ಶೀರ್ಷಿಕೆ : ಗಣಪ vs ಗಣಪ
.....***ವಿಧಿ ಗರ್ಭ ಸಂಜಾತ ***.....
ಕಾಡಿನ ಮಹಾರಾಜ ನಾ
ನನ್ನಲ್ಲಿ ಗಣಪನ ಕಾಣುವಿರಿ
ಹಬ್ಬವ ಆಚರಿಸುವಿರಿ
ಕೃಪಾಶೀರ್ವಾದ ಪಡೆಯಲು
ಹುಡುಕಿ ಕೊಂಡು ಓಡೋಡಿ ಬರುವಿರಿ
ನನ್ನಯ ಗುಡಿಗೆ ನೀ
ಮಣ್ಣಿನ ಗಣಪನ ಕಂಡರೆ
ಪೂಜಿಸುವಿರಿ
ನಿಜ ಗಣಪನ ಕಂಡರೆ
ದೂರನು ದಾಖಲಿಸುವಿರಿ
ಮುಗಿಯದ ಬೇಡಿಕೆ ನಿಮ್ಮದು
ತೀರದ ದಾಹ ನನ್ನದು
ವರವ ಬಯಸುತ ಬರುವಿರಿ ನನ್ನ ಬಳಿ
ನಾ ನಿಮ್ಮ ಜಮೀನಿಗೆ ಬಂದರೆ
ಶಾಪ ಹಾಕುತ ಬಯ್ಯುವಿರಿ
ದಸರಾ ಹಬ್ಬಕ್ಕೆ ನಾ ಬೇಕು
ಮೃಗಾಲಯದಲ್ಲಿ ಮಾತ್ರ
ನಾನಿರಬೇಕು ಅಲ್ಲವೇ
ನಿಮ್ಮದು ಸ್ವಾತಂತ್ರ್ಯ
ನನ್ನದು ಪರತಂತ್ರವೇ..?
ಏ ಪ್ರಜಾ ಪ್ರಭುತ್ವದ ಮಹಾರಾಜ
ಆಲಿಸಿ ಈ ಕಾಡಿನ ಮಹಾರಾಜನ
ದೂರು ದುಮ್ಮಾನ
ಪರಿಹರಿಸಿ ಕಾಡು ನಾಡಿನ ಸರಹದ್ದ
ನನ್ನ ಸಾಮ್ರಾಜ್ಯದ ಗಡಿ
ಗುರುತ ಪತ್ತೆ ಮಾಡುತಿರುವೆ ನಾ
ಕಾಗದ ಪತ್ರಗಳಿಲ್ಲದೆ
ನಕಾಶೆ ಗಡಿ ಕಲ್ಲು ಇಲ್ಲದೆ
Brain Map ಮುಖೇನ
ಒತ್ತುವರಿ ಮಾಡಿಹೆ
ನನ್ನಯ ಸಾಮ್ರಾಜ್ಯವ ನೀ
ದೂರು ಕೊಡಬೇಕು ನಾ
ಕಣ್ಣ ಬಟ್ಟೆ ಕಟ್ಟಿದ
ನ್ಯಾಯ ದೇವತೆಯ ಎದುರು!
ಪ್ರಜಾ ಪ್ರಭುತ್ವದ ಮಹಾರಾಜನ ಎದುರು!
ನನ್ನ ಬಳಿ ವಕೀಲನಿಲ್ಲ
ದೂರ ಅರ್ಜಿ ಇಲ್ಲ
ನನ್ನ ನಿಟ್ಟುಸಿರೆ ನನ್ನಯ ವಾದ
ನೀ ಆಲಿಸ ಬಲ್ಲೆಯ ಈ ವಾದ
ಕೊಡುವಿರೆ ನನಗೆ ನ್ಯಾಯ
ಎಂದಾದರೊಮ್ಮೆ ನಾ
ನಿಮ್ಮಲ್ಲಿಗೆ ಬಂದರೆ
ಬಂಧಿಸುವಿರಿ ನನ್ನ
ಅದು ಕೂಡ ನನ್ನವರಿಂದಲೇ ನನ್ನ
ಕಾಡುತಿಹುದು ನನಗೆ
ನಾ Hero ನ ಇಲ್ಲ zero ನ ಎಂದು
ನಾ ಒಬ್ಬನೇ ಬಂದರೆ ಈ ಗತಿ ನಿಮ್ಮದು
ಇನ್ನೂ ದಂಡನ್ನು ಕಟ್ಟಿ ಬಂದರೆ
ನಿಮಗ್ಯಾರ ದಿಕ್ಕಿನ್ನು
ನನ್ನ ಅಪ್ಪನೇ ಈಶ್ವರನು
ನನ್ನ ಅಮ್ಮನೇ ಪಾರ್ವತಿಯು
ಯಾರ ಬಳಿ ನೀವು ಹೋಗುವಿರಿ
ಇಡೀ ಭೂಮಂಡಲವೇ ನನ್ನದಲ್ಲವೇ..!!!
ಇಲ್ಲವೇ ನನ್ನೊಂದಿಗೆ ರಾಜಿ ಮಾಡಿಕೊಳ್ಳಿ
ನನ್ನನ್ನೊಮ್ಮೆ ದತ್ತು ತೆಗೆದುಕೊಳ್ಳಿ
ಸಮಸ್ಯೆ ಬಗೆಹರಿದೀತು....
ಹ ... ಹಾ... ಹಾ...!?
***ವಿಧಿ ಗರ್ಭ ಸಂಜಾತ ***
ಲೇಖಕರು: ಗುರುಮೂರ್ತಿ ಬನ್ನೂರು ***ವಿಧಿ ಗರ್ಭ ಸಂಜಾತ***