ರಾಜಕೀಯ ಎಂಬುದು ಸಮಾಜ ಸೇವೆಯೋ ಅಥವಾ ಸ್ವೇಚ್ಚಾಚಾರವೋ?

ProfileImg
30 Mar '24
4 min read


image

ರಾಜಕೀಯ ಎಂಬುದು ಸಮಾಜ ಸೇವೆಯೋ ಅಥವಾ ಸ್ವೇಚ್ಚಾಚಾರವೋ?

ಸಾಮಾನ್ಯವಾಗಿ ನಮ್ಮ ಮನೆಯನ್ನು ನಡೆಸಲು ನಮ್ಮ ಮನೆಯ ಕಷ್ಟ ಸುಖ ನೋಡಿಕೊಳ್ಳಲು ಮನೆಯ ಹಿರಿಯರು ಅಥವಾ ಅನುಭವಸ್ಥರಿಗೆ ಮನೆಯ ಜವಾಬ್ದಾರಿಯನ್ನು ವಹಿಸಿರುತ್ತೇವೆ, ಇನ್ನು ಕೆಲವರ ಮನೆಯಲ್ಲಿ ತಾವಾಗಿಯೇ ಜವಾಬ್ದಾರಿ ಪಡೆದುಕೊಂಡಿರುತ್ತಾರೆ. ಇದು ಮನೆಯ ವಿಷಯದಂತೆ ನಮ್ಮ ಜೀವನಕ್ಕೆ ಹೊಂದುಕೊಂದಂತೆ ನಮ್ಮ ಮನೆಯ ಜಾಗದಿಂದ ಹಿಡಿದು ರಸ್ತೆ, ಲೈಟು, ಕುಡಿಯುವ ನೀರು, ಹೀಗೆ ಹಲವಾರು ಮೂಲಭೂತ ಸೌಕರ್ಯಗಳನ್ನು ನಮಗೆ ಓಡಾಡಿ ಮಾಡಿಕೊಳ್ಳಲು ಅಥವಾ ಮಾಡಿಸಿಕೊಳ್ಳಲು ನಮಗೆ ಸಾಧ್ಯವಿಲ್ಲವೆಂದು ನಮ್ಮ ಪರವಾಗಿ ನಮ್ಮ ಕಾರ್ಯಮಾಡಲು ಸಂವಿಧಾನವು ನಮ್ಮ ಗ್ರಾಮ, ನಮ್ಮ ಬೀದಿ, ನಮ್ಮ ತಾಲ್ಲೂಕು, ನಮ್ಮ ಜಿಲ್ಲೆ, ನಮ್ಮ ರಾಜ್ಯ, ನಮ್ಮ ದೇಶ ಹೀಗೆ ಪ್ರತಿಯೊಂದು ಕಡೆ ನಮ್ಮ ಪರವಾಗಿ ನಮಗೆ ಬೇಕಾದ ಮೂಲಭೂತ ಸೌಕರ್ಯ, ಗಡಿ, ರೈಲ್ವೆ, ವಿಮಾನ, ರಕ್ಷಣೆ ಹೀಗೆ ಎಲ್ಲಾ ವ್ಯವಹಾರಕ್ಕೆ ತಕ್ಕಂತೆ ಜನಸಂಖ್ಯೆಗನುಗುಣವಾಗಿ ನೀಯೋಜಿಸಲು ಮತದಾನದ ಮೂಲಕ ಅರಿಸುವ ಪ್ರಕ್ರಿಯೆಯನ್ನು ಸಂವಿಧಾನವು ನೀಡಿರುವುದು ಸರಿ.

ಆದರೆ ಬರು ಬರುತ್ತಾ ಸಮಾಜ ಸೇವೆ ಹೋಗಿ ರಾಜಕೀಯ ಪ್ರಾರಂಭವಾಯಿತು. ಇದಕ್ಕೆ ಒಂದೊಂದು ಪಕ್ಷಗಳು ಹುಟ್ಟಿಕೊಂಡವು. ಬರುಬರುತ್ತಾ ಸಮಾಜ ಸೇವೆ ಮಾಡುವನು ಆ ಪಕ್ಷದ ಕಾರ್ಯಕರ್ತನಾದ.ಆ ಕಾರ್ಯಕರ್ತ ತಮ್ಮ ಪಕ್ಷದಿಂದ ಆರಿಸಿ ಬಂದ ವ್ಯಕ್ತಿಯಿಂದ ಈ ಕೆಲಸವನ್ನು ಮಾಡಿಸಲು ಪ್ರಾರಂಭಿಸಿದನು. ಕೊನೆಗೆ ಬರಬರುತ್ತಾ ಜನರ ಕಷ್ಟವನ್ನು ಆಲಿಸುವುದಕ್ಕಿಂತ ಅವರ ಸ್ಥಾನಮಾನ ಪಕ್ಷದ ಟಿಕೆಟ್ ಗಾಗಿ ಹೋರಾಟ, ಎದುರಾಳಿಯೊಂದಿಗೆ ಕದನ ಹೀಗೆ ಸಾರ್ವಜನಿಕರ ಕೆಲಸ ಬಿಟ್ಟು ತಾವು ದುಡ್ಡು, ಮಾಡುವುದು, ದರ್ಪ ತೋರಿಸುವುದು ಹಾಗೂ ದೇಶ, ಭಾಷೆ, ಗಾಡಿ, ಮೂಲಭೂತ ಸೌಕರ್ಯಗಳನ್ನು ಮಾಡಲು ಬಿಟ್ಟು ಹೊಲಸು ರಾಜಕೀಯ ಮಾಡುವುದೊಂದೆ ತಮ್ಮ ಧ್ಯೇಯ, ಕೊಳ್ಳೆ ಹೊಡೆಯುವುದೊಂದೆ ತಮ್ಮ ಆಸಕ್ತಿ ಅನ್ನುವುದು ಬಹುತೇಕವಾಗಿ ಪರಿಣಮಿಸಿತು. ಪ್ರತಿ ಕಾರ್ಯದಲ್ಲೂ ಕಮಿಷನ್, ಬ್ಯುಸಿನೆಸ್, ರಿಯಲ್ ಎಸ್ಟೇಟ್ ಹೀಗೆ ಅವರ ಸಂಸ್ಥೆ ಉದ್ದಾರ ಮಾಡಿಕೊಳ್ಳುತ್ತಿದ್ದಾರೆ ಹೊರತು ಬೇರೆನನ್ನೂ ಅಲ್ಲಾ. ಅಲ್ಲದೆ ತಮ್ಮ ಪಕ್ಷ ಗೆಲ್ಲಲು ಜಾತಿ ಜಾತಿಗಳ ಮಧ್ಯೆ ವಿಷ ಬೀಜ, ಧರ್ಮಗಳ ನಡುವೆ ಒಡಕು, ರಾಜ್ಯ ರಾಜ್ಯಗಳ ಮೇಲೆ ಕೀಳಿರಮೆ ಹೀಗೆ ಹೇಳುತ್ತಾ ಹೋದರೆ ಈಗಂತೂ ರಾಜಕೀಯ ಹೊಲಸು ಅನ್ನೋದನ್ನು ಕೆಲ ರಾಜಕೀಯ ವ್ಯಕ್ತಿಗಳ ನಡುವಳಿಕೆಯಿಂದ ತಿಳಿದುಕೊಳ್ಳಬಹುದಾಗಿದೆ.

ಇದೇನು ಎಲ್ಲಾ ರಾಜಕಾರಣಿಗಳು ಹಾಗೆ ಅಂತಾ ಭಾವಿಸಬೇಡಿ. ಆದರೆ ಇಂತಹ ಭಂಡರಿಗೆ ಮಣೆ ಹಾಕುವುದು ಜಾಸ್ತಿಯಾಗಿದೆ. ಏಕೆಂದರೆ ಇಂತಹವರು ಯಾರನ್ನು ಬೇಕಾದರೂ ಹೆದರಿಸುತ್ತಾರೆ, ಯಾರಿಗೆ ಬೇಕಾದರೂ ಇನ್ಫ್ಲುಯೇನ್ಸ್ ಮಾಡಲು ಹೇಸುವುದಿಲ್ಲ. ಇಲ್ಲಿ ನನಗೆ ಅನ್ನಿಸುತ್ತಿರುವುದು ಸಾರ್ವಜನಿಕರ ಉದ್ದಾರಕ್ಕೆ ಇವರು ಇರುವುದೋ ಅಥವಾ ಜನಸಾಮಾನ್ಯರೇ ಇವರ ಉದ್ದಾರಕ್ಕೆ ಇರುವುದು ಎಂದು ಬಹಳ ಗೊಂದಲದಲ್ಲಿದೆ. ಏಕೆಂದರೆ ಸರ್ಕಾರಗಳು ಜನರಿಗೆ ನೀಡುವ ಸವಲತ್ತುಗಳನ್ನು ಜನಸಾಮಾನ್ಯರ ಬಳಿ ಸರಿಯಾಗಿ ತಲುಪಿಸುತ್ತಿಲ್ಲ. ಜೊತೆಗೆ ಈ ಸವಲತ್ತುಗಳು ಸರ್ಕಾರಿ ದಾಖಲೆಗಳಲ್ಲಿ ಯಶಸ್ವಿಯಾಗಿ ಖಾಲಿಯಾಗಿರುತ್ತದೆ ಹೇಗೆ ಎಂಬುದೇ ವಿಪರ್ಯಾಸ. ಇದಾರ ಬಿಡಿ ಅವರಿಗೆ ದುಡ್ಡು ತಿನ್ನೋದನ್ನು ಅವರಿಗೆ ಕರಗತ ಮಾಡಿದ್ದೇವೆ. ಹಾಗಾಗಿ ಅವರು ಇಷ್ಟು ಭಂಡರಾಗಿದ್ದಾರೆ.

ಇದೇನೇ ಇರಲಿ ಕೊನೆ ಪಕ್ಷ ಇವರುಗಳಿಗೆ ಒಂದು ಸಿದ್ದಾಂತವು ಇಲ್ಲ, ಜೊತೆಗೆ ಆತ್ಮಸಾಕ್ಷಿಯೂ ಇಲ್ಲ. ಹೇಗೆ ಅಂತಿರಾ. ಇವರಲ್ಲಿ ಬಹುತೇಕರು ಜೀವನದಲ್ಲಿ ಸಾರ್ವಜನಿಕರ ಸೇವೆಯನ್ನು ಮಾಡಿ ಬಂದವರಲ್ಲ ಇವರೆಲ್ಲಾ ರಾಜಕಾರಣಿಗಳ ಮಕ್ಕಳು, ಸಂಭಂದಿಗಳು ಅಥವಾ ದೊಡ್ಡ ಉದ್ಯಮಿಯೋ, ರೌಡಿಯೋ, ರಿಯಲ್ ಎಸ್ಟೇಟ್ ಎಜೆಂಜರೋ ಆಗಿ ಅನಾಮಧೇಯ ಹಣ ಮಾಡಿದವರು ಹಾಗೂ ಅವರ ಪಾಪಕರ್ಮಗಳನ್ನು ಮುಚ್ಚಿಕೊಳ್ಳಲು ಹಾಗೂ ಇನ್ನಷ್ಟು ಹಣ ಮಾಡಿಕೊಳ್ಳಲು ಮತ್ತು ಆಧಿಕಾರ ಅನುಭವಿಸಲು ಬಂದವರಾಗಿರುತ್ತಾರೆ. ಇದು ಒಂದು ಕಡೆಯಾದರೆ ಇನ್ನೂಂದು ಕಡೆ ಇವರಿಗೆ ಮುಖ್ಯವಾಗಿ ಮಾತು ಸಹ ಗಟ್ಟಿಯಾಗಿ ಅವರ ಜೊತೆಯಿರುವುದಿಲ್ಲಾ ಏಕೆಂದರೆ ಇವರು ಆಡೋ ಮಾತುಗಳೇಲ್ಲಾ ಸುಳ್ಳು ಹಾಗೂ ನೀರಿನ ಮೇಲಿನ ಗುಳ್ಳೆಯಂತೆ ಅಲ್ಲದೆ ಇವರು ಅಧಿಕಾರಕ್ಕಾಗಿ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಗೆದ್ದ ಮೇಲೆ ಮರೆತೇ ಬಿಡಿತ್ತಾರೆ.  ಚುನಾವಣೆ ಹತ್ತಿರ ಬಂದಾಗ ಇವರಿಗೆ ಊರು ಕೇರಿ , ಜಾತಿ, ಜನರೆಲ್ಲಾ ನೆನಪಿಗೆ ಬಂದು ಕೈಮುಗಿದು, ಮತ ಹಾಕಿಸಿಕೊಳ್ಳುತ್ತಾರ್ರೆ. ಆಮೇಲೆ ಗೋವಿಂದಾ ಹಿಡುದುಕೊಳ್ಳಬೇಕು ಅವರನ್ನ. ಇನ್ನು ತಮ್ಮ ಪಕ್ಷವನ್ನು ತಾಯಿ ಎಂದು ಕರೆಯುತ್ತಿರುತ್ತಾರೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ ಎಂದರೆ ಸಾಕು ಅದೇ ತಾಯಿ ವೈಶ್ಯೆ ರೀತಿಯಲ್ಲಿ ಕಾಣುತ್ತಾಳೆ. ಆಮೇಲೆ ಆ ತಾಯಿ ಮಕ್ಕಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಬೇರ್ ಪಕ್ಷಕ್ಕೆ ಹೋಗಿ ಆ ಪಕ್ಷವನ್ನು ತನ್ನ ತಾಯಿ ಎಂದು ಸಲಿಸಾಗಿ ಬದಲಿಸಿಬಿಡುತ್ತಾರೆ. ಇದು ಹೇಗೆ ಕೊನೆ ಪಕ್ಷ ತನಗೆ ಆ ಸ್ಥಾನಕೆ ಅವನು ಯೋಗ್ಯನಾಗದೇ ಅಥವಾ ತನಗೆ ತನ್ನ ಕುಟುಂಬದವರಿಗೋಸ್ಕರ ಟಿಕೆಟ್ ನೀಡಿಲ್ಲವೆಂದು ಬಂಡಾಯ ನಿಲ್ಲುವುದೋ ಒಟ್ಟಿನಲ್ಲಿ ಅಧಿಕಾರ ಬೇಕೇ ಬೇಕೆಂಬ ಹಪಹಪಿಯೇಕೆ ಎನ್ನುವುದು.

ಇದು ಹೋಗಲಿ ನಾನು ಬಹಳ ರಾಜಕೀಯ ನಾಯಕರ ಮಾತು ಕೇಳಿದ್ದೇನೆ ಇನ್ನೊಬ್ಬ ನಾಯಕನ ಬಗ್ಗೆ ಮಾತಾನಾಡ ಬೇಕಾದರೆ ಅವರು ವೈಯುಕ್ತಿಕವಾಗಿ ಒಳ್ಳೆಯವರು ಆದರೆ ಅವರ ಪಕ್ಷ ಸಿದ್ದಂತಕ್ಕೂ ನಮ್ಮ ಸಿದ್ದಾಂತಕ್ಕೂ ವಿರೋಧ ಅಷ್ಟೇ ಅನ್ನುತ್ತಾರೆ. ಅಂದರೆ ಇಲ್ಲಿ ವೈಯುಕ್ತಿಕ ಹಾಗೂ ರಾಜಕೀಯ ನಿಲುವು ಬೇರೆ ಬೇರೆ ಹೇಗೆ ಸಾಧ್ಯ ಎನ್ನುವುದು ನನಗೆ ಕಾಡುತ್ತಿರುವ ಪ್ರಶ್ನೆ. ನೀವು ನಮ್ಮ ತನ ಬಿಟ್ಟು ಅಧಿಕಾರಕ್ಕೋಸ್ಕರ ಜಾತಿಜಾತಿಗಳ ಮಧ್ಯೆ ಜಗಳ ಹಚ್ಚೋದು, ಧರ್ಮಗಳ ಮಧ್ಯೆ ಜಗಳ ಮಾಡಿಸೋದು, ಒಂದೇ ಧರ್ಮವನ್ನು ಒಲೈಸುವುದು, ಕೆಲವರಿಗಾಗಿಯೇ ಬದುಕುವುದು ಇವೆಲ್ಲಾ ಹೇಗೆ ಸರಿ ಹೋಗುತ್ತದೆ ಎನ್ನುವುದು ನನ್ನ ಪ್ರಶ್ನೆ..

ಈ ಸಿನಿಮಾ ಹಾಗೂ ನಾಟಕ ರಂಗದವರು ಬೇರೆ ಯಾವುದೋ ಪಾತ್ರ ತುಂಬಲು ತಮ್ಮ ಮನಸ್ಸಿನ ವಿರುದ್ಧದ ಪಾತ್ರಕ್ಕೆ ನ್ಯಾಯವೊದಗಿಸಲು ಬಣ್ಣಹಚ್ಚುತ್ತಾರೆ. ಅದು ಅವರು ಮಾಡಲೇಬೇಕಾದ ವೃತ್ತಿ ಅದು ಸರಿ ಕೂಡ. ಆದರೆ ಈ ರಾಜಕೀಯದವರು ಜನರ ಸೇವೆ ಮಾಡುವುದು ಮನಸ್ಸಿನ ಅಳದಿಂದ ಬರದೇ ಅದಕ್ಕಾಗಿ ಬಣ್ಣ ಹಚ್ಚಿದರೆ ಹೇಗೆ ಸರಿ. ಇದು ನನಗಿರುವ ಮುಖ್ಯ ಪ್ರಶ್ನೆ.

ಈಗಂತು ಸಾಮಾಜಿಕ ಜಾಲತಾಣ ಬಂದ ಮೇಲೆ ಪ್ರತಿಯೊಬ್ಬರ ಬಗ್ಗೆ ಮಾಹಿತಿಯು ಮತ್ತು ಅವರು ಏನು ಮಾಡುತ್ತಿದ್ದಾರೆ ಅನ್ನೋದು ಮುಚ್ಚಿಡಲು ಸಾಧ್ಯವಿಲ್ಲ.  ಹೀಗಿರುವಾಗ ರಾಜಕಾರಣಿಗಳು ಒಬ್ಬರ ಮೇಲೋಬ್ಬರು ಕೆಸರೆರಚುವುದು, ಅಶ್ಲೀಲವಾಗಿ ಬೈಯುವುದು, ಜೊತೆಗೆ ಸುಳ್ಳನ್ನು ಹೇಳಿ ಮುಜುಗರ ಪಡುತ್ತಿರುವುದು, ಜೊತೆಗೆ ವೈಯುಕ್ತಿಕ ನಿಮ್ದನೆಗಳು ಸಹ ಹೆಚ್ಚಾಗುತ್ತಿರುವುದು, ಜೊತೆಗೆ ಮಹಿಳೆಯರ ಮೇಲೆ ಆಗೌರವ, ಸಿ.ಡಿ ರಾಜಕಾರಣ ಇವುಗಳ ನಡುವೆ ಹೊಂದಾಣಿಕೆ ರಾಜಕೀಯ ಎಷ್ಟರ ಮಟ್ಟಿಗೆ ಸರಿ ಅನ್ನೋದು ತಿಳಿಯುತ್ತಿಲ್ಲ.

ಒಟ್ಟಿನಲ್ಲಿ ಈಗ ಬರುತ್ತಿರುವ ಹೊಸಬರು ಸಾಕಷ್ಟು ಜನಸೇವೆ ಮಾಡೋ ಅಕಾಂಕ್ಷೆಯಿಂದ ಬರುವುದು ಮುಖ್ಯವಾಗಿದೆ. ಇಷ್ಟೇ ಆದರೂ ಸಾಲದು ಪಕ್ಷಗಳು ಸಹ ಹೊಸಬರಿಗೆ ಅವಕಾಶ ಕಲ್ಪಿಸಿಕೊಟ್ಟು ಅವರಿಗೆ ಜನಸಾಮಾನ್ಯರಿಗೆ ಬೇಕಾದ ವ್ಯವಸ್ಥೆಯನ್ನು ಯಾವುದೇ ಫಲಾಫೇಕ್ಷೆಯಿಲ್ಲದೆ ಇಲ್ಲದೆ ಹೇಗೆ ಸೇವೆ ಮಾಡಬೇಕು ಎಂದು ಹೇಳಿಕೊಡಬೇಕಾಗುತ್ತದೆ. ಒಂದು ವೇಳೆ ಪಕ್ಷಗಳು ಚುನಾವಣೆಗೆ ಹಾಗೂ ಪಕ್ಷದ ಕೆಲಸಕ್ಕಾಗಿ ದುಡ್ಡಿರೋರಿಗೆ ಮನೆ ಹಾಕುವುದು ನಿಲ್ಲಿಸದಿದ್ದರೆ. ಮುಂದೆ ರಾಜಕೀಯವನ್ನು ಸರಿಮಾಡಲು ಅಸಾಧ್ಯವಾಗಿದೆ.

ಒಟ್ಟಾರೆ ಇವುಗಳನ್ನೆಲ್ಲಾ ನೋಡುತ್ತಿದ್ದರೆ ರಾಜಕೀಯ ಎಂಬುದು ಸಮಾಜ ಸೇವೆಯಂತು ಅನ್ನಿಸುತ್ತಿಲ್ಲ. ಬದಲಿಗೆ ರಾಜಕೀಯ ಎನ್ನುವುದು ಸ್ವೇಚ್ಚಾಚಾರ ಎಂಬುದು ಸಾಬಿತಾಗುತ್ತಿದೆ. ಇದು ಖಂಡಿತ ಬದಲಾಗಬೇಕಿದೆ. 
 

                                                ಪ್ರವೀಣ್ ರಾವ್ 

 

Category:World



ProfileImg

Written by Praveen Rao

Writer