುವುದಿಲ್ಲ. ಅಂತೆಯೆ ನಿರ್ಧಿಷ್ಟ ಕೆಲಸದ ಅವಧಿಯೂ ಇರುವುದಿಲ್ಲ. ರಜೆ ಸೌಲಭ್ಯವಂತೂ ಇಲ್ಲವೇ ಇಲ್ಲ. ಹೆಣ್ಣು ಮಕ್ಕಳ ಮದುವೆ, ಆರೋಗ್ಯದ ಸಮಸ್ಯೆ, ಇದ್ದಕ್ಕಿದ್ದಂತೆ ಬರುವ ಅವಘಡಗಳಿಂದ ಮುಕ್ತರಾಗಲು ಮುಂಗಡವಾಗಿ ಮಾಲೀಕರಿಂದ ಪಡೆದ ಅಥವಾ ಸಾಲ ಮಾಡಿ, ಸಾಲ ಮತ್ತು ಬಡ್ಡಿ ಹಣ ತೀರಿಸುವುದಕ್ಕಾಗಿಯೂ ಭೂಮಾಲೀಕರು ಅಥವಾಲೇವಾದೇವಿಗಾರರು ಜೀತದಲ್ಲಿ ದುಡಿಸಿಕೊಳ್ಳುವುದು ಸಾಮಾನ್ಯ. ಎಷ್ಟೋ ಸಂದರ್ಭಗಳಲ್ಲಿ ಇಂತಹವರು ಕೇವಲ ಬಡ್ಡಿ ತೀರಿಸಲು ಜೀವನ ಪರ್ಯಂತ ದುಡಿಯುತ್ತಾರೆ. ಇವರ ಕಾಲಾನಂತರ ಅವರ ಮಕ್ಕಳೂ ಕೂಡ ಸಾಲ ತೀರಿಸಲಾಗದೆ ಜೀತವನ್ನು ಮುಂದುವರಿಸಬೇಕಾದ ಪರಿಸ್ಥಿತಿಯೂ ಇದೆ. ಹೆಚ್ಚಿನ ಪ್ರಕರಣಗಳಲ್ಲಿ ಕೆಲಸಗಾರರು ಪಡೆದಿರುವ ಮುಂಗಡ ಹಣ ಅಥವಾ ಸಾಲವನ್ನೇನೆಪ ಮಾಡಿಕೊಂಡು ಅವರ ಎಲ್ಲಾ ರೀತಿಯ ಸ್ವಾತಂತ್ರö್ಯವನ್ನು ಕಿತ್ತುಕೊಂಡು, ಮನುಷ್ಯರಂತೆ ಕಾಣದೆ ಮೃಗಗಳ ರೀತಿ ನಡೆಸಿಕೊಳ್ಳಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಇಡೀ ಕುಟುಂಬವೇ ಜೀತ ಪದ್ದತಿಯ ಕರಾಳತೆಗೆ ಒಳಗಾಗುವ ಸಾಧ್ಯತೆ ಕೂಡ ಇದೆ. ಜೀತ ಪದ್ದತಿಯಲ್ಲಿ ದುಡಿಯುವವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರಾಗಿದ್ದಾರೆ.

ಆಸ್ಟ್ರೇಲಿಯಾದದಿ ವಾಕ್ ಪ್ರೀ ಫೌಂಡೇಶನ್ ಪ್ರಕಟಿಸಿದ ಜಾಗತಿಕ ಜೀತ ಅಥವಾ ಗುಲಾಮಗಿರಿ ಸೂಚ್ಯಾಂಕ-೨೦೧೬ರಪ್ರಕಾರ ೧೬೭ ದೇಶಗಳ ಪೈಕಿ ಭಾರತವು ೫೩ನೇ ಸ್ಥಾನದಲ್ಲಿತ್ತು. ಪ್ರಸ್ತುತ ಜೀತಪದ್ದತಿಯೂ ಭಾರತದಾದ್ಯಂತ ಕಡಿಮೆಯಾಗಿರಬಹುದು ಆದರೆ ಸಂಪೂರ್ಣವಾಗಿ ನಾಶವಾಗಿಲ್ಲ. ಜೀತ ಪದ್ದತಿಯ ಸ್ವರೂಪ ಬದಲಾಗಿ ದಿಕ್ಕು ಬದಲಿಸಿರುವ ಆಧುನಿಕ ಜೀತ ಪದ್ದತಿಯ ಕುರಿತು ಸರ್ಕಾರ ಹಾಗೂ ಸಂಘ-ಸAಸ್ಥೆಗಳು ಸಾಕಷ್ಟುಜಾಗೃತಿ ಮೂಡಿಸಿದ್ದರೂ ಇಂದಿಗೂ ಭಾರತದಲ್ಲಿ ೧೮.೪ ಮಿಲಿಯನ್ಜೀತದಾಳುಗಳಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

ಜೀತಪದ್ದತಿ ನಿಯಂತ್ರಣಕ್ಕೆ ಬಂದಿದ್ದರೂ ಸ್ವತಂತ್ರ್ಯ ಬಂದು ೭೫ ವರ್ಷಗಳು ಪೂರೈಸಿದ್ದರೂಕೂಡ ಜೀತ ಪದ್ದತಿಯೆಂಬ ಅನಿಷ್ಠ ಬೇರೆ ಬೇರೆ ರೀತಿಗಳಲ್ಲಿ ಜೀವಂತವಾಗಿರುವುದನ್ನು ಕಾಣಬಹದು. ಇದನ್ನು ಕೆಲವು ಅಧ್ಯಯನಗಳು ಮತ್ತು ವರದಿಗಳು ಸಾಬೀತು ಮಾಡಿವೆ. ಇದು ಸಮಾಜದಲ್ಲಿನ ಅಸಮಾನತೆಗೆ ಹಿಡಿದ ಕೈಗನ್ನಡಿಯಾಗಿದೆ. ಡಿಸೆಂಬರ್ ೧೭ ಮತ್ತು ೧೮, ೨೦೧೧ರಂದು ವಿಕಾಸಸೌದದಲ್ಲಿ ನಡೆದ ಎರಡು ದಿನಗಳ ಜೀತ ಮತ್ತು ಬಾಲ ಕಾರ್ಮಿಕರ ಕುರಿತಾದ ಕಾರ್ಯಾಗಾರದಲ್ಲಿ ರಾಷ್ಟಿçÃಯ ಮಾನವ ಹಕ್ಕುಗಳಆಯೋಗದ ನಿಧೇಶಕರಾಗಿದ್ದ ಡಾ.ಸಂಜಯ್ ದುಬೇರವರುಮಾತನಾಡಿ ದಶಕಗಳ ನಂತರವೂ ನಮ್ಮ ದೇಶದಲ್ಲಿ ಜೀತ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗದಿರುವುದರ ಕುರಿತು ವಿಷಾಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಜೀತಪದ್ದತಿ ಕೇವಲ ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಬೆಂಗಳೂರಿನAತಹ ನಗರ ಪ್ರದೇಶಗಳಲ್ಲಿಯೂಇನ್ನೂ ಜೀವಂತವಾಗಿದೆ. ೨೦೧೭ರಲ್ಲಿ ಬೆಂಗಳೂರಿನ ಜಿಗಣಿಯ ಕಲ್ಲು ಕ್ವಾರಿಯೊಂದರಲ್ಲಿ ಜೀತ ಮಾಡುತ್ತಿದ್ದ ೧೧ ಮಂದಿಯನ್ನು ಸರ್ಕಾರಿಅಧಿಕಾರಿಗಳೇ ರಕ್ಷಣೆ ಮಾಡಿದ್ದರು. ನಗರಗಳಿಗೆ ದೂರದ ಊರುಗಳಿಂದ ಕಟ್ಟಡ ನಿರ್ಮಾಣ ಮತ್ತಿತರೆ ಕೆಲಸಗಳಿಗೆ ವಲಸೆ ಬರುವ ಕಾರ್ಮಿಕರ ಸ್ಥಿತಿ ಕೂಡ ಜೀತಕ್ಕಿಂತ ಭಿನ್ನವಾಗೇನೂ ಇಲ್ಲ. ಈಗ ಜೀತ ಪದ್ದತಿತನ್ನ ಮಗ್ಗುಲನ್ನು ಬದಲಾಯಿಸಿಕೊಂಡಿದ್ದು ಹೊಸ ರೂಪಗಳಲ್ಲಿ ಇನ್ನೂ ಜೀವಂತವಾಗಿದೆ. ಜೀತ ಪದ್ದತಿ ಇಂದಿಗೂ ಜೀವಂತವಾಗಿರುವುದಕ್ಕೆ ಪ್ರಮುಖ ಕಾರಣ ಮಾನವ ಕಳ್ಳ ಸಾಗಣೆ. ಇಂದು ಮಾನವ ಕಳ್ಳ ಸಾಗಣೆಯು ತನ್ನ ಬೇರುಗಳನ್ನು ತುಂಬಾ ಆಳವಾಗಿ ಚಾಚಿಕೊಂಡಿದೆ. ಈ ಕರಾಳ ದಂಧೆಯನ್ನುಕಾನೂನಿನ ಪ್ರಕಾರ ನಿಷೇಧಿಸಿದ್ದರೂ ಅದು ಮುಂದುವರೆಯುತ್ತಲೇ ಹೋಗುತ್ತಿದೆ. ಇದಕ್ಕೆ ಜಾತಿ ಪದ್ದತಿಯೂ ಕೂಡ ಸಹಕರಿಸುತ್ತಿದೆ.

ಗ್ರಾಮಾಂತರಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಮತ್ತು ಕಲ್ಲುಗಣಿಗಳಲ್ಲಿ ಜೀತಗಾರರು ದುಡಿಯುತ್ತಿದ್ದರೆ ನಗರಗಳಲ್ಲಿ ಕಾರ್ಮಿಕರನ್ನು ಮಾನವ ಕಳ್ಳಸಾಗಣೆಯ ಮೂಲಕ ಕರೆತಂದು ಹೋಟೆಲ್, ಜಪ್ಪಲಿ ಮತ್ತು ಶೂ ತಯಾರಿಕಾ ಉಧ್ಯಮಗಳಲ್ಲಿ, ಅಕ್ಕಿ ಗಿರಣಿ, ಪ್ಲಾಸ್ಟಿಕ್ ಕಾರ್ಖಾನೆ, ತಂಬಾಕು ಉತ್ಪನ್ನ ತಯಾರಿಕಾ ಘಟಕಗಳು, ಇಟ್ಟಗೆಗೂಡು, ಕಟ್ಟಡ ನಿರ್ಮಾಣ ಕಾಮಗಾರಿ ಮುಂತಾದ ಕೆಲಸಗಳಿಗೆ ಜೀತಕ್ಕೆ ದೂಡಲಾಗುತ್ತಿದೆ. ಭಾರತದ ಸಂವಿಧಾನ ಖಾತ್ರಿ ಪಡಿಸಿರುವ ಹಲವು ನಿರ್ಧಿಷ್ಟವಾದ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರö್ಯವನ್ನು ಒತ್ತೆ ಇಡುವಂತಹ ಕ್ರೂರ ಪದ್ದತಿ ಇದಾಗಿದ್ದು ಶಾರೀರಿಕ ದೌರ್ಜನ್ಯ, ನಿಂದನೆ, ಬಲವಂತ ಹಾಗೂ ಲೈಂಗಿಕ ನಿಂದನೆಯAತಹ ಘಟನೆಗಳು ನಡೆಯುವುದುಸಾಮಾನ್ಯವಾಗಿರುವುದರಿಂದಜೀತ ಪದ್ದತಿ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. 

ಸಂವಿಧಾನದ೧೨೩ನೇ ವಿಧಿಯಲ್ಲಿ ಬಲವಂತದ ದುಡಿಮೆಯನ್ನು ನಿಷೇಧಿಸಲಾಗಿದೆ. ಜೀತ ಪದ್ದತಿಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸರ್ಕಾರವು ಜೀತ ಕಾರ್ಮಿಕ (ನಿರ್ಮೂಲನಾ) ಕಾಯ್ದೆ-೧೯೭೬ನ್ನು ಜಾರಿ ಮಾಡಿದ್ದರೂ ಕೂಡ ಜೀತ ಪದ್ದತಿಯನ್ನು ಇಂದಿಗೂ ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗಿಲ್ಲ. ಸಂವಿಧಾನದ ೨೫೬ನೇ ಪರಿಚ್ಚೇದದಲ್ಲಿ ಬಾಲ ಕಾರ್ಮಿಕ ಪದ್ದತಿ, ಜೀತ ಪದ್ದತಿ ಕಾಯ್ದೆ ಸೇರಿದಂತೆ ಕಾನೂನುಗಳನ್ನು ಅನುಷ್ಠಾನಗೊಳಿಸುವುದು ರಾಜ್ಯ ಸರ್ಕಾರಗಳ ಹೊಣೆ ಎಂದು ಸ್ಪಷ್ಟವಾಗಿ ವಿವರಿಸಲಾಗಿದೆ. ಅಲ್ಲದೆ ಇವುಗಳನ್ನು ಪಾಲಿಸಲು ಸಂಬಧಪಟ್ಟವರು ವಿಫಲವಾದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕೂಡ ಹೇಳಲಾಗಿದೆ. 

ಜೂನ್, ೨೦೦೦ದಲ್ಲಿ ಬೆಳಕಿಗೆ ಬಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿ ಜೀತ ಪ್ರಕರಣದ ನಂತರ ಕರ್ನಾಟಕ ಸರ್ಕಾರ ಜೀತ ಪದ್ದತಿಯ ಕುರಿತು ಎಚ್ಚೆತುಕೊಂಡಿತು. ಹಂಗರಹಳ್ಳಿ ಪ್ರಕರಣ ಇಡೀ ಕರ್ನಾಟಕದಾದ್ಯಂತ ದೊಡ್ಡ ಬಿರುಗಾಳಿಯನ್ನೇ ಉಂಟು ಮಾಡಿತು. ಅದುವರೆಗೂ ಜೀತದಾಳುಗಳ ಕುರಿತು ಅನೇಕ ಸರ್ಕಾರೇತರ ಸಂಸ್ಥೆಗಳು ಸಮೀಕ್ಷೆ ಮತ್ತು ಅಧ್ಯಯನ ಹಾಗೂ ಜೀತದಾಳುಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತಿದ್ದವಾದರೂ ಸರ್ಕಾರ ಈ ಸಂಸ್ಥೆಗಳ ಮಾತಿಗೆಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಿರಲಿಲ್ಲ. ಈ ಸಂಸ್ಥೆಗಳ ಪೈಕಿಜೀತ ವಿಮುಕ್ತಿ ಕರ್ನಾಟಕ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ೧೯೯೩ರಲ್ಲಿ ಕಿರಣ್ ಕಮಲ್ ಪ್ರಸಾದ್‌ರವರು ಜೀವಿಕ ಸಂಸ್ಥೆಯನ್ನು ಸ್ಥಾಪಿಸಿ ಆಗ ಇದ್ದ ೧೭೫ತಾಲ್ಲೂಕುಗಳ ಪೈಕಿ ಅತಿ ಹೆಚ್ಚು ಜೀತ ಪದ್ದತಿ ಆಚರಣೆಯಲ್ಲಿದ್ದ ೪೮ ತಾಲ್ಲೂಕುಗಳನ್ನು ಆಯ್ಕೆಮಾಡಿಕೊಂಡು ಜೀತದಾಳುಗಳ ಸಮೀಕ್ಷೆ ನಡೆಸಿದರು. ೧೯೯೩ ರಿಂದ ೧೯೯೫ರವರೆಗೂ ನಡೆದ ಸಮೀಕ್ಷೆಯಲ್ಲಿ ಸುಮಾರು ೨೦೦೦೦ ಜೀತದಾಳುಗಳನ್ನು ಗುರುತಿಸಲಾಯಿತು. ಇದಕ್ಕಿಂತ ಮೊದಲು ೧೯೯೦ರಲ್ಲಿ ಜೀತ ವಿಮುಕ್ತಿ ಸಂಘಟನೆ ಆನೆಕಲ್ ಎಂಬ ಹೆಸರಿನಡಿ ೧೯೯೨ರಲ್ಲಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ಜೀತದಾಳುಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವೇಳೆಗೆ ಸರ್ಕಾರಕೂಡ ಸುಮಾರು ೧೦ ವರ್ಷಗಳ ಕಾಲಸ್ಥಗಿತಗೊಂಡಿದ್ದ  ಜೀತವಿರೋಧಿ ಕಾನೂನನ್ನು ಅನುಷ್ಠಾನಗೊಳಿಸುವ ಕೆಲಸವನ್ನು ಆನೇಕಲ್ ತಾಲ್ಲೂಕಿನಲ್ಲಿ ಎತ್ತಿಕೊಂಡಿತ್ತು. ಜೀವಿಕ ಗುರುತಿಸಿದ್ದ ಜೀತದಾಳುಗಳ ಪೈಕಿ ಸರ್ಕಾರ ೧೯೭ ಜೀತದಾಳುಗಳಿಗೆ ಸರ್ಕಾರ ಪುನರ್ವಸತಿ ಕಲ್ಪಿಸಿತು. 

ಜೀವಿಕಸಂಸ್ಥೆಯು ಜೀತ ಪದ್ದತಿಯ ಬೀಕರತೆಯ ಕುರಿತು ೧೯೯೦ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ.ಸಿದ್ದಲಿಂಗಯ್ಯನವರಿಗೆ ಮನವರಿಕೆ ಮಾಡಿಕೊಟ್ಟುಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ಮನವಿ ಮಾಡಿಕೊಂಡಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ ಡಾ.ಸಿದ್ದಲಿಂಗಯ್ಯನವರು ಜೂನ್. ೧೯೯೦ರಲ್ಲಿವಿಧಾನ ಪರಿಷತ್ತಿನಲ್ಲಿ ಜೀತ ಪದ್ದತಿಯ ಕರಾಳ ಮುಖವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಂ.ವೈ.ಘೋರ್ಪಡೆಯವರು ಸಿದ್ದಲಿಂಗಯ್ಯನವರುಮಂಡಿಸಿದ ಎಲ್ಲಾ ವಿಚಾರಗಳನ್ನು ಸತ್ಯ ಎಂದು ಒಪ್ಪಿಕೊಂಡಿದ್ದಲ್ಲದೆ ಈ ವಿಷಯವನ್ನು ಕೇಂದ್ರದಕಾನೂನು ಮತ್ತು ಸಂಸದೀಯ ಸಚಿವಾಲಯಕ್ಕೆ ಪರಿಶೀಲನೆಗಾಗಿ ಕಳುಹಿಸಿದರು.

ಜೀತದಾಳುಗಳಸಮೀಕ್ಷೆ ಮತ್ತು ಅಧ್ಯಯನದಲ್ಲಿ ೧೯೯೩ರಿಂದಲೇ ತನ್ನನ್ನು ತೊಡಗಿಸಿಕೊಂಡಿದ್ದ ಜೀತ ವಿಮುಕ್ತಿ ಕರ್ನಾಟಕ ಸಂಸ್ಥೆಯು ಜೀತ ವಿಮುಕ್ತಿಗಾಗಿ ಮಾಡುತ್ತಿದ್ದ ಶ್ಲಾಘನಾರ್ಹ ಕಾರ್ಯವೈಖರಿಯನ್ನು ಗುರುತಿಸಿದ ಕರ್ನಾಟಕ ಸರ್ಕಾರವು ಗ್ರಾಮೀಣಾಭಿವೃದ್ಧಿ ಇಲಾಖೆಯ ವತಿಯಿಂದ ರಾಜ್ಯ ಮಟ್ಟದ ಸಮಾವೇಶವೊಂದನ್ನು ಏರ್ಪಡಿಸಿತು. ಇದಾದ ನಂತರ ಜೀವಿಕ ಸಂಸ್ಥೆಯು ೨೦೦೦-೨೦೦೧ನೇ ವರ್ಷದಲ್ಲಿ ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಾವೇಶ ನಡೆಸಿದ ಜೊತೆಗೆ ಗ್ರಾಮೀಣಾಭೀವೃದ್ಧಿ ಇಲಾಖೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರಿಗೆ ಜೀತಗಾರರನ್ನು ಗುರಿತಿಸುವ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ತರಬೇತಿ ನೀಡಿತು.

                ಕರ್ನಾಟಕಸರ್ಕಾರವು ಜೀತ ಕಾರ್ಮಿಕ (ನಿರ್ಮೂಲನಾ) ಕಾಯ್ದೆ-೧೯೭೬ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಇದರ ಸಂಪೂರ್ಣ ಜವಾಬ್ದಾರಿಯನ್ನು ಪಂಚಾಯತ್ ಮತ್ತು ಗ್ರಾಮೀಣಾ|ಭಿವೃದ್ಧಿ ಇಲಾಖೆಗೆ ವಹಿಸಿಕೊಟ್ಟಿತು. ೨೦೦೪ರಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯು ಜೀತ ನಿರ್ಮೂಲನೆಯ ಕುರಿತು ಸರ್ಕಾರಕ್ಕೆ ಕ್ರಿಯಾ ಯೋಜನೆಯೊಂದನ್ನು ರೂಪಿಸಿಕೊಡುವಂತೆ ಜೀವಿಕ ಸಂಸ್ಥೆಯನ್ನು ಕೇಳಿಕೊಂಡಿತು. ಇದಕ್ಕೆ ಸ್ಪಂಧಿಸಿದ ಜೀವಿಕ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ೨೦೦೭ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಯೋಜನೆಯನ್ನು ೨೦೦೮ರಲ್ಲಿ ಸರ್ಕಾರ ಒಪ್ಪಿಕೊಂಡು ಸಂಪೂರ್ಣ ವರದಿ ಮತ್ತು ಕ್ರಿಯಾ ಯೋಜನೆಯ ಸ್ವರೂಪವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿತು.

                ಬೆಂಗಳೂರುನಗರ ಜಿಲ್ಲೆಯ ಆನೇಕಲ್ ತಾಲ್ಲೂಕನ್ನು ಬಿಟ್ಟರೆ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳಲ್ಲೊಂದಾದ ಹೆಗ್ಗಡದೇವನಕೋಟೆಯಲ್ಲಿ ಅತಿ ಹೆಚ್ಚು ಜಿತದಾಳುಗಳಿದ್ದಾರೆ ಎಂಬುದನ್ನು ಸಮೀಕ್ಷೆಯಿಂದ ತಿಳಿದುಕೊಂಡ ಜೀವಿಕ ೧೯೯೩ ರಿಂದ ೧೯೯೭ರವರೆಗೂ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿಸುಮಾರು ೬೫೦ ಜೀತದಾಳುಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಿತು. ಹಂಗರಹಳ್ಳಿ ಪ್ರಕರಣ ನಡೆದ ಬಳಿಕ ೨೦೦೧-೨೦೦೨ನೇ ಸಾಲಿನಲ್ಲಿ ಹೆಗ್ಗಡದೇವನಕೋಟೆ ತಾಲ್ಲೂಕು ಒಂದರಲ್ಲಿಯೇ ಸುಮಾರು ೮೪೮ ಜೀತದಾಳುಗಳನ್ನು ಸರ್ಕಾರಿ ಅಧಿಕಾರಿಗಳೆ ಗುರುತಿಸಿದರು. ೨೦೦೧ ರಿಂದ ೨೦೧೮ರವರೆಗೂ ಸುಮಾರು ೯೬೨ ಜೀತದಾಳುಗಳಿಗೆ ಸರ್ಕಾರ ಜೀತ ವಿಮುಕ್ತಿ ಬಿಡುಗಡೆ ಪತ್ರಗಳನ್ನು ನೀಡಿತು. ಇದರಲ್ಲಿ ಇದುವರೆಗೂ ಕೇವಲ ೪೯೮ ಜೀತದಾಳುಗಳಿಗೆ ಮಾತ್ರ ಪುನರ್ವಸತಿ ಕಲ್ಪಿಸಲಾಗಿದೆ ಉಳಿದವರು ಪುನರ್ವಸತಿಯ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳುವ ಜೀತ ವಿಮುಕ್ತಿ ಕರ್ನಾಟಕದ ಮೈಸೂರು ಜಿಲ್ಲಾ ಸಂಚಾಲಕ ಜೀವಿಕ ಬಸವರಾಜು ೨೦೧೮ರಲ್ಲಿ ಸರ್ಕಾರಿ ಅಧಿಕಾರಿಗಳೇ ಗುರುತಿಸಿದ ೫೩ ಜೀತದಾಳುಗಳಿಗೆ ಇದುವರೆಗೂಬಿಡಗಡೆ ಪತ್ರಗಳನ್ನು ನೀಡಿಲ್ಲ. ಈ ಸಂಬAಧಉಪವಿಭಾಗಾಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿ ಮೂರು ವರ್ಷಗಳೇ ಕಳೆದಿದ್ದರೂ ಇದುವರೆಗೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿಷಾಧ ವ್ಯಕ್ತಿಪಡಿಸಿದರು.

                ೨೦೧೨ನೇಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಜೀವಿಕ, ಬೆಳಕು ಸಂಸ್ಥೆ, ನಿಸರ್ಗ ಫೌಂಡೇಷನ್‌ಗಳ ಸಹಯೋಗದಲ್ಲಿ ಮೈಸೂರುಜಿಲ್ಲೆಯಲ್ಲಿ ಜೀತದಾಳುಗಳ ಮರು ಸಮೀಕ್ಷೆ ನಡೆಸಿತು. ಇದರಲ್ಲಿ ಟಿ.ನರಸೀಪುರ ವiತ್ತು ನಂಜನಗೂಡು ತಾಲ್ಲೂಕುಗಳಲ್ಲಿ ಯಾವುದೇ ಜೀತ ಪ್ರಕರಣ ಕಂಡು ಬರಲಿಲ್ಲ. ಆದರೆ ಹುಣಸೂರು ತಾಲ್ಲೂಕಿನಲ್ಲಿ ೧೮೭, ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ೩೫೯, ಮತ್ತು ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ೩೫ ಮಂದಿ ಜೀತಕ್ಕಿರುವಪ್ರಕರಣಗಳು ಬೆಳಕಿಗೆ ಬಂದವು. ಮೂರು ತಾಲ್ಲೂಕುಗಳಿಂದ ಒಟ್ಟು ೫೮೧ ಮಂದಿ ಜೀತದಾಳುಗಳನ್ನು ಗುರುತಿಸಲಾಯಿತು.

                ಮೈಸೂರುಜಿಲ್ಲೆ ಹುಣಸೂರು ಉಪ ವಿಭಾಗದಲ್ಲಿ ೨೦೧೬-೨೦೧೭ರಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ೨೨, ಹುಣಸೂರು ತಾಲ್ಲೂಕಿನಲ್ಲಿ ೧೦, ಕೆ.ಆರ್.ನಗರತಾಲ್ಲೂಕಿನಲ್ಲಿ ೫, ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ೧೦೨ ಜೀತದಾಳುಗಳನ್ನು ಸರ್ಕಾರ ಜೀತದಿಂದ ಬಿಡುಗಡೆ ಮಾಡಿ ಜೀತ ವಿಮುಕ್ತಿ ಪತ್ರಗಳನ್ನು ನೀಡಿದೆ. ಮತ್ತು ತಲಾ ೫೦೦೦ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ೨೦೧೮-೨೦೧೯ನೇ ಸಾಲಿನಲ್ಲಿ ಹುಣಸೂರು ತಾಲ್ಲೂಕಿನಲ್ಲಿ ೮, ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ೧೯ ಜೀತದಾಳುಗಳನ್ನು ಗುರುತಿಸಿ ಎಲ್ಲರಿಗೂ ತಲಾ ೨೦೦೦೦ ರೂಪಾಯಿಗಳ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಆದರೆ ಇದುವರೆಗೂ ಇವರಿಗೆ ಸಮಗ್ರ ಪುನರ್ವಸತಿಯನ್ನು ಕಲ್ಪಿಸಲಾಗಿಲ್ಲ. ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ೨೦೧೯ರ ಸಾಲಿನಲ್ಲಿ ೪೩೦ ಜನ ಜೀತದಾಳುಗಳನ್ನು ಬಿಡುಗಡೆಮಾಡಲಾಗಿದ್ದು ಅವರಿಗೂ ಕೂಡ ಸರ್ಕಾರದಿಂದ ಯಾವುದೇ ರೀತಿಯ ಸಮಗ್ರ ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಅದೇ ರೀತಿ ೨೦೧೬ರಲ್ಲಿ ತುಮಕೂರು ಜಿಲ್ಲೆಯಲ್ಲಿ ೩೮೬ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೧೨೭೬ ಜೀತದಾಳುಗಳನ್ನು ಗುರುತಿಸಿ ಅವರಿಗೆ ಜೀತ ವಿಮುಕ್ತಿ ಪತ್ರ ನೀಡಿ ಬಿಡುಗಡೆಗೊಳಿಸಲಾಯಿತು ಆದರೆ ಇವರಿಗೂ ಕೂಡ ಇನ್ನೂ ಸಮಗ್ರ ಪುನರ್ವಸತಿ ಆಗಿಲ್ಲ.

                                ಜೀತಗಾರರನ್ನು ಗುರುತಿಸಿ ಬಿಡುಗಡೆ ಪತ್ರ ನೀಡಿದ ತಕ್ಷಣವೇ ಅವರಿಗೆ ತಾತ್ಕಾಲಿಕ ಪರಿಹಾರ ಮತ್ತು ಎರಡು ವರ್ಷಗಳ ಅವಧಿಗೆ ಮಾಸಾಶನ ಮತ್ತು ಸೀಮಿತ ಕಾಲಾವಧಿಯಲ್ಲಿ ಪುನರ್ವಸತಿ ಕಲ್ಪಿಸಬೇಕೆಂಬ ಸರ್ಕಾರಿ ನಿಯಮವಿದ್ದರೂ ಇದು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ಹೆಚ್.ಡಿ.ಕೋಟೆ ಮತ್ತುಸರಗೂರು ತಾಲ್ಲೂಕಿನ ೨೧೦ ಜೀತದಾಳುಗಳಿಗೆ ಕೇವಲ ತಾತ್ಕಾಲಿಕ ಪರಿಹಾರ ಮಾತ್ರ ಸಿಕಿದೆ. ಆದರೆ ಪುನರ್ವಸತಿಯಾಗಲೀ ಅಥವಾ ಎರಡು ವರ್ಷಗಳ ಅವಧಿಗೆ ನೀಡಬೇಕಾಗಿರುವ ಮಾಸಾಶನವಾಗಲಿ ಇದುವರೆಗೂ ಮಂಜೂರಾಗಿಲ್ಲ ಮತ್ತು ಸಮಗ್ರ ಪುನರ್ವಸತಿಯನ್ನು ಇನ್ನೂ ಕಲ್ಪಿಸಿಲ್ಲ. ಸರ್ಕಾರದ ನಿಯಮದ ಪ್ರಕಾರ ಸರ್ಕಾರಿ ಅಧಿಕಾರಿಗಳು ಪ್ರತಿ ವರ್ಷ ಜೀತದಾಳುಗಳನ್ನು ಗುರುತಿಸಬೇಕೆಂಬ ಆದೇಶವಿದ್ದರೂ ಇದು ಕೂಡ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. 

                ೨೦೧೮ಕ್ಕಿಂತಮೊದಲು ಪುನರ್ವಸತಿ ಕಲ್ಪಿಸುವಾಗ ೨೦೦೦೦ ರೂಪಾಯಿಗಳನ್ನು ಸರ್ಕಾರದಿಂದ ನೀಡಲಾಗುತ್ತಿತ್ತು. ಮೊದಲು ಹಣದ ಬದಲು ಎತ್ತು-ಗಾಡಿ, ಚಿಲ್ಲರೆ ಅಂಗಡಿ ಮತ್ತಿತರೆ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಪುನರ್ವವಸತಿ ಹೆಸರಿನಲ್ಲಿ ಈಗ ನೀಡುತ್ತಿರುವ ೨೦೦೦೦ರೂಪಾಯಿಗಳಿಂದ ಜೀತದಿಂದ ಬಿಡುಗಡೆಯಾದವರು ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಹಣದ ಮೊತ್ತವನ್ನು ಎರಡು ಲಕ್ಷ ರೂಪಾಯಿಗಳಿಗೆ ಏರಿಸಬೇಕು ಮತ್ತು ಕಾಲಮಿತಿಯೊಳಗೆ ಪುನರ್ವಸತಿ ಕಲ್ಪಿಸಬೇಕು. ಜೀತ ಪದ್ದತಿಯ ಕುರಿತು ಬರುವ ದೂರುಗಳನ್ನು ತಕ್ಷಣ ವಿಲೇವಾರಿ ಮಾಡಬೇಕಾಗಿದೆ. ಕಾಯ್ದೆಯನ್ವಯ ಪ್ರತಿ ಮೂರು ವರ್ಷಗಳಿಗೊಮ್ಮೆ ಜೀತದಾಳುಗಳ ಸಮೀಕ್ಷೆಯನ್ನು ತಪ್ಪದೆ ನಡೆಸಬೇಕು. ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿಪ್ರತಿ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು. ಜೀತದಿಂದ ಬಿಡುಗಡೆಯಾಗುವ ಜೀತದಾಳುಗಳಿಗೆ ಲಭ್ಯವಿರುವ ಕಡೆ ಸರ್ಕಾರಿ ಭೂಮಿಯನ್ನು ಗುರುತಿಸಿ ತಲಾ ಕನಿಷ್ಠ ೫ ಎಕರೆ ಜಮೀನುನೀಡಬೇಕು. ಬಿಡುಗಡೆಯಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜೀತದಾಳುಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು. ಈ ಸಂಬAಧರಚಿಸಿರುವ ಜಾಗೃತ ಸಮಿತಿಗಳು ನಿಂತ ನೀರಾಗಿದ್ದು ಜಾಗೃತ ಸಮಿತಿಗಳಿಗೆ ಕ್ರಿಯಾಶೀಲ ಮತ್ತು ಆಸಕ್ತಿದಾಯಕ ಸದಸ್ಯರುಗಳನ್ನು ನೇಮಿಸಬೇಕು. ಜೀತ ಪದ್ದತಿಗೆ ಸಂಬAಧಿಸಿದ ಪ್ರಕರಣಗಳನ್ನು ನಿರ್ವಹಿಸಲು ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ರಾಜ್ಯ ಮಟ್ಟದ ಪ್ರತ್ಯೇಕ ವಿಭಾಗವೊಂದನ್ನು ಆರಂಭಿಸಬೇಕು ಆ ಮೂಲಕ ಜೀತವಿಮುಕ್ತರು ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾಡುವುದು ಇಂದಿನ ಅವಶ್ಯಕತೆಯಾಗಿದೆ.

                ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳ ಸ್ಪಂಧನೆ ತುಂಬಾ ಚೆನ್ನಾಗಿದೆ. ಆದರೆ ಸ್ಪಂಧನೆಗೆ ತಕ್ಕಂತೆ ಪುನರ್ವಸತಿ ಕಾರ್ಯ ಕೂಡ ಸಮಗ್ರವಾಗಿ ಮತ್ತು ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎನ್ನುವ ಜೀವಿಕ ರಾಜ್ಯ ಸಂಚಾಲಕ ಕಿರಣ್ ಕಮಲ್ ಪ್ರಸಾದ್ ಜೀತ ಪದ್ದತಿ ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಬದಲಾಗಿ ಅದು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಪ್ರಸ್ತುತ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಜೀತ ಪದ್ದತಿ ಇಳಿಮುಖವಾಗಿದ್ದು ಉತ್ತರ ಕರ್ನಾಟಕದ ಹಾವೇರಿ, ಗದಗ, ಬೀದರ್, ಯಾದಗಿರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿಯೇ ಇದೆ. ಸರ್ಕಾರ ಜೀತ ವಿಮುಕ್ತಿ ಕಾನೂನುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜೀತ ಪದ್ದತಿಯನ್ನು ಕಡಿಮೆ ಮಾಡಬಹುದು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾರೆ.

                ಜೀತಪದ್ದತಿ ರದ್ದು ಕಾಯ್ದೆ ಜಾರಿಗೆ ಬಂದಾಗ ದೇಶದಾದ್ಯಂತ ಜೀತದಾಳುಗಳ ಬಿಡುಗಡೆ ಕಾರ್ಯ ನಡೆಯಿತು. ಆಗಿನ ೨೭ ರಾಜ್ಯಗಳ ಪೈಕಿಕರ್ನಾಟಕ ಸೇರಿದಂತೆ ೧೨ ರಾಜ್ಯಗಳು ಈಕಾಯ್ದೆಯನ್ನು ಪ್ರಾಮಾಣಿಕವಾಗಿ ಜಾರಿಗೆ ತಂದವು. ಅಂದಿನಿAದ ಇಂದಿನವರೆಗೂ ಕಾಯ್ದೆಯನ್ವಯಕರ್ನಾಟಕ ಇತರೆ ರಾಜ್ಯಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಜೀತ ಪದ್ದತಿಯನ್ನು ನಿರ್ಮೂಲನ ಮಾಡಲು ಸರ್ಕಾರ ಬದ್ಧವಾಗಿದ್ದರೂ ಈ ವಿಷಯದಲ್ಲಿ ಹಲವುಅಧಿಕಾರಿಗಳು ನಿರ್ಲಕ್ಷö್ಯ ತೋರುತ್ತಿರುವುದು ಸರ್ಕಾರದಆಶಯಕ್ಕೆ ದೊಡ್ಡ ಅಡಚಣೆಯಾಗಿದೆ. ಜೀತದಾರರನ್ನು ಪತ್ತೆ ಹಚ್ಚಿದ ಕೂಡಲೇ ಅವರನ್ನು ಬಂಧಮುಕ್ತರನ್ನಾಗಿಸಿ ಅವರಿಗೆ ಕಾಯಂ ಆಗಿ ಹೊಸ ಬದುಕನ್ನು ಕಟ್ಟಿಕೊಟ್ಟು ಈ ಅನಿಷ್ಟ ಪದ್ದತಿಯನ್ನುಅಂತ್ಯಗೊಳಿಸುವ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವ ಬದ್ಧತೆಯ ಕೊರತೆ ಕೆಲವು ಅಧಿಕಾರಿಗಳಲ್ಲಿ ಕಾಣುತ್ತಿದೆ. ಆದ್ದರಿಂದ ಜೀತ ಪದ್ದತಿ ರದ್ದತಿ ಕಾಯ್ದೆಯ ಆಶಯಗಳನ್ನು ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಅಧಿಕಾರಿಗಳು ಮನವರಿಕೆ ಮಾಡಿಕೊಂಡು ಕ್ರೀಯಾಶೀಲರಾಗಿ ಕೆಲಸ ಮಾಡಬೇಕಾಗಿದೆ. 

                ಜೀವಿಕಸೇರಿದಂತೆ ಹಲವು ಸಂಘ ಸಂಸ್ಥೆಗಳು ಜೀತ ಪದ್ದತಿಯ ವಿರುದ್ದ ಎಷ್ಟೆಲ್ಲಾ ಹೋರಾಟಗಳು, ಎಷ್ಟೆಲ್ಲಾ ಪ್ರಯತ್ನಗಳ ನಂತರವೂ ಜೀತಪದ್ದತಿಗೆ ಮುಕ್ತಿ ದೊರೆತಿಲ್ಲ. ಜೀತ ಪದ್ದತಿಯಂತಹ ಅನಿಷ್ಠ ಪದ್ಧತಿಗಳ ನಿರ್ಮೂಲನೆಗಾಗಿ ಅವಶ್ಯಕವಿರುವ ಒಗ್ಗಟ್ಟು, ಸಂಘಟಿತ ಪ್ರಯತ್ನ ಮತ್ತು ಹೋರಾಟ, ಬದ್ಧತೆ ಹಾಗೂ ಆಡಳಿತಾತ್ಮಕ ಅಂಶಗಳನ್ನು ಸರಿಯಾಗಿ ಪ್ರದರ್ಶಿಸಬೇಕಾಗಿರುವುದು ನಾಗರೀಕ ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಜೀತಗಾರರಬಾಳಿಗೆಬೆಳಕುನೀಡಿದಡಾ.ಕಿರಣ್

ಜೀತವಿಮುಕ್ತಿಗಾಗಿ ಶ್ರಮಿಸುತ್ತಿರುವ ಜೀವಿಕ ಸಂಸ್ಥೆಯ ರಾಜ್ಯ ಸಂಚಾಲಕರಾಗಿರುವ ಡಾ.ಕಿರಣ್ ಕಮಲಪ್ರಸಾದ್ ಉತ್ತರ ಕರ್ನಾಟಕದಲ್ಲಿ ಇಂದಿಗೂ ಜೀವಂತವಾಗಿರುವ ಬಿಟ್ಟಿಚಾಕ್ರಿ ಕುರಿತು ಸಂಶೋಧನೆ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ೧೯೮೩-೮೪ರಲ್ಲಿ ಒಂದು ವರ್ಷದ ಕಾಲ ಉತ್ತರ ಕರ್ನಾಟಕದ ಮುಂಡಗೋಡದ ಮೈನಳ್ಳಿಯ ಸಿದ್ದಿ ಜನಾಂಗದವರನ್ನು ಸಂಘಟಿಸಿ ಸಾಕ್ಷರರನ್ನಾಗಿಸುವಲ್ಲಿ ಶ್ರಮಿಸಿದರು. ಸಿದ್ದಿ ಜನಾಂಗದ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ವಿವರಗಳನ್ನೊಳಗೊಂಡ ಸಂಶೋಧನಾ ಪ್ರಬಂಧವನ್ನು ರಚಿಸಿದರು. ಈ ಪ್ರಬಂಧವನ್ನಾದರಿಸಿ ಕರ್ನಾಟಕ ಸರ್ಕಾರವು೧೯೮೬ರಲ್ಲಿ ಸಿದ್ದಿ ಜನರನ್ನು ಹಿಂದುಳಿದ ಬುಡಕಟ್ಟು ಜನಾಂಗ ಎಂದು ಆದೇಶ ಹೊರಡಿಸಿತು. ೧೯೮೫ರಿಂದ ಜೀತದಾಳುಗಳು ಮತ್ತು ಉತ್ತರ ಕರ್ನಾಟಕದಲ್ಲಿ ಜೀವಂತವಾಗಿರುವ ಬಿಟ್ಟಿಚಾಕ್ರಿ ಮಾಡುವವರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ೧೯೯೩ರಲ್ಲಿ ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯನ್ನು ಹುಟ್ಟು ಹಾಕಿದರು. ಇವರ ಸೇವೆಯನ್ನು ಪರಿಗಣಿಸಿ ನಿಡುಮಾಮಿಡಿ ಚೆನ್ನಮಲ್ಲಸ್ವಾಮೀಜಿಯವರು ನೀಡುವ ಮಾನವಹಕ್ಕುಗಳ ಪ್ರಶಸ್ತಿ, ಅಂತರರಾಷ್ಟ್ರೀಯ ಫ್ರೀಡಂ ಅವಾರ್ಡ್, ಮದರ್ ತೆರೆಸಾ ಸಾಮಾಜಿಕ ನ್ಯಾಯ ಪ್ರಶಸ್ತಿ, ಫ್ರಾನ್ಸ್ ಸರ್ಕಾರದ ಗೌರವಾನ್ವಿತ ವ್ಯುಮನ್ ರೈಟ್ಸ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂಧಿವೆ. .   

 

-ಡಾ.ಅಮ್ಮಸಂದ್ರ ಸುರೇಶ್

ಲೇಖಕರುಮತ್ತು ಮಾಧ್ಯಮ ವಿಶ್ಲೇಷಕರು

ಮೊಬೈಲ್ : ೯೪೪೮೪೦೨೩೪೬

Category:World



ProfileImg

Written by ಡಾ.ಅಮ್ಮಸಂದ್ರ ಸುರೇಶ್

ಲೇಖಕರುಮತ್ತು ಮಾಧ್ಯಮ ವಿಶ್ಲೇಷಕರ