‘ನೀವೆಂತ, ತಂಕರಕನ ತಾಲಿ ಬಂದಿಗೆ ಕಚ್ಚಾಡುವುದು. ಇಲ್ಲಿ ಕೊಡಿ. ಎಲ್ಲುಂಟು ಅದು?’
ದೋಗಣ್ಣ ಕಣ್ಣು ದೊಡ್ಡದು ಮಾಡಿ ಕೇಳಿದಾಗ ಮಕ್ಕಳ ಗುಂಪು ಬೆದರಿ ಸುಮ್ಮನಾಯಿತು.
ಪದ್ದುವಿನ ಮಗಳು ಸಿರಿ ಅಡಗಿಸಿಟ್ಟ ಟಿ.ವಿ. ರಿಮೋಟ್ ತಂದು ದೋಗಣ್ಣನ ಕೈಗೆ ಕೊಟ್ಟಳು.
ಗಪ್ ಚಿಪ್ಪಾದ ಮಕ್ಕಳ ಮುಖದಲ್ಲಿ ನಗು ಅರಳಿಸುವುದಕ್ಕಾಗಿ ದೋಗಣ್ಣ ರಿಮೋಟ್ ಹಿಡಿದುಕೊಂಡು ಒಂದೊಂದು ಮಗುವಿನ ಬಳಿಗೆ ಹೋಗಿ ‘ತಂಕರಕನ ತಾಳಿ ಬಂದಿ ನಿಕ್ಕೊರ’ ಎನ್ನುತ್ತಾ ರಿಮೋಟ್ ಮಗುವಿನ ಕೈಗೆ ಕೊಡುತ್ತಾ ‘ಎಂಕೊರ’ ಎನ್ನುತ್ತಾ ಹಿಂದೆ ಪಡೆಯುತ್ತಾ ಎಲ್ಲಾ ಮಕ್ಕಳ ಮುಖದಲ್ಲಿ ನಗು ಮೂಡಿಸಿದ.
ಮಕ್ಕಳಿಗೆ 'ಇದೇನು ಆಟ' ಎಂಬ ಕುತೂಹಲ ಹುಟ್ಟಿತು.
ಆಟಿ ಅಮಾವಾಸ್ಯೆ.
ಅಗೆಲು ಬಡಿಸಲು ಮಂಜೊಟ್ಟಿ ಗುತ್ತಿನ ಕುಟುಂಬದ ಹತ್ತಾರು ಮಂದಿ ಮಕ್ಕಳೊಂದಿಗೆ ಬಂದಿದ್ದರು. ಹೀಗೆ ಬಂದ ಹೆಣ್ಣು ಮಕ್ಕಳಿಗೆ ಪದ್ದುವಿನ ಮಗಳು ಸಿರಿ ನಾಯಕಿಯಾದರೆ, ಗಂಡು ಮಕ್ಕಳಿಗೆ ಕುಮಾರ ನಾಯಕನಾಗಿದ್ದ.
ಗಂಡು ಮಕ್ಕಳಿಗೆ ಕ್ರಿಕೆಟ್ ಇಷ್ಟವಾದರೆ ಹೆಣ್ಣು ಮಕ್ಕಳಿಗೆ ಕಾರ್ಟೂನ್ ಇಷ್ಟವಾಗಿತ್ತು. ಎರಡು ಗುಂಪುಗಳು ಕಚ್ಚಾಡಿಕೊಳ್ಳುತ್ತಿದ್ದವು.
ಅಗೆಲ್ ಬಡಿಸಲು ಕೋಳಿ ಕೊಚ್ಚಿ ಮುಗಿಸಿದ ದೋಗಣ್ಣ ಮಕ್ಕಳ ಜತೆ ಸರಸವಾಡಲು ನೇರವಾಗಿ ಚಾವಡಿಗೆ ಪ್ರವೇಶಿಸಿದ್ದ.
ಅಂದು ಮುಂಜಾನೆ ಎದ್ದ ಪದ್ದು ಪಾಡಿಗೆ ಹೋಗಿ ಪಾಲೇ ಮರದ ಕೆತ್ತೆಯನ್ನು ಕೆತ್ತಿ ತಂದು ಕೊಟ್ಟಿದ್ದ.
ಮುಂಚಿನ ದಿವಸ ದೋಗಣ್ಣ ಸವರಿ ಇಟ್ಟಿದ್ದ ಕಾಯರ್ ಮರದ ಗೆಲ್ಲುಗಳನ್ನು ಗದ್ದೆಯ ಪೈರಿನ ನಡುವೆ ಊರಿದ್ದ.
ಮುಂಜಾನೆಯೇ ಬತ್ತದ ಸಸಿಗಳ ಮೇಲಿದ್ದ ಹುಳು-ಹುಪ್ಪಡಿ ಹೆಕ್ಕಲು ಬರುವ ಉದ್ದ ಬಾಲದ ಕಪ್ಪು ಜೋಡಿ ಹಕ್ಕಿ ಊರಿದ ಗೆಲ್ಲನ್ನು ಆಶ್ರಯ ಮಾಡಿ ಕುಳಿತದ್ದನ್ನು ಗಮನಿಸಿದ್ದ.
'ಹಿರಿಯರು ಈ ಸಂಪ್ರದಾಯ ಮಾಡಿದ್ದು ಸುಮ್ಮನೆ ಅಲ್ಲ' ಎಂದು ಯೋಚಿಸಿದ.
ಹೊತ್ತೇರುವ ಮೊದಲು ಕಷಾಯ ಕುಡಿದು, ಮಕ್ಕಳಿಗೆ ಕುಡಿಸಿ, ಮತ್ತೆ ಗಂಜಿ ಸೇವಿಸಿದ್ದರು.
ಮಧ್ಯಾಹ್ನ ವಾಗುತ್ತಿದ್ದಂತೆ ಅಮಾವಾಸ್ಯೆ ಕೋಳಿ ಕಟ್ಟದಲ್ಲಿ ಕಟ್ಟಿದ ಮೂರು ಕೋಳಿಗಳಲ್ಲಿ ಎರಡು ಕೋಳಿಗಳು ಗೆದ್ದಿದ್ದವು. ಅದರ ಜತೆಗೆ ಇನ್ನೆರಡು ಒಟ್ಟೆ ಕೋಳಿ ಖರೀದಿಸಿ ತಂದು ರಾತ್ರಿಯ ಊಟಕ್ಕೆ ತಯಾರು ಮಾಡಿದ್ದ. ಸಂಜೆಗೆ ಸ್ಪೆಷಲ್ ಗೊಂಕಿನ ರಸವನ್ನೂ ಎಲ್ಲಿಂದಲೋ ತಲಾಶ್ ಮಾಡಿದ್ದ.
ಮಧ್ಯಾಹ್ನವೇ ಮುಗಿಲು ಸಂಜೆಗತ್ತಲು ಮಾಡಿತ್ತು. ಸಂಜೆಗೆ ಧೋ ಎಂದು ಮಳೆ ಸುರಿದಿತ್ತು. ಹೊರಗೆ ಕಾಲಿಡಲೂ ಸಾಧ್ಯವಾಗದ ಗಾಳಿ ಮಳೆ. ಚಳಿ ಇದರ ನಡುವೆ ತಲೆ, ಬಟ್ಟೆ ಒದ್ದೆ ಮಾಡಿಕೊಂಡು ಕುಟುಂಬದ ಹೆಂಗಸು, ಗಂಡಸರು ಮಕ್ಕಳನ್ನು ಕರೆದುಕೊಂಡು ಅಗೆಲಿಗೆ ಬಂದಿದ್ದರು. ಹಲಸು, ಗೆಣಸಿನ ಹಪ್ಪಳ, ಬಿಸಿ ಬಿಸಿ ಚಹಾ ಸೇವನೆ ಅಗಿತ್ತು.
ಚಳಿಗೆ ಚಾವಡಿ ಸೇರಿದ್ದ ಮಕ್ಕಳ ಗುಂಪು ಈಗ ದೋಗಣ್ಣ ಹೇಳಿ ಕೊಟ್ಟ ‘ತಂಕರಕನ ತಾಳಿ ಬಂದಿ’ ಆಟವನ್ನು ಆಡತೊಡಗಿತ್ತು.
‘ಅಜ್ಜಾ.. ಅಜ್ಜಾ... ತಂಕರಕನ ತಾಳಿ ಬಂದಿ ಎಂದರೆ ಏನು?’ ಎಂದು ಕೇಳಿದಳು ಸಿರಿ.
‘ಅದು ಒಂದು ಕತೆ ಮಗಾ ಹೇಳುತ್ತೇನೆ’ ಎಂದರು ದೋಗಣ್ಣ.
‘ಏಯ್, ಕಮಾನ್ಯಾ, ಅಜ್ಜ ಟೆಲ್ಲಿಂಗ್ ಸ್ಟೋರಿಯಾ. ಓಲ್ಡ್ ಸ್ಟೋರಿ ವೆರಿ ಇಂಟರೆಸ್ಟಿಂಗ್ ಯಾ' ಎನ್ನುತ್ತಾ ಎಲ್ಲರಿಗೂ ಸಿರಿ ಹೇಳಿದಳು.
ಅಡುಗೆ ಮನೆಯಲ್ಲಿ ಕೋಳಿ ಸಾರು, ಕಟ್ಟದ ಕೋಳಿ ಸುಕ್ಕ ಪರಿಮಳ, ಒಣ ಕೊಲತರು ಗಸಿ, ತಜಂಕ್ ಸೊಪ್ಪಿನ ಪಲ್ಯ, ನುಗ್ಗೆ ಸೊಪ್ಪಿಗೆ ಕೋಳಿ ಮೊಟ್ಟೆ ಬೆರಕೆ, ಅಂಬಟೆ ಹಾಕಿದ ತೇಟ್ಲ ತಯಾರು ಮಾಡುತ್ತಿದ್ದ ಮನೆಗೆ ಬಂದ ಹೆಂಗಸರೂ ಕಿವಿಕೊಟ್ಟರು.
ದೋಗಣ್ಣ ಮನೆ ಇಡೀ ಕೇಳುವಂತೆ ಹೇಳತೊಡಗಿದ.
'ಒಂದು ಸಾರಿ ಸುಗ್ಗಿ ಹುಣ್ಣಿಮೆಯ ಮುಂಚಿನ ದಿನದ ಪೂವೆಗೆ ತಂಕರಕನ ಗಂಡ ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ನೇಮಕ್ಕೆ ಹೋಗಿದ್ದ.
ಅಲ್ಲಿ ಗಗ್ಗರ ಇಟ್ಟು ಆದ ಮೇಲೆ ಒಬ್ಬನೇ ಮನೆ ದಾರಿ ಹಿಡಿದಿದ್ದ. ದೈವದ ಬೂಳ್ಯವನ್ನು ಮುಂಡಾಸಿನ ಎಡೆಗೆ ಸಿಕ್ಕಿಸಿಕೊಂಡಿದ್ದ.
ಮನೆಗೆ ಬರುವ ದಾರಿಯಲ್ಲಿ ಪ್ರೇತಗಳ ಉಪದ್ರ ಇದೆ ಎಂದು ಗೊತ್ತಿದ್ದರೂ. ಅದನ್ನು ಕ್ಯಾರೇ ಮಾಡದ ‘ಅದು ಪುಕ್ಕಲು ಪ್ರೇತಗಳು. ನರಮಾನಿಯನ್ನು ನೋಡಿದರೆ ಓಡಿ ಹೋಗುತ್ತದೆ’ ಎನ್ನುವ ಆತ ಪೂವೆಯ ತಿಂಗಳ ಬೆಳಕಿನಲ್ಲಿ ಮನೆ ದಾರಿ ಹಿಡಿದಿದ್ದ.
ಮನೆ ಹತ್ತಿರವಾಗಿತ್ತು.
ಮಜಲು ಗದ್ದೆಯಲ್ಲಿ ಬೇಸಗೆ ಕಾಲದಲ್ಲಿ ಮಣ್ಣಿನ ಒಲೆ ಮಾಡಿ ಅದರ ಮೇಲೆ ಗುರ್ಕೆ ಇಟ್ಟು ಸುತ್ತಲೂ ತೆಂಗಿನ ಮರದ ಸೋಗೆಯ ತಟ್ಟಿ ಕಟ್ಟಿ ತಾತ್ಕಾಲಿಕ ಬಚ್ಚಲು ಮನೆ ಮಾಡಲಾಗಿತ್ತು.
ಸಂಜೆ ಹೊತ್ತಿಗೆ ಅಲ್ಲಿ ನೀರು ಕಾಯಿಸಿ ಎಲ್ಲರೂ ಸ್ನಾನ ಮಾಡುತ್ತಿದ್ದರು. ಬಚ್ಚಲು ಮನೆಯ ನೀರು ಸೋರೆ, ಬಸಲೆ, ತೊಂಡೆ ಬುಡಕ್ಕೆ ಹೋಗಿ ಭರಪೂರ ತರಕಾರಿ ಆಗುತ್ತಿತ್ತು.
ಈ ಬೆಂದ್ರ್ನಲ್ಲಿ ಎರಡು ಬಿಳಿ ಆಕೃತಿಗಳು ಕಾಣಿಸಿಕೊಂಡವು. ಒಂದು ಆಕೃತಿ ಏನನ್ನೋ ಹಿಡಿದುಕೊಂಡು ಬಂದು ಬಾಕಿಮಾರು ಗದ್ದೆಯಲ್ಲಿ ಬಾರೆ ಹಾಕಿದ ಎತ್ತರದ ದೂಪೆಯ ಬಳಿಗೆ ಚಲಿಸಿತು. ಇನ್ನೊಂದು ಬಿಳಿ ಆಕೃತಿ ಅದನ್ನು ಅನುಸರಿಸಿತು. ಎಲ್ಲಿಂದಲೋ ಮತ್ತೆ ಮೂರು ನಾಲ್ಕು ಆಕೃತಿಗಳು ಅಲ್ಲಿ ಸೇರಿಕೊಂಡವು.
ಏನನ್ನೂ ಹಿಡಿದುಕೊಂಡು ಬಂದ ಆಕೃತಿಯನ್ನು ಉಳಿದ ಆಕೃತಿಗಳು ಅದನ್ನು ತಮಗೆ ಕೊಡುವಂತೆ ಕೇಳುತ್ತಿದ್ದವು.
ಆ ಆಕೃತಿ ತನ್ನ ಕೈಯಲ್ಲಿ ಇದ್ದದ್ದನ್ನು ಇನ್ನೊಂದು ಆಕೃತಿಗೆ ಕೊಟ್ಟಿತು. ಅದು ಮತ್ತೊಂದು ಆಕೃತಿಗೆ ಹಸ್ತಾಂತರಿಸಿತು.
‘ತಂಕರಕನ ತಾಲಿ ಬಂದಿ ಎಂಕೊರ... ನಿಕ್ಕೊರ...’ ಎನ್ನುತ್ತಾ ಬಾರೆ ದೂಪೆಯ ಸುತ್ತ ಆಕೃತಿಗಳು ಕುಣಿದಾಡತೊಡಗಿದವು.
ತಂಕರೆಯ ಗಂಡ ಅಲ್ಲಿ ಕುಣಿಯುತ್ತಿದ್ದದ್ದು ಪ್ರೇತಗಳು ಎಂದು ಖಚಿತಪಡಿಸಿಕೊಂಡ.
ಅವುಗಳ ಕೈಯಲ್ಲಿದ್ದ ವಸ್ತು ಯಾವುದು ಎಂದು ಗಮನಿಸಿದ.
ಅದು ಆತನ ಹೆಂಡತಿ ತಂಕರೆಯ ತಾಲಿ ಬಂದಿಯಾಗಿತ್ತು.
ರಾತ್ರಿ ಮಜಲು ಬಚ್ಚಲು ಮನೆಯಲ್ಲಿ ತಲೆಗೆ ಸ್ನಾನ ಮಾಡುವಾಗ ತಾಲಿ ಬಂದಿಯನ್ನು ತಟ್ಟಿಯಲ್ಲಿ ನೇತಾಡಿಸಿ ಇಟ್ಟಿದ್ದಳು.
ಸ್ನಾನಮಾಡಿ ಹೋಗುವಾಗ ಎತ್ತಿಕೊಂಡು ಹೋಗಲು ಮರೆತಿದ್ದಳು. ಅದನ್ನು ಹಿಡಿದುಕೊಂಡು ಪ್ರೇತಗಳು ಕುಣಿದಾಡುತ್ತಿದ್ದವು.
ತಂಕರಕನ ಗಂಡನಿಗೆ ಪ್ರೇತಗಳ ಜತೆ ಕುಸೆಲ್ ಮಾಡಬೇಕು ಎಂದು ಅನಿಸಿತು. ತಾಲಿ ಬಂದಿ ಮರಳಿ ಪಡೆಯಬೇಕಲ್ಲಾ..?
ಬಿಳಿ ವೇಸ್ಟಿ, ಉದ್ದಕೈಯ ಬಿಳಿ ಅಂಗಿ ಧರಿಸಿದ್ದ ತಂಕರಕನ ಗಂಡ ತಲೆಯಲ್ಲಿದ್ದ ಬಿಳಿ ಮುಂಡಾಸು ಬಿಚ್ಚಿದ. ತಲೆಗೆ ಕೊಟ್ಕ ಹಾಕಿಕೊಂಡ. ಎತ್ತಿ ಕಟ್ಟಿದ್ದ ವೇಸ್ಟಿ ಬಿಡಿಸಿದ. ದೈವದ ಬೂಳ್ಯವನ್ನು ಕೈಯಲ್ಲಿ ಹಿಡಿದುಕೊಂಡ. ಮೆಲ್ಲನೆ ಪ್ರೇತಗಳ ಗುಂಪಿನ ಕಡೆ ನಡೆದು ನಡುವೆ ಸೇರಿಕೊಂಡು ಕುಣಿಯತೊಡಗಿದ.
‘ತಂಕರಕನ ತಾಲಿ ಬಂದಿ ಎಂಕೊರ... ನಿಕ್ಕೊರ’ ಎನ್ನುತ್ತಾ ಪ್ರೇತವೊಂದು ತಂಕರಕನ ಗಂಡನ ಕೈಗೆ ತಾಲಿ ಬಂದಿಯನ್ನು ಕೊಟ್ಟಿತು. ..
ತಂಕರಕನ ಗಂಡ ತಾಲಿಬಂದಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೈಯಲ್ಲಿದ್ದ ಬೂಳ್ಯದ ಗಂಧವನ್ನು ಹಾರಿಸಿದ.
ತಕ್ಷಣ ಪ್ರೇತಗಳು ಮಾಯವಾಗಿದ್ದವು...
ತಂಕರಕನ ಗಂಡ ಮನೆ ಒಳಗೆ ನಡೆದ.
ಎಲ್ಲರೂ ರಾತ್ರಿಯ ಗಾಳಿ ಮಳೆಯ ಸಂಗೀತದ ಹಿನ್ನೆಲೆಯಲ್ಲಿ ಕುತೂಹಲದಿಂದ ಪ್ರೇತದ ಕತೆ ಕೇಳಿ ತುಸು ಭೀತಿಗೆ ಒಳಗಾಗಿದ್ದರು...
ಅಲ್ಲೊಂದು ದೈವಿಕ ವಾತಾವರಣ ಉಂಟಾಗಿತ್ತು.
ಇದ್ದಕ್ಕಿದ್ದಂತೆ ಚಾವಡಿಯಲ್ಲಿ ಬಿಸಿಯುಸಿರು ಕೇಳಿ ಬರತೊಡಗಿತು....
ಜತೆಗೆ ಹೂಂಕಾರ...
ಪದ್ದುವಿನ ಮಗ ಕುಮಾರ ಎದ್ದು ನಿಂತು ನಡುಗುತ್ತಿದ್ದ. ದೈವ ಆವಾಹನೆಯಾದಂತೆ ಆಡುತ್ತಿದ್ದ. ಕಣ್ಣು ಅಗಲಿಸಿ ಮೇಲೆತ್ತಿ ನೋಡಿ ತಿರುಗಿಸುತ್ತಿದ್ದ.
ಎಲ್ಲರೂ ಹೆದರಿ ಹೋಗಿದ್ದರು.
ನಿಬ್ಬೆರಗಾಗಿ ನೋಡುತ್ತಿದ್ದರು.
ಸುಜ್ಜಾ ಓಡಿ ಬಂದು ಮಗನನ್ನು ತಬ್ಬಿ ಹಿಡಿದಳು.
‘ಅದು ಸುಮ್ಮನೆ ಮಗ... ಅದು ಕತೆ ಮಗಾ...’ ಎಂದು ಹೇಳತೊಡಗಿದಳು.
ಕುಮಾರ ಒಂದೇ ಸಮನೆ ಥರ ಥರನೆ ನಡುಗುತ್ತಿದ್ದ. ಬಿಸಿಯುಸಿರು ಬಿಡುತ್ತಿದ್ದ.
ಪದ್ದು ಧಾವಿಸಿ ಬಂದು ಮಗನನ್ನು ಗಲ್ಲವನ್ನು ಸವರುತ್ತಾ ‘ಕುಮಾರ... ಕುಮಾರ..’. ಎಂದು ಕರೆದ.
ದೋಗಣ್ಣ ಏನೋ ನೆನಪಾದವನಂತೆ ‘ಸುಜ್ಜಾ... ನಿನ್ನ ಕುಟುಂಬದ ಮನೆಯಲ್ಲಿ ಇವತ್ತು ಅಗೆಲು ಇತ್ತಲ್ಲಾ... ಯಾಕೆ ಹೋಗಿಲ್ಲ...?’ ಎಂದು ಪ್ರಶ್ನಿಸಿದ.
‘ವರ್ಷ ವರ್ಷ ಇದೇ ದಿನ ಇತ್ತು ದೊಡ್ಡಪ್ಪಾ... ಈ ಬಾರಿ ಸುಂದರಣ್ಣ ಪುರ್ಸೊತ್ತಿಲ್ಲ ಅಂತ ಅಮಾಸೆಯ ಮರು ದಿನ ಮಾಡುವ ಅಂದರು... ಓ. ದೇವರೇ... ಅದರಿಂದಾಗಿ ಹೀಗೆ ಆಯ್ತಾ...?’ ಸುಜ್ಜಾ ಅಳುತ್ತಾ ನುಡಿದಳು.
‘ಪದ್ದು ಒಂದು ಕಾಲು ರೂಪಾಯಿ ಒಂದು ಬೈರಾಸು ತಾ’ ಎಂದ ದೋಗಣ್ಣ.
ಪದ್ದು ತಂದ ನಾಣ್ಯವನ್ನು ಕುಮಾರ ತಲೆಗೆ ನೀವಾಳಿಸಿ ಬಟ್ಟೆಯಲ್ಲಿ ಕಟ್ಟಿ ‘ಇದು ಈಡು... ಈಗ ಹುಡುಗ ಸರಿಯಾಗಬೇಕು. ಒಂದು ವರ್ಷದ ಒಳಗೆ ಬಲಿಮೆಯಲ್ಲಿ ಕೇಳಿ, ಅವನ ಕುಟುಂಬದ ಸಂಪಾಯ್ ಗುತ್ತಿನ ನೇಮದಲ್ಲಿ ಅರಿಕೆ ಮಾಡಿ ಏನು ಅಂತ ಅದಕ್ಕೆ ಬೇಕಾದ್ದು ಮಾಡುತ್ತೇವೆ...’ ಎಂದರು.
ತುಸು ಹೊತ್ತು ನಡುಗಿದ ಕುಮಾರ ಆನಂತರ ಏನೂ ಆಗಿಲ್ಲ ಎಂಬಂತೆ ಮತ್ತೆ ಗೆಲುವಾದ.
0 Followers
0 Following