ತುಳುವರ ಆರಾಧ್ಯ ದೈವವಾದ ಬ್ರಾಹ್ಮಣ ಕನ್ಯೆ: ಮುಕಾಂಬಿ ಗುಳಿಗ - ಡಾ.ಲಕ್ಷ್ಮೀ ಜಿ ಪ್ರಸಾದ

ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ

ProfileImg
19 May '24
7 min read


image

ತುಳುವರ ಆರಾಧ್ಯ ದೈವವಾದ ಬ್ರಾಹ್ಮಣ ಕನ್ಯೆ: ಮುಕಾಂಬಿ ಗುಳಿಗ 

ಭೂತಾರಾಧನೆ ತುಳುನಾಡಿನ ವಿಶಿಷ್ಟ ಆರಾಧನಾ ಪದ್ಧತಿ.ಯಕ್ಷಗಾನಕ್ಕೆ ಕೂಡ ಮೂಲವಾಗಿರಬಹುದಾದ ಭೂತಾರಾಧನೆ ಒಂದು ಧಾರ್ಮಿಕ ರಂಗಭೂಮಿ ಕೂಡಾ . ಈ ಬಗ್ಗೆ ನನಗೆ ತೀವ್ರ ಕುತೂಹಲ ಆಸಕ್ತಿ. ತುಳು ಸಂಸ್ಕೃತಿ ಜಾನಪದ ಭೂತಾರಾಧನೆಗಳ ಕುರಿತಾದ ತೀವ್ರ ಸೆಳೆತದ ಕಾರಣದಿಂದ ಸಂಶೋಧನಾತ್ಮಕ ಅಧ್ಯಯನವನ್ನು ಮುಂದುವರಿಸುವ ಸಲುವಾಗಿಯೇ ಬೆಳ್ಳಾರೆಗೆ ಬಂದ ನನಗೆ ಬೆಳ್ಳಾರೆಯ ಸ್ಥಳ ದೈವ ಮಹಾಲಿಂಗೇಶ್ವರ ದೇವಾಲಯದ ಉತ್ಸವ ಸಂದರ್ಭದಲ್ಲಿ ಅಗ್ನಿ ಚಾಮುಂಡಿ ಗುಳಿಗ ಎಂಬ ಭೂತಕ್ಕೆ ಆರಾಧನೆ ಇರುವುದು ತಿಳಿಯಿತು.ಈ ಭೂತ ಬೆಂಕಿಯನ್ನು ತಿನ್ನುತ್ತದೆ ಇದಕ್ಕೆ ಬೆಂಕಿಯೇ ಆಹಾರ ಎಂಬ ನಂಬಿಕೆ ಅಲ್ಲಿ ಪ್ರಚಲಿತವಿತ್ತು .ಆ ತನಕ ನಾನು ಅಗ್ನಿ ಚಾಮುಂಡಿ ಗುಳಿಗನ ಹೆಸರನ್ನು ಕೂಡಾ ಕೇಳಿರಲಿಲ್ಲ. ಅದರ ಕುರಿತಾದ ಪ್ರತೀತಿ ಇನ್ನಷ್ಟು ಕುತೂಹಲ ಉಂಟು ಮಾಡಿತು .ಈ ಬಗ್ಗೆ ದೇವಳದ ಅರ್ಚಕರಲ್ಲಿ ಹಾಗೂ ಸ್ಥಳೀಯರಲ್ಲಿ ವಿಚಾರಿಸಿದೆ .ಆಗ "ಈ ದೈವಕ್ಕೆ ಅಗ್ನಿ ಬಹಳ ಪ್ರಿಯ. ಅಗ್ನಿಯೇ ಅದರ ಆಹಾರ. ಆದ್ದರಿಂದ ಇದನ್ನು ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ಅಷ್ಟ ಮಂಗಳ ಪ್ರಶ್ನೆಯಲ್ಲಿ ಕಂಡು ಬಂದಿದೆ" ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದರು .ಭೂತ ಕುರಿತು ಮಾಹಿತಿ ಭೂತ ಕಟ್ಟುವ ಕಲಾವಿದರಿಗೆ ತಿಳಿದಿರುತ್ತದೆ. ಅವರು ಹೇಳುವ ಪಾಡ್ದನದಲ್ಲಿ ಭೂತದ ಕಥೆ ಇರುತ್ತದೆ. ಆ ತನಕ ಅಗ್ನಿ ಚಾಮುಂಡಿ ಗುಳಿಗ ಎಂಬ ಭೂತದ ಹೆಸರನ್ನು ನಾನು ಕೇಳಿರಲಿಲ್ಲ.ಹಾಗಾಗಿ ಡಾ || ಚಿನ್ನಪ್ಪ ಗೌಡರ ,ಡಾ. ವಿವೇಕ ರೈಗಳ ಪುಸ್ತಕದಲ್ಲಿನ ಭೂತಗಳ ಪಟ್ಟಿಯನ್ನು ನೋಡಿದೆ, ಅಲ್ಲೂ ಈ ಭೂತದ ಹೆಸರು ಇರಲಿಲ್ಲ.
ತುಳುನಾಡಿನ ಭೂತಗಳು ಮಖ್ಯವಾಗಿ ಮೂರು ವಿಧ. ಒಂದು ಮಾನವ ಮೂಲದ ದೈವಗಳು. ಕೊರಗ ತನಿಯ, ಕೋಟೆದ ಬಬ್ಬು, ಮುಕಾಂಬಿ ಗುಳಿಗ, ಬಬ್ಬರ್ಯ ,ಕೋಟಿ ಚೆನ್ನಯ, ಮುದ್ದ ಕಳಲ ಮೊದಲಾದ ಭೂತಗಳು ಈ ವರ್ಗದಲ್ಲಿ ಬರುತ್ತವೆ. ಎರಡನೆಯ ವರ್ಗ ಪ್ರಾಣಿ ಮೂಲ ದೈವಗಳು ಪಂಜುರ್ಲಿ, ಪಿಲಿ ಭೂತ , ಮೊದಲಾದವು ಈ ವರ್ಗದಡಿಯಲ್ಲಿ ಸೇರುತ್ತವೆ. ಮೂರನೆಯ ವರ್ಗ ಪುರಾಣ ಮೂಲ ದೈವಗಳು ರಕ್ತೇಶ್ವರಿ ,ಗುಳಿಗ, ಧೂಮಾವತಿ(ಜುಮಾದಿ ), ಚಾಮುಂಡಿ ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ .ಅಗ್ನಿ ಚಾಮುಂಡಿ ಗುಳಿಗ ಕೂಡಾ ಒಂದು ಪುರಾಣ ಮೂಲ ದೈವ ಇರಬಹುದು ಎಂದು ನಾನು ಭಾವಿಸಿದೆ. ತುಳುನಾಡಿನಲ್ಲಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ ಚಾಮುಂಡಿ, ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಚಾಮುಂಡಿ, ಪಾಪೆಲು ಚಾಮುಂಡಿ ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ ‘ಚಾಮುಂಡಿ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿ.ಆದ್ದರಿಂದ ಅಗ್ನಿಚಾಮುಂಡಿ ಭೂತದ ಬಗ್ಗೆ ಅಧ್ಯಯನಮಾಡುವುದಕ್ಕಾಗಿ ಈ ಭೂತದ ನೇಮದಂದು ಕ್ಯಾಮೆರಾ ಮತ್ತು ರೆಕಾರ್ಡರ್ ಹಿಡಿದುಕೊಂಡು ಹೋದೆ .ರಾತ್ರಿ ಊಟದ ನಂತರ ಅಗ್ನಿ ಚಾಮುಂಡಿ ಭೂತದ ನೇಮ ಇತ್ತು .ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಬಂದ ಭೂತ ಕಟ್ಟುವ ಕಲಾವಿದ ಬಾಬು ಅರಂಬೂರು ಅವರು ಭೂತ ಕಟ್ಟಲು ಬೇಕಾದ ಪರಿಕರಗಳನ್ನು ಸಿದ್ಧಮಾದುತ್ತಿದ್ದರು .ಮೊದಲೇ ನನಗೆ ಅವರ ಪರಿಚಯ ಇತ್ತು.
ನಾನು ಹೋದಾಗ ನನಗೆ ಬೇಕಾದ ಮಾಹಿತಿಗಳನ್ನು ನೀಡಿದರು .ಭೂತ ಕಟ್ಟುವ ಕಲಾವಿದರು ಭೂತ ಕಟ್ಟಲು (ವೇಷ ಹಾಕಲು )ಸುರು ಮಾಡಿದ ಮೇಲೆ ಬೇರೆ ಯಾವುದೇ ವಿಚಾರಗಳನ್ನು ಮಾತಾಡುವುದಿಲ್ಲ .ಅವರಿಗೆ ಸಮಯವೂ ಇರುವುದಿಲ್ಲ. ಭೂತ ಕಟ್ಟಿ ಸಿದ್ಧವಾಗಲು ಸುಮಾರು ೩-೪ ಗಂಟೆ ಸಮಯ ಬೇಕಾಗುತ್ತದೆ .ಮೊದಲು ಒಡೆಯನಿಂದ ಭೂತ ಕಟ್ಟಲು ಆಣತಿ ಪಡೆದು ಎಣ್ಣೆ ಬೂಲ್ಯ ಪಡೆದು ಸ್ನಾನಮಾಡಿ ಬರುತ್ತಾರೆ .ಎಣ್ಣೆ ಬೂಲ್ಯ ಪಡೆಯುವಾಗ ದೈವಸ್ಥಾನದ ಎದುರು ನಿಂತು ದೈವದ ಎದುರು ನೇಮವನ್ನು ಯಾವುದೇ ಅಡ್ಡಿ ಆತಂಕ ಬಾರದಂತೆ ನೆರೆವೇರಿಸಿಕೊಡು ಎಂದು ಅರಿಕೆ ಮಾಡುತ್ತಾರೆ. ಆಗ ದೈವದ ಕಥಾನಕವನ್ನು ಸಂಕ್ಷಿಪ್ತವಾಗಿ ಹೇಳುತ್ತಾರೆ. ಅಗ್ನಿ ಚಾಮುಂಡಿ ಗುಳಿಗ ಉಗ್ರ ಸ್ವಭಾವದ ದೈವ .ಈ ದೈವದ ಆವೇಶ ಪುರಿಥ ಅಟ್ಟಹಾಸ ಉಗ್ರ ನರ್ತನ ನೋಡುಗರ ಎದೆ ಕಂಪಿಸುವಂತೆ ಮಾಡುತ್ತದೆ .ಮಾನವ ಮೂಲದ ಈ ದೈವದ ಉಗ್ರ ಅಭಿನಯ ,ಆಕ್ರೋಶ ,ಅಟ್ಟಹಾಸಗಳು ದೈವತ್ವ ಪ್ರಾಪ್ತಿಗೆ ಮೊದಲು ನಡೆದ ಅನ್ಯಾಯದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿದೆ ಮುಖಕ್ಕೆ ಅರದಲ ಹಚ್ಚಿ ಮೇಲೆ ಇಟ್ಟ ಬಿಳಿಬಣ್ಣದ ಚುಕ್ಕಿ, ಹಳದಿ ಬಣ್ಣದ ಗೆರೆಗಳು. ತುಟಿಯ ಮೇಲಿನ ಗುಲಾಬಿವರ್ಣದ ಗೆರೆಗಳು ಈ ಭೂತದ ಮುಖವರ್ಣಿಕೆಯಲ್ಲಿದ್ದು ಭೂತಕ್ಕೆ ಒಂದು ವಿಶಿಷ್ಟ ಕಳೆಯಯನ್ನು ತಂದು ಚಾಮುಡಿ ಗುಳಿಗ ಬೆಂಕಿಯನ್ನು ಪ್ರವೇಶ ಮಾಡುವಾಗ ಮೈ  ರೋಮಾಂಚನಗೊಳ್ಳುತ್ತದೆ .ಇತರ ಭೂತಗಳಂತೆ ಆಳೆತ್ತರದ ಅಣಿ ಇರುವುದಿಲ್ಲ ,ಅದರ ಬದಲಿಗೆ ಕಲಾತ್ಮಕವಾಗಿ ತಯಾರಿಸಿದ ತೆಂಗಿನ ತಿರಿಯ ತಲೆ ಪತ್ತವಿರುತ್ತದೆ. ಅಲ್ಲಿ ರೆಕಾರ್ಡಿಂಗ್ ಗೆ ಏನೂ ತೊಂದರೆ ಆಗಲಿಲ್ಲ. ಸ್ಥಳೀಯರು ಹಾಗೂ ಭೂತ ಕಟ್ಟಿದ ಕಲಾವಿದ ಬಾಬು ,ಕಾಂತು ಹಾಗೂ ಅವರ ಕುಟುಂಬದ ಸದಸ್ಯರು ಎಲ್ಲರು ಪೂರ್ಣ ಸಹಕಾರ ನೀಡಿದರು . ಇದರಿಂದಾಗಿ ಅವರು ಹೇಳುವ ಆ ಭೂತದ ಪಾಡ್ದನವನ್ನು ರೆಕಾರ್ಡ್ ಮಾಡಿದೆ .ಇದರಿಂದಾಗಿ ಮೂಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಗುಳಿಗ ಎಂದು ಕರೆದು ಅಲ್ಲಿ ಆರಾಧಿಸುತ್ತಿದ್ದಾರೆ. ಎಂದು ನನಗೆ ಅಲ್ಲಿ ತಿಳಿದು ಬಂತು ಅಗ್ನಿ ಚಾಮುಂಡಿ ಗುಳಿಗ ನೇಮದ ವಿಧಾನಗಳು, ಅಗ್ನಿ ಚಾಮುಂಡಿಯ ಮುಖಮರ್ಣಿಕೆ ಹಾಗೂ ನೇಮದ ಸಂದರ್ಭದಲ್ಲಿ ಹೇಳುವ ಪಾಡ್ದನಗಳಿಂದ ಮುಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ಸ್ಪಷ್ಟವಾಗಿ ಗೊತ್ತಾಯಿತು ನನಗೆ.
ಮುಕಾಂಬಿ ಎಂಬ ಬ್ರಾಹ್ಮಣ ಕನ್ಯೆಗೆ ಬಹಳ ಎಳೆಯದರಲ್ಲಿಯೇ ವಾಸಲ್ಲ ಭಟ್ಟರೊಂದಿಗೆ ವಿವಾಹವಾಗುತ್ತದೆ. ವಿವಾಹವಾದ ತುಸು ಸಮಯದಲ್ಲಿ ಬರ ಬಂದು ಬಡತನ ಆವರಿಸಿ ಶಾಂತಿ ಪೂಜೆಗಾಗಿ ಕೇರಳಕ್ಕೆ ಹೊರಡುತ್ತಾರೆ. ಕೇರಳಕ್ಕೆ ಹೋಗುವಾಗ ಮಡದಿ ಮುಕಾಂಬಿ ಜೇವಿನ ಹತ್ತಿರ ತಂದೆ ಮನೆಗೆ ಹೋಗಲು ತಿಳಿಸಿದಾಗ ಅವಳು ತಂದೆ ಮನೆಗೆ ಹೋಗಲೊಪ್ಪದೆ ಹಠಮಾಡಿ ವಾಸುಲ್ಲ ಭಟ್ಟರೊಂದಿಗೆ ಬರುತ್ತಾಳೆ. ಕಷ್ಟ ಬಂದಾಗ ಗಂಡನ ಕೈ ಬಿಡಬಾರದೆಂದು, ನಾನು ಜೊತೆಗೆ ಬರುತ್ತೇನೆ ಎಂದು ಮೂಕಾಂಬಿ ಜೇವು ಹಠ ಹಿಡಿಯುತ್ತಾಳೆ.
ಓಹೋಯೆ ಮುಕಾಂಬಿ ಜೇವೆ ಈ ಕೇಂಡಾನ
ಯಾನಾಂಡ ಪೋಪೆ ತೆನ್ಕಾಯಿ ಸಾಂತಿ ಪೂಜೆಗ್
ಈಯಾಂಡ ನಿನ್ನಪ್ಪೆನಡೆ ಪೊವೊಡಿಯಾ
ಯಾನಾಂಡ ಪೋವಾಯೆ ಕೇಂಡಾರ
ಈರೆ ಕೈಪತ್ತಿ ದೋಸೊಗು ಬೆರಿ ಬುಡಯೆಂದಳ್
ಕನ್ನಡ ಅನುವಾದ:
ನಾನಾದರೂ ಹೋಗುವೆ ತೆಂಕು ಶಾಂತಿ ಪೂಜೆಗೆ
ನೀನಾದರು ನಿನ್ನ ತಾಯಿ ಮನೆಗೆ ಹೋಗಬೇಕು
ನಾನಾದರು ಹೋಗಲಾರೆ ಕೇಳಿದಿರಾ
ನಿಮ್ಮ ಕೈ ಹಿಡಿದ ದೋಷಕ್ಕೆ ಬೆನ್ನು ಬಿಡಲಾರೆ, ಎಂದಳು.
ಅದು ಹೆಂಗಸು ಹೋಗಬಾರದ ರಾಜ್ಯ. ಒಂದು ಬಳ್ಳ ಬತ್ತಕ್ಕೆ ತಲೆ ಕಡಿಯುವ ಜನರು ಅವರು. ನೀನು ಬರಬೇಡ, ನಿನ್ನ ತಂದೆ ಮನೆಯಲ್ಲಿ ಬಿಟ್ಟು ಹೋಗುತ್ತೇನೆ ಎಂದು ಗಂಡ ವಾಸುಭಟ್ಟರು ಹೇಳುತ್ತಾರೆ. ಆಗ ಮುಕಾಂಬಿ ಜೇವು ಮದುವೆಯ ನಂತರ ಬಡತನವಿದ್ದರೂ, ಸಿರಿತನವಿದ್ದರೂ ಹೆಣ್ಣಿಗೆ ಗಂಡನ ಮನೆಯೇ ಸರಿ ಎಂದು ವಾದಿಸುತ್ತಾಳೆ.
 

ಮದಿಮೆ ಆಪುನೆಕ್ ದುಂಬು ಮದಿಮಯ
ಅಪ್ಪೆ-ಅಮ್ಮೆ ಇಲ್ಲುದ ಪೇರುನುಪ್ಪು ಆವುಯೆ
ಮದಿಮೆ ಆಯಿಬೊಕ್ಕ ಕಂಡನಿ ಇಲ್ಲ್‌ದ
ಕಣನೀರ್‌ನುಪ್ಪು ಆವುಯೆ
ಈರೆನ ಒಟ್ಟುಗು ಬರ್ಪೆಂದಲ್ ಮುಕಾಂಬಿ
ಕನ್ನಡ ಅನುವಾದ :
ಮದುವೆ ಆಗುವುದಕ್ಕೆ ಮೊದಲು ಮದುಮಗ
ತಾಯ್ತಂದೆಗಳ ಮನೆಯ ಹಾಲನ್ನವಾದೀತು
ಮದುವೆಯಾದ ಮೇಲೆ ಗಂಡನ ಮನೆಯ
ಕಣ್ಣೀರು ಅನ್ನವೂ ಆದೀತು
ನಿಮ್ಮೊಂದಿಗೆ ಬರುವೆನೆಂದಳು ಮುಕಾಂಬಿ
ಆಗ ಗಂಡ ವಾಸುಭಟ್ಟರು
ಈಲ ಬರಡ ಮುಕಾಂಬಿಯೆ ನಿನನ್ ಬುಡಯೆ ಜೇವೆ
 ಎಂಕ್‌ಲ ಒಂದು ಬೂಡು ಕೇಂಡಾನ
ಸೈತ್ಂಡ ನಿಕ್ಕ್‌ಲ ಎಂಕ್‌ಲ ಒಂಜಿ ಕಾಟಂದೆರ್
ಕನ್ನಡ ಅನುವಾದ:
ನೀನು ಬರಬೇಡ ಮುಕಾಂಬಿ ನಿನ್ನನ್ನು ಕೈ ಬಿಡುವುದಿಲ್ಲ ನಾನು
ಇದ್ದರೆ ನಿನಗೆ ನನಗೆ ಒಂದು ಬೀಡು
ಸತ್ತರೆ ನಿನಗೆ ನನಗೆ ಒಂದು ಚಿತೆ
ಇಲ್ಲಿ ಈ ದಂಪತಿಗಳ ಪ್ರೀತಿ-ಅಕ್ಕರೆಗಳು ವ್ಯಕ್ತವಾಗುತ್ತವೆ. ದಾರಿ ಮಧ್ಯದಲ್ಲಿ ಕಡಂಬಾರು ಮಯ್ಯರ ಬೀಡು ಸಿಗುತ್ತದೆ ಮುಂದೆ ವಾಸುಭಟ್ಟರು ಮತ್ತು ಮುಕಾಂಬಿ ಮಯ್ಯರ ಬೀಡಿನ ಸಮೀಪ ಬಂದಾಗ, ಕಡಂಬಾರ ಮಯ್ಯರು ಒತ್ತಾಯ ಮಾಡಿ ಇವರಿಬ್ಬರನ್ನು ತಮ್ಮ ಬೀಡಿಗೆ ಕರೆದೊಯ್ಯುತ್ತಾರೆ. ಕಡಂಬಾರ ಮಯ್ಯ ಇವರ ಸಮಾಚಾರವನ್ನು ವಿಚಾರಿಸಿ "ಕೇರಳ ಹೆಣ್ಣು ಮಕ್ಕಳು ಹೋಗುವ ರಾಜ್ಯ ಅಲ್ಲ. ಅಲ್ಲಿ ಒಂದು ಸೇರು ಭತ್ತಕ್ಕೆ ತಲೆಕಡಿಯುವ ಮಂದಿ ಇದ್ದಾರೆ. ನನಗೆ ಏಳು ಸೊಸೆಯಂದಿರು ಇದ್ದರೆ. ? ಕಲ್ಲಿನ ಗುಂಡಗಳಿವೆ. ? ಗುಂಡದಲ್ಲಿ ಮುಕಾಂಬಿ ಜೇವು ? ನೀವು ಹೋಗಿ ಬರುವ ತನಕ ಬಾರಿ ಜೋಕೆಯಿಂದ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದಾಗ ಕಡಂಬಾರು ಮಯ್ಯರನ್ನು ನಂಬಿದ ವಾಸುಭಟ್ಟರು ಮುಕಾಂಬಿಗೆ ಸಮ್ಮತವಿಲ್ಲದಿದ್ದರೂ ಕಡಂಬಾರು ಮಯ್ಯರ ಬೀಡಿನಲ್ಲಿ ಬಿಟ್ಟು ಮುಂದೆ ಸಾಗುತ್ತಾರೆ.
ವಾಸು ಭಟ್ಟರು (ತಂತ್ರಿ ಪಡ್ವನರು) ಹೋದ ನಂತರ, ಮುಕಾಂಬಿಜೇವು ಇರುವ ಕೋಣೆಯ ಸಮೀಪ ಬಂದು ನಾನು ನಿನ್ನ ಗಂಡ, ಬಾಗಿಲು ತೆಗೆ ಎಂದು ಹೇಳುತ್ತಾರೆ. ಆಗ ಮುಕಾಂಬಿ ನೀನು ನನ್ನ ಗಂಡನ್ನಲ್ಲ ಎಂದು ಹೇಳುತ್ತಾಳೆ. ಆಗ ರಾತ್ರಿ ಇಬ್ಬನಿ ಬಿದ್ದು, ಹಗಲಿನ ಬಿಸಿಲು ಬಡಿದು ಸ್ವರ ಬದಲಿದೆ ಎಂದು ಮಯ್ಯರು ಸುಳ್ಳು ಹೇಳುತ್ತಾರೆ. ಆಗ ಮುಕಾಂಬಿ ಸುಳ್ಳು ಹೇಳಬೇಡಿ, ನನ್ನ ಗಂಡ ಬರುವಾಗ ಆರಿದ ನಂದಾದೀಪ ಉರಿದೀತು, ಮಲಗಿದ ಹಸುಳೆಗಳು ಎಚ್ಚೆತ್ತು ಕೂಗಿಯಾವು. ಕೊಟ್ಟಿಗೆ ಕರುಗಳು ಅರಚಿಯಾವು, ಬಂಗಾರದ ಬಾಚಣಿಗೆ, ಬೆಳ್ಳಿ ಸೀರಣಿಗೆ ತರುತ್ತೇನೆ ಎಂದು ಹೇಳಿದ್ದಾರೆ. ನಾನು ಯಾವ ಮಾತಿಗೂ ಬಾಗಿಲು ತೆಗೆಯುವುದಿಲ್ಲ, ಅಂದು ಸೊಸೆ ಎಂದು ಹೇಳಿದಿರಿ ಈಗ ಮೋಸ ಮಾಡುತ್ತಿದ್ದೀರಿ ಎಂದು ಹೇಳುತ್ತಾಳೆ. ಆಗ ಕೋಪಗೊಂಡ ಮಯ್ಯರು ಬಾಗಿಲನ್ನು ತುಳಿದು ಒಡೆದು ಒಳ ಬರುತ್ತಾರೆ. ಕಡಂಬಾರ ಮಯ್ಯರು ನಂಬಿಕೆಗೆ ದ್ರೋಹ ಮಾಡಿ ಬಲಾತ್ಕಾರದಿಂದ ಮುಕಾಂಬಿ ಜೇವಿನ ಸಂಗ ಮಾಡುತ್ತಾರೆ.ಅಸಹಾಯಕ ಹುಡುಗಿ ಮೂಕಾಂಬಿ ಜೇವು ಕಡಮ್ಬಾರ ಮಯ್ಯನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ .ಅವಳನ್ನು ಬಲಾತ್ಕರಿಸಲು ಬಂದಾಗ ನನ್ನ ಮೈ ಮುಟ್ಟಿದರೆ ನಿಮ್ಮ ತಾಯಿಯನ್ನು ಮುಟ್ಟಿದ ದೋಷ ಇದೆ ಎಂದು ಹೇಳುತ್ತಾಳೆ ಆಗ ಅವನು ತಾಯಿ ಮುಟ್ಟಿದ ದೋಷ ತಾಯ ಎದೆ ಹಾಲು ಕುಡಿದಾಗ ಹೋಗುತ್ತದೆ ಎನ್ನುತ್ತಾನೆ .ನನ್ನ ಮೈ ಮುಟ್ಟಿದರೆ ಕಾಶಿಯಲ್ಲಿ ಕಪಿಲೆ ಹಸುವನ್ನು ಕೊಂದ ದೋಷ ಬರುವುದು ಎಂದು ಹೇಳಿದಾಗ ಆತ ಕಪಿಲೆ ಕೊಂದ ದೋಷವನ್ನು ಕಾಶಿಗೆ ಹೋಗಿ ಕಳೆದು ಕೊಳ್ಳುತ್ತೇನೆ ಎಂದು ಹೇಳಿ ಅವಳನ್ನು ಬಲಾತ್ಕಾರದಿಂದ ಭೋಗಿಸುತ್ತಾನೆ. ಅವಳ ಪ್ರತಿರೋಧವನ್ನು ಲೆಕ್ಕಿಸದೆ ಅವಳ ದೇಹ ಸಂಗವನ್ನು ಮಾಡುತ್ತಾರೆ.
ಸ್ವಲ್ಪ ಸಮಯ ಕಳೆದಾಗ ಅವಳು ಗರ್ಭಿಣಿಯಾಗುತ್ತಾಳೆ .ಒಂದು ದಿನ ಅವಳು ಕಟ್ಟಡ ನೀರಿಗೆ ನೀರು ತರಲೆಂದು ಹೋಗುವಾಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರು ಅವಳನ್ನು ನೋಡಿ ಕಡಮ್ಬಾರ ಮಯ್ಯನಿಂದಾಗಿ ಇವಳು ಹೊಟ್ಟೆ ಹೊತ್ತು ಕೊಂಡಿದ್ದಾಳೆ ಎಂದು ಅಪಹಾಸ್ಯ ಮಾಡಿ ನಗಾಡುತ್ತಾರೆ .ಲೋಕ ನಿಂದೆಯನ್ನು ತಾಳಲಾರದೆ ಮೂಕಾಂಬಿ ಜೇವು ಪ್ರಾಣ ತ್ಯಾಗ ಮಾಡಲು ನಿರ್ಧರಿಸುತ್ತಾಳೆ.
©ಡಾ.ಲಕ್ಷ್ಮೀ ಜಿ ಪ್ರಸಾದ. 

ಮುಕಾಂಬಿ ಜೇವು ತನ್ನ ಗಂಡನ ಮನೆಯ ನಂಬಿಕೆಯ ದೈವ ಗುಳಿಗನನ್ನು ನೆನೆದು ಕಡಂಬಾರ ನೀರಿನ ಕಟ್ಟಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಮುಕಾಂಬಿಜೇವು ಕಡಂಬಾರ ಅಣೆಕಟ್ಟಿಗೆ ಹೋಗಿ ಮೂರು ಮುಳುಗು ಹಾಕಿ, ಮುಕಾಂಬಿ ಗುಳಿಗ ಇದ್ದಲ್ಲಿ ಗಿಳಿ ಚಾಮೆ ಬತ್ತದ ತೆನೆಯನ್ನು ತೆಗೆದುಕೊಂಡು ಹೋಗುವಂತೆ (ಗಿಣಿ ಚಾಮೆದ ಕುರಲುನು ಕೊಂಡೋಪಿ ಲೆಕ್ಕೋ ಎನ್ನನು ಕೊಂಡೋವೊಡು) ನನ್ನ ಪ್ರಾಣ ತೆಗೆಯಲಿ. ನನ್ನ ಗಂಡ ಬಂದ ಬಳಿಕ ಸತ್ಯವನ್ನು ಗಿಳಿ ನುಡಿದಂತೆ ನುಡಿಯಬೇಕು ಎಂದು ಹೇಳಿ ನೀರಿನಲ್ಲಿ ಮುಳುಗುತ್ತಾಳೆ.. ಮೂಕಾಂಬಿ ನೀರಿಗೆ ಹಾರಿ ಪ್ರಾಣ ತ್ಯಾಗ ಮಾಡಿದಾಗ ಕಡಂಬಾ ಮಯ್ಯ ಏನು ಅರಿಯದವನಂತೆ ಮುಕಾಂಬಿಜೇವಿನ ತಂದೆ ಮುದ್ದುಲ್ಲ ಭಟ್ಟರಿಗೆ ಹಾಗೂ ತಾಯಿ ಅರ ಕ್ಕೆ ಮದಿಮಾಳರಲ್ಲಿಗೆ ಆಳುಗಳನ್ನು ಕಳುಹಿಸಿ, "ಪಡ್ವನರು ಮುಕಾಂಬಿಯನ್ನು ಕಡಂಬಾರ ಬೀಡಿನಲ್ಲಿ ನಿಲ್ಲಿಸಿದ್ದು, ಅವಳು ಹುಡುಗಿ ಹೋಗಿ ಹೆಂಗಸಾಗಿದ್ದಾಳೆ. ನೀವು ಕರೆದುಕೊಂಡು ಹೋಗಿ "ಎಂದು ಹೇಳಿ, ಕಳುಹಿಸುತ್ತಾರೆ. ತಂದೆ-ತಾಯಿ ಸಂತೋಷದಿಂದ ಅವಲಕ್ಕಿಯ ಮುಡಿ, ತೆಂಗಿನಕಾಯಿ ತೆಗೆದುಕೊಂಡು ಹೊರಡುತ್ತಾರೆ.
ಇತ್ತ ತಂತ್ರಿ ಪಡ್ವನರಿಗೆ(? ) ಕನಸಿನಲ್ಲಿ ಗಳಿಗೆಯೊಳಗೆ ಬರಬೇಕೆಂದು ಗುಳಿಗ ದೈವ ತಿಳಿಸುತ್ತದೆ. ಪಡ್ವನರು ಕಡಂ ರ ಬೀಡಿಗೆ ಬಂದು ನೋಡುವಾಗ ಮುಕಾಂಬಿಜೇವಿನ ಜೀವ ಹೋಗಿದೆ. ತಲೆ ತಲೆ ಬಡಿದುಕೊಂಡು ಅಳುತ್ತಾರೆ. ಪಡ್ವನರು ಕಾಷ್ಠ ಸಿದ್ಧಪಡಿಸಿ, ಮೂರು ಸುತ್ತು ಬಂದು ಮುಕಾಂಬಿಯ ದೇಹವನ್ನು ಚಿತೆಯಲ್ಲಿ ಇರಿಸುತ್ತಾರೆ. ಯಾರು ಮುಕಾಂಬಿಯೇ ಕೇಳಿದೆಯಾ? ಇದ್ದರೆ ನನಗೂ ನಿನಗೂ ಒಂದೇ ಬೀಡು, ಸತ್ತರೆ ನನಗೂ ನಿನಗೂ ಒಂದೇ ಕಾಷ್ಠ. ಮೋಸ ಮಾಡಿ ಕಡಂಬಾರ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳಲಿ, ತಗಟೆ ಮೊಳೆಯಲಿ ಎಂದು ಶಾಪ ಕೊಟ್ಟ ಪಡ್ವನರು ಚಿತೆಗೆ ಹಾರುತ್ತಾರೆcopy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ.
ಏರ್‌ಯ ಮುಕಾಂಬಿಯೆ ಕೇನಿದನ
ಇತ್ತ್ಂಡ ನಿಕ್ಕೆಂಕ್ ಒಂಜಿ ಬೂಡು
ಸೈತ್ಂಡ್ ನಿಕ್ಕೆಂಕ್ ಒಂಜಿ ಕಾಟ
ಮೋಸಗಾತರ ಮಲ್ತಿ ಮಯ್ಯೆರೆ ಬೂಡುಗು ಕೊಟ್ಟು ಗುದ್ದೋಲಿ ಬೂರಡು
ತಜಂಕ್ ಕೊಡಿಪಡ್ ಪಂಡ್‌ದ್
ಕೊರನ ಪಾಪ ಕೊರಿಯೆರ್ ಜಂತಿರಿ ಪಡ್ವನಾರ್
ಕಾಟೊಗು ಮೂಜಿ ಸುತ್ತು ಬತ್ತೆರ್
ಕಾಟೊಗು ದಿಡ್‌ಕಪ್ಪಲಾಗಿಯೆರ್
ಕಾಟೊಡು ಪಡ್ವನಾಯೆರ್‌ಲ ಮುಕಾಂಬಿಲ ಪೊತ್ತೊವೆರ್
ಕನ್ನಡ ಅನುವಾದ:
ಓ ಮುಕಾಂಬಿಯೇ ಕೇಳಿದೆಯ
ಇದ್ದರೆ ನನಗೂ ನಿನಗೂ ಒಂದೇ ಬೀಡು
ಸತ್ತರೆ ನನಗೂ ನಿನಗೂ ಒಂದೇ ಕಾಷ್ಟ
ವಿಶ್ವಾಸಘಾತ ಮಾಡಿದ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳಲಿ
ತಗತೆ ಬೆಳೆಯಲಿ ಎಂದು
ಕೊಡಬಾರದ ಶಾಪ ಕೊಟ್ಟರು ತಂತ್ರಿ ಪಡ್ವನಾರ್
ಕಾಷ್ಠಕ್ಕೆ ಮೂರು ಸುತ್ತು ಬರುವರು
ಕಾಷ್ಠಕ್ಕೆ ದಡಕ್ಕನೆ ಹಾರುವರು
ಕಾಷ್ಠದಲ್ಲಿ ವಾಸುಭಟ್ಟರು ಮುಕಾಂಬಿಯು ಉರಿಯುವರು
ಹೆಂಡತಿಯ ಮೇಲಿನ ಪ್ರೀತಿಯಿಂದ ಗಂಡ ವಾಸುಭಟ್ಟರು ಹಾರಿ ಸಾಯುತ್ತಾರೆ. ದುಃಖ ತಡೆಯದ ಮುಕಾಂಬಿಯ ತಾಯಿ-ತಂದೆಯ ಚಿತೆಗೆ ಹಾರಿ ಸಾಯುತ್ತಾರೆ. ಮುಕಾಂಬಿ ತೀರಿಕೊಂಡ ಕ್ರಿಯೆ ಕಳೆದ ಮೂರನೆಯ ದಿನ ಕಡಂಬಾರ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳುತ್ತದೆ. ತಗಟೆ ಬೆಳೆಯುತ್ತದೆ. ಸತ್ತ ಮುಕಾಂಬಿಜೇವು ದೈವವಾಗಿ ದ್ವೇಷ ತೀರಿಸಿದರೆ ಎಂಬ ಭಯದಿಂದ ಅವಳ ಆರಾಧನೆ ಆರಂಭವಾಗಿರಬೇಕು. ಕಡಂಬಾರ ಮಯ್ಯರ ಬೀಡನ್ನು ಮುಕಾಂಬಿಯ ಬಂಧುಗಳು ಹಾಳು ಮಾಡಿರಬಹುದು ಅಥವಾ ಕಾಲಾಂತರದಲ್ಲಿ ಹಾಳು ಬಿದ್ದಿರಬಹುದು. ಮುಕಾಂಬಿ ಚಿತೆಯಲ್ಲಿ ಉರಿದುದರ ಪ್ರತೀಕವಾಗಿ ಮಾರಿಸೂಟೆಗೆ ಹಾರಿ ಬೆಂಕಿಯಲ್ಲಿ ಮಲಗುವ ಅಭಿನಯವನ್ನು ಮುಕಾಂಬಿ ಗುಳಿಗದ ಭೂತ ಮಾಧ್ಯಮರು ಮಾಡುತ್ತಾರೆ. ಇದರಿಂದ ಮುಕಾಂಬಿ ಗುಳಿಗನನ್ನು ಅಗ್ನಿ ಚಾಮುಂಡಿ ಗುಳಿಗ ಎಂದು ಕರೆಯುತ್ತಾರೆ.
ತುಳುನಾಡಿನಲ್ಲಿ ದುರಂತವನ್ನಪ್ಪಿದವರು ದೈವತ್ವವನ್ನು ಪಡೆಯುವುದು ತುಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾದ ವಿಚಾರ . ಇಲ್ಲಿ ಅಂತು ಮೂಕಾಂಬಿ ಕಡಮ್ಬಾರು ಮಯ್ಯನಿಂದ ದೌರ್ಜನ್ಯಕ್ಕೆ ಒಳಗಾದದ್ದು ಮಾತ್ರವಲ್ಲ ತನ್ನ ಗಂಡನ ಮನೆಯ ಗುಳಿಗನನ್ನು ನಂಬಿ ಕಟ್ಟದ ನೀರಿಗೆ ಹಾರಿದ್ದಾಳೆ ಆದ್ದರಿಂದ ಅವಳು ಗುಳಿಗ ದೈವದ ಸನ್ನಿಧಿಗೆ ಸೇರಿ ದೈವತ್ವವನ್ನು ಪಡೆದದ್ದು ಅಸಹಜ ವಿಚಾರವೇನು ಅಲ್ಲ. ಅವಳು ಕಟ್ಟದ ನೀರಿಗೆ ಹಾರುವುದು ಪುರುಷ ದೌರ್ಜನ್ಯಕ್ಕೆ ತೋರಿದ ಪ್ರತಿಭಟನೆಯಾಗಿದೆ. ಅದರೊಂದಿಗೆ ಗುಳಿಗ ದೈವದ ನಂಬಿಕೆ ತಳಕು ಹಾಕಿಕೊಂಡಿದೆ. ಇದರಿಂದಾಗಿ ಅವಳು ಗುಳಿಗನ ಸೇರಿಗೆಯ ದೈವವಾಗಿ ಮೂಕಾಂಬಿ ಗುಳಿಗನಾಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ .

ವೈದಿಕ ಪರಂಪರೆಯ ದೇವರುಗಳ ಪ್ರಭಾವದಿಂದಾಗಿ ಮೂಕಾಂಬಿ ಗುಳಿಗ ಅಗ್ನಿ ಚಾಮುಂಡಿ ಗುಳಿಗನಾಗಿ ಪರಿವರ್ತನೆ ಹೊಂದಿದೆ. ಮೂಕಾಂಬಿ ಎಂಬ ಹೆಸರನ್ನು ಅನುಲಕ್ಷಿಸಿ ಈ ದೈವದ ಆರಾಧನೆಯ ಸಂದರ್ಭದಲ್ಲಿ ಕೊಲ್ಲೂರು ಮುಕಾಂಬಿಕಾ ದೇವಿಯ ಪುರಾಣದ ಕಥೆಯನ್ನು ಸೇರಿಸಿ ಹೇಳುತ್ತಾರೆ .ಆದರೆ ಮಾರಿ ಸೂಟೆಯ ಮೇಲೆ ನಡೆಯುವಾಗ ಮುಕಾಂಬಿ ಗುಳಿಗನ ಮೂಲ ಪಾಡ್ದನವನ್ನು ಹಾಡುತ್ತಾರೆ. ಚಾಮುಂಡಿಯೊಂದಿಗೆ ಸಮನ್ವಯಗೊಂಡಿರುವುದರಿಂದ ಮೂಕಾಂಬಿ ಗುಳಿಗನ ಸೇರಿಗೆಯ ದೈವವಾಗಿದ್ದರೂ ಕೂಡ ಕಾಲಾಂತರದಲ್ಲಿ ಗುಳಿಗನನ್ನು ಮೀರಿ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದಿದೆ . ವೈದಿಕ ಪ್ರಭಾವದಿಂದ ಮುಂದೊಂದು ದಿನ ಮುಕಾಂಬಿ  ಗುಳಿಗ  ದೈವದ ಮೂಲವಾಗಿರುವ ಮೂಕಾಂಬಿ ಜೇವಿನ ಕಥಾನಕ ಜನ ಮಾನಸದಿಂದ ದೂರವಾಗಿ ಬಿಡುವ ಸಾಧ್ಯತೆ ಇದೆ ಮುಕಾಂಬಿ ಗುಳಿಗ    ಶುದ್ಧ ವೈದಿಕ ದೇವತೆಯಾಗಿ ಪರಿಗಣಿಸಲ್ಪಡುವ ದಿನಗಳು ಹೆಚ್ಚು ದೂರವಿಲ್ಲ.

ಡಾ.ಲಕ್ಷ್ಮೀ ಜಿ ಪ್ರಸಾದ 

Category:Stories



ProfileImg

Written by Dr Lakshmi G Prasad

Verified