ಮೂಕ ಹಕ್ಕಿ

ಸಣ್ಣ ಕತೆ

ProfileImg
24 Apr '24
2 min read


image

Sooryanarayana Bhat T: *ಮೂಕಹಕ್ಕಿ*
✒️✒️✒️✒️✒️✒️

ವಿಶಾಲವಾದ ವೇದಿಕೆ.....ಕಣ್ಣು ಕೋರೈಸುವ ಝಗಮಗಿಸುವ ಬೆಳಕು...ಫಳಕ್ಕನೆ ಆಗಾಗ ಮಿಂಚುವ ಕ್ಯಾಮರ ಲೈಟ್ ಗಳು...
ಹಾರಗಳಿಂದ ತುಂಬಿರುವ ಕುತ್ತಿಗೆ, ಸ್ಮರಣಿಕೆ ಹೂ ಹಣ್ಣು ಫಲ ತಾಂಬೂಲಗಳಿಂದ ತುಂಬಿರುವ ಮಡಿಲು..ಸುದೀರ್ಘವಾದ ಚಪ್ಪಾಳೆಯಿಂದ ಭೋರ್ಗರೆದು ಅಭಿನಂದಿಸುತ್ತಿರುವ ಜನಸಾಗರ...........!!!!!
ಆಶಾಳಿಗೆ ಏನಾಗುತ್ತಿದೆ ಇಲ್ಲಿ ಎಂದು ಅರಿವಾಗುವ ಹೊತ್ತಿಗೆ ಸಂಘಟಕರು ಬಂದು ಆಕೆಯಲ್ಲಿರುವ ಎಲ್ಲಾ ವಸ್ತುಗಳನ್ನು ಚೀಲವೊಂದಕ್ಕೆ ತುಂಬಿಸುತ್ತಿದ್ದಂತೆ......ನಿರೂಪಕನ ದನಿ ಕಿವಿಗೆ ಬಿತ್ತು.....
" ಇದೀಗ ಸನ್ಮಾನಿತರಾದ ಮಹಾನ್ ಸಾಧಕಿ ಶ್ರೀಮತಿ ಆಶಾರವರಿಂದ ಒಂದೆರಡು ಅನಿಸಿಕೆಗಳು..."
ಅರೆ..!! ಏನು ಹೇಳಲಿ ಈಗ...! ಆಶಾ ತಬ್ಬಿಬ್ಬಾದಳು......
"ನಿಮ್ಮ ಮಗ ಎಲ್ಲರಂತಿಲ್ಲ....ಅವನನ್ನು ಹೇಗೆ ಸಂಭಾಳಿಸಬೇಕೆಂದೇ ನಮಗೆ ತಿಳಿಯುತ್ತಿಲ್ಲ...ಅವನಿಂದಾಗಿ ಬೇರೆ ಮಕ್ಕಳಿಗೆಲ್ಲ ತುಂಬ ತೊಂದರೆ ಯಾಗುತ್ತಿದೆ..ಅವನ ಕಾರಣದಿಂದಲೇ ಕೆಲವು ಪ್ರತಿಭಾವಂತ ಮಕ್ಕಳು ಇಲ್ಲಿಂದ ಟಿ.ಸಿ ತೆಗೆದುಕೊಂಡು ಹೋಗಿದ್ದಾರೆ...ಇನ್ನು ನಮಗೆ ಸಹಿಸಲು ಸಾಧ್ಯವೇ ಇಲ್ಲ..ದಯವಿಟ್ಟು ನಿಮ್ಮ ಮಗನ ಟಿ.ಸಿ.ಯನ್ನು ಈ ಕ್ಷಣವೇ ತೆಗೆದು ಕೊಂಡುಹೋಗಿ..ಯಾವುದಾದರೂ ವಿಕಲಚೇತನರ ಶಾಲೆಗೆ ಸೇರಿಸಿ...ಅವನಿಗೆ ಕಲಿಸಲು ನಮ್ಮಿಂದ ಸಾಧ್ಯವೇ ಇಲ್ಲ...." ಎಂದು ಹೇಳಿರುವ ನಗರದ ಅತ್ಯಂತ ಪ್ರತಿಷ್ಠಿತ ಶಾಲೆಯ ಆಡಳಿತ ಮಂಡಳಿಯೇ ತನ್ನನ್ನಿಂದು ಸನ್ಮಾನಿಸುತ್ತಿದೆ..!!!
ಯಾವುದೇ ಶಾಲೆಗೆ ಹೋಗಿ ಮಗನನ್ನು ಸೇರಿಸಿದರೂ...ಕೆಲವೇ ದಿನಗಳಲ್ಲಿ ಅಲ್ಲಿಂದ ಮಗನನ್ನು ತೆಗೆಯುವಂತೆ ತೀವ್ರವಾದ ಒತ್ತಡ ಬರುತ್ತಿತ್ತು....
ಅವನಿಗಿರುವ ತೊಂದರೆಯಾದರೂ ಏನು ಎಂದು ವೈದ್ಯರನ್ನು ಪ್ರಶ್ನಿಸಿದರೆ ಕೊನೇಗೆ ಸಿಕ್ಕಿದ ಉತ್ತರ.....ನಿಮ್ಮ ಮಗನಿಗೆ ಆಟಿಸಂ ಎಂಬ ಅಪರೂಪವಾದ ಖಾಯಿಲೆ......
ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ತನ್ನ ಮಗನಿಗೆ ಶಿಕ್ಷಣ ನೀಡಲು ತಿರಸ್ಕರಿಸಿದ ಹಿನ್ನೆಲೆಯಲ್ಲಿ...ತೀವ್ರವಾದ ಹತಾಶೆಯಲ್ಲಿ..ತೆಗೆದುಕೊಂಡ ನಿರ್ಧಾರ....
ತನ್ನ ಮಗನಿಗೆ ತಾನೇ ಏಕೆ ಶಿಕ್ಷಣ ನೀಡಬಾರದು....?
ಅಂದು ಚಿಗೊರೊಡೆದ ಆ ಕನಸಿನ ಶಾಲೆಯಲ್ಲಿ ಇಂದು ಅವನದೇ ಸಮಸ್ಯೆಯ ದೇಶದ ಐವತ್ತಕ್ಕಿಂತಲೂ ಹೆಚ್ಚು ಮಕ್ಕಳು ಸೂಕ್ತವಾದ ಶಿಕ್ಷಣ ಪಡೆಯುತ್ತಿದ್ದಾರೆ.. ಅವರೆಲ್ಲರಿಗೂ ಆಶಾ ಸಾಕ್ಷಾತ್ ದೇವತಾ ಸ್ವರೂಪಿಯಾಗಿದ್ದಾಳೆ....!!!
ಅವಳ ಅವಿರತ ತಪಸ್ಸು.. ಸಾಧನೆ ಶ್ರಮಕ್ಕೆ ಇಡೀ ದೇಶವೇ ಅವಳನ್ನು ಗುರುತಿಸಿ ಕೊಂಡಾಡುತ್ತಿದೆ....
ಅವಳ ಮಗನನ್ನು ಅತ್ಯಂತ ಹೇಯವಾಗಿ ಹೊರದಬ್ಬಿದ  ಶಾಲಾ ಆಡಳಿತ ಮಂಡಳಿ ಇಂದು ಆಕೆಯನ್ನು ಸಾವಿರಾರು ಜನರೆದುರು ಸನ್ಮಾನಿಸುತ್ತಿದೆ.....
ಏನು ಹೇಳಲಿ ಈ ಕ್ಷಣದಲ್ಲಿ???
ನಿಧಾನವಾಗಿ ಮೈಕ್ ನತ್ತ ತೆರಳಿದಳು ಆಶಾ....ಹೇಳಿಕೊಳ್ಳ ಲಾಗದಷ್ಟು ನೋವುಗಳಿದ್ದವು....ಹೇಳಿಕೊಳ್ಳಲೇ..‌??? ತನ್ನ ಮನೊಳಗಿನ ಬೇಗುದಿಯನ್ನು ಇಷ್ಟು ಜನರೆದುರು....ಅರುಹಲೇ.....???
ಊಹುಂ...ಇಲ್ಲ.....ಗಂಟಲು ಕಟ್ಟುತ್ತಿದೆ.....ಹೇಳಲೇಬೇಕಾದ ಮಾತುಗಳೆಲ್ಲ...ಕಣ್ಣೀರಲ್ಲೇ ಕೊಚ್ಚಿಹೋದವು......
ಭೋರ್ಗರೆಯುತ್ತಿದ್ದ ಜನಸಾಗರ ಸ್ತಬ್ಧವಾಯಿತು.
 

Sooryanarayana Bhat T: ತೆಂಕಬೈಲು ಸೂರ್ಯನಾರಾಯಣ.
ಅಂಚೆ: ಕರೋಪಾಡಿ
ಬಂಟ್ವಾಳ ತಾಲೂಕು 
ದ.ಕ.
574279
 


 




ProfileImg

Written by Sooryanarayana Bhat. T.