ಮೈಸೂರಿನ ಬಗ್ಗೆ ನಿಮಗೆಷ್ಟು ಗೊತ್ತು?

ಕಂಡಿದ್ದು, ಕೇಳಿದ್ದು ಮೆಚ್ಚಿದ್ದು ಈ ಲೇಖನದಲ್ಲಿ

ProfileImg
19 Oct '23
8 min read


image

“ದೇಶ ಸುತ್ತಿ ನೋಡು,ಕೋಶ ಓದಿ ನೋಡು” ಎನ್ನುವ ಮಾತು ಎಲ್ಲರೂ ಒಪ್ಪುವಂತಹದ್ದೇ. ದೇಶ, ಊರು,ಕೇರಿ ಸುತ್ತಿದಾಗಲೇ ಅಲ್ಲಿಯ ಜನರ ಪರಿಚಯ, ಅವರ ಮಾತು, ಅವರ ಸಂಪ್ರದಾಯ, ಆಚಾರ, ವಿಚಾರಗಳ ಅರಿವು ನಮಗಾಗುತ್ತದೆ. ಎಷ್ಟೋ ಬಾರಿ ನಮ್ಮ ಪಕ್ಕದ ಊರಿನ ಜನರ ಆಚರೆ, ಸಂಪ್ರದಾ, ಹಬ್ಬ, ಹರಿದಿನಗಳ ಬಗ್ಗೆ ನಮಗೆ ತಿಳಿದೇ ಇರುವುದಿಲ್ಲ. ಅಂತಹದರಲ್ಲಿ ದೂರದ ಮೈಸೂರಿನ ಬಗ್ಗೆ ವಿಜಯಪುರದಲ್ಲಿರುವ ನನಗೂ ಸಹ ಏನೂ ತಿಳಿದಿರಲಿಲ್ಲ. ರಜಾ ದಿನಗಳು ಶುರುವಾಗಿದ್ದವು ನಮ್ಮ ಅತ್ತೆ ಪದೇ ಪದೇ ಊರಿಗೆ ಕರಿಯೋಳು ಸರಿ ಹೋಗಿಯೇ ಬರೋಣ, ಮೈಸೂರು ಅಂದ ಮೇಲೆ ಅರಮನೆ ನೋಡಿಯೇ ಬರೋಣ ಅಂದು ನಾನು, ನನ್ನಕ್ಕ ಹೋರಡಲು ಸಿದ್ದರಾದೇವು. 

ವಿಜಯಪುರದಿಂದ ಹುಬ್ಬಳ್ಳಿಯ ವರೆಗೆ ಬಸ್‌ ಮೂಲಕ ಸಂಚರಿಸಿ ನಂತರ ಅಲ್ಲಿಂದ ರಾತ್ರಿ 9.30ಕ್ಕೆ ಮೈಸೂರಿಗೆ ನೇರವಾಗಿ ರೈಲನ್ನು ಮೊದಲೇ ಮುಂಗಡ ಕಾಯ್ದಿರಿಸಿದ್ದರಿಂದ ನಮ್ಮ ಸೀಟಿಗೆಹೋಗಿ ಇಬ್ಬರೂ ಕುಳಿತೆವು. ನಮ್ಮ ಮುಂದಿನ ಸೀಟಿನಲ್ಲಿ ಇಬ್ಬರು ಎನ್‌ಜಿಒ ನ ಸದಸ್ಯರಿದ್ದರು, ಅವರು ಮೂಲತಃ ಮೈಸೂರು ಮತ್ತು ಕೊಡಗಿನವರು. ನಮ್ಮದೋ ಅದೇ ಮೊದಲನೇ ರೈಲು ಸಂಚಾರದ ಅನುಭವ. ನಾವು ಬ್ಯಾಗಿಟ್ಟು ಕುಳಿತು ಹಬ್ಬಾ!1 ಎಂದು ನಿಟ್ಟುಸಿರು ಬಿಟ್ಟಿದ್ದನ್ನು ನೋಡಿ ಎಲ್ಲಿಂದ ಬಂದಿರುವು ಎಂದು ಕೇಳಿದರು. 

ನಾವು ಎಲ್ಲವನ್ನು ಹೇಳಿದೇವು. ಓ ಹೌದಾ ನಮ್ಮದೂ ಇದು ಎರಡನೇ ಬಾರಿ ಅಷ್ಟೇ ಅಂದರು. ನಮ್ಮ ನಡುವೆ ಮಾತು-ಕತೆಗಳು ಜೋರಾದವು. ಜೋತೆ-ಜೋತೆಗೆ ಹಸಿವಿನ ಕೂಗು ಕೇಳಿಸುತ್ತಿತ್ತು. ಬನ್ನಿಊಟ ಮಾಡೋಣ ಎಂದು ಕರೆದು, ನಾವು ಸಹ ಅಮ್ಮಾ ಮಾಡಿ ಕಟ್ಟಿದ ಚಪಾತಿ ಗಂಟನ್ನು ಬಿಚ್ಚಿದೇವು. ಅವರು ಇಲ್ಲ ಪರವಾಗಿಲ್ಲ ನೀವು ಮಾಡಿ. ನಾವುಧಾರವಾಡದಲ್ಲಿ ಜನಪ್ರೀಯವಾದ ಮಿರ್ಚಿ,ಗಿರಮಿಟ್ಟಾ ತಿಂದು ಚಿತ್ರಾನ್ನ ಪಾರ್ಸಲ್ ತಂದಿದ್ದೇವೆ ಅಂದರು. ಸರಿ ಅಂತ ಸುಮ್ಮನಾದೇವು ಚಪಾತಿ ಮಧ್ಯ ಅಮ್ಮಾಇಟ್ಟ ಕೆಂಪು ಚಟ್ನಿ ನೋಡಿ ಅವರಿಬ್ಬರೂ ಗಾಬರಿಯಾಗಿ ಏನ್ರೀ ಇಷ್ಟೋಂದು ಖಾರಾನಾ ಹಾಗೇ ತಿನ್ನೋದಾ ಅಂದರು. ಅಲ್ಲಿಗೆ ಅವರು ಸಪ್ಪೆ ಊಟದ ಪ್ರೀಯರು ಎಂದು ತಿಳಿಯಿತು. ನಾವು “ಹಾ..ರ‍್ರೀ ನಮ್ಮೂರಾಗ್ ಇದು ಬಾಳ್ ಫೇಮಸ್” ಅಂದು ನಕ್ಕು ಸುಮ್ಮನಾದೇವು. ಗುಡ್‌ನೈಟ್ ಹೇಳಿ ಮಲಗಿದವರು ಎದ್ದಿದ್ದು ಮೈಸೂರು ಇನ್ನೂ 10ಕಿ.ಮಿ ದೂರದಲ್ಲಿ ರೈಲೂ ಕ್ರಾಸಿಂಗ್ ನಿಲ್ಲುತ್ತೆ ಆಗ.

ಊರು ತಲುಪಿ ಮನೆ ಮುಟ್ಟಿದೇವು. ಮೈಸೂರಿನಲ್ಲಿ ನೋಡೋದೆಂದರೆ ಒಂದು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಸೆಂಟ್‌ಫೀಲೋಮಿನಾ ಚರ್ಚ್ ಅನ್ನೊದಷ್ಟೇ ಗೋತ್ತಿದ್ದ ನಮಗೆ,ಅಲ್ಲಿ ಹೋದ ಮೇಲೆ ನಾವು ಕೇಳದೇ ಇರೋ ಹಲವಾರು ಸ್ಥಳಗಳ ಪರಿಚಯ ಸಿಕ್ಕಿತು. ಅಷ್ಟೇ ಅಲ್ಲದೇ ಮೈಸೂರಿನ ಸುತ್ತ-ಮುತ್ತಲೂ ಸಹ ಹಲವಾರು ಪ್ರೇಕ್ಷಣಿಯ ಸ್ಥಳಗಳಿವೆ. ಅದರಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಕಲಾಮಂದಿರ, ರಂಗಾಯನ, ಕಿರುರಂಗ ಮಂದಿ ಅಬ್ಬಬ್ಬಾ ಎಷ್ಟು ಚೆನ್ನಾಗಿ ನಾಟಕಗಳ ಸಂಯೋಜನೆಯಾಗುತ್ತವೆ, ಎಷ್ಟು ಅದ್ಭುತವಾದ ನಾಟಕಗಳನ್ನು ಜನರ ಮುಂದೆ ಇಡುತ್ತಾರೆ ಎಂದು ತಿಳಿದಿದ್ದು ಅಲ್ಲಿ ನೋಡಿದ ಮೇಲೆಯೇ. ನಾವೆಂದು ನಾಟಕ ನೋಡಿದವರಲ್ಲ. ಅದೇ ಹತ್ತನೇ ತರಗತಿಯಲ್ಲಿ ಏಕಲವ್ಯ ನಾಟಕ ನೋಡಿದ್ದು ಬಿಟ್ಟರೇ ಯಾವುದು ನೋಡಿದ ಅನುಭವವಿಲ್ಲ. ಪೋಸ್ಟರ್‌ಗಳಲ್ಲಿ ಕೇವಲ ಮನರಂಜನಾತ್ಮಕ ನಾಟಗಳನ್ನು ನೋಡಿದ್ದೇವು, ಆದರೇ ಅಲ್ಲಿಯ ನಾಟಕಗಳು ಬೇರೆತರದ್ದೇ. ಜನರಿಗೆ ಒಂದು ಸಂದೇಶ ಸಾರುವಂತಹದ್ದು, ಅಲ್ಲಿ ಹೋಗಿ ಕುಳಿತಾಗ ಯಾರೋಬ್ಬರು ಮಾತನಾಡುವುದಿಲ್ಲ ಮತ್ತುಅವರ ಫೋನ್‌ಗಳು ಸಹ.

ಇನ್ನು ಮೈಸೂರಿನ ಇತಿಹಸಕ್ಕೆ ಬಂದರೇ ಅದೊಂದು ರೊಚಕ ಕಥೆ.  ನಮ್ಮ ರಾಜ್ಯದ ಹಲವು ಚಾರಿತ್ರಿಕ ಸೊಗಸುಗಳಲ್ಲಿ ಇಲ್ಲಿಯ ಹೆಮ್ಮೆಯ ಮೈಸೂರು ಜಿಲ್ಲೆಯು ಒಂದು. ಮೈಸೂರನ್ನು ನಮ್ಮ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯುತ್ತಾರೆ. ಮೈಸೂರು ಉತ್ತಮ ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ಮಾಡರ್ನ್ ನಗರಗಳಲ್ಲಿ ಒಂದು. ಅದ್ಭುತವಾದ ವಿಚಾರಕ್ಕೆ ಹೆಸರಾದ ಮೈಸೂರು ನಗರದಲ್ಲಿ ಮೊದಲ ಫಿರಂಗಿ ಗುಂಡು ಹಾಗೂ ರಾಕೆಟ್ ಗಳ ದಾಳಿ ನಡೆದಿತ್ತು. ಮೈಸೂರು ಜಿಲ್ಲೆಯು ರಾಜ್ಯದಲ್ಲಿ ಆಧುನಿಕ ಶಿಕ್ಷಣಕ್ಕೆ ಚಾಲನೆ ಕೊಟ್ಟ ಮೊದಲ ಜಿಲ್ಲೆ. ಮೈಸೂರನ್ನು ಚಂದನಗರಿ ಹಾಗೂ ಗಂಧದಗುಡಿ ಎಂದು ಕರೆಯಲಾಗುತ್ತದೆ.  ಮೈಸೂರು ತನ್ನ ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಮಾತ್ರವಲ್ಲದೆ ಇಲ್ಲಿಯ ವೈಲ್ಡ್  ಲೈಫ್ ಗು ಸಹ ಹೆಸರಾದ ಊರು. ಮೈಸೂರಿನ ಕುರಿತಾದ ಅನೇಕ ರೋಚಕ ಹಾಗೂ ಅಧ್ಭುತವೆನಿಸುವಂತಹ ಒಂದಷ್ಟು ಅಪರೂಪದ, ಆಸಕ್ತಿಕರವಾದ  ಸಂಗತಿಗಳನ್ನು ಈ ಲೇಖನದಲ್ಲಿ ತಿಳಿಯೋಣ.

1973ಕ್ಕೂ ಮುನ್ನ ಕರ್ನಾಟಕವನ್ನ ಮೈಸೂರು ರಾಜ್ಯವೆಂದೇ ಕರೆಯುತ್ತಿದ್ದರು. ಆಗ ಮುಖ್ಯಮಂತ್ರಿ ಆಗಿದ್ದ ಶ್ರೀ ದೇವರಾಜ್ ಅರಸು ಅವರ ನಾಯಕತ್ವದಲ್ಲಿ, ಈ ರಾಜ್ಯಕ್ಕೆ ಕರ್ನಾಟಕ ಎಂದು ನೂತನವಾಗಿ ಹೆಸರಿಡಲಾಯಿತು. ಈ ಸಂಭ್ರಮದ ಸವಿನೆನಪಿಗಾಗಿ ಕನ್ನಡದ ಕವಿಗಳಾದ ಶ್ರೀ ಚನ್ನವೀರ ಕಣವಿಯವರು ಮುಂದೆ 1981- 82ರ ಗೋಕಾಕ್ ಚಳುವಳಿಯ ಹೋರಾಟದ ಸಂದರ್ಭದಲ್ಲಿ "ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ" ಎಂಬ ಸೊಗಸಾದ ಕನ್ನಡತನ ತುಂಬಿದ ಹಾಡನ್ನು ರಚಿಸಿ ಹಾಡಿದರು. ಕಲೆ - ಸಂಸ್ಕೃತಿಗೆ ಹೆಸರಾದ ಮೈಸೂರು ರಾಜ್ಯದ ಮಹತ್ತರವಾದ ಹಾಗೂ ಆಕರ್ಷಕ ಟೂರಿಸ್ಟ್ ಸ್ಥಳಗಳಲ್ಲಿ ಒಂದು. ಇಲ್ಲಿ ಜನರಿಗೆ ನೋಡಲು ಸುಂದರವಾದ ಅರಣ್ಯ, ಕೈತೋಟಗಳು, ಕೆರೆ, ತೊರೆ, ನದಿ, ಮೃಗಾಲಯ,ಪಕ್ಷಿಧಾಮ, ಲೈಬ್ರರಿ, ದೇವಸ್ಥಾನ ಹೀಗೆ ವಿವಿಧ ತರಹದ ಸ್ಥಳಗಳು ಕಾಣಸಿಗುತ್ತವೆ. ಮೈಸೂರಿಗೆ ಸುಮಾರು 500 ರಿಂದ 600 ವರ್ಷಗಳ ಇತಿಹಾಸವಿದೆ. ಇಲ್ಲಿ ನಡೆಯುವ 10 ದಿನಗಳ ದಸರಾ ಉತ್ಸವ ರಾಜ್ಯ ಹಾಗೂ ದೇಶದ ಅತ್ಯಂತ ಸಮೃದ್ಧ ಹಾಗೂ ವೈಭವ ಪೇತವಾದ ಹಬ್ಬವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಬರುತ್ತಾರೆ.

ಮೈಸೂರು ಹೆಸರಿನ ಹಿನ್ನಲೆ ಎಂದರೆ, ಅನೇಕ ವರ್ಷಗಳ ಹಿಂದೆ ಇಲ್ಲಿ ಜೀವಿಸಿದ್ದ ಮಹಿಶಾಸುರನು ಜೀವಿಸಿದ್ದ ಹೆಸರಿನಿಂದಲೇ ಬಂದಿದೆ ಎನ್ನಲಾಗುತ್ತದೆ. ಇದರ ಮೂಲ ಹೆಸರು ಮಹಿಸುರು ಅಥವಾ ಮಹಿಷಾಸುರನ ಊರು. ಇದೇ ಕಾಲಕ್ರಮೇಣ ಮೈಸೂರಾಗಿ ಬದಲಾಯಿತು ಎಂದು ಇಲ್ಲಿನ ಜನಪದಗಳು ಹೇಳುತ್ತವೆ. ಮಹಿಷಾಸುರನ ಉಪಟಳ ಹೆಚ್ಚಾದಾಗ ಪಾರ್ವತಿ ದೇವಿಯು ಚಾಮುಂಡಿ ಅವತಾರವನ್ನು ತಾಳಿ ಅವನನ್ನು ಸಂಹರಿಸುತ್ತಾಳೆ. ಆನಂತರ ಚಾಮುಂಡಿ ಬೆಟ್ಟವು ಇಲ್ಲಿ ರೂಪಗೊಳ್ಳುತ್ತೆ ಎಂದು ಪುರಾಣಗಳು ತಿಳಿಸುತ್ತವೆ. 
ಶತಶತಮಾನಗಳಿಂದ ಚಾಮುಂಡಿ ಬೆಟ್ಟ ತನ್ನ ವೈಭವಕ್ಕೆ ಹೆಸರಾಗಿದೆ. ಮೈಸೂರು ಒಡೆಯರಲ್ಲಿ ಒಬ್ಬರಾದ ಮೂರನೇ ಕೃಷ್ಣರಾಜ ಒಡೆಯರ್ ಅವರು ಮೊದಲ ಬಾರಿ ಚಾಮುಂಡಿ ಬೆಟ್ಟವನ್ನು 1827 ರಲ್ಲಿ ಒಂದು ಪ್ರೇಕ್ಷಣೀಯ ತಾಣವಾಗಿ ರಿನೋವೇಟ್ ಮಾಡಿದರು. ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಜೊತೆ  ಪಕ್ಕದಲ್ಲಿ ಮಹಾಬಲೇಶ್ವರ ದೇವಾಲಯ ಇದೆ. ಹಲವರ ಪ್ರಕಾರ ಈ ಮಹಾಬಲ ಅನ್ನೋದು ಶಿವನ ಹೆಸರುಗಳಲ್ಲಿ ಒಂದಾಗಿದ್ದು, ಆತನು ಇಲ್ಲಿ ಮಹಾಬಲನಾಗಿ ನೆಲೆಸಿದ್ದಾನೆ, ಈಗ ಆತನ ಪಕ್ಕದಲ್ಲಿ ಆತನ ಸಹಧರ್ಮಿನಿ ಪಾರ್ವತಿಯು ಪಕ್ಕದಲ್ಲಿ ಚಾಮುಂಡೇಶ್ವರಿಯಾಗಿ ನೆಲೆಸಿದ್ದಾಳೆ ಎಂಬ ಪ್ರತಿತಿ ಇದೆ. ಇಲ್ಲಿ ಪ್ರತಿ ವರ್ಷ ಕೂಡ ಉತ್ಸವದ ಜೊತೆ ತೆಪ್ಪೋತ್ಸವ ಕೂಡ ಜರುಗುತ್ತದೆ. ಹಾಗೂ ಇದಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ನೆರೆದಿರುತ್ತಾರೆ. 

ಚಾಮುಂಡಿ ದೇವಸ್ಥಾನಕ್ಕೆ ಕೊಂಚವೇ ದೂರದಲ್ಲಿ ಬೃಹದಾಕಾರದ ಮಹಿಷಾಸುರನ ಪ್ರತಿಮೆ ಈಗಲೂ ಇದೆ. ಒಂದು ಕೈಯಲ್ಲಿ ಆತನ ಆಯುಧವನ್ನು ಹಾಗೂ ಇನ್ನೊಂದು ಕೈಯಲ್ಲಿ ಹಾವನ್ನು ಹಿಡಿದು ಉಗ್ರವಾಗಿ ನಿಂತ ಭಂಗಿಯಲ್ಲಿ ರೂಪಿಸಲಾಗಿದೆ. ಮೊದಲೆಲ್ಲಾ ನಾಡ ಹಬ್ಬದ ದಾಸರಾದಂದು ಆನೆಯ ಮೇಲಿನ ಅಂಬಾರಿಯಲ್ಲಿ ಮೈಸೂರಿನ ಒಡೆಯರನ್ನೇ ಕೂರಿಸಿ ಮೆರವಣಿಗೆ ಮಾಡಿಸಲಾಗುತ್ತಿತ್ತು. ಆದರೆ ಕ್ರಮೇಣ ಅಂದ್ರೆ 200 ವರ್ಷಗಳ ಹಿಂದೆ ಈ ಒಂದು ಪರಿಪಾಠ ನಿಂತು, ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಚಿನ್ನದ ವಿಗ್ರಹವನ್ನಿಟ್ಟು ಮೆರವಣಿಗೆ ಮಾಡಿಸಲಾಗುತ್ತೆ. ಆಗೆಲ್ಲಾ ರಾಜ ಪ್ರತ್ಯಕ್ಷ ದೇವರೆಂಬ ತತ್ವ ಅನುಸರಣೆಯಲ್ಲಿತ್ತು. ಅಂದರೆ ರಾಜನೇ ಕಣ್ಣಿಗೆ ಕಾಣುವ ದೇವರು ಅಂತ ಅರ್ಥ. ಆದರೆ ಕ್ರಮೇಣ ರಾಜ ಪ್ರಭುತ್ವ ಮರೆಯಾಗಿ ರಾಜನನ್ನು ಹೊತ್ತು ತಿರುಗುವ ಪದ್ಧತಿ ಕೂಡ ನಿಂತಿತು. ಬೆಟ್ಟದ ಮೇಲಿಂದ ನಿಂತು ನೋಡಿದರೆ ಮೈಸೂರಿನ ಕಾರಂಜಿ ಕೆರೆ, ಮೈಸೂರಿನ ಅರಮನೆ ಹಾಗೂ ಇತರೆ ದೇಗುಲಗಳೆಲ್ಲವೂ ಕೂಡ ಕಾಣಿಸುತ್ತವೆ. ದೇಶದ 18 ಮಹಾಶಕ್ತಿ ಪೀಠಗಳಲ್ಲಿ ಮೈಸೂರಿನ ಚಾಮುಂಡಿ ಬೆಟ್ಟ ಕೂಡ ಒಂದು ಎಂದು ಪರಿಗಣಿಸಲಾಗಿದೆ. ಇದನ್ನು ಮಹಾ ಶಕ್ತಿ ಪೀಠವೆಂದು ಕೂಡ ರಾಜ್ಯದ ಜನ ಗೌರವಿಸಿ ಅಗ್ರಸ್ಥಾನವನ್ನು ನೀಡಿದ್ದಾರೆ. 

ಇದರ ಚರಿತ್ರೆಯನ್ನು ನೋಡುವುದಾದರೆ ಮೊದಲ ಬಾರಿ ಈ ಚತುಷ್ಕುಟ ದೇವಾಲಯವನ್ನ ಕ್ರಿಸ್ತ ಶಕ 12ರ ಸಮಯದಲ್ಲಿ, ರಾಜ್ಯದ ಪ್ರಧಾನ ರಾಜ್ಯ ವಂಶವಾದ ಹೊಯ್ಸಳರ ಅರಸರೆ ಕಟ್ಟಿಸಿದ್ದಾಗಿ ಉಲ್ಲೇಖ ಇದೆ. ಹಾಗೂ ಈ ದೇಗುಲದ ಗೋಪುರವನ್ನು ಕ್ರಿಸ್ತಶಕ 17ರ ಸಮಯದಲ್ಲಿ ವಿಜಯನಗರದ ಅರಸರು ಕಟ್ಟಿಸಿರಬಹುದಾದಂತಹ ಸಾಧ್ಯತೆಗಳಿದೆ ಎಂಬುದು ತಜ್ಞರವಾದ. ಈ ಚಾಮುಂಡಿ ಬೆಟ್ಟ ಪ್ರಾಚೀನ ಹಿಂದೂ ಸನ್ನಿಧಾನವಾಗಿದ್ದು. ಇಲ್ಲಿ ಸಾವಿರದ ಎಂಟು ಮೆಟ್ಟಿಲುಗಳ ರಚನೆ ಕೂಡ ಇದೆ. ದಸರಾ ಹಾಗೂ ನವರಾತ್ರಿ ಹಬ್ಬಗಳಂದು ಚಾಮುಂಡಿ ದೇಗುಲ ಚಿನ್ನದ ಮಂದಿರವಾಗಿ ಕಂಗೊಳಿಸುತ್ತದೆ. ನವರಾತ್ರಿಯ ಸಮಯದಲ್ಲಿ 7ನೇ ರಾತ್ರಿ ಮೈಸೂರು ಮಹಾರಾಜರು ತಮ್ಮ ಒಡವೆ, ಆಭರಣಗಳನ್ನ ದೇಗುಲದ ಅರ್ಚಕರಿಗೆ ನೀಡಿ, ತಾಯಿಯನ್ನ ಅಲಂಕರಿಸುವಂತೆ ಆದೇಶಿಸುತ್ತಾರೆ. ಉತ್ಸವ ಮುಗಿದ ಬಳಿಕ ಆಭರಣಗಳನ್ನೆಲ್ಲ ಸುರಕ್ಷಿತವಾಗಿ ಅರಮನೆಯನ್ನು ಸೇರುತ್ತವೆ. ಈ ಒಂದು ಪರಿಪಾಠ ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿದೆ. ಚಾಮುಂಡಿ ಬೆಟ್ಟ ಕೇವಲ ತನ್ನ ಧಾರ್ಮಿಕತೆಯ ಹಾಗೂ ಸಾಂಸ್ಕೃತಿಕತೆಗಳಿಗೆ ಮಾತ್ರವಲ್ಲ, ಅಗಾಧವಾದ ಜೀವ ವೈವಿಧ್ಯತೆಗೆ ಹೆಸರಾಗಿದೆ. ಚಾಮುಂಡಿ ಬೆಟ್ಟ ತನ್ನ ಸುತ್ತಲೂ ಹಸಿರಿನಿಂದ ಆವರಿಸಲ್ಪಟ್ಟಿದ್ದು, ನೂರಾರು ಬಗೆಯ ಪ್ರಾಣಿ ಪಕ್ಷಿಗಳ ಸಂಕುಲಗಳ ವಾಸ್ತವವನ್ನು ನೋಡಿಕೊಂಡಿದೆ. ಜಿಂಕೆ, ಸಾರಂಗ, ಕರಡಿ, ಚಿರತೆ, ಆನೆ ಮೊದಲಾದ ಪ್ರಾಣಿ ಸಂಪತ್ತು ಕಾಣಬಹುದು. ಅಷ್ಟೇ ಅಲ್ಲದೆ ಚಾಮುಂಡಿ ಬೆಟ್ಟ ಇಲ್ಲಿ ಅನೇಕ ವಿಧದ ಸಸ್ಯ ಸಂಕುಲನಗಳಿಗೂ ಕೂಡ ಆಶ್ರಯವನ್ನ ನೀಡಿದೆ. ಇಲ್ಲಿರುವ ಚಾಮುಂಡೇಶ್ವರಿ ದೇವಿಯು ಬೆಟ್ಟದ ಸುತ್ತಲಿರುವ ಬುಡಕಟ್ಟು ಜನಾಂಗಗಳನ್ನು ಹಾಗೂ ಮೈಸೂರನ್ನು ಸದಾ ಕಾಯುತ್ತಿರುತ್ತಾಳೆ ಎಂಬುವುದು ಇಲ್ಲಿಯ ಜನರ ನಂಬಿಕೆಯಾಗಿದೆ.

ಮೈಸೂರು ಜಿಲ್ಲೆಯು ಭಾರತದ ಅತ್ಯಂತ ಪುರಾಣ ಗ್ರಂಥಾಲಯವನ್ನು ಹೊಂದಿದೆ. ಇಲ್ಲಿರುವ ಅತ್ಯಂತ ಹಳೆಯ ಲೈಬ್ರರಿಯನ್ನ  ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಂದು ಕರೆಯಲಾಗುತ್ತದೆ. 

ವಿಚಿತ್ರವಾದ ಮತ್ತು ಅಧ್ಬುತವಾಗಿ ಸಂರಕ್ಷಿಸಲ್ಪಟ್ಟ ಇಲ್ಲಿಯ ಒಂದು ಕಟ್ಟಡ ಈ ಗ್ರಂಥಾಲಯ. ಸುಮಾರು 50 ಸಾವಿರ ತಾಳೆ ಎಲೆ, ಹಸ್ತ ಪ್ರತಿಗಳ ಸಂಗ್ರಹವನ್ನು ಹೊಂದಿದೆ. ಇಲ್ಲಿ ದಕ್ಷಿಣ ಭಾರತಕ್ಕೆ   ಸಂಭಂದಿಸಿದ ಹಲವು ಅತ್ಯಂತ ವೈಯಕ್ತಿಕ ಸಂಗ್ರಹಗಳನ್ನ ಸಂರಕ್ಷಿಸಿ ಇಡಲಾಗಿದೆ. ಕರ್ನಾಟಕವನ್ನ 1973ರ ವರೆಗೆ ಮೈಸೂರು ಎಂದು ಕರೆಯಲಾಗ್ತಾಯಿತ್ತು. ಬೆಂಗಳೂರಿನ ನಂತರ ಮೈಸೂರು ಜಿಲ್ಲೆಯು ಕರ್ನಾಟಕದಲ್ಲಿ 2ನೇ ಅತಿ ದೊಡ್ಡ ಸಾಫ್ಟ್ವೇರ್ ರಫ್ತುದಾರ.

 ಪ್ರಮುಖ ಸಾಫ್ಟ್ವೇರ್ ಕಂಪನಿಗಳು ತಾಂತ್ರಿಕ ತರಬೇತಿ ಕೇಂದ್ರಗಳನ್ನು ಇಲ್ಲಿ ಸ್ಥಾಪಿಸಿವೆ. ಮೈಸೂರು ಸ್ಕೈವೀಲ್ ಹೊಂದಿರುವ ಮೊದಲ ಭಾರತೀಯ ನಗರವೆನಿಸಿಕೊಂಡಿದೆ. ಸ್ಕೈವಿಲ್ ನಗರದ ಪ್ರವಾಸಿಗಳಿಗೆ 20 ಕಿ.ಮೀ ವರೆಗೆ ವಿಹಂಗಮ ನೋಟ ನೀಡುತ್ತದೆ. 1833ರಲ್ಲಿ ಉಚಿತ ಇಂಗ್ಲೀಷ್ ಶಾಲೆಯನ್ನು ಸ್ಥಾಪಿಸಿದಾಗ, ಆಧುನಿಕ ಶಿಕ್ಷಣವು ಮೈಸೂರಿನಲ್ಲಿ ಪ್ರಾರಂಭವಾಯಿತು. ಉನ್ನತ ಶಿಕ್ಷಣಕ್ಕಾಗಿ  1864 ರಲ್ಲಿ ಮಹಾರಾಜ ಕಾಲೇಜು ಸ್ಥಾಪನೆಯಾಯಿತು. ಮೈಸೂರು ವಿಶ್ವವಿದ್ಯಾಲಯ ಮತ್ತು ಮೈಸೂರು ವೈದ್ಯಕೀಯ ಕಾಲೇಜು ಕ್ರಮವಾಗಿ 1916 ಮತ್ತು 1924ರಲ್ಲಿ ಸ್ಥಾಪಿಸಲಾದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜುಗಳಾಗಿದೆ. 1881ರಲ್ಲಿ ಬಾಲಕಿಯರಿಗಾಗಿ ಒಂದು ಪ್ರೌಢಶಾಲೆ ಸ್ಥಾಪಿಸಲಾಯಿತು. ನಂತರ ಅದನ್ನು ಮಹಾರಾಣಿ ಮಹಿಳಾ ಕಾಲೇಜಾಗಿ ಪರಿವರ್ತಿಸಲಾಯಿತು. 1859 ರಲ್ಲಿ ಕನ್ನಡದಲ್ಲಿ ವಾರಪತ್ರಿಕೆಗಳನ್ನ ಪ್ರಕಟಿಸಿದ ಮೊದಲ ನಗರ ಮೈಸೂರು. 1935 ರಲ್ಲಿ ಎಂ.ವಿ.ಗೋಪಾಲಸ್ವಾಮಿ ಅವರು ಮೈಸೂರಿನಲ್ಲಿ ಭಾರತದ ಮೊದಲ ಖಾಸಗಿ ರೇಡಿಯೋ ಪ್ರಸಾರ ಕೇಂದ್ರವನ್ನು ಆರಂಭಿಸಿದ್ದರು. 

ಮೈಸೂರಿನಲ್ಲಿರುವ ಕರಂಗಿ ಸರೋವರವು, ಬಟರ್ಫ್ಲೈ ಸರೋವರವು ಹಾಗೂ ವಾಕ್ - ತ್ರೂ  ಪಂಜರದಿಂದ ಸುತ್ತುವರೆದಿದ್ದು, ಇದನ್ನ ಭಾರತದ ಅತಿ ದೊಡ್ಡ ವಾಕ್ - ತ್ರೂ  ಪಂಜರವೆಂದು ಪರಿಗಣಿಸಲಾಗಿದೆ. 1780ರ ದಶಕದಲ್ಲಿ ಮೈಸೂರಿನಲ್ಲಿ ಮೊದಲ ಲೋಹದ ಸಿಲಿಂಡರ್ ಮತ್ತು ಕಬ್ಬಿಣದ ಕೆಸಡ್,  ರಾಕೆಟ್, ಫಿರಂಗಿಗಳನ್ನು ಸಿದ್ಧಪಡಿಸಲಾಯಿತು. ಇದನ್ನ ಟಿಪ್ಪು ಸುಲ್ತಾನ್ ಮತ್ತು ಹೈದರಾಲಿ ಅಭಿವೃದ್ಧಿ ಪಡಿಸಿದರು. ಈ ರಾಕೆಟ್ಗಳು ಬ್ರಿಟಿಷರು ನೋಡಿದಕ್ಕಿಂತ ಹೆಚ್ಚು ಮುಂದುವರೆದಿದ್ದವು ಎಂದು ಹೇಳಲಾಗುತ್ತದೆ. ಒಡೆಯರ್ 1399 ಮತ್ತು 1947 ರ ನಡುವೆ ತಮ್ಮ ರಾಜ್ಯವನ್ನ ಸ್ಥಿರವಾಗಿ ಆಳಿದರು. ಮೈಸೂರಿನ ಒಡೆಯರ್ ಗಳು ಭಾರತದ ಇತಿಹಾಸದಲ್ಲಿ 500 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನಾಳಿದ ಏಕೈಕ ಭಾರತೀಯ ರಾಜ ಮನೆತನವೆಂದು ಪ್ರಖ್ಯಾತಿ ಪಡೆದಿದೆ. ಜವಾಹರ್ ಲಾಲ್ ನೆಹರು ರಾಷ್ಟ್ರೀಯ ನಗರ ಪುನರ್ ನಿರ್ಮಾಣ ಮಿಷನ್ ಅಡಿಯಲ್ಲಿ ಬಸ್ ನಿಲ್ದಾಣವನ್ನ ಆಧುನಿಕರಿಸಿದ ಭಾರತದ ಮೊದಲ ನಗರ ಮೈಸೂರು. 11.5 0 ಕೋಟಿ ವೆಚ್ಚದ ಸಿಟಿ ಬಸ್ ನಿಲ್ದಾಣವನ್ನ 9 ತಿಂಗಳೊಳಗೆ ಮೋಡಿಫೈ ಮಾಡಲಾಯಿತು. ನಗರದ ಆಡಳಿತಾಧಿಕಾರಿಗಳು ಮೈಸೂರು ಅರಮನೆ ಸೇರಿದಂತೆ ನಗರಕ್ಕೆ ಭೂಗತ ಒಳಚರಂಡಿ ವ್ಯವಸ್ಥೆಯನ್ನ ಜಾರಿಗೆ ತಂದರು. ಅಂಡರ್ ಗ್ರೌಂಡ್ ಒಳಚರಂಡಿ ವ್ಯವಸ್ಥೆಯನ್ನ ಹೊಂದಿದ ಮೊದಲ ನಗರ ಮೈಸೂರು. ಮೈಸೂರು ಮೃಗಾಲಯವು ಭಾರತದ ಅತ್ಯಂತ ಹಳೆಯ ಮೃಗಾಲಯವಾಗಿದೆ. ಈ ಮೃಗಾಲಯದಲ್ಲಿ 168 ಜಾತಿಯ ಪ್ರಾಣಿಗಳಿದೆ. ಈ ಮೃಗಾಲಯವನ್ನು ಮೂಲತಃ ಅರಮನೆಯ ಮೃಗಾಲಯವೆಂದು ಕರೆಯಲಾಗುತ್ತಿದೆ. ಮತ್ತು ಇದನ್ನು ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ ಅವರ ಬೇಸಿಗೆ ಅರಮನೆ ಎಂದು ಪ್ರಾರಂಭದಲ್ಲಿ ನಿರ್ಮಿಸಲಾಗಿತ್ತು. 

ಮೈಸೂರು ರೈಲು ನಿಲ್ದಾಣವು ತನ್ನದೇ ಆದ ಪೋರ್ಟಲ್ ಪ್ರಾರಂಭಿಸಿದ ಭಾರತದ ಮೊದಲ ರೈಲು ನಿಲ್ದಾಣವಾಗಿದೆ. ಹಾಗೂ ಈ ಪೋರ್ಟಲ್ ರೈಲಿನ ಸಮಯ, ಆಗಮನ, ನಿರ್ಗಮನ, ನಿಯಮಗಳು ಹಾಗೂ ಸೌಲಭ್ಯಗಳ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತದೆ. ಮೈಸೂರು ತನ್ನ ನಗರದ ರಚನಾತ್ಮಕ ಅಭಿವೃದ್ಧಿಯನ್ನು ಏಷ್ಯಾದ ನಗರಗಳಲ್ಲಿ ಒಂದಾಗಿದೆ. ನಗರದ ಪ್ರಗತಿಗಾಗಿ 1903ರಲ್ಲಿ ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ ಅನ್ನು ಸ್ಥಾಪಿಸಲಾಯಿತು. ನಟ ವಿಷ್ಣುವರ್ಧನ್, ನಟಿ ಆರತಿ, ಕ್ರಿಕೆಟಿಗ ಜಾವಗಲ್ ಶ್ರೀನಿವಾಸ್, ಬರಹಗಾರ ಯುಆರ್ ಅನಂತಮೂರ್ತಿ ಮೊದಲಾದವರು ಮೂಲತಃ ಈ ಮೈಸೂರಿನವರೆಂಬುವುದು ಇಲ್ಲಿನ ವಿಶೇಷ ಸಂಗತಿ. ಮೈಸೂರು ಒಡೆಯರು ಅಧಿಕೃತವಾಗಿ ಕ್ರಿಸ್ತಶಕ 1524 ರಂದು ಮೈಸೂರಿನಲ್ಲಿ ಅಧಿಕಾರಕ್ಕೆ ಬಂದರು. ಅಂದಿನ 3ನೇ ಚಾಮರಾಜ ಒಡೆಯರ್ ಅವರು ಮೈಸೂರಿನ ಈ ಬೃಹತ್ ಅರಮನೆಯನ್ನು ಸ್ಥಾಪಿಸಿದರು. ಏಷ್ಯಾದಲ್ಲಿ ಮೊದಲ ವಿದ್ಯುತ್ ಸೌಲಭ್ಯ ಪಡೆದ ಅರಮನೆ ಎಂದು ಈ ಅರಮನೆಗೆ ಹೆಗ್ಗಳಿಕೆಯಾಗಿದೆ. ಇಲ್ಲಿ ನಾಲ್ಕು ಆಂಗ್ಲೋ ಮೈಸೂರು ಮಹಾಯುದ್ಧಗಳು ನಡೆದಿವೆ.  ಈ ಅರಮನೆಗೆ ಇನ್ನೊಂದು ಹೆಸರು ಕೂಡ ಇದೆ ಅದೇ ಅಂಬಾವಿಲಾಸ ಅರಮನೆ. ಮೈಸೂರಿನ ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ ಇದು. ಮೈಸೂರನ್ನು ಅರಮನೆಗಳ ನಗರ ಅಂತ ಕೂಡ ಕರೀತಾರೆ. ಈ ಅರಮನೆ ಹಿಂದೆ ಮೈಸೂರು ಸಂಸ್ಥಾನದ ಒಡೆಯರು ವಂಶದ ಅರಸರ ನಿವಾಸ ಹಾಗೂ ಧರ್ಬಾರ್ ಶಾಲೆಯಾಗಿತ್ತು. 

ಮೈಸೂರು ಸಂಸ್ಥಾನ 1399 ರಿಂದ 1947ರ ಭಾರತದ ಸ್ವಾತಂತ್ರ್ಯದವರೆಗೂ ಒಡೆಯರ್ ವಂಶದ ಅರಸರಿಂದ ಆಳಲ್ಪಟ್ಟಿತ್ತು. ನಂತರ ನಂದರಾಜ ಒಡೆಯರ್ ಕಾಲಕ್ಕೆ ಪ್ರಬಲನಾಗಿ ಮೈಸೂರ್ ಸಂಸ್ಥಾನದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾನೆ. ನಂತರ 1082 ರಲ್ಲಿ ಅವರು ಸಾವನ್ನಪ್ಪುತ್ತಾರೆ. ನಂತರ ಅವರ ಮಗನಾದ ಟಿಪ್ಪು ಸುಲ್ತಾನನು ಸಂಸ್ಥಾನದ ಸರ್ವಾಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾನೆ. ನಂಜರಾಜರು, ಬೆಟ್ಟದ ಚಾಮರಾಜರು, ಖಾಸ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿ ಶ್ರೀರಂಗಪಟ್ಟಣದಲ್ಲಿ ಇರ್ತಾರೆ. 1099 ರಲ್ಲಿ ಟಿಪ್ಪು ಸುಲ್ತಾನ್ ನಿಧನರಾದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬರುತ್ತಾರೆ. ಒಡೆಯರ್ ಅರಸರು 14ನೇ ಶತಮಾನದಲ್ಲಿ ಇಲ್ಲಿ ಒಂದು ಅರಮನೆಯನ್ನು ಕಟ್ಟಿಸಿದರು. ಈ ಅರಮನೆ 1638 ರಲ್ಲಿ ಸಿಡಿಲು ಹೊಡೆದು ಸ್ವಲ್ಪ ಭಾಗ ಹಾಳಾಗುತ್ತೆ, ಆಗ ಇದನ್ನು ರಿಪೇರಿ ಮಾಡಿ ಸರಿ ಮಾಡುತ್ತಾರೆ.

ಆದರೆ, 8ನೇ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ 1793ರ ಟಿಪ್ಪುಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಿ, 1803ರಲ್ಲಿ ಇನ್ನೊಂದು ಅರಮನೆಯನ್ನು ಆ ಸ್ಥಳದಲ್ಲಿ ಕಟ್ಟಿಸಲಾಗುತ್ತದೆ. ಈ ಅರಮನೆ ಸಹ 1897 ರಲ್ಲಿ ರಾಜಕುಮಾರಿ ಜಯಲಕ್ಷ್ಮಮಮ್ಮಣ್ಣಿ ಮದುವೆ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಗಿಬಿಡುತ್ತದೆ. ನಂತರ ಅರಮನೆ ವಾಸಿಗಳು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತರ ವಾಗುತ್ತಾರೆ. ಆಗ ಮೈಸೂರು ಮಹಾರಾಣಿಯವರಾಗಿದ್ದ ಕೆಂಪನಂಜಮಣಿ ವಾಣಿವಿಲಾಸಂವಿಧಾನ, ಇನ್ನೊಂದು ಅರಮನೆಯನ್ನು ಕಟ್ಟಲು ಬ್ರಿಟಿಷ್ ಇಂಜಿನಿಯರ್ ಏನ್ರಿ ಅವರನ್ನು ನೇಮಕ ಮಾಡುತ್ತಾರೆ. ವಿವಿಧ ರೀತಿಯ ವಾಸ್ತು ಕಲೆಗಳನ್ನು ಸೇರಿಸಿ ಅರಮನೆಯನ್ನು ಕಟ್ಟಲು ತಿಳಿಸುತ್ತಾರೆ. ನಂತರ 1912ರಲ್ಲಿ ಅರಮನೆ ಕೆಲಸ ಪೂರ್ತಿ ಆಗುತ್ತೆ. 1799 ರಲ್ಲಿ ಟಿಪ್ಪು ಸುಲ್ತಾನ್ ಮರಣ ಹೊಂದಿದ ನಂತರ ಈ ಸಂಸ್ಥಾನದ ಆಡಳಿತವನ್ನು ಮುಂದುವರಿಸುವುದಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಇರ್ತಾರೆ. ಆದರೆ ಇವರ ವಯಸ್ಸು ಕೇವಲ 5 ವರ್ಷವಾಗಿರುತ್ತದೆ. ಇವರು ಪೂರ್ತಿ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವುದಕ್ಕೆ ಹತ್ತು ವರ್ಷ ಸಮಯ ಬೇಕಾಗುತ್ತದೆ. ಆದರೆ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗೆ ಬಿಟ್ಟು ಕೊಡಬೇಕಾಗುತ್ತದೆ. 

1940 ರಿಂದ ಪ್ರಜಾತಂತ್ರ ಸ್ಥಾಪನೆ ಯಾಗುವವರೆಗೂ, ನಂತರವು ಜಯಚಾಮರಾಜ ಒಡೆಯರು ರಾಜ್ಯ ಪ್ರಮುಖರಾಗಿ ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸುತ್ತಾರೆ. ಮೈಸೂರು ಸಂಸ್ಥಾನವನ್ನು 27 ಒಡೆಯರು ವಂಶದ ರಾಜರು ರಾಜಾಡಳಿತವನ್ನು ಮಾಡುತ್ತಾರೆ. ಮಧ್ಯದಲ್ಲಿ ಮತ್ತು ಮಗನಾದ ಟಿಪ್ಪು ಸುಲ್ತಾನ್ ಕೂಡ ರಾಜಾಡಳಿತವನ್ನು ಮಾಡ್ತಾರೆ. ಇನ್ನು ಅರಮನೆಯ ವಿಷಯಕ್ಕೆ ಬಂದರೆ ಅರಮನೆಯ ವಾಸ್ತು ಕಲೆಯ ಶೈಲಿಯನ್ನು ಇಂಡೋ ಸರಾಸರಿ ಶೈಲಿ ಎಂದು ವರ್ಣಿಸಲಾಗುತ್ತದೆ. ಮುಖ್ಯವಾಗಿ ಹಿಂದೂ ಮುಸ್ಲಿಂ ಮತ್ತು ಗೋತಿಕ್ ಶೈಲಿಯ ವಾಸ್ತು ಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸಲಾಗಿದೆ. ಕಲ್ಲಿನಲ್ಲಿ ಕಟ್ಟಲಾಗಿರುವ ಈ ಅರಮನೆಯಲ್ಲಿ ಮೂರು ಮಹಡಿಗಳಿವೆ. ಕೆಂಪು ಅಮೃತಶಿಲೆಯ ಕಂಬಗಳನ್ನು ಹಾಗೂ 145 ಅಡಿ ಎತ್ತರದ 5 ಮಹಡಿಗಳನ್ನು ಈ ಅರಮನೆ ಹೊಂದಿದೆ. ಅರಮನೆಯ ಸುತ್ತಲೂ ಅಧ್ಭುತವಾದ ದೊಡ್ಡ ಉದ್ಯಾನವನವಿದೆ. ರಾತ್ರಿ ಸಮಯದಲ್ಲಿ ಈ ಅರಮನೆಗೆ ಮಾಡಿರುವ ದೀಪಾಲಂಕಾರದಿಂದ ನೋಡೋದಕ್ಕೆ ಬಂಗಾರದ ಗುಡಿಯಂತೆ ಇರುತ್ತೆ.

 ಅರಮನೆಯ ಆವರಣದಲ್ಲಿ 12 ದೇವಸ್ಥಾನಗಳಿವೆ. ಅವುಗಳಲ್ಲಿ ಪ್ರಸಿದ್ಧವಾದ ದೇವಸ್ಥಾನಗಳೆಂದರೆ ಸೋಮೇಶ್ವರ ದೇವಸ್ಥಾನ, ಲಕ್ಷ್ಮಿ ರಮಣ ದೇವಸ್ಥಾನ, ಗಣೇಶ ದೇವಸ್ಥಾನ, ಶ್ವೇತಾ ವರಹ ಸ್ವಾಮಿ ದೇವಸ್ಥಾನ. 14 ನೇ ಶತಮಾನದಲ್ಲಿ ಕಟ್ಟಿದ ಕೂಡಿ ಭೈರವನ ದೇವಸ್ಥಾನ ಕೂಡ ಇಲ್ಲಿ ಇದೆ. ಮೊಗಲ್ ಸಾಮ್ರಾಜ್ಯದ ಅರಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಕೋಣೆ ಎಂದರೆ ದಿವಾನ್ ಎ ಖಾಸ್. ಮುಖ್ಯವಾದ ಅತಿಥಿಗಳು ಬಂದಾಗ ಅವರನ್ನು ರಾಜರು ಭೇಟಿಯಗಲು ಈ ಕೋಣೆಯನ್ನು ಬಳಸುತ್ತಿದ್ದರು. ಇನ್ನು ಸಭೆ ನಡೆಸುತ್ತಿದ್ದ ಹಾಲನ್ನು ದರ್ಬಾರ ಅಂತ ಕರೀತಾರೆ. ಇಲ್ಲೇ ಜನರು ರಾಜರನ್ನು ನೋಡುತ್ತಿದ್ದರು. ರಾಜಮನೆತನದ ಸದಸ್ಯರು ಬಳಸುತ್ತಿದ್ದ ಆಯುಧಗಳನ್ನು ಇಲ್ಲಿ ಇಡಲಾಗಿದೆ. 14ನೇ ಶತಮಾನದಲ್ಲಿ ಉಪಯೋಗಿಸುತ್ತಿದ್ದ ಖಡ್ಗ, ಸುರಗಿ, ವ್ಯಾಘ್ರ ನಕ ಮೊದಲಾದ ಆಯುಧಗಳಿಂದ ಹಿಡಿದು 20ನೇ ಶತಮಾನದ ಪಿಸ್ತೂಲುಗಳು ಬಂದೂಕುಗಳನ್ನು ಇಲ್ಲಿ ಕಾಣಬಹುದು. ಮುಖ್ಯವಾಗಿ ಒಡೆಯರ್ ವಂಶದ ಪ್ರಸಿದ್ಧ ಅರಸ ರಣಧೀರ್ ಕಂಠೀರವ ಉಪಯೋಗಿಸುತ್ತಿದ್ದ ಖಡ್ಗಗಳಲ್ಲಿ ಒಂದಾದ ವಜ್ರಮುಷ್ಟಿ ಹಾಗೂ ಟಿಪ್ಪು ಸುಲ್ತಾನ್ ಮತ್ತು ಹೈದರಾಲಿ ಉಪಯೋಗಿಸುತ್ತಿದ್ದ ಕೆಲವೊಂದು ಇಲ್ಲಿ ಕಾಣಬಹುದು. ಇನ್ನೂ, ಮೈಸೂರು ಮಸಾಲ ದೋಸೆ, ಮೈಸೂರಿನ ವೀಳ್ಯದೆಲೆ, ಮೈಸೂರು ಪಾಕ್, ಮೈಸೂರಿನ ಸ್ಯಾಂಡಲ್ ಸೂಪ್, ಮೈಸೂರು ಮಲ್ಲಿಗೆ ಹೀಗೆ ವಿವಿಧ ತರದ ಮೈಸೂರು ಬ್ರಾಂಡ್ಗಳು ದೇಶದಾದ್ಯಂತ ಹೆಸರುವಾಸಿಯಾಗಿವೆ.

ಕುಕ್ಕರಳ್ಳಿ ಕೆರೆ, ರಂಗನತಿಟ್ಟು ಪಕ್ಷಿಧಾಮ, ಮೃಗಾಲಯ, ಕೆ ಆರ್ ಎಸ್, ಕಾರಂಜಿಕೆರೆ,  ಮುಡುಕುತೊರೆ, ಬಲಮುರಿ, ಎಡಮುರಿ, ನಿಮಿಷಾಂಬಾ ದೇಗುಲ, ಶ್ರೀರಂಗಪಟ್ಟಣ, ಚಾಮುಂಡಿ ಬೆಟ್ಟ, ಅರಮನೆ, ಮ್ಯೂಸಿಯಂ, ಲಲಿತ್ ಮಹಲ್ ಅರಮನೆ ಚಂದನವನ ಹೀಗೆ ಮೈಸೂರಿನಲ್ಲಿ ನೀವು ನೋಡಲಾಗದ ಸ್ಥಳಗಳೆ ಇಲ್ಲ. ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ, ಪೌರಾಣಿಕ ಹೀಗೆ ವೈವಿಧ್ಯಮಯವಾದ ಸಾಂಕೇತಿಕಗಳನ್ನ ಮೈಸೂರು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಇಲ್ಲಿಯ ಪ್ರಕೃತಿ ಸೌಂದರ್ಯ, ಬೆಟ್ಟ,ಗುಡ್ಡ, ಕಾಡು, ಮೇಡು, ಶಿಖರ, ಶ್ರೇಣಿ, ಪಕ್ಷಿಧಾಮ,ಹಸಿರು, ನದಿ, ಹಳ್ಳ ಮುಂತಾದವುಗಳೆಲ್ಲ ನೋಡಲು ಕಣ್ಣಿಗೆ ಹಬ್ಬ.

 

Category:Travel



ProfileImg

Written by aishwarya chimmalagi

journalist