ಜ್ಞಾನಂ ವಿಜ್ಞಾನಂ

ಕ್ರಿಸ್ತನ ಶಿಲುಬೆಯ ವೃತ್ತಾಂತ

ProfileImg
18 Jun '25
3 min read


image

ಏಸು ಕ್ರಿಸ್ತನನ್ನು ಶಿಲುಬೆಗೆ ಏರಿಸಲ್ಪಟ್ಟ ಪವಿತ್ರ ವೃತ್ತಾಂತ

ಮಾನವ ಇತಿಹಾಸದ ಪಟಲದಲ್ಲಿ ಅನೇಕ ಘಟನೆಗಳು ಮಾನವನ ಸಂವೇದನೆಗೆ ತೀವ್ರವಾದ ಸ್ಪಂದನ ನೀಡಿವೆ. ಅಂತಹ ಘಟನೆಗಳಲ್ಲಿ ಕ್ರಿಸ್ತನ ಶಿಲುಬೆಯ ವೃತ್ತಾಂತವು ಒಂದು. 
ಇದು ಕೇವಲ ಒಂದು ಧಾರ್ಮಿಕ ಘಟನೆ ಅಲ್ಲ; ಇದು ಪಾಪದ ವಿರುದ್ಧದ ದೇವರ ಪ್ರೇಮದ ಪರಾಕಾಷ್ಠೆಯ ಅಭಿವ್ಯಕ್ತಿ.

ಕ್ರಿಸ್ತನು ಶಿಲುಬೆಗೆ ಏರಿಸಲ್ಪಡುವ ದಿನದ ಪೂರ್ವಭಾಗದಲ್ಲಿ, ಆತನ ಜೀವನವು ಬಹುಮಾನ್ಯವಾದ ಅರ್ಥವನ್ನು ಪಡೆದುಕೊಂಡಿತ್ತು. ಆತನು ಜನರಿಗೆ ಪ್ರೀತಿ, ಕ್ಷಮೆ ಮತ್ತು ದೇವರ ರಾಜ್ಯದ ಕುರಿತು ಬೋಧಿಸುತ್ತಿದ್ದನು. ಆದರೆ ಯಹೂದ್ಯ ಧರ್ಮಗುರುಗಳು ಆತನ ಭವಿಷ್ಯವಾಣಿ, ಪ್ರಭಾವ ಮತ್ತು ಸತ್ಯವಚನಗಳಿಂದ ಅಸಹನೀಯರಾದರು. ಅವರು ಆತನನ್ನು ಬಂಧಿಸಲು ಯೋಜಿಸಿದರು.

ಗುಡ್ ಫ್ರೈಡೆಯ ಮುನ್ನಾದಿನ ರಾತ್ರಿ, ಏಸು ಕ್ರಿಸ್ತ ತನ್ನ 12 ಜನ ಶಿಷ್ಯರೊಂದಿಗೆ ಅಂತಿಮ ಭೋಜನ (The Last Supper)ವನ್ನು ಮಾಡಿ, ತನ್ನ ಶಿಲುಬೆಯ ಮರಣವನ್ನು ಪೂರ್ವಾನುಮಾನಿಸಿದ. ಇದಾದ ಬಳಿಕ ಆತನು ಗೆತ್ಸೆಮನೇ ತೋಟದಲ್ಲಿ ಪ್ರಾರ್ಥನೆಯನ್ನು ಮಾಡಿದ. ಅಲ್ಲಿಯೇ ಯೂದಾ ಈಸ್ಕರಿಯೋತ್ ಎಂಬ ಶಿಷ್ಯನು ಆತನನ್ನು ಮುತ್ತು ಕೊಟ್ಟು ದ್ರೋಹಿಸಿ ಯಹೂದ್ಯ ಅಧಿಕಾರಿಗಳಿಗೆ ಇವನೇ ಏಸು ಕ್ರಿಸ್ತ ಎಂದು ತೋರಿಸಿದನು.

ಎಲ್ಲಾ ಕಾನೂನು ನಿಯಮಗಳನ್ನು ಮೀರಿ, ಏಸುವನ್ನು ರಾತ್ರಿ ವೇಳೆ ಹಿಡಿದು, ಅಕ್ರಮವಾಗಿ ವಿಚಾರಣೆಗೆ ಒಳಪಡಿಸಲಾಯಿತು. ಮೊದಲು ಆತನು ಯಹೂದ್ಯ ನಾಯಕರುಗಳಿಗೆ – ಅನ್ನಾಸ್ ಮತ್ತು ಕೈಫಾಸ್ ಎದುರಿಗೆ ಹಾಜರಾದನು. ಅವರು ಆತನನ್ನು ದೇವದೂಷಕ ಎಂದು ಘೋಷಿಸಿ  ರೋಮನ್ ಆಳ್ವಿಕಾಧಿಕಾರಿಗೆ ಒಪ್ಪಿಸಿದರು. ಈ ಅಧಿಕಾರಿ ಕ್ರಿಸ್ತನು ದೋಷಿ ಅಲ್ಲ ಎಂದು ಪತ್ತೆಹಚ್ಚಿದರೂ ಜನರ ಒತ್ತಡದಿಂದ  ಭಯಪಟ್ಟು ಆತನನ್ನು ಶಿಲುಬೆಗೆ ತೂಗು ಹಾಕಲು ಅನುಮೋದನೆ ನೀಡಿದನು.

ಪರಿಪೂರ್ಣ ಆದರ್ಶ ಮನುಷ್ಯನಾದ ಏಸು ಕ್ರಿಸ್ತ ತನ್ನ ಮೇಲೆ ಅಪಾರವಾದ ಪಾಪ ಭಾರವನ್ನು ಹೊತ್ತಂತೆ, ಶಿಲುಬೆ(ಕಲ್ವಾರಿ ಎಂಬ ಶಿಲೆ)ಯನ್ನು ಬೆನ್ನ ಮೇಲೆ ಹೊತ್ತುಕೊಂಡು 'ವಿಯಾ ಡೋಲೋರೋಸಾ' ಎಂದು ಕರೆಯಲ್ಪಡುವ ಮಹಾದುಃಖ ಪಥದಲ್ಲಿ ನಡೆದನು. ಈ ಸಂದರ್ಭದಲ್ಲಿ ಆತನು ಅತ್ಯಂತ ಕ್ರೂರವಾಗಿ ಹಿಂಸಿಸಲ್ಪಟ್ಟನು, ಥಳಿಸಲ್ಪಟ್ಟನು. ಆತನ ಮೈ ಮೇಲೆ ಕಂಡಕಂಡವರೆಲ್ಲ ಎಂಜಲನ್ನು ಉಗುಳಿದರು ಮತ್ತು ತಲೆಯ ಮೇಲೆ  ಕೊಂಬೆಗಳಿಂದ ಮಾಡಿದ ಮುಳ್ಳಿನ ಕಿರೀಟವನ್ನು ತೊಡಿಸಲಾಯಿತು. ಈ ಎಲ್ಲಾ ನೋವಿನ ಮಧ್ಯೆ ಆತನು ಮೌನವಾಗಿ ದೇವರ ಇಚ್ಛೆಗೆ ಶರಣಾದನು.

ಗೋಲ್ಗೊಥಾ (ಅರ್ಥಾತ್ "ಕಪಾಲದ ದಿಬ್ಬ") ಎಂಬ ಬೆಟ್ಟದ ಮೇಲೆ ಏಸು ಇಬ್ಬರು ದೋಷಿ(ಕಳ್ಳರು)ಗಳ ನಡುವೆ ಶಿಲುಬೆಗೆ ಏರಿಸಲ್ಪಟ್ಟನು.  ಈ ಗೋಲ್ಗೊಥಾ ಬೆಟ್ಟವು ಸರಿಯಾಗಿ '777' ಮೀಟರ್ ಎತ್ತರವಿದೆ. ಆ ಕಾರಣಕ್ಕಾಗಿಯೇ ಕ್ರಿಶ್ಚಿಯನ್ ಧರ್ಮೀಯರಿಗೆ '7' ಎಂಬುದು ಪವಿತ್ರ ಸಂಖ್ಯೆ. ಆತನ ಅಂಗೈ, ಪಾದಗಳು ಹಾಗೂ ಕಾಲಿನ ಮಂಡಿಚಿಪ್ಪಿನ ಮೇಲೆ ಉದ್ದವಾದ ಮೊಳೆಗಳನ್ನು ಹೊಡೆಯಲಾಯಿತು. ಆಗ ಮಧ್ಯಾಹ್ನ 12 ಘಂಟೆ ಸಮಯ. ಆ ಸಂದರ್ಭದಲ್ಲಿ ನಾವು ಅಲ್ಲಿದ್ದಿದ್ದರೆ ನಮ್ಮ ಹೃದಯವು ಒಡೆದುಹೋಗುತ್ತಿತ್ತು ಎನ್ನಲಾಗಿದೆ. 
ಈ ರೀತಿ ಚಿತ್ರಹಿಂಸೆ ಆಗುತ್ತಿದ್ದರೂ,  ಆ ಕ್ಷಣಗಳಲ್ಲಿ ಆತನು ವ್ಯಕ್ತಪಡಿಸಿದ ವಾಕ್ಯಗಳು ಇಡೀ ಕ್ರೈಸ್ತ ಧರ್ಮದ ಪ್ರಾಣವಾಗಿವೆ. 
"ತಂದೆಯೇ, ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲ; ಅವರನ್ನು ದಯವಿಟ್ಟು ಕ್ಷಮಿಸು"ಎಂದು ಉದ್ಗಾರ ತೆಗೆದ! ಇದು ಕ್ಷಮೆಯ ಪರಾಕಾಷ್ಠೆ.  ಪರಮ ಮೌಲ್ಯವಿದು.
"ತಂದೆಯೇ, ನಿನ್ನ ಕೈಯಲ್ಲಿ ನಾನು ನನ್ನ ಆತ್ಮವನ್ನು ಒಪ್ಪಿಸುತ್ತೇನೆ" ಎಂದು ಉದ್ಗರಿಸಿದ. ಇದು ಸಂಪೂರ್ಣ ಶರಣಾಗತಿಯ ಸಂಕೇತ.

ಅಪರಾಹ್ನ 3 ಘಂಟೆಗೆ ಸರಿಯಾಗಿ ಏಸುವಿನ ಪ್ರಾಣಪಕ್ಷಿಯು ಹಾರಿ ಹೋಯಿತು. ಆಗ ಆತನಿಗೆ ಕೇವಲ 33 ವರ್ಷ ವಯಸ್ಸು. ಮರುಕ್ಷಣದಲ್ಲಿ ಜೆರುಸಲೆಮ್ ಸುತ್ತಮುತ್ತ ಭಾರಿ ಭೂಕಂಪ ಸಂಭವಿಸಿತು, ಭೂಮಿ ಕಂಪಿಸಿತು. ಅಲ್ಲಿದ್ದ ಚರ್ಚ್ ಎರಡು ಭಾಗವಾಗಿ ಸೀಳಿ ಹೋಯಿತು.

ಶಿಲುಬೆಯ ಈ ಘಟನೆಯು ವಿಶ್ವದ ಇತಿಹಾಸದಲ್ಲಿ ಅಳಿಸಲಾಗದ ಬೆಳಕೊಂದನ್ನು ಮೂಡಿಸಿತು - ಅದು ದೇವರ ಪರಮಪ್ರೇಮದ, ಮಾನವ ಪಾಪದಿಂದ ಮುಕ್ತಿಗೊಳ್ಳುವ ಮಹಾದಾರಿಯಾಗಿತ್ತು.

ಕ್ರಿಸ್ತನ ಶಿಲುಬೆಯ ವೃತ್ತಾಂತ ತತ್ತ್ವಜ್ಞಾನದ ಒಂದು ಕೇಂದ್ರೀಯ ಅಂಶ. ಇದು ಪಾಪದ ವಿರುದ್ಧದ ನ್ಯಾಯವನ್ನು ಹಾಗೂ ಪಾಪಿಯ ಪರಿಗ್ರಹವನ್ನು ಒಂದೇ ವೇಳೆ ಸಮರ್ಥಿಸುತ್ತದೆ. ಶಿಲುಬೆ ಅಂದರೆ ಕ್ರೂರತೆ ಮಾತ್ರವಲ್ಲ, ಅದು ಪ್ರೇಮದ ಮಹೋನ್ನತ ರೂಪ. ಈ ಶಿಲುಬೆಯ ಮೂಲಕವೇ ವಿಶ್ವವು ವಿಮೋಚನೆಯ ಅನುಭವವನ್ನು ಪಡೆಯಬಹುದು ಎಂಬ ಕ್ರೈಸ್ತ ನಂಬಿಕೆಯು ಜೀವಂತವಾಗಿರುವುದು.
ಏಸು ಕ್ರಿಸ್ತನ ಶಿಲುಬೆಯ ಕಥೆ ಒಂದು  ಅತ್ಯಂತ ನೋವಿನ ಮಹಾಕಾವ್ಯ, ಆತ್ಮದ ದಿಗ್ವಿಜಯ ಮತ್ತು ಪ್ರೇಮದ ಮಹಾನಾದದ ಸಂಕೇತ. ಅದು ಇಡೀ ಮಾನವಕುಲಕ್ಕೆ ನೀಡಿದ ಹೊಸ ಆತ್ಮಶಕ್ತಿಯ ಸಂಕೇತವಾಗಿದೆ. ಕ್ರಿಸ್ತನು ಶಿಲುಬೆಗೆ ಏರಿದರೂ, ಆ ಮರಣವು ಪರಮ ಜೀವನದ ಸಂಕೇತವಾಯಿತು. ಈ ಕಥೆ ಕೇವಲ ಪಾಠವಲ್ಲ, ಅದು ಪ್ರತಿ ಹೃದಯವನ್ನೂ ಸ್ಪರ್ಶಿಸುವ ದೇವರ ಕರೆ.

Category:Spirituality



ProfileImg

Written by Amrut C Rao

Amrut C Rao, Barige, B Dodderi Post, Sorab Tq, Shimoga District 577434, ಫೋನ್ ನಂಬರ್ - 9481985721

0 Followers

0 Following