ಹಸಿದವರಿಗೆ ಅನ್ನದಾನಿಯಾದ ಅಶೋಕ್ ನಲ್ಲಾ

ಹಸಿದವರ ಸೇವೆಗೆ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್

ProfileImg
10 May '24
2 min read


image

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹೊಸಳ್ಳಿ ಇಜೆ ಕ್ಯಾಂಪಿನ ನಿವಾಸಿ ಹಾಲು ಮಾರಾಟ ಮಾಡುವ ಅಶೋಕ್ ನಲ್ಲಾ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಅನ್ನದಾನಿಯಾಗಿರುವ ಬಗ್ಗೆ ನಾವೆಲ್ಲ ಈ ಲೇಖನದಲ್ಲಿ ನೋಡೋಣ..

ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್:  ಸಿಂಧನೂರು ತಾಲೂಕಿನ 20ಕಿ.ಮೀ ಸುತ್ತಲಿನ ಗ್ರಾಮಗಳಲ್ಲಿ, ಕ್ಯಾಂಪುಗಳಲ್ಲಿ ಯಾವುದೇ ಸಭೆ ಸಮಾರಂಭಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಉಳಿದ ಆಹಾರವನ್ನು (ಉಪ್ಪಿಟ, ಅನ್ನ, ಸಾಂಬಾರ್, ಪಲ್ಯೆ, ಮುಂತಾದವುಗಳನ್ನು) ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಮೂಲಕ ಆರಂಭದಲ್ಲಿ ತಮ್ಮ ದೈನಂದಿನ ಹಾಲು ಮಾರಾಟದ ಲಾಭದಲ್ಲಿ ಸಮಾಜ ಸೇವೆಗೆಂದು ಮೀಸಲಿಟ್ಟ ಹಣದಲ್ಲಿ ಆಹಾರವನ್ನು ಬಾಡಿಗೆ ಆಟೋ ಮೂಲಕ ತಂದು ಆಹಾರ ವ್ಯರ್ಥ ಮಾಡದೇ ಹಸಿದವರಿಗೆ (ಸ್ಲಂ ನಿವಾಸಿಗಳಿಗೆ, ಅನಾಥಾಶ್ರಮ, ವೃದ್ಧಾಶ್ರಮ)ಗಳಿಗೆ ನೀಡುತ್ತಾ ಬಂದಿದ್ದಾರೆ. ಧರ್ಮಪತ್ನಿ   ಶ್ರೀಮತಿ ಊರ್ಮಿಳಾ ನಲ್ಲಾ ಈ ಟ್ರಸ್ಟ  ಅಧ್ಯಕ್ಷೆಯಾಗಿದ್ದು, ಸೇವೆಗೆ ಟ್ರಸ್ಟ ಸದಸ್ಯರಾದ ಖಾಜಾ ಹುಸೇನ್ ದಂಪತಿ ಕೈಜೋಡಿಸಿದ್ದಾರೆ.

ಸೇವೆಗೆ ಪ್ರೋತ್ಸಾಹ:ಈ ಸೇವೆಗೆ ಮೆಚ್ಚಿ ಕೆಲವು ವರ್ಷಗಳ ಹಿಂದೆ ಕಮ್ಮಾ ಸಮಾಜದ ವಿಜಯ ರಾಯಪಾಟಿಯವರು ಒಂದು ಟಾಟ ಎಸ್ ಎಂಬ ಆಟೋ ದೇಣಿಗೆ ನೀಡಿ ಸೇವೆಗೆ ಪ್ರೋತ್ಸಾಹ ನೀಡಿದ್ದಾರೆ. ಅದೀಗ ದುರಸ್ತಿ ಅಂಚಿಗೆ ತಲುಪಿದ್ದು, ಇನ್ನೊಂದು ವಾಹನ ನೀಡಿದರೆ ಸೇವೆಗೆ ಮತ್ತಷ್ಟು ಅನುಕೂಲವಾಗಲಿದೆ.ವಾಹನದ ಡ್ರೈವರ್ ಗೆ ಕೆಲವೊಂದು ಸಮಯದಲ್ಲಿ ದಾನಿಗಳ ನೆರವಿನಿಂದ ಗೌರವಧನ ನೀಡಲಾಗುತ್ತಿದೆ. ಇನ್ನಿತರ ವೆಚ್ಚಗಳನ್ನು ತನ್ನ ಸ್ವಂತ ಹಣದಿಂದ ತೋರಿಸಲಾಗುತ್ತಿದೆ ಎನ್ನುತ್ತಾರೆ ಅಶೋಕ್ ನಲ್ಲಾ.

ಬಿಗ್ 3ಹಿರೋ: ಸುವರ್ಣ ನ್ಯೂಸ್ ಚಾನೆಲ್ ಬಿಗ್ 3ಹಿರೋ ಎಂಬ ಕಿರು ಸಂದರ್ಶನದಲ್ಲಿ ಸ್ವತಃ ಅಶೋಕ್ ನಲ್ಲಾ ತಮ್ಮ ಆತ್ಮತೃಪ್ತಿಗಾಗಿ ಮಾಡುವ ಈ ಕಾಯಕದ ಬಗ್ಗೆ ಮನಬಿಚ್ಚಿ ಮಾತನಾಡಿ, "ಅನ್ನ ಪರಬ್ರಹ್ಮ ಸ್ವರೂಪ" “ಅನ್ನವನ್ನು ಚೆಲ್ಲದೇ ನಮಗೆ ನೀಡಿ ನಾವು ಹಸಿದವರಿಗೆ ನೀಡುತ್ತೇವೆ” ಎಂಬ ಧ್ಯೇಯೋದ್ದೇಶವನ್ನು ವೀಕ್ಷರಿಗೆ ಸಾರಿದರು.

ಸಹಾಯಹಸ್ತ,ನೆರವು:ಅದೇ ರೀತಿ ಸಿಂಧನೂರಿನ ಕಾರುಣ್ಯ ವೃದ್ಧಾಶ್ರಮಕ್ಕೆ ದಾನಿಗಳ ಸಹಕಾರದಿಂದ ಕಟ್ಟಡ ನಿರ್ಮಾಣ, ಮೂಲಸೌಕರ್ಯ, ಆರೋಗ್ಯ ಚಿಕಿತ್ಸೆ ಕೊಡಿಸುತ್ತಾ ,ಕಾಣದ ಕೈಯಂತೆ ಸೇವೆಗೈದ ಅಶೋಕ್ ನಲ್ಲಾ ದಾನಿಗಳ ನೆರವಿನಿಂದ ಹೊಸಳ್ಳಿ ಇಜೆ ಕ್ಯಾಂಪಿನ ಬಡ ಕುಟುಂಬದ ಮನೆ ದುರಸ್ತಿ ಮಾಡಿಸಿ, ಇಂತ ಹತ್ತು ಹಲವು ಮಾನವೀಯತೆ ಪ್ರಾಮಾಣಿಕ ಸೇವೆಗೆ ಹೆಸರಾದವರು.

ಕೋರೋನಾದಲ್ಲಿ ನಿರಂತರ ಸೇವೆ: ಕೋರೋನಾ-೧ರಲ್ಲಿ ಸಿಂಧನೂರಿನ ವಿವಿಧ ಸಂಘ ಸಂಸ್ಥೆಗಳ ದಾನಗಳ ಸಹಕಾರದಿಂದ ಸುಮಾರು 1500 ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಗಳು ವಿತರಣೆ ಮಾಡಲಾಯಿತು.ನಂತರ ಸಿಂಧನೂರಿನ ಹೊಸಳ್ಳಿ ಇಜೆ ಕ್ಯಾಂಪಿನ ದುರ್ಗಾಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ಕೋರೋನಾದಿಂದ ಸಂಕಷ್ಟದಲ್ಲಿದ್ದವರಿಗೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಪ್ರಯಾಣಿಕರಿಗೆ ನೀರಿನ ಪೊಟ್ಟಣ, ಆಹಾರದ ಪೊಟ್ಟಣ ಕಟ್ಟಿಕೊಡುವ ಕಾರ್ಯವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಮಾಡಿದ್ದಾರೆ.

ವಾಹನದ ಅವಶ್ಯಕತೆ: ಈಗಾಗಲೇ ಹಲವು  ವರ್ಷಗಳಿಂದ ಬಿಸಿಲು-ಚಳಿ ,ಮಳೆ-ಗಾಳಿ ಲೆಕ್ಕಿಸದೇ ವಿವಿಧ ಹಳ್ಳಿಗಳಿಂದ & ನಗರದಲ್ಲಿ ಉಳಿದ ಆಹಾರ ಶೇಖರಣೆ ಮಾಡಿ, ಹಸಿದವರಿಗೆ ನೀಡುವ ಕಾರ್ಯ ಮಾಡುತ್ತಿರುವ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಗೆ ಒಂದು ನೂತನವಾದ ನಾಲ್ಕು ಚಕ್ರದ ವಾಹನದ ಅವಶ್ಯಕತೆ ಇದೆ. ನೆರವು ನೀಡಲು ಬಯಸುವವರಿಗೆ ನಮ್ಮ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ತೆರಿಗೆ ವಿನಾಯಿತಿ ಅಡಿಯಲ್ಲಿ 80 G&12A ಸೌಲಭ್ಯ ಹೊಂದಿದೆ. ನಮ್ಮ Don't Waste Food ಎಂಬ  ಧ್ಯೇಯೋದ್ದೇಶವುಳ್ಳ ಕಾರ್ಯಕ್ಕೆ ದಾನಿಗಳು ಧನ ಸಹಾಯ ಮಾಡಲು ಇಚ್ಛಿಸುವವರು ಈ ನಂಬರ್ ಗೆ ಕರೆ  ಮಾಡಬಹುದು: 9844555839 ಎಂದು ಈ ಮೂಲಕ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ನಲ್ಲಾ ಮನವಿ ಮಾಡಿದ್ದಾರೆ.

Category:Education



ProfileImg

Written by Avinash deshpande

Article Writer, Self Employee