ಊರಿಗೆ ಊರೇ ತಣ್ಣಗೆ ಕೂತಿತ್ತು ಸರಿ ರಾತ್ರಿ ಅಮಾವಾಸ್ಯೆಯ ಕಡುಗತ್ತಲೆಯಲ್ಲಿ ಊರಿನ ಯಾರೊಬ್ಬರಿಗೂ ನಿದ್ರೆಯಿಲ್ಲ. ಎಲ್ಲರ ಕಿವಿಯೂ ನೆಟ್ಟಗಾಗಿತ್ತು. ಊರಿಗೆ ಅಂಟುಕೊಂಡಂತಿದ್ದ ಆ ಬೆಟ್ಟದ ಕಡೆಗೆ ಎಲ್ಲರ ದೃಷ್ಠಿ ನೆಟ್ಟಿತ್ತು. ಏನೂ ಅರಿಯದ ಸಣ್ಣಪುಟ್ಟ ಕಂದಮ್ಮಗಳ ನಿದ್ರೆಯಷ್ಟೇ ಹೊರತುಪಡಿಸಿ ಊರಿನ ಯಾವೊಬ್ಬ ನರಪಿಳ್ಳೆಯೂ ಮಲಗಿರಲಿಲ್ಲ. ಇಡೀ ಊರ ತುಂಬ ನೀರವ ಮೌನ. ಪ್ರತೀ ಮನೆಯಲ್ಲೂ ದೀಪದ ಮಿಣುಕು ಸಣ್ಣದಾಗಿ ಇಣುಕುತ್ತಿತ್ತು. ಬೀಸುತ್ತಿದ್ದ ಗಾಳಿಯ ಸದ್ದೂ ಕೂಡ ವಿಚಿತ್ರವಾಗಿ ಕೇಳುತ್ತಿತ್ತು. ಊರ ಮರಗಳ ಬೀಸುವಿಕೆಯ ಸದ್ದುಕೂಡ ಒಂದು ರೀತಿಯ ಭಯ ಹುಟ್ಟಿಸುವಂತಿತ್ತು. ಅಲ್ಲಲ್ಲಿ ಊರಿನ ಹಿರಿ ಜೀವಗಳ ಕೆಮ್ಮುವ ಸದ್ದು ಕೂಡ ಒಂದು ರೀತಿಯ ವಿಚಿತ್ರ ಶಬ್ಧ ಹೊಮ್ಮಿಸುತ್ತಿತ್ತು. ಎಲ್ಲರ ಕಿವಿ ಚುರುಕಾಗಿ ಬೆಟ್ಟದ ಕಡೆಗೇ ನೆಟ್ಟಿತ್ತು.
ಊರ ನಡುವಿನ ಅರಳೀಮರದ ಕಟ್ಟೆಯ ಮೇಲೆ ಕೂತಿದ್ದ ಒಂದಷ್ಟು ಹದಿಹರೆಯದ ವಯಸ್ಸಿನ ಹುಡುಗರ ಗುಂಪೊಂದು ಏನೋ ಸಾಹಸ ಮಾಡಲು ಹೊರಟವರಂತೆ ಸಿದ್ಧರಾಗಿ ನಿಂತಿದ್ದರು. ಎಲ್ಲರ ಕೈನಲ್ಲೂ ಬಡಿಗೆ, ದೊಣ್ಣೆ, ಮಚ್ಚು, ಹಾರೆಗಳು, ಕೊಡಲಿಗಳು ತಯಾರಾಗಿದ್ದವು. ಅದೊಂದು ಸದ್ದಿಗಾಗಿ ಎಲ್ಲರೂ ಕಾಯುತ್ತಿದ್ದರು. ಗುಂಪಿನ ನಡುವಿನಲ್ಲಿಂದ ಒಬ್ಬ ಯುವಕ ಮಾತನಾಡುತ್ತಾ "ಲೇಯ್ ಕೇಳುಸ್ಕೊಳ್ರುಲಾ ಒಬ್ಬನುವೇ ತಡಮಾಡಂಗಿಲ್ಲ. ಸದ್ದಾದ್ ಕೂಡ್ಲೇ ಎಲ್ಲಾವನೂ ಓಡ್ಬೇಕು. ಅದೆಲ್ಲಿಂದ ಸದ್ದು ಬತ್ತದೋ ಆ ದಿಕ್ಕಿಗ್ ನುಗ್ಗಿ ಸಿಕ್ರೆ ಅದುನ್ನ ಬುಡ್ಬ್ಯಾಡ್ರೀ ಕತ್ತರುಸ್ಕೊಂಡ್ ಬನ್ನಿ ನಾಳೀಕೆ ಅದೇ ಅಮಾಸೇ ಊಟ ಮಾಡುವ. ಸರಿಯಾಗಿ ಉಡುಕ್ರೀ ಬುಡ್ಬ್ಯಾಡ್ರೀ"
ಅಲ್ಲೆಲ್ಲೋ ದೂರದಲ್ಲಿ ಊರಿನ ಹಿರಿ ಮನೆಯ ಬಳಿ ಕೂತಿದ್ದ ಒಂದಷ್ಟು ಜನ ಹಿರಿಯರು ಬಾಯಲ್ಲಿ ಬೀಡಿ ಕಚ್ಚಿಕೊಂಡು ಹೊಗೆ ಉಗುಳುತ್ತಾ ಕೆಮ್ಮುತ್ತಾ ಕೂತಿದ್ದರು. ಅದರಲ್ಲೊಬ್ಬ ಅಜ್ಜ "ಈ ಬಾರಿ ಅದೇನ್ ಕಂಟಕ ಕಾದದೋ, ಅದೇನಾಯ್ತದೋ.. ಈ ತುಂಡೈಕ್ಳುಗೆ ಏಟ್ ಯೋಳುದ್ರೂ ಕೇಳಾಕಿಲ್ಲ. ವಾದ್ ವರ್ಸ ಸುರುವಾಗಿದ್ದು ಈ ಕರ್ಮ ಅದೇನ್ ಮಾರಿ ಬಂದ್ ಕೂತದೋ ಅದೇನೋ ದ್ಯಾವುರ್ಗೇ ಗೊತ್ತು ಸಿವ ಸಿವ ಕಾಪಾಡೋ" ಎನ್ನುತ್ತಿದ್ದಂತೆ "ಅಲ್ ಕಣ್ಲಾ ನಿಂಗ್ ನೆಪ್ಪದಾ ವಾದ್ ವರ್ಸ ಇದ್ದುಕ್ಕಿದ್ದಂಗೆ ಊರಾಚ್ಲು ಮನೆ ರಂಗ ಕಳ್ದೋದ ಅವತ್ ಸುರು ಆಗಿದ್ದು ಇದೂ ಮಾರೀನೂ ಅಲ್ಲ ಮಸಣೀನೂ ಅಲ್ಲ. ಆ ರಂಗ್ನೇ ದಯ್ಯ ಆಗಿ ಈ ವೂರ್ ಕಾಡ್ತಾವ್ನೇ.. ಆ ಚೌಡವ್ನೇ ಕಾಪಾಡ್ಬೇಕು ಈ ವೂರಾ.." ಎನ್ನುತ್ತ ಮತ್ತೊಬ್ಬ ಅಜ್ಜ ನುಡಿದ. "ಅಯ್ಯೋ ರಂಗ ಸತ್ತಿದ್ರೆ ಅವ್ನ ಯೆಣ ಸಿಗ್ಬೇಕಿತ್ತು ಕಲಾ ಅವ್ನು ಎಲ್ಲೋ ದೇಸಾಂತ್ರ ವೋಗವ್ನೇ ಇತ್ತೀಚ್ಗೆ ನಮ್ಮೂರ್ ವುಡ್ಗ ವೊಬ್ಬ ಪ್ಯಾಟೆನಾಗೆ ಅವನ್ನ ನೋಡುದ್ನಂತೆ" ತಲೆಗೊಂದರಂತೆ ಊರಿನ ಹಿರಿಯರು ಮಾತನಾಡುತ್ತಿದ್ದರು. ಎಲ್ಲವೂ ಗೊಂದಲಮಯವಾಗಿತ್ತು.
ಸರಿ ಸುಮಾರು ಮಧ್ಯ ರಾತ್ರಿಯ ಒಂದೂವರೆಯ ಹೊತ್ತಿಗೆ ಸರಿಯಾಗಿ ಬೆಟ್ಟದ ಕಡೆಯಿಂದ ಆ ಸದ್ದು ಕೇಳಿಯೇಬಿಡ್ತು. ಬೆಟ್ಟದ ಕಡೆಯಿಂದ ಮಧ್ಯರಾತ್ರಿ ಒಂದೂವರೆ ಹೊತ್ತಿಗೆ ಸರಿಯಾಗಿ ಬಲವಾದ ಕೋಳಿಯೊಂದು ಕೊಕ್ಕೊಕ್ಕೊಕ್ಕೋ.... ಎಂದು ಅರುಚಲಾರಂಭಿಸಿತ್ತು. ಯಾವುದೋ ಬಲವಾದ ಸರಿಯಾದ ತೂಕವುಳ್ಳ ಹುಂಜದ ದನಿಯೊಂದು ಕೂಗುವ ಸದ್ದು ಕೇಳುತ್ತಿದ್ದಂತೆ ಇಡೀ ಊರಿಗೂರೇ ಬೆಚ್ಚಿಬಿದ್ದಿತ್ತು. ಊರ ನಡುವೆ ನಿಂತಿದ್ದ ಊರ ಹುಡುಗರೆಲ್ಲಾ ಬೆಟ್ಟದ ಕಡೆಗೆ ಓಡತೊಡಗಿದರು. ಇಡೀ ಊರಿನ ತುಂಬಾ ಗದ್ಧಲ ಶುರುವಾಗಿತ್ತು. ಸುಮಾರು ಎರಡು ಮೂರು ನಿಮಿಷಗಳ ಕಾಲ ಸತತವಾಗಿ ಕೊಕ್ಕೊಕ್ಕೊಕ್ಕೋ.. ಎಂದು ಸುಧೀರ್ಘವಾದ ಸದ್ದು ಕೇಳುತ್ತಲೇ ಇತ್ತು. ಹಿಂದಿಂದೆ ಹಿಂದಿದೆ ಕೋಳಿ ಕೂಗುತ್ತಲೇ ಇತ್ತು. ಊರ ಹುಡುಗರು ಗದ್ದಲ ಸದ್ದು ಮಾಡುತ್ತಾ ಕಿರುಚುತ್ತಾ ಗುಡ್ಡದ ಕಡೆಗೆ ಓಡುತ್ತಿದ್ದರು. ಅವರು ಗುಡ್ಡ ತಲುಪುತ್ತಿದ್ದಂತೆ ಕೋಳಿ ಕೂಗುವ ಸದ್ದು ತನ್ನಿಂತಾನೇ ನಿಂತು ಹೋಯಿತು. ಹುಡುಗರೆಲ್ಲಾ ಇಬ್ಬಿಬ್ಬರಂತೆ ಚದುರಿ ಗುಡ್ಡದ ತುಂಬ ಮೂಲೆ ಮೂಲೆಯಲ್ಲೂ ಹುಡುಕುತ್ತಿದ್ದರು. ಊಹೂಂ ಯಾವುದೇ ಕೋಳಿಯಾಗಲೀ ಹುಂಜನಾಗಲೀ ಕಾಣುತ್ತಿಲ್ಲ. ಕಗ್ಗತ್ತಲ ಹೊತ್ತಿನಲ್ಲಿ ಬ್ಯಾಟರಿ ಹಿಡಿದು ಎಲ್ಲ ಕಡೆಗಳಲ್ಲೂ ಬೆಳಕು ಬೀರುತ್ತಾ ಹುಡುಗರು ಹುಡುಕುತ್ತಾ ಹುಡುಕುತ್ತಾ ಸರಿಯಾಗಿ ನಲವತ್ತು ನಿಮಿಷ ತಡಕಾಡಿದರೂ ಯಾವುದೇ ಸುಳಿವಿಲ್ಲ. ಎಲ್ಲರೂ ಹುಡುಕುತ್ತಾ ಗುಡ್ಡದ ನಡುವಿಗೆ ಎತ್ತರದ ಪ್ರದೇಶಕ್ಕೆ ಬಂದು ತಲುಪಿದ್ದೇ ತಡ. ಇಡೀ ಬೆಟ್ಟದ ಸುತ್ತ ಬಗ್ಗನೆ ಬೆಂಕಿ ಹೊತ್ತಿಕೊಂಡಿತ್ತು. ಗುಡ್ಡದ ಸುತ್ತಮುತ್ತಲಿದ್ದ ಒಣಗಿದ ಕುರುಚಲು ಗಿಡಗಳು, ಹುಲ್ಲು ಎಲ್ಲವೂ ಕ್ಷಣಮಾತ್ರದಲ್ಲಿ ಹೊತ್ತಿ ಉರಿಯಲು ಆರಂಭಿಸಿತ್ತು.
ಬೆಂಕಿ ಉರಿಯುವ ಸದ್ದು ಕೇಳಿ ಊರಿನ ಗಂಡಸರೆಲ್ಲ ಗುಡ್ಡದ ಕಡೆಗೆ ಓಡತೊಡಗಿದರು. "ಬೇಡವೆಂದರೂ ಕೇಳಲಿಲ್ಲ ಈ ಐಕ್ಳೂ ಅಯ್ಯೋ ಇಡೀ ಬೆಟ್ಟ ಉರೀತಾದಲ್ಲ ಸಿವ್ನೇ.. ಓಡ್ರೋ ಓಡ್ರೋ" ಎಂದು ಗಂಡಸರು ಗುಡ್ಡದ ಕಡೆಗೆ ಓಡಿ ಬರುತ್ತಿದ್ದರೆ. ಗುಡ್ಡದ ನಡುವಿನಲ್ಲಿ ಬೆಂಕಿಗೆ ಸಿಕ್ಕಿ ಹಾಕಿಕೊಂಡ ಯುವಕರೆಲ್ಲಾ ಕಕ್ಕಾಬಿಕ್ಕಿಯಾಗಿ ಹೆದರತೊಡಗಿದರು. ಕೆಲವರು ಹೇಗೋ ಗುಡ್ಡದಿಂದ ಕೆಳಗಿಳಿದು ಬೆಂಕಿ ಕಡಿಮೆಯಿರುವ ಕಡೆ ಹಾರಿದರು. ಕೆಲವರೋ ಆ ಬೆಂಕಿಯ ಮಧ್ಯೆಯೇ ಓಡಿ ಬಂದರು. ಕೆಲವರು ಓಡುವಾಗ ಅವರ ಬಟ್ಟೆಗಳಿಗೆ ಬೆಂಕಿ ತಗುಲಿತ್ತು. ಊರಿನಿಂದ ಬಂದಿದ್ದ ಗಂಡಸರು ಒಬ್ಬೊಬ್ಬರಾಗಿ ಹುಡುಗರನ್ನು ಉಳಿಸಲು ಪ್ರಯತ್ನಿಸುತ್ತಿದ್ದರು.
ಸುಮಾರು ಹತ್ತು ಹದಿನಾರು ಜನ ಹುಡುಗರು ಹೇಗೋ ಮೈ ಕೈ ಸುಟ್ಟು ಗಾಯಗೊಂಡು ಗುಡ್ಡದಿಂದ ಹೊರಗೆ ಬಂದಿದ್ದರು. ಊರಲ್ಲಿ ಹೆಂಗಸರ ಆರ್ಭಟ ಚೀರಾಟ ಜೋರಾಗಿತ್ತು. ಅವರವರ ಮಕ್ಕಳನ್ನ ಅವರವರು ಹುಡುಕುತ್ತಾ ಹೆಂಗಸರು ಓಡಿ ಬಂದು ಮಕ್ಕಳನ್ನು ಸಲಹುತ್ತಾ ಗಾಯಗೊಂಡವರನ್ನು ಹಾರೈಕೆ ಮಾಡುತ್ತಿದ್ದರು. ಇಡೀ ಊರೇ ಗದ್ದಲ, ಅರಚಾಟ, ಚೀರಾಟದಿಂದ ಬೆದರಿಹೋಗಿತ್ತು.
ಗುಡ್ಡ ಮಾತ್ರ ಕಾಮನ ಹಬ್ಬದಲ್ಲಿ ಸುಡುವ ಹಳೇ ಕಿಚ್ಚಿನಂತೆ ಇಡೀ ಬೆಟ್ಟ ಹೊತ್ತಿಕೊಂಡಿತ್ತು. ಎಲ್ಲರೂ ಹೇಗೋ ಬಂದು ಊರು ತಲುಪಿದರು. ಅಲ್ಲಿಗೆ ಸಮಯ ಸರಿಯಾಗಿ ಆರು ಗಂಟೆಯಾಗಿತ್ತು. ಬೆಟ್ಟದ ಬೆಂಕಿ ಆರಿ ಹೊಗೆ ಊರ ತುಂಬಾ ತುಂಬಿತ್ತು. ಎಲ್ಲರೂ ತಮ್ಮ ತಮ್ಮ ಮಕ್ಕಳನ್ನು ಸಲಹುತ್ತಿದ್ದರು. ಕೆಲವರ ಮೈ ಕೈ ಸುಟ್ಟಿತ್ತು, ಕೆಲವರ ಕೂದಲು ತಲೆ ಸುಟ್ಟಿತ್ತು ಕೆಲವರ ಕೈ ಕಾಲುಗಳು ಮುರಿದಿದ್ದವು. ಒಟ್ಟಿನಲ್ಲಿ ಒಂದೇ ರಾತ್ರಿಯಲ್ಲಿ ಇಡೀ ಊರಿನ ಯುವಕರೆಲ್ಲಾ ಅರೆಬರೆ ಜೀವವಾಗಿದ್ದರು.
ಅವರವರು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರೆ. ಗುಂಪಿನ ನಡುವಿನಿಂದ ಯಲ್ಲಮ್ಮ ಎಂಬ ಹೆಂಗಸು ಚಿಟಾರನೇ ಚೀರುತ್ತಾ "ಅಯ್ಯೋ ನನ್ ಮಗ ಕಾಣ್ತಿಲ್ಲ, ಅಯ್ಯೋ ನನ್ ಮಗ ಅಸೋಕ ಕಾಣ್ತಿಲ್ಲ" ಎಂದು ಅರುಚತೊಡಗಿದಳು. ಇಡೀ ಊರ ಯುವಕರ ಗುಂಪು ವಾಪಾಸಾಗಿತ್ತಾದರೂ ಅದರ ಮಧ್ಯದಲ್ಲಿ ಅಶೋಕ ಎಂಬ ಒಬ್ಬ ಹುಡುಗ ಮಾತ್ರ ಕಾಣೆಯಾಗಿದ್ದ.
ಇಡೀ ಊರಿನ ಜನ ಗಾಬರಿಯಿಂದ ಗುಡ್ಡದ ಕಡೆಗೆ ನೋಡುತ್ತಿದ್ದರು. ಗುಡ್ಡ ಹೊತ್ತಿ ಉರಿದು ಕೆಂಡ ಹಾಗೇ ಇದ್ದ ಕಾರಣ ಅಲ್ಲಲ್ಲಿ ಹೊಗೆ ಕಾಣಿಸುತ್ತಿತ್ತು. ಗುಡ್ಡದ ಹಿಂದಿನಿಂದ ಕೆಂಪನೆ ಬಣ್ಣದಲ್ಲಿ ಸೂರ್ಯ ಕಾಣಿಸತೊಡಗಿದ್ದ. ಯಲ್ಲಮ್ಮ ಮಾತ್ರ ನೆಲಕ್ಕೆ ಬಿದ್ದು ಅಸೋಕಾ, ಅಸೋಕಾ, ಎಂದು ಚೀರುತ್ತಿದ್ದಳು.
(ಮುಂದುವರೆಯುವುದು)