ಅವನೊಬ್ಬ ಮಾಯಾವಿ... !🪄
ಅವನೊಬ್ಬ ಸುಳ್ಳುಗಾರ ..!😑
ಅವನೊಬ್ಬ ವಂಚಕ ....! 🙃
ನಿಮ್ಮೆಲ್ಲರ ಮುಂದೆ ಅಪರಾಧಿ ಸ್ಥಾನದಲ್ಲಿರುವ ಈತ ಯಾರು ಗೊತ್ತಾ ?
ಹಾಂ ಅಪ್ಪ , ಅವನು ಕೇವಲ ಅಪ್ಪ ಮಾತ್ರ ಅಲ್ಲ . ಅವನೊಬ್ಬ ಕೊನೆಯಿಲ್ಲದ , ತನ್ನ ಆಳವನ್ನು ತೋರ್ಪಡಿಸದ , ಭೀಕರ ಭೋರ್ಗರಿತವಿದ್ದರೂ , ಶಾಂತವಾದ ಒಡಲನ್ನು ತನ್ನೊಳಗೆ ಬಚ್ಚಿಟ್ಟುಕೊಂಡ "ಸಮುದ್ರ" ಅವನು. ಹೌದು ಕೊನೆಯಿಲ್ಲದ ಸಮುದ್ರಾನೇ ಆತ .
ಕಡಲು ಹೇಗೆ ತನ್ನ ಒಡಲನ್ನು ತಂಪಾಗಿಸಿಡುತ್ತೋ, ಹಾಗೆ ತನ್ನವರನ್ನು ತಂಪಾಗಿಸುವ ಆತ ಕಡಲಲ್ಲದೆ ಮತ್ತಿನ್ನೇನು ?
ತಾನು ಉಪ್ಪಾದರೇನಂತೆ , ತನ್ನಲ್ಲಿ ಅಡಗಿದ ಜೀವ ಒಂದಕ್ಕೆ ಈಜುವುದನ್ನು ಕಲಿಸೋಕೆ ಮರೆಯುತ್ತಾ ಆ ಸಾಗರ...! ಹಾಗೇನೇ ಆ ಅಪ್ಪನೆಂಬ ಅದ್ಭುತಾನು ಕೂಡ .
ತನ್ನ ಜೀವದ ಅದೆಷ್ಟೋ ಸಹಸ್ರಾರು ಗಾಯ ಮಾಸುವ ಮೊದಲೇ , ನಮ್ಮ ಜೀವದ ಕಾಂತಿ ಹೆಚ್ಚಿಸಿದಾತ ಅವನು . ತನ್ನಲ್ಲಿ ಉತ್ತರವಿಲ್ಲದ ಸಾವಿರಾರು ಪ್ರಶ್ನೆಗಳಿದ್ದರೂ , ನಮಗೆ ಮಾತ್ರ ಜೀವನದುದ್ದಕ್ಕೂ ಪ್ರಶ್ನೆಗಳೇ ಉದ್ಭವವಾಗದಂತೆ ಬೇಡಿದಾತ . "ಅವನು ಸಮುದ್ರವಲ್ಲದೆ ಮತ್ತಿನ್ನೇನು ...?
ಅವನೊಬ್ಬ ಮಹಾನ್ ಸುಳ್ಳುಗಾರ . ಖಂಡಿತ ಸುಳ್ಳುಗಾರನೇ ಆತ . ಎಷ್ಟೋ ಸಾಲದ ಹೊಣೆ ಹೊತ್ತರೂ, ದಿನ ರಾತ್ರಿಯಾದರೆ ನಗುವಿನ ಮುಖವಾಡ ಧರಿಸಿ , ಪ್ರೀತಿ ಎಂಬ ತುತ್ತಿನೊಂದಿಗೆ ಮಮತೆಯನ್ನು ಹೊತ್ತು ತರುವ ಸುಳ್ಳುಗಾರನಾತ.
ಬೆಟ್ಟದಷ್ಟು ಒತ್ತಡ ಅಪ್ಪಳಿಸಿದ್ರೂ , ಸಮುದ್ರದ ಅಲೆಯಂತೆ ಬಾಚಿ ತಬ್ಬಿ ತನ್ನಲ್ಲೇ ಇಳಿಸಿಕೊಳ್ಳುವ ಆತ ಸಮುದ್ರವಲ್ಲದೆ ಮತ್ತಿನ್ನೇನು ?
ತನ್ನಾತ್ಮಕ್ಕೆ ವಂಚಿಸಿ , ನನ್ನ ದೇಹವನ್ನು ದಂಡಿಸಿ , ನೋಯಿಸಿದರೂ ಸಹ , ನಂಬಿ ಬಂದ ಜೀವದ ಹೊಣೆಗಾರಿಕೆ ಹೊತ್ತು , ದಿನ ಬೆಳಗಾದರೆ ಬೆವರು ಸುರಿಸುವ ಆತ ವಂಚಕನೇ ತಾನೇ ? ತನ್ನ ಒಪ್ಪಿಗೆ ಇಲ್ಲದೆ ತನ್ನವರ ಹತ್ತಿರಕ್ಕೆ ಸಮೀತಿಸುವವರ ಬೇಜವಾಬ್ದಾರಿ ತನದ ಉಸಿರುಗಟ್ಟಿಸುವ ಆತ ಭಯಾನಕ ವಂಚಕ .
ಸಮುದ್ರದ ಅಲೆಯು ಹೇಗೆ ತನ್ನ ಕಾಯಕ ಮರೆಯದೆ ಅಲೆಗಳನ್ನು ದಡಕ್ಕೆ ತಲುಪಿಸೋ ಕೆಲಸ ಮಾಡುತ್ತೋ , ಹಾಗೆ ತನ್ನವರ ಕೈಹಿಡಿದು ದಡ ಸೇರಿಸುವಾತ "ಸಮುದ್ರ ಅಲ್ಲದೆ ಮತ್ತಿನ್ನೇನು....?
ಆಳದಲ್ಲಿ ಜೋಪಾನವಾಗಿ ಚಿಪ್ಪೊಂದನ್ನಿಟ್ಟು ಜೀವ ತುಂಬುವಾತ. ಒಂದು ದಿನ ಆ ಚಿಪ್ಪಿನೊಳಗೆ ಬೆಲೆಬಾಳುವ ಮುತ್ತೊಂದನ್ನ ಕಾಣಬಯಸುತ್ತಾನೆ. ಆದರೆ ಆ ಚಿಪ್ಪಿಗೆ ತಾನು ಬೆಲೆ ಬಾಳು ವಸ್ತು ಅಂತ ಗೊತ್ತಿರುತ್ತೇ ಹೊರತು, ನಾನು ಹೊರಬಂದದ್ದು ಚಿಪ್ಪಿನ ಮೂಲಕ ಅನ್ನೋದಾಗ್ಲಿ ಆ ಚಿಪ್ಪಿನ ರಕ್ಷಕನನ್ನಾಗಲಿ ಮರೆತು ಬಿಡುತ್ತೆ. ಆದ್ರೆ ಆ ಮುತ್ತನ್ನು ಮಾತ್ರ ಸಲುಹೋದನ್ನು ಮರೆಯೋದಿಲ್ಲ ಆತ. ಹಾಗಾಗಿ "ಅವನು ಸಮುದ್ರವಲ್ಲದೆ ಮತ್ತಿನ್ನೇನು ?
ತನಗೆ ಒದಗಿ ಬರುವ ಹಾಲಾಹಲವನ್ನು ಕೂಡ ತನ್ನ ದೇಹಕೊಡ್ಡಿ, ಒಡಲನ್ನು ಭದ್ರ ಪಡಿಸೋ ಆತ ಒಂದು ಕೊನೆಯಿಲ್ಲದ ಸಮುದ್ರ .
ಸಮುದ್ರ ವಿಲ್ಲದ ಆ ಒಂದು ಲೋಕ ಅದೆಷ್ಟು ಬರಿದಾಗಿ ಕಾಣುತ್ತೋ ಹಾಗೆ ಅವನಿಲ್ಲದ ಬದುಕು ಶೂನ್ಯ . ಅವನೆದುರಿಗೆ ರೆಕ್ಕೆ ಇಲ್ಲದ ಪುಟ್ಟ ಮೀನು ನಾನು . ರೆಕ್ಕೆ ಇಲ್ಲದೆ ಈಜೋದನ್ನ ಕಲಿಸಿರೋ ಅವನೊಬ್ಬ ದೊಡ್ಡ ಸಮುದ್ರ .
ಅವನು ಹೊತ್ತವನಲ್ಲ , ಹೆತ್ತದ್ದೂ ಇಲ್ಲ , ಆದರೆ ಜೀವನದುದ್ದಕ್ಕೂ ದುಡಿದು ಸತ್ತದ್ದು ಮಾತ್ರ ಯಾರಿಗೂ ಕಾಣ ಸಿಗ್ಲಿಲ್ಲ....! ಹೌದು ಅವನೊಬ್ಬ ಸಮುದ್ರ .. ಸಮುದ್ರಾನೇ ಅವನು ....!
ಅಪರ್ಣ ಆನಂದ್..✍️