KCET  ಫಲಿತಾಂಶ - ಕಣ್ಣಾಮುಚ್ಚಾಲೆ ಆಟ.

ProfileImg
30 May '24
2 min read


image

KCET (Karnataka common entrance exam) ಅಂದರೆ ಕರ್ನಾಟಕ ಸರ್ಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ. ಉನ್ನತ ವ್ಯಾಸಂಗದ ಉದ್ದೇಶಕ್ಕಾಗಿ ಉದಾಹರಣೆಗೆ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಕೃಷಿ ವ್ಯಾಸಂಗಕ್ಕೆ ಸೇರಲು ಅನುಕೂಲ ಆಗುವ ಹಾಗೆ, ವಿದ್ಯಾರ್ಥಿಗಳ ಪರಿಣಿತಿಯನ್ನು ಪರೀಕ್ಷಿಸುವ ಸಲುವಾಗಿ ನಡೆಸುವ ಪರೀಕ್ಷೆ.

ಈ ಅಂಕಣದ ಉದ್ದೇಶ ಪರೀಕ್ಷೆಯನ್ನು ವಿಮರ್ಶೆ ಮಾಡುವುದು ಅಲ್ಲ, ಏಕೆಂದರೆ ಪ್ರತೀ ವರುಷವೂ ಏನಾದರೂ ಒಂದು ಎಡವಟ್ಟು ಮಾಡಿಕೊಳ್ಳುವುದೇ KCET ಯ ಸ್ವಭಾವ.

ನಮಗೆ ಅರ್ಥವಾಗದೆ ಇರುವುದು  ಪರೀಕ್ಷೆಯ ಫಲಿತಾಂಶ ನೀಡುವ ಕಾಲದ ಬಗ್ಗೆ. 

KCET ಪರೀಕ್ಷೆಯ ಉದ್ದೇಶ, ಆರ್ಥಿಕವಾಗಿ ಬಲವಿರದ ಅಥವಾ ಮದ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಒಳ್ಳೆಯ ಕಾಲೇಜುಗಳಲ್ಲಿ ಉತ್ತಮ ವಿದ್ಯಾಭ್ಯಾಸ ದೊರಕಲಿ ಎಂದು.

ಸರ್ಕಾರಕ್ಕೆ ತನ್ನ ಉದ್ದೇಶ ಸಫಲವಾಗಬೇಕು ಎನ್ನುವುದಾದರೆ, ತಡವಾಗಿಯಾದರೂ ಪರವಾಗಿಲ್ಲ ಮೊದಲು KCET ಫಲಿತಾಂಶವನ್ನು  ಪ್ರಕಟ ಮಾಡಬೇಕು.

ಏಕೆಂದರೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು. ನಂತರ ಕಾಮೆಡ್-k  ಮತ್ತು ಇನ್ನಿತರ ಪರೀಕ್ಷೆಗಳ ಫಲಿತಾಂಶಕ್ಕೆ ಅವಕಾಶ ನೀಡಬೇಕು.

ಅದರ ಬದಲು ಮೊದಲು ಇನ್ನಿತರೆ ಪರೀಕ್ಷಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಅವರುಗಳ ಹತ್ತಿರ ಹೆಚ್ಚು ಹಣವನ್ನು ಪಡೆದು ಮತ್ತು ಇನ್ನೂ ಹೆಚ್ಚಾಗಿ ಮ್ಯಾನೇಜ್ ಮೆಂಟ್ ಅಡಿಯಲ್ಲಿಯೂ ಹಣವನ್ನು ಪಡೆದು, ಎಲ್ಲಾ ಸೀಟುಗಳು ಭರ್ತಿಯಾದ ಮೇಲೆ KCET ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೆ ಸಿನಿಮಾ ಮಂದಿರದವರೇ ಅಕ್ರಮವಾಗಿ ಬ್ಲಾಕಲ್ಲಿ ಟಿಕೆಟ್ ಮಾರುವವರಂತೆ ಆಗುವುದಿಲ್ಲವೇ ?.

ಈ ವರುಷದಲ್ಲಿ ಸುಮಾರು ಮೂರುವರೆ ಲಕ್ಷ ವಿದ್ಯಾರ್ಥಿಗಳು KCET ಪರೀಕ್ಷೆ ಬರೆದಿದ್ದಾರೆ ಎಂಬುದು ಸರ್ಕಾರದ ಲೆಕ್ಕ. ಇದರಲ್ಲಿ ಬಹಳಷ್ಟು ದೊಡ್ಡ ಮೊತ್ತದಲ್ಲಿಯೇ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಖಂಡಿತವಾಗಿಯೂ ಅವಕಾಶ ಗಿಟ್ಟಿಸುತ್ತಾರೆ ಎಂಬ ಅಂದಾಜಿದೆ. ಇಷ್ಟು ದೊಡ್ಡ ಮೊತ್ತದ ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಪರಿಪೂರ್ಣವಾಗಿ ಸೀಟು ಹಂಚಿಕೆ ಮಾಡಲು ಪ್ರಸ್ತುತ ಇರುವ ಯಾವ ಕಾಲೇಜುಗಳಿಗೂ ಸಾದ್ಯವಿಲ್ಲ. 

KCET ಫಲಿತಾಂಶ ಬರುವ ಮೊದಲೇ ಎಲ್ಲಾ ಬೇರೆಯ ರೂಪದ ನಿಗದಿತ ಸೀಟುಗಳು ಭರ್ತಿಯಾಗಿದೆ. ಇನ್ನು ಸಣ್ಣದಾಗಿ ನಿಗದಿತವಾಗಿ ಉಳಿದಿರುವ ಸೀಟುಗಳಿಗೆ  KCET ಇಂದ ಬರುವ ವಿದ್ಯಾರ್ಥಿಗಳಿಗೆ ಜಾಗವೆಲ್ಲಿ ?

ಅಂದರೆ ತಾತ್ಕಾಲಿಕ ಪೈಪೋಟಿಯನ್ನು ನಿರ್ಮಿಸಿ ಹೆಚ್ಚು ಹಣ ಪೀಕುವ ಪಿತೂರಿ ಎಂದು ಮೇಲ್ನೋಟಕ್ಕೆ ಕಾಣಿಸದೇ ಇರದು.

ಸರ್ಕಾರ ಇರುವುದೇ ಪ್ರಜೆಗಳ ಸಲುವಾಗಿ, ದುರದೃಷ್ಟವಶಾತ್ ನಮ್ಮ ದೇಶದ ಶೇಕಡಾ ತೊಂಭತ್ತು ಜನರು ಬಡವರು ಅಥವಾ ಮದ್ಯಮ ವರ್ಗದವರು, ಜನ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದೇ ಇವರು, ಆದರೆ ಆರಿಸಿ ಹೋದ ನಾಯಕರು ಸೇವೆ ಮಾಡುವುದು ಕೇವಲ ಶೇಖಡಾ ಹತ್ತರಷ್ಟು ಇರುವ ಬಂಡವಾಳಶಾಹಿಗಳಿಗೆ !.

ಈ ಎಲ್ಲಾ ಕಾರಣಗಳಿಂದ ಮೊದಲ ಆದ್ಯತೆ KCET ವಿದ್ಯಾರ್ಥಿಗಳಿಗೆ ಸಿಗಬೇಕು ಎಂಬುದು ಸಾಮಾನ್ಯ ಜನಗಳ ಆಗ್ರಹ.

ಯೋಚಿಸಿ ! 

Picture source: Microsoft Copilot 

 

Category:News



ProfileImg

Written by Kumaraswamy S